ಬಿಗ್‌ಬಾಸ್‌ ನನ್ನ ಮುಖವಾಡ ಕಳಚಿದೆ ! - ಪ್ರಶಾಂತ್ ಸಂಬರಗಿ

Suvarna News   | Asianet News
Published : May 15, 2021, 03:21 PM IST
ಬಿಗ್‌ಬಾಸ್‌ ನನ್ನ ಮುಖವಾಡ ಕಳಚಿದೆ ! - ಪ್ರಶಾಂತ್ ಸಂಬರಗಿ

ಸಾರಾಂಶ

ಪ್ರಶಾಂತ್ ಸಂಬರ್ಗಿ 'ಬಿಗ್‌ಬಾಸ್‌ ಮನೆ'ಯಲ್ಲಿದ್ದಷ್ಟು ಕಾಲ ತಮ್ಮ ನೇರ ಮಾತು, ಕೋಪ, ಆರೋಪಗಳಿಂದ ಸುದ್ದಿಯಾದವರು. ಅನ್ಯಾಯ ಕಂಡಾಗ ದೂಷಿಸುವಷ್ಟೇ ದೊಡ್ಡ ಧ್ವನಿಯಲ್ಲಿ ಸುಳ್ಳುಇದ್ದರೆ ಒಪ್ಪಿಕೊಳ್ಳುವ, ತಪ್ಪಿದ್ದರೆ ಕ್ಷಮೆ ಕೇಳುವ ಮೂಲಕ ಗುರುತಿಸಿಕೊಂಡವರು. ಆದರೆ ತಮಗೂ ಒಂದು ಮುಖವಾಡ ಇತ್ತು ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ!

ಅದುವರೆಗೆ ಪ್ರಶಾಂತ್ ಸಂಬರ್ಗಿ ಎಂದರೆ ಏನಾದರೂ ವಿವಾದಗಳು ನಡೆದಾಗ ಧೈರ್ಯದಿಂದ ಮುಂದೆ ಬಂದು ತನ್ನ ಅಭಿಪ್ರಾಯ ತಿಳಿಸಿ, ವಾದಿಸುವ ವ್ಯಕ್ತಿ ಎನ್ನುವ ಇಮೇಜ್ ಇತ್ತು. ಆದರೆ ಒಂದು ಬಿಗ್‌ಬಾಸ್‌ ಸ್ಪರ್ಧೆ ಅದೆಲ್ಲವನ್ನು ಬದಿಗಿಟ್ಟು ಅನಗತ್ಯವಾದ ನೂರು ವಿಚಾರಗಳಲ್ಲಿ ಸಂಬರ್ಗಿಯವರ ಹೆಸರು ಗುರುತಿಸುವಂತೆ ಮಾಡಿದೆ. ಬಹಳ ಮಂದಿ ಬಿಗ್‌ಬಾಸ್‌ ಮನೆಗೆ ಹೋಗಲು ನಿರಾಕರಿಸುವುದೇ ಅದೇ ಕಾರಣಕ್ಕೆ. ಒಬ್ಬ ಮನುಷ್ಯ ಇಪ್ಪತ್ತನಾಲ್ಕು ಗಂಟೆಯೂ ಶಾಂತವಾಗಿದ್ದುಕೊಂಡು, ಒಳ್ಳೆಯವನಾಗಿ ನಟಿಸಲು ಅಸಾಧ್ಯ. ಒಂದಲ್ಲ ಒಂದು ದಿನ ತನ್ನ ನಿಯಂತ್ರಣ ಕಳೆದುಕೊಂಡು ತನ್ನೊಳಗಿನ ಭಾವಗಳನ್ನು ಸಾರ್ವಜನಿಕಪಡಿಸಲೇಬೇಕಾಗುತ್ತದೆ. ಈ ಅನುಭವ ತಮಗೂ ಆಗಿದೆ ಎಂದು ಸ್ವತಃ ಪ್ರಶಾಂತ್ ಸಂಬರ್ಗಿ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹೇಳಿದ್ದಾರೆ. 

- ಶಶಿಕರ ಪಾತೂರು

ಬಿಗ್‌ಬಾಸ್‌ನಿಂದ ನೀವು ಪಡೆದುಕೊಂಡಿದ್ದು ಮತ್ತು ಕಳೆದುಕೊಂಡಿದ್ದೇನು?
ಬಿಗ್‌ ಬಾಸ್‌ ನನಗೆ ತಾಳ್ಮೆಯನ್ನು ಕಲಿಸಿದೆ. ಅದೇ ರೀತಿ ಕೋಪ ನಿಯಂತ್ರಿಸಿಕೊಳ್ಳುವುದನ್ನು ಕೂಡ ಕಲಿಸಿದೆ. ಅದೇ ಸಂದರ್ಭದಲ್ಲಿ ನಾನು ಕಳೆದುಕೊಂಡಿರುವ ವಿಚಾರವನ್ನು ಲೆಕ್ಕ ಹಾಕಿದರೆ ಅದು ಕೂಡ ದೊಡ್ಡಮಟ್ಟದಲ್ಲೇ ಇದೆ! ಸಮಾಜದಲ್ಲಿ ನನಗಿದ್ದ ಗೌರವವನ್ನು ಕೆಲವೊಂದು ಸಣ್ಣಪುಟ್ಟ ವಿಷಯಗಳಿಗಾಗಿ ಕಳೆದುಕೊಂಡಿದ್ದೇನೆ ಅನಿಸುತ್ತಿದೆ. 

ಬಿಗ್ ಬಾಸ್ ಮನೆಯ ಸದಸ್ಯರ ಭೇಟಿಗೆ ನಾನು ಸಿದ್ಧ- ವೈಜಯಂತಿ ಅಡಿಗ

ಬಿಗ್‌ ಬಾಸ್‌ ಮನೆಗೆ ಹೋದಾಗ ನಿಮಗಾದ ಹೊಸ ಅನುಭವ ಏನು?
ಬಿಗ್‌ಬಾಸ್ ಮನೆ ನನ್ನ ನಿರೀಕ್ಷೆಗಿಂತ ತುಂಬ ದೊಡ್ಡದಾಗಿತ್ತು. ಗಾರ್ಡನ್, ಎಲ್ಲವೂ ಇರುವುದರ ಜೊತೆಗೆ ಕಲರ್‌ಫುಲ್ ಇಂಟೀರಿಯರ್ ಇತ್ತು. ಆ ಬಣ್ಣಗಳ ಪ್ರಭಾವ ಮನದ ಮೇಲೆಯೂ ಉಂಟಾಗಬಲ್ಲದು ಎಂದು ಅಂದುಕೊಂಡಿದ್ದೇನೆ. ಉಳಿದಂತೆ ಎಲ್ಲಿಯೂ ಮನುಷ್ಯರನ್ನು ಕಾಣದಂತೆ ಸೃಷ್ಟಿಯಾಗಿರುವ ಮನೆ. ಸುತ್ತಮುತ್ತ ಕ್ಯಾಮೆರಾಗಳು ಇದ್ದರೂ, ಯಾವ ಕಡೆಯಿಂದ ಜನರಿಗೆ ನಮ್ಮನ್ನು ತೋರಿಸಲಾಗುತ್ತಿದೆ ಎನ್ನುವ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಮನೆಯೊಳಗೆ ಕಾಲಿಡುವವರೆಗೆ ಈ ಬಗ್ಗೆ ನನಗೆ ಕಲ್ಪನೆಯೇ ಇರಲಿಲ್ಲ. 

ನಾದಕೆ ಮನಸೋತ ನಟ, ನಿರ್ದೇಶಕ ನಾಗೇಂದ್ರ ಶಾನ್

ಚಕ್ರವರ್ತಿ ಚಂದ್ರಚೂಡ್ ಅವರ ವರ್ತನೆಯಲ್ಲಿ ಮನೆಯೊಳಗೆ ಏನಾದರೂ ವ್ಯತ್ಯಾಸಗಳು ಕಾಣಿಸಿತೇ?
ಚಂದ್ರಚೂಡ್ ಅವರು ಹೊರಗಡೆ ನನಗೆ ಪರಿಚಿತರು ಮಾತ್ರ. ಸಿದ್ಧಾಂತದಲ್ಲಿ ವಿಭಿನ್ನತೆಯಿತ್ತು ಒಂದು ರೀತಿ ಶತ್ರು ಪಾಳಯದಲ್ಲಿದ್ದರು. ಮನೆಯೊಳಗೆ ಬಂದ ಮೇಲೆ ಹಿತಶ್ರುವಿನ ಹಾಗಾದರು! ಅವರು ಆತ್ಮೀಯರಾಗಿದ್ದುಕೊಂಡು ನನ್ನ ಮೇಲೆ ಆಟವಾಡುವ ಬಗ್ಗೆ ನನಗೂ ಸಂದೇಹ ಇತ್ತು. ಹಾಗಾಗಿ ನಾನು ಕೂಡ ಅವರ ಮೇಲೆ ಆಟವಾಡಿದೆ. ಒಟ್ಟಿನಲ್ಲಿ ಮನೆಗೆ ಹೋಗಿ ಬಂದ ಮೇಲೆ ನಾವಿಬ್ಬರೂ ಹಿಂದೆ ಇದ್ದುದಕ್ಕಿಂತ ಹೆಚ್ಚು ಆತ್ಮೀಯರಾಗಿದ್ದೇವೆ. ಮೊದಲು ಪರಸ್ಪರ ಆಡುವ ಪ್ರತಿ ಮಾತನ್ನು ಕೂಡ ಎಚ್ಚರಿಕೆಯಿಂದ ಗಮನಿಸುತ್ತಿದ್ದೆವು. ಈಗ ಆ ಎಚ್ಚರಿಕೆ ಇಪ್ಪತ್ತು ಪರ್ಸೆಂಟ್‌ನಷ್ಟು ಮಾತ್ರ ಉಳಿದುಕೊಂಡಿದೆ. 

ಚಿತ್ರರಂಗದ ಪರಿಸ್ಥಿತಿ ನಿಜಕ್ಕೂ ಶೋಚನೀಯ- ಸುಮಲತಾ ಅಂಬರೀಷ್

ಕೊನೆಯ ವಾರದಲ್ಲಿ ನೀವು ತಂದುಕೊಂಡ ಬದಲಾವಣೆಯನ್ನು ನಿಮ್ಮಿಂದ ಕಡೆಯವರೆಗೆ ಉಳಿಸಿಕೊಳ್ಳಲು ಸಾಧ್ಯವಿತ್ತೇ?
ನಿಜ ಹೇಳಬೇಕೆಂದರೆ ನಾನು ಇರುವುದೇ ಹಾಗೆ! ನಾನು ಮಾಧ್ಯಮಗಳ ಮುಂದೆ ಮಾತ್ರ ಅಗ್ರೆಸಿವ್ ಆಗಿರುತ್ತೇನೆಯೇ ಹೊರತು ಉಳಿದಂತೆ ನನ್ನ ವಾಸ್ತವ ಬದುಕಿನಲ್ಲಿ ತುಂಬ ಗಾಂಭಿರ್ಯತೆ ಕಾಯ್ದುಕೊಂಡಿರುತ್ತೇನೆ. ನಾನೊಬ್ಬ ಸ್ನೇಹಜೀವಿ; ಲವ್ವೇಬಲ್ ಪರ್ಸನ್. ನನ್ನ ಬಾಲ್ಯಸ್ನೇಹಿತರ ಗೆಳೆತನವನ್ನು ಇಂದಿಗೂ ಉಳಿಸಿಕೊಂಡಿದ್ದೇನೆ. ನನ್ನ ಅಗ್ರೆಸಿವ್ ತಡೆಯಲಾಗದೆ ಎಲ್ಲ ಸದಸ್ಯರು ಕೂಡ ಸಾಫ್ಟ್‌ ಆಗಿ ವರ್ತಿಸುವಂತೆ ಒತ್ತಾಯ ಮಾಡುತ್ತಿದ್ದುದನ್ನು ನೀವೇ ನೋಡಿರುತ್ತೀರಿ. ಮಾತ್ರವಲ್ಲ, ನನ್ನದಲ್ಲದ ಭಾವವನ್ನು ನಾನು ತೋರ್ಪಡಿಸಿಕೊಂಡು ಇರಬೇಕಾದರೆ ಮುಖವಾಡ ಹಾಕಿಕೊಂಡೇ ಇರಬೇಕಾಗಿತ್ತು. ನಿಮಗೆ ಗೊತ್ತಿರುವಂತೆ ಬಿಗ್‌ಬಾಸ್‌ ಮನೆಯಲ್ಲಿ ಹೆಚ್ಚು ದಿನ ಮುಖವಾಡದ ಜೊತೆಗಿರಲು ಸಾಧ್ಯವಿರಲಿಲ್ಲ. ಹಾಗಾಗಿ ನಾನು ನೈಜವಾಗಿರುವ  ಸಮಯ ಕೂಡಿ ಬಂದಿತ್ತು. ಹಾಗಂತ ನೇರ ಮಾತು ನಿಲ್ಲಿಸಿರಲಿಲ್ಲ. ಅಭಿಪ್ರಾಯ ಹೇಳುವಾಗ ತೀಕ್ಷ್ಣವಾದ ಪದಬಳಕೆ ಬಿಟ್ಟು ಸಾಫ್ಟ್ ಆಗಿ ವಿಚಾರ ಹೇಳುತ್ತಿದ್ದೆ. 

ವಾಪಾಸಾದ ಮೇಲೆ ಮನೆಯವರಿಂದ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?
ಮೀಡಿಯಾದಲ್ಲಿ ನನ್ನನ್ನು ಒಬ್ಬ ಫ್ಲರ್ಟ್‌ನಂತೆ  ಚಿತ್ರಿಸಲಾಗಿತ್ತು. ಆದರೆ ನಾನು ಮೊದಲ ದಿನದಿಂದಲೇ ಮನೆಯ ಸದಸ್ಯರನ್ನು ನನ್ನ ಸ್ವಂತ ತಮ್ಮ, ತಂಗಿ, ಮಗನ ಹಾಗೆ, ಸ್ನೇಹಿತನ ಹಾಗೆ ಒಬ್ಬೊಬ್ಬರನ್ನು ಕೂಡ ಕುಟುಂಬದವರಂತೆ ಮನದಲ್ಲಿ ಪ್ರತಿಷ್ಠಾಪಿಸಿಕೊಂಡಿದ್ದೆ. ಆದರೆ ದೃಶ್ಯ ಮಾಧ್ಯಮಗಳಲ್ಲಿ ನನ್ನ ಮನದ ಅನಿಸಿಕೆಗಿಂತ ವರ್ತನೆಗಳಲ್ಲಿನ ವೈಪರೀತ್ಯವೇ ಹೈಲೈಟ್‌ ಆಗಿತ್ತು. ಆದರೂ ನನ್ನ ಮನೆಯವರೆಲ್ಲ ಚೆನ್ನಾಗಿತ್ತು ಎಂದೇ ಹೇಳಿದ್ದಾರೆ. ಆದರೆ ತಾಯಿ ಹೇಳಿದ ಒಂದು ನನಗೆ ತುಂಬಾನೇ ಕಾಡಿತು.'ನಿಮ್ಮ ಮಕ್ಕಳು ಟಿವಿ ನೋಡುತ್ತಿರುತ್ತಾರೆ; ಸ್ವಲ್ಪ ಡೀಸೆಂಟ್ ಆಗಿರಬೇಕಿತ್ತು' ಎಂದರು. 'ಮೊದಲ ಒಂದುವಾರ ಅಷ್ಟೇ ಅಲ್ವೇನಮ್ಮ' ಎಂದು ಕೇಳಿದ್ದೆ. 'ಆದರೆ ಅದನ್ನು ಕೂಡ ಅವರು ನೋಡಿರುತ್ತಾರಲ್ಲ' ಎಂದರು. ಯಾವತ್ತೂ ಸಿಗರೇಟು ಸೇದಿರದ ನಾನು ಆ ಮನೆಯಲ್ಲಿ ಸಿಗರೇಟ್‌ ಸೇದಿದ್ದಕ್ಕೂ ಸ್ವಲ್ಪ ಭಿನ್ನಾಭಿಪ್ರಾಯ ಬಂತು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು