
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಗುಂಪಿಗೆ ಸೇರದವರಾಗಿ ಗುರುತಿಸಿಕೊಂಡವರು ಇಬ್ಬರು. ಒಬ್ಬರು ಅರವಿಂದ್ ಮತ್ತು ಇನ್ನೊಬ್ಬರು ಪ್ರಶಾಂತ್ ಸಂಬರಗಿ. ಆದರೆ ಇಬ್ಬರೂ ಫಿನಾಲೆ ತನಕ ತಲುಪಿ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದರು. ಅದರಲ್ಲಿಯೂ ವಯಸ್ಸಿನ ಅಂತರ ಇದ್ದರೂ ಸ್ಪರ್ಧೆಗಳಲ್ಲಿ ಸರಿಯಾದ ಪಾಲ್ಗೊಳ್ಳುವಿಕೆ ಜೊತೆಗೆ ತಮ್ಮ ವ್ಯಕ್ತಿತ್ವದ ಮೂಲಕವೇ ಗುರುತಿಸಿಕೊಂಡವರು ಪ್ರಶಾಂತ್ ಸಂಬರಗಿ. ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಅನುಭವಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.
- ಶಶಿಕರ ಪಾತೂರು
ಮಂಜು ಒಬ್ಬ ವಿಜೇತರಾಗಬಲ್ಲ ಸದಸ್ಯ ಎನ್ನುವುದು ನಿಮಗೆ ಅರಿವಾಗಿದ್ದು ಯಾವಾಗ?
ಮೊದಲ ಇನ್ನಿಂಗ್ಸ್ನಲ್ಲಿ ಮನೆಯಿಂದ ಹೊರಗೆ ಬಂದು ವಿಡಿಯೋಗಳನ್ನು ನೋಡಿದಾಗ ಅಲ್ಲಿರುವ ಕಂಟೆಂಟ್ನಲ್ಲಿ ಐವತ್ತಕ್ಕೂ ಅಧಿಕ ಭಾಗ ಹಾಸ್ಯಕ್ಕೆ ಸೀಮಿತವಾಗಿತ್ತು. ಅಂದರೆ ಒಂದೂವರೆ ಗಂಟೆಯಲ್ಲಿ 45 ನಿಮಿಷಗಳ ಕಾಲ ಮಂಜು ಪಾವಗಡ ಅವರೇ ಕಾಣಿಸಿಕೊಂಡಿದ್ದರು! ಅಲ್ಲಿ ಯಾರು ಹೆಚ್ಚು ಮಾತನಾಡುತ್ತಾರೆ ಅವರನ್ನೇ ತೋರಿಸುತ್ತಾರೆ. ಮಂಜುವಿನಷ್ಟು ನಾನು ಮಾತನಾಡಿಯೇ ಇಲ್ಲ; ಮತ್ತೆ ನನ್ನನ್ನು ಹೇಗೆ ತೋರಿಸುತ್ತಾರೆ! 'ಜೊ ದಿಖ್ತಾ ಹೈ ವೊ ಬಿಕ್ತಾ ಹೈ' ಎನ್ನುವ ಹಿಂದಿ ಗಾದೆಯಂತೆ ಆತ ಕಾಣಿಸುತ್ತಿದ್ದುದು ನಿಜ. ಎರಡನೇ ಇನ್ನಿಂಗ್ಸ್ನ ಮೊದಲ ವಾರದಲ್ಲೇ ಆತನ ಗೆಲುವಿನ ಬಗ್ಗೆ ನನಗೆ ಸೂಚನೆ ಸಿಗಲು ಶುರುವಾಗಿತ್ತು.
ಆರೋಹಿ ನಾರಾಯಣ್ ಹೇಳ್ಕೊಂಡ ಇಷ್ಟಗಳು
ಅರವಿಂದ್ ವಿಜೇತರಾಗಬೇಕು ಎನ್ನುತ್ತಿದ್ದ ನಿಮ್ಮ ಧೋರಣೆ ಕೊನೆಯಲ್ಲಿ ಬದಲಾಗಲು ಕಾರಣವೇನು?
ಸೆಕೆಂಡ್ ಇನ್ನಿಂಗ್ಸ್ನ ಆಟದಲ್ಲಿ ಅರವಿಂದ್ ತುಂಬ ಮೋಸ ಮಾಡಿದ್ದಾರೆ. ಪೆಟ್ಟಿಗೆ ತೆರೆಯುವ ಟಾಸ್ಕ್ನಲ್ಲಿ ಕೀ ತೆಗೆದಿಟ್ಟು ಬೇರೆಯವರಿಗೆ ಸಿಗದಂತೆ ವರ್ತಿಸಿದ್ದು ನನಗೆ ಇಷ್ಟವಾಗಿಲ್ಲ. ಅವರು ಆಟಕ್ಕಾಗಿ ಏನು ಬೇಕಾದರೂ ಮಾಡಬಹುದು ಎಂದು ಗೊತ್ತಾಯಿತು. ಅದಕ್ಕೂ ಮೊದಲು ನುಸುಳು ಚೆಂಡು ಆಟದಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಮೋಸ ಮಾಡಿದ್ದೂ ಅಲ್ಲದೇ ಮತ್ತೊಂದು ಆಟ ಆಡುವುದಕ್ಕೂ ನಿರಾಕರಿಸಿದ್ದರು. ಆಟವನ್ನು ಕುತಂತ್ರದಿಂದಾದರೂ ಗೆಲ್ಲುವ ವ್ಯಕ್ತಿತ್ವ ಅವರದ್ದು. ನಿಜವಾದ ಸ್ಪೋರ್ಟ್ಸ್ಮನ್ ಹಾಗೆ ವರ್ತಿಸಲಾರ. ಟಾಸ್ಕ್ನಲ್ಲಿ, ಸ್ಟ್ರೆಂತ್ನಲ್ಲಿ ಖಂಡಿತವಾಗಿ ಸುಪ್ರೀಮ್ ಎಂದು ಈಗಲೂ ಹೇಳಬಲ್ಲೆ. ಆದರೆ ಅವರು ಸ್ವೀಕರಿಸುವ ಹಾದಿ ನನಗೆ ಇಷ್ಟವಾಗಿರಲಿಲ್ಲ. ಆ ಕ್ಷಣಕ್ಕೆ ಅವರಿಗೆ ಅಲ್ಲಿ ಗೆಲುವು ಸಿಕ್ಕರೂ ಜೀವನದಲ್ಲಿ ಅವರಿಗೆ ಗೆಲುವಿರದು ಎಂದು ಅರ್ಥ ಮಾಡಿಕೊಂಡು ಅವರಿಂದ ದೂರಾದೆ.
ನಮ್ಮ ಬಾವುಟ ನೋಡುತ್ತಿದ್ದರೆ ರೋಮಾಂಚನ- ರಮೇಶ್ ಅರವಿಂದ್
ಮನೆಯಿಂದ ಹೊರಬಂದ ಬಳಿಕ ಚಕ್ರವರ್ತಿ ಚಂದ್ರಚೂಡ್ ಜೊತೆಗೆ ನಿಮ್ಮ ಸಂಬಂಧ ಹೇಗಿದೆ?
ಕೊನೆಯ ದಿನ ಮನೆಯ ಹದಿನೆಂಟು ಮಂದಿ ಸ್ಪರ್ಧಿಗಳ ವಾಯ್ಸ್ ನೋಟ್ ಇರುತ್ತದೆ. ಅದರಲ್ಲಿ ಚಂದ್ರಚೂಡ್ ಅವರ ಮಾತುಗಳು ಅವರು ಮನೆಯ ಸದಸ್ಯರೊಂದಿಗೆ ನನ್ನ ವಿರುದ್ಧ ಮಾಡಿದ ಪಿತೂರಿಯನ್ನು ಸೂಚಿಸುತ್ತಿರುತ್ತದೆ. ಹೊರಗಡೆ ಬಂದ ಮೇಲೆಯೂ ನನ್ನ ಬಗ್ಗೆ ನೆಗೆಟಿವ್ ಸ್ಟೋರಿ ಹರಡಿರಬಹುದೆಂದು ಕಲ್ಪಿಸಿದ್ದೆ. ಹಾಗೇ ಮಾಡಿದ್ದಾರೆ. ಈಗ ವಾದಕ್ಕೆ ಕರೆಯುತ್ತಿದ್ದಾರೆ. ಗಟ್ಟಿಯಾಗಿ ಧ್ವನಿಯೆತ್ತಿ ಮೂಲ ವಿಷಯಕ್ಕೆ ಗೊಂದಲವಾಗುವಂತೆ ನಡೆದುಕೊಳ್ಳುವುದು ಅವರ ಹವ್ಯಾಸ. ಕೆಸರಿನ ಮೇಲೆ ಕಲ್ಲು ಹಾಕುವುದು ಬೇಡ ಎನ್ನುವ ಕಾರಣಕ್ಕೆ ಅವರ ಯಾವುದೇ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುತ್ತಿಲ್ಲ.
ಭಾರತಿಯೇ ಭಾರತ ಮಾತೆ ಅಂತಿದ್ರು- ಭಾರತಿ ವಿಷ್ಣುವರ್ಧನ್
ಬಿಗ್ ಬಾಸ್ ಮನೆಯಿಂದ ನೀವು ಕಲಿತಿದ್ದೇನು? ಕಳೆದುಕೊಂಡಿದ್ದೇನು?
ಎಲ್ಲ ಕಡೆ ಪ್ರತಿಕ್ರಿಯಿಸಬೇಕಾದ ಅಗತ್ಯವಿಲ್ಲ. ಅಗತ್ಯ ಇರದವರಿಗೆ ನಾವಾಗಿ ಸಲಹೆ ನೀಡಲು ಹೋಗಬಾರದು; ಉಚಿತ ಸಲಹೆಯಂತು ನೀಡಲೇಬಾರದು, ಕಡಿಮೆ ಮಾತನಾಡಬೇಕು. ಯಾರು ಜೀವನದಲ್ಲಿ ನಿಮ್ಮವರು ಎಂದು ಅರ್ಥ ಮಾಡಿಕೊಂಡು ನಿಮ್ಮ ಗುಟ್ಟುಗಳನ್ನು ಹೊರಗೆ ಹೇಳಲು ಸಮಯ ತೆಗೆದುಕೊಳ್ಳಬೇಕು. ಸ್ವಲ್ಪ ಆತ್ಮೀಯರಾದರು ಎಂದಾಕ್ಷಣ ಎಲ್ಲ ಗುಟ್ಟುಗಳನ್ನು ಹೊರಗೆ ಹೇಳಿಕೊಳ್ಳಬಾರದು. ನಂಬಿಕೆ ಗಳಿಸಬೇಕು ಎಂದರೆ ಅದಕ್ಕೆ ಸಮಯ ಬೇಕಾಗುತ್ತದೆ ಎನ್ನುವುದನ್ನು ಕಲಿತೆ. ಮೊದಲ ಇನ್ನಿಂಗ್ಸ್ನಲ್ಲಿ ನನಗೆ ಫ್ಲರ್ಟ್ ಎನ್ನುವ ರೀತಿಯಲ್ಲಿ ನೆಗೆಟಿವ್ ಇಮೇಜ್ ಸಿಕ್ಕಿತ್ತು. ನನ್ನ ರಾಷ್ಟ್ರೀಯವಾದಿ ಚಿಂತನೆ, ರಾಜಕೀಯ ವ್ಯಕ್ತಿತ್ವವನ್ನು ಅಲ್ಲಿ ತೋರಿಸುವ ಮನಸ್ಸಿತ್ತು. ಆದರೆ ನಿಯಮಾವಳಿಗಳ ಪ್ರಕಾರ ಅದಕ್ಕೆ ಅಲ್ಲಿ ಅವಕಾಶಗಳಿರಲೇ ಇಲ್ಲ. ಹಾಗಾಗಿ ಆ ಇಮೇಜ್ ಕಳೆದುಕೊಂಡೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.