
10 ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ Tamilaga Vettri Kazhagam ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ಮಾಡಲಾಯ್ತು. ಮಹಾಬಲಿಪುರಂನ ಖಾಸಗಿ ಹೋಟೆಲ್ನಲ್ಲಿ ಈ ಕಾರ್ಯಕ್ರಮ ನಡೆದಿದೆ. ಮೊದಲ ಹಂತವಾಗಿ 88 ಕ್ಷೇತ್ರಗಳ 600 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ Tamilaga Vettri Kazhagam ಅಧ್ಯಕ್ಷ, ನಟ ದಳಪತಿ ವಿಜಯ್, “ಒಂದು ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಅದರಲ್ಲಿ ಮಾತ್ರ ಸಾಧನೆ ಮಾಡಬೇಕೆಂಬ ಒತ್ತಡ ಬೇಡ. ನೀಟ್ ಅಷ್ಟೇ ಜಗತ್ತಾ? ನೀಟ್ ಮೀರಿದ ಜಗತ್ತಿದೆ. ಅದರಲ್ಲಿ ಕಲಿಯಲು ಬಹಳಷ್ಟಿದೆ" ಎಂದು ಹೇಳಿದ್ದಾರೆ.
"ನೀವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿಯಾಗಿ ಬಳಸಿ. ಅದು ತುಂಬಾ ಸರಳವಾದ ವಿಷಯ. ಈವರೆಗೆ ಭ್ರಷ್ಟಾಚಾರ ಮಾಡದ ನಂಬಿಕಸ್ಥರನ್ನು ಆಯ್ಕೆ ಮಾಡಿ. ಮತಕ್ಕೆ ಹಣ ತೆಗೆದುಕೊಳ್ಳಬೇಡಿ. ಆ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಡಿ. ಮುಂದಿನ ವರ್ಷ ಗಾಡಿ ಗಾಡಿಯಾಗಿ ಹಣ ತರುತ್ತಾರೆ. ಅದು ನಿಮ್ಮಿಂದಲೇ ದೋಚಿದ ಹಣ. ಅದನ್ನು ಏನು ಮಾಡಬೇಕೆಂದು ನಿಮಗೆ ಚೆನ್ನಾಗಿ ಗೊತ್ತು. ನಿಮ್ಮ ಮಕ್ಕಳ ಮೇಲೆ ಯಾವುದೇ ಒತ್ತಡ ಹೇರಬೇಡಿ. ಅವರಿಗೆ ಏನು ಇಷ್ಟ ಎಂದು ತಿಳಿದು ಅವರನ್ನು ಮಾರ್ಗದರ್ಶನ ಮಾಡಿ" ಎಂದು ವಿಜಯ್ ಹೇಳಿದ್ದಾರೆ.
ಜಾತಿ, ಧರ್ಮವನ್ನು ಬದಿಗಿಡಿ
“ಜಾತಿ ಎಂದು ಬೇರ್ಪಡಿಸುವ ಚಿಂತನೆಯ ಕಡೆ ಹೋಗಬೇಡಿ. ನಿಸರ್ಗದ ಬಿಸಿಲು, ಮಳೆಯಲ್ಲಿ ಜಾತಿ ಇದೆಯಾ? ರೈತರು ಜಾತಿ, ಧರ್ಮ ನೋಡಿ ಬಿತ್ತುತ್ತಾರಾ? ಮಾದಕ ವಸ್ತುಗಳನ್ನು ತ್ಯಜಿಸುವಂತೆ ಜಾತಿ, ಧರ್ಮವನ್ನೂ ತ್ಯಜಿಸಿ. ಪೆರಿಯಾರ್ರಿಗೂ ಜಾತಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಜಾತಿ ಆಧಾರಿತ ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೆಲ್ಲಾ ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಜಗತ್ತಿನಲ್ಲಿ ಏನು ಸರಿ ತಪ್ಪು ಎಂದು ವಿಶ್ಲೇಷಿಸಿದರೆ ಸಾಕು ಚೆನ್ನಾಗಿ ಬದುಕಬಹುದು. ವೃತ್ತಿಪರವಾಗಿ ಮತ್ತು ವೈಜ್ಞಾನಿಕವಾಗಿ ಯೋಚಿಸಿ. AI ಜಗತ್ತನ್ನು ಎದುರಿಸಲು ಅದೊಂದೇ ದಾರಿ” ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿನಿಗೆ ವಜ್ರದ ಓಲೆ ನೀಡಿದ ವಿಜಯ್
ನಂತರ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾಯಿತು. ದಿಂಡಿಗಲ್ನ ವಿದ್ಯಾರ್ಥಿನಿ ಓವಿಯಾಂಜಲಿ 12ನೇ ತರಗತಿಯಲ್ಲಿ 600ಕ್ಕೆ 599 ಅಂಕ ಗಳಿಸಿದ್ದರು. ಅವರಿಗೆ ವಜ್ರದ ಓಲೆ ಮತ್ತು ಪ್ರಶಂಸಾ ಪತ್ರ ನೀಡಿದ್ದಾರೆ. ನಂತರ ಅರಿಯಲೂರಿನ ಸೋಫಿಯಾ ಎಂಬ ವಿದ್ಯಾರ್ಥಿನಿ 500ಕ್ಕೆ 499 ಅಂಕ ಗಳಿಸಿದ್ದಕ್ಕೆ ಅವರಿಗೂ ವಜ್ರದ ಓಲೆ ಉಡುಗೊರೆಯಾಗಿ ನೀಡಲಾಯಿತು.
ಸಿನಿಮಾ ರಿಲೀಸ್ ಯಾವಾಗ?
ರಾಜಕೀಯ ಪಕ್ಷದ ಮೂಲಕ ಸಮಾಜದಲ್ಲಿ ಸುಧಾರಣೆ ತರಲು ವಿಜಯ್ ಯೋಚಿಸುತ್ತಿದ್ದಾರೆ. ಜನನಾಯಗನ್ ಸಿನಿಮಾದಲ್ಲಿ ವಿಜಯ್ ನಟಿಸಿದ್ದು, 2025 ಜನವರಿ 26ರಂದು ಈ ಸಿನಿಮಾ ರಿಲೀಸ್ ಆಗಲಿದೆಯಂತೆ. ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲವೂ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಅವರು ಸಿನಿಮಾ ಮಾಡೋದಿಲ್ಲ ಎನ್ನಲಾಗುತ್ತಿದೆ. ಸಿನಿಮಾ ಬಿಟ್ಟು ಅವರು ರಾಜಕೀಯದ ಕಡೆಗೆ ಗಮನ ಕೊಡಲಿದ್ದಾರಂತೆ. ಹೀಗಾಗಿ ಮುಂದಿನ ದಿನಗಳಲ್ಲಿ ಏನೆಲ್ಲ ಕೆಲಸ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಸದ್ಯ ಭಾಷಣಗಳ ಮೂಲಕ ಗಮನಸೆಳೆಯುತ್ತಿರುವ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಬರ್ತಾರೆ ಎಂದು ಕೆಲವರ್ಷಗಳಿಂದ ಚರ್ಚೆ ನಡೆಯುತ್ತಿತ್ತು. ಕೊನೆಗೂ ಅವರು ತಮ್ಮದೇ ಪಾರ್ಟಿ ರಚಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.