ಪ್ರತಿ ವರ್ಷ 10 ಲಕ್ಷ ಉದ್ಯೋಗ ಗುರಿ: ಕೇಂದ್ರ ಸಚಿವ ಭಗವಂತ ಖೂಬಾ

By Kannadaprabha NewsFirst Published Jan 21, 2023, 11:10 AM IST
Highlights

ಕೇಂದ್ರ ಸರ್ಕಾರ ಪ್ರತಿವರ್ಷ 10 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ. ಆ ನಿಟ್ಟಿನಲ್ಲಿ ಈಗಾಗಲೇ 3 ತಿಂಗಳಲ್ಲಿ 2.18 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ರಾಸಾಯನಿಕ, ರಸಗೊಬ್ಬರಗಳ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ತಿಳಿಸಿದರು. 

ಹುಬ್ಬಳ್ಳಿ (ಜ.21): ಕೇಂದ್ರ ಸರ್ಕಾರ ಪ್ರತಿವರ್ಷ 10 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ. ಆ ನಿಟ್ಟಿನಲ್ಲಿ ಈಗಾಗಲೇ 3 ತಿಂಗಳಲ್ಲಿ 2.18 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ರಾಸಾಯನಿಕ, ರಸಗೊಬ್ಬರಗಳ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ತಿಳಿಸಿದರು. ನಗರದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ 3ನೇ ರೋಜಗಾರ್‌ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ಮೇಳವನ್ನು ವರ್ಚುವಲ್‌ ಮೂಲಕವೂ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಕಳೆದ 8 ವರ್ಷಗಳಿಂದ ದೇಶದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು, ಉದ್ದಿಮೆಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗುತ್ತಿದೆ. 2022ರ ಅಕ್ಟೋಬರ್‌ನಲ್ಲಿ 75 ಸಾವಿರ, ನವೆಂಬರ್‌ನಲ್ಲಿ 72 ಸಾವಿರ ಉದ್ಯೋಗ, ಈ ಜನವರಿಯಲ್ಲಿ 71 ಸಾವಿರ ಯುವಕರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಹೊಸ ಉದ್ಯೋಗದಾತರಿಗೆ ನೇಮಕಾತಿ ಪತ್ರವನ್ನು ಶುಕ್ರವಾರ ದೇಶಾದ್ಯಂತ ವಿತರಿಸಲಾಗಿದೆ ಎಂದರು.

ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡುವ ಮೂಲಕ ದೇಶದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ. ಭಾರತ ಎಲ್ಲ ರಂಗದಲ್ಲಿ ಆತ್ಮನಿರ್ಭರತೆ ಸಾಧಿಸುತ್ತಿದೆ. ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಆಗುತ್ತಿದ್ದರೂ ಭಾರತದ ಅರ್ಥವ್ಯವಸ್ಥೆ ಸದೃಢವಾಗಿದೆ. ಮುದ್ರಾ ಯೋಜನೆಯಡಿಯಲ್ಲಿ 21 ಕೋಟಿ ಜನರಿಗೆ ಸಾಲ ನೀಡಲಾಗಿದ್ದು, ಸಾವಿರಾರು ಉದ್ಯೋಗ ಸೃಷ್ಟಿಯಾಗಿವೆ. ಶೇ. 67ರಷ್ಟುಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಮೇಕ್‌ ಇನ್‌ ಇಂಡಿಯಾ ಮೂಲಕ ಅನೇಕ ಉದ್ಯೋಗ ಸೃಷ್ಟಿಸಲಾಗಿದೆ. ಇದರಿಂದಾಗಿ ವಿಶ್ವಸಂಸ್ಥೆಯು ಭಾರತದ ಅರ್ಥ ವ್ಯವಸ್ಥೆಯನ್ನು ಕೊಂಡಾಡುತ್ತಿದೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ 206 ಅರ್ಹ ಜನರಿಗೆ ಸರ್ಕಾರಿ ಉದ್ಯೋಗ ಆಯ್ಕೆ ಪತ್ರ ವಿತರಿಸಲಾಗುತ್ತಿದೆ. ಪಾರದರ್ಶಕವಾಗಿ ಯುವಕರನ್ನು ಆಯ್ಕೆ ಮಾಡಲಾಗಿದೆ. 25 ವರ್ಷ ಸರ್ಕಾರಿ ಸೇವೆ ಮಾಡುವ ಅವಕಾಶ ನಿಮಗೆ ಸಿಗಲಿದೆ. ಉತ್ತಮವಾಗಿ ಸೇವೆ ಸಲ್ಲಿಸಿ ಎಂದು ಹಾರೈಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ವಲಯ ಹಾಗೂ ಖಾಸಗಿ ರಂಗಗಳಲ್ಲಿ ಸಾಕಷ್ಟುಉದ್ಯೋಗಾವಕಾಶಗಳಿವೆ. ಬಿಯಾಂಡ್‌ ಬೆಂಗಳೂರು ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಮೊಬೈಲ್‌ ತಯಾರಿಕೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದ್ದು, ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

ROJGAR MELA: ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವ ರಾಜೀವ್ ಚಂದ್ರಶೇಖರ್ ನೇಮಕಾತಿ ಪತ್ರ ವಿತರಣೆ

ಪ್ರಧಾನಿ ನರೇಂದ್ರ ಮೋದಿಯವರು 24್ಡ7 ಕೆಲಸ ಮಾಡುತ್ತಿದ್ದಾರೆ. ಪಾರದರ್ಶಕವಾಗಿ ಉದ್ಯೋಗ ನೀಡಿದರೆ, ಭ್ರಷ್ಟಾಚಾರ ನಡೆಯುವುದಿಲ್ಲ. ಹಾಗಾಗಿ ನಾನು ಸಚಿವನಾಗಿದ್ದಾಗ ಪಾರದರ್ಶಕವಾಗಿ 1,300 ಹುದ್ದೆಗಳನ್ನು ನೇಮಕಾತಿ ಮಾಡಿಕೊಂಡಿದ್ದೆ ಎಂದು ಸ್ಮರಿಸಿದರು.

5 ಲಕ್ಷ ಸ್ವಯಂ ಉದ್ಯೋಗಕ್ಕೆ ವಿವೇಕಾನಂದ ಯೋಜನೆ: ಸಿಎಂ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಆಯುಕ್ತರಾದ ಚೈತಾಲಿ ಪನ್ಮಯಿ, ಮನೋಜ ಜೋಶಿ, ವಂದನಾ ಸಾಗರ ಸೇರಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಉದ್ಯೋಗಾಂಕ್ಷಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

click me!