ಭಾರತೀಯರು ಶ್ರೀಮಂತರನ್ನು ದ್ವೇಷ ಮಾಡೋದೇಕೆ? ಜೀರೋಧಾ ಸಂಸ್ಥಾಪಕ ನಿತಿನ್‌ ಕಾಮತ್‌ ಉತ್ತರ ಇದು!

By Santosh NaikFirst Published Oct 1, 2024, 1:33 PM IST
Highlights

ಜೀರೋಧಾ ಸಂಸ್ಥಾಪಕ ನಿತಿನ್‌ ಕಾಮತ್‌ ಭಾರತದಲ್ಲಿ ಶ್ರೀಮಂತರ ಬಗ್ಗೆ ಸಮಾಜದ ತಿರಸ್ಕಾರದ ಬಗ್ಗೆ ಮಾತನಾಡಿದರು. ಇದಕ್ಕೆ ಸಂಪತ್ತಿನ ಅಸಮಾನತೆ ಹಾಗೂ ಸಮಾಜವಾದಿ ಮನಸ್ಥಿತಿಯೇ ಕಾರಣ ಎಂದಿದ್ದಾರೆ.

ಬೆಂಗಳೂರು (ಅ.1): ಜೀರೋಧಾ ಸಂಸ್ಥಾಪಕ ಕೋಟ್ಯಧಿಪತಿ ನಿತಿನ್‌ ಕಾಮತ್‌ ಅವರು ಇತ್ತೀಚೆಗೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಕೇಳಲಾದ ಅತ್ಯಂತ ಕಠಿಣ ಪ್ರಶ್ನೆಗೆ ಅಷ್ಟೇ ಸೂಕ್ಷ್ಮವಾಗಿ ಉತ್ತರ ನೀಡಿದರು. ಅವರಿಗೆ ಎದುರಾದ ಪ್ರಶ್ನೆ ಏನೆಂದರೆ, ಭಾರತೀಯರು ಯಾಕೆ ಶ್ರೀಮಂತರನ್ನು ದ್ವೇಷ ಮಾಡ್ತಾರೆ? ಅನ್ನೋದು. ಬೆಂಗಳೂರಿನಲ್ಲಿ ನಡೆದ ಟೆಕ್ ಸ್ಪಾರ್ಕ್ಸ್ 2024 ಸಮಾರಂಭದಲ್ಲಿ ಕಾಮತ್ ಅವರೊಂದಿಗಿನ ಸಂವಾದದಲ್ಲಿ ಯುವರ್‌ಸ್ಟೋರಿ ಸಂಸ್ಥಾಪಕಿ ಶ್ರದ್ಧಾ ಶರ್ಮಾ ಅವರು ದೇಶದಲ್ಲಿ ಶ್ರೀಮಂತರನ್ನು ಭಾರತ ಹಾಗೂ ಅಮೆರಿಕದಲ್ಲಿ ಜನರು ನೋಡುವ ಭಿನ್ನತೆಯ ಬಗ್ಗೆ ಪ್ರಶ್ನೆ ಮಾಡಿದರು. “ಅಮೆರಿಕದಲ್ಲಿ ಯಾರಾದರೂ ಹೆಚ್ಚು ಹಣವನ್ನು ಗಳಿಸಿದರೆ, ಅವರು ಯಶಸ್ವಿಯಾದರೆ ಮತ್ತು ಹೊಸ ಕಾರುಗಳನ್ನು ಖರೀದಿಸಿದರೆ, ಅದು ಕವರ್ ಪೇಜ್‌ನಲ್ಲಿ ಬರುತ್ತದೆ. ಮತ್ತು ಅದು ತುಂಬಾ ಸಾಮಾನ್ಯ ವಿಚಾರ ಕೂಡ ಹೌದು. ಜೆಟ್ ಖರೀದಿಸುವುದು ಮತ್ತು ಎಲ್ಲವೂ ತುಂಬಾ ಸಾಮಾನ್ಯವಾಗಿದೆ. ಮತ್ತು ಸಮಾಜವಾಗಿ, ಅಲ್ಲಿನ ಜನ ಶ್ರೀಮಂತರನ್ನು ಕೀಳಾಗಿ ನೋಡುವುದಿಲ್ಲ' ಎಂದು ಶರ್ಮಾ ಹೇಳಿದರು.

ಆದರೆ, ಭಾರತದಲ್ಲಿ ಹಾಗಲ್ಲ, ಇಲ್ಲಿನ ಜನರು ಯಾರಾದರೂ ಹಣ ಗಳಿಸುತ್ತಿದ್ದಾರೆ ಎಂದು ಗೊತ್ತಾದಾಗ ಅವರ ಬಗ್ಗೆ ಇಲ್ಲಸಲ್ಲದ ಯೋಚನೆ ಮಾಡಲು ಆರಂಭಿಸುತ್ತಾರೆ. ಅವನೇನೋ ಕಳ್ಳ ಕೆಲಸ ಮಾಡುತ್ತಿದ್ದಾನೆ ಎಂದೇ ಭಾವಿಸುತ್ತಾರೆ ಎಂದು ಶರ್ಮ ಹೇಳಿದರು.

ಇದಕ್ಕೆ ಜವಾಬ್ದಾರಿಯುತ ಉತ್ತರ ನೀಡಿದ 44 ವರ್ಷದ ನಿತಿನ್‌ ಕಾಮತ್‌, ಭಾರತದಲ್ಲಿ ಇರುವ ಬೃಹತ್‌ ಪ್ರಮಾಣದ ಸಂಪತ್ತಿನ ಅಸಮಾನತೆಯೊಂದಿಗೆ ದೇಶದ ಸಮಾಜವಾದಿ ಮನಸ್ಥಿತಿಯೂ ಇದಕ್ಕೆ ಕಾರಣ ಎಂದು ಅವರು ಮಾತನಾಡಿದ್ದಾರೆ. ಅಮೆರಿಕ ದೇಶ ಶುದ್ಧ ಬಂಡವಾಳಶಾಹಿ ಸಮಾಜ. ಆದರೆ, ನಮ್ಮದು ಸಮಾಜವಾದಿ-ಬಂಡವಾಳಶಾಹಿ ಸಮಾಜ ಎಂದು ನಟನೆ ಮಾಡುತ್ತಿರುವ ಸಮಾಜವಾಗಿದೆ ಎಂದು ಕಾಮತ್‌ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮೂಲದಲ್ಲಿ ನಮ್ಮ ಇಡೀ ದೇಶದ ಮೂಲವೇ ಸಮಾಜವಾದಿಯಾಗಿದೆ ಎಂದಿದ್ದಾರೆ.

ಭಾರತದಲ್ಲಿನ ಈ ಸ್ಥಿತಿ ಬದಲಾಗುತ್ತಿರುವುದನ್ನು ನೀವು ನೋಡಬಹುದೇ ಎನ್ನುವ ಪ್ರಶ್ನೆಗೆ ಇದು ಸಾಧ್ಯವೇ ಇಲ್ಲ ಎಂದು ಕಾಮತ್‌ ಹೇಳಿದ್ದಾರೆ. 'ಇದು ಯಾವ ರೀತಿ ಬದಲಾಗುತ್ತದೆ ಅನ್ನೋದು ನನಗೆ ಗೊತ್ತಾಗುತ್ತಿಲ್ಲ. ಏಕೆಂದರೆ ಎಲ್ಲಿಯವರೆಗೆ ಸಂಪತ್ತಿನ ವಿಷಯದಲ್ಲಿ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೂ ಏನಾದರೂ ಬದಲಾವಣೆ ಆಗುತ್ತದೆ ಅನ್ನೋದನ್ನ ನಾನು ಯೋಚನೆ ಮಾಡುತ್ತಿಲ್ಲ' ಎಂದು ಹೇಳಿದ್ದಾರೆ.

ಕಳೆದ ಜನವರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ಪ್ರೇಕ್ಷಕರ ಜೊತೆ ಸಂವಾದ ನಡೆಸಿದರು. ಶ್ರೀಮಂತರ ಬಗ್ಗೆ ಸಮಾಜದ ವರ್ತನೆಯ ಬಗ್ಗೆ ಅವರು ಅಭಿಪ್ರಾಯ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲಿ ವೀಡಿಯೊವು ಲಕ್ಷಾಂತರ ವೀವ್ಸ್‌ ಹಾಗೂ ಕಾಮೆಂಟ್‌ಗಳು ಪಡೆದಿವೆ. "ಭಾರತೀಯರು ಬಡತನವನ್ನು ಗೌರವದ ಬ್ಯಾಡ್ಜ್ ಆಗಿ ಧರಿಸುತ್ತಾರೆ" ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

37 ಆದರೂ ಮಕ್ಕಳೇಕ್ಕಿಲ್ಲ... ಜೀವನದ ಸತ್ಯ ಬಿಚ್ಚಿಟ್ಟ ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್

"ಏಕೆಂದರೆ ಭಾರತದಲ್ಲಿ ಶ್ರೀಮಂತರು ಸಾಕಷ್ಟು ತೆರಿಗೆ ಪಾವತಿಸದೆ, ವಂಚನೆಗಳನ್ನು ಮಾಡುವ ಮೂಲಕ ಮತ್ತು ಬಡ ಮತ್ತು ಮಧ್ಯಮ ವರ್ಗದವರನ್ನು ಶೋಷಿಸುವ ಮೂಲಕ ಶ್ರೀಮಂತರಾಗುತ್ತಾರೆ" ಎಂದು ಇನ್ನೊಬ್ಬರು ಮಧ್ಯಮ ವರ್ಗದ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. “ಯುಎಸ್‌ನಲ್ಲಿರುವ ಜನರು ಅತಿ ಶ್ರೀಮಂತರನ್ನು ಇಷ್ಟಪಡುವುದಿಲ್ಲ. ಅದೇ ರೀತಿ ಭಾರತದಲ್ಲಿಯೂ ನಮಗೆ ಅತಿ ಶ್ರೀಮಂತರ ಸಮಸ್ಯೆ ಇದೆ,” ಎಂದು ಮೂರನೇ ವ್ಯಕ್ತಿ ಅಭಿಪ್ರಾಯಪಟ್ಟಿದ್ದಾರೆ.

Latest Videos

ಕರ್ಮ ಬೆನ್ನು ಬಿಡಲ್ಲ; ಜೆರೋಧ ಸಹಸಂಸ್ಥಾಪಕ ನಿತಿನ್ ಕಾಮತ್ ಹೀಗ್ಯಾಕೆ ಹೇಳಿದ್ರು?

click me!