Latest Videos

40 ಲಕ್ಷ ರೈತರ ಖಾತೆ ಸೇರದ ಪಿಎಂ ಕಿಸಾನ್ ಯೋಜನೆ 16ನೇ ಕಂತಿನ ಹಣ; ಸಹಾಯಧನ ಬರಲು ಏನ್ ಮಾಡ್ಬೇಕು?

By Suvarna NewsFirst Published Mar 5, 2024, 5:54 PM IST
Highlights

ಪಿಎಂ ಕಿಸಾನ್ ಯೋಜನೆ 16ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಡುಗಡೆಗೊಳಿಸಿದ್ದರು. ಆದರೆ, ಈ ಹಣ 40 ಲಕ್ಷ ಫಲಾನುಭವಿಗಳ ಖಾತೆಗೆ ಇನ್ನೂ ಸೇರಿಲ್ಲ.ಇ-ಕೆವೈಸಿ ಮಾಡಿಸದಿರೋದು ಅಥವಾ ಆಧಾರ್ ಲಿಂಕ್ ಮಾಡದಿರೋದು ಇದಕ್ಕೆ ಕಾರಣ ಎನ್ನಲಾಗಿದೆ. 

ನವದೆಹಲಿ (ಮಾ.5): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) 16ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಡುಗಡೆಗೊಳಿಸಿದ್ದರು. ಒಟ್ಟು 21,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದ್ದು, 9 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಯೋಜನೆಯಲ್ಲಿ ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಆದರೆ, ಈ ಬಾರಿ ಸುಮಾರು 40 ಲಕ್ಷ ರೈತರ ಖಾತೆಗಳಿಗೆ ಈ ಹಣ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಥ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಈ ಹಿಂದೆ ಈ 40 ಲಕ್ಷ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಸಿಕ್ಕಿದೆ. ಆದರೆ, ಈ ಬಾರಿ ಸಿಗದಿರಲು ಪ್ರಮುಖ ಕಾರಣ ಇ-ಕೆವೈಸಿ ಮಾಡಿಸದಿರೋದು ಅಥವಾ ಆಧಾರ್ ಲಿಂಕ್ ಮಾಡದಿರೋದು ಎಂದು ಹೇಳಲಾಗಿದೆ. 

ಪಿಎಂ ಕಿಸಾನ್ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ಪ್ರಾರಂಭಿಸಿತ್ತು. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಈ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅರ್ಹ ರೈತರಿಗೆ 2 ಸಾವಿರ ರೂಪಾಯಿಯಂತೆ, ವಾರ್ಷಿಕವಾಗಿ 6 ಸಾವಿರ ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡುತ್ತದೆ. ಈ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. 

ಪಿಎಂ ಕಿಸಾನ್ ಯೋಜನೆ 16ನೇ ಕಂತು ಬಿಡುಗಡೆ; ನಿಮ್ಮ ಖಾತೆಗೆ ಹಣ ಕ್ರೆಡಿಟ್ ಆಯ್ತಾ, ಚೆಕ್ ಮಾಡೋದು ಹೇಗೆ?

ಹಣ ಪಡೆಯಲು ಅವಕಾಶ ಕಲ್ಪಿಸಿದ ಸರ್ಕಾರ
ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣವನ್ನು ಇನ್ನೂ ಪಡೆಯಲು ಸಾಧ್ಯವಾಗದ ರೈತರಿಗೆ ಕೇಂದ್ರ ಸರ್ಕಾರ ಒಂದು ಆಯ್ಕೆಯನ್ನು ನೀಡಿದೆ. ಅದನ್ನು ಮಾಡಿದ್ರೆ ಕ್ಷಣ ಮಾತ್ರದಲ್ಲಿ ಹಣ ಖಾತೆಗೆ ಬರಲಿದೆ. ಅದೇನೆಂದರೆ ರೈತರು ತಮ್ಮ ಇ-ಕೆವೈಸಿ ಹಾಗೂ ಆಧಾರ್ ಅನ್ನು ಬ್ಯಾಂಕಿಗೆ ಲಿಂಕ್ ಮಾಡಬೇಕು. 
ಇದನ್ನು ಮಾಡಲು ಎರಡು ವಿಧಾನಗಳಿವೆ. ಒಮದು ರೈತ ಪಿಎಂ ಕಿಸಾನ್ ಅಪ್ಲಿಕೇಷನ್ ಅನ್ನು ತನ್ನ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಆ ಬಳಿಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಎರಡನೇ ವಿಧಾನದಲ್ಲಿ ಅವರು ಕಾಮನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಇಕೆವೈಸಿ ಅಥವಾ ಆಧಾರ್ ಅಪ್ಡೇಟ್ ಮಾಡಬಹುದು. ಇದು ರೈತರಿಗೆ ಯೋಜನೆಯಡಿಯಲ್ಲಿ ತಮ್ಮ ಹಣದ ಕಂತುಗಳ್ನು  ಮರಳಿ ಪಡೆಯಲು ನೆರವು ನೀಡುತ್ತದೆ. 

ಇನ್ನು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕಂತುಗಳ ಹಣ ಏಕೆ ಕ್ರೆಡಿಟ್ ಆಗುತ್ತಿಲ್ಲ ಎಂಬುದನ್ನು ಪರಿಶೀಲಿಸಲು ರೈತರು https://chatbot.pmkisan.gov.in/Home/Index ಲಿಂಕ್ ಗೆ ಭೇಟಿ ನೀಡಬಹುದು. ಇಲ್ಲಿ ಅವರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಕಾರ್ಡ್ ಸಂಖ್ಯೆ ನಮೂದಿಸಬೇಕು. ಅದನ್ನು ಮಾಡಿದ ಬಳಿಕ ಅವರಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳು ಸಿಗುತ್ತವೆ. ಇನ್ನೊಂದು ಕಡೆ ಒಂದು ವೇಳೆ ಯಾವುದೇ ರೈತ ಫಲಾನುಭವಿಗಳ ಪಟ್ಟಿಯಲ್ಲಿ ತನ್ನ ಹೆಸರಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು https://www.pmkisanstatus.com ಭೇಟಿ ನೀಡಿ, ಅಲ್ಲಿ ಸ್ಟೇಟಸ್ ಚೆಕ್ ಮಾಡಬಹುದು. 

ರೈತರ ನಿರೀಕ್ಷೆ ಹುಸಿ; ಪಿಎಂ ಕಿಸಾನ್ ವಾರ್ಷಿಕ ಮೊತ್ತ 6 ಸಾವಿರಕ್ಕಿಂತ ಹೆಚ್ಚು ಮಾಡಲ್ಲ,ಕೇಂದ್ರ ಸ್ಪಷ್ಟನೆ

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಹುಡುಕೋದು ಹೇಗೆ?
ಹಂತ 1: ಪಿಎಂ ಕಿಸಾನ್‌ ವೆಬ್‌ಸೈಟ್‌ https://pmkisan.gov.in/ ಭೇಟಿ ನೀಡಿ
ಹಂತ 2: ಅಲ್ಲಿ ಫಲಾನುಭವಿಗಳ ಪಟ್ಟಿ (Beneficiary list) ಟ್ಯಾಬ್‌ ಕ್ಲಿಕ್‌ ಮಾಡಿ. ವೆಬ್‌ಸೈಟ್‌ನ ಬಲಭಾಗದಲ್ಲಿ ಇದು ಇರುತ್ತದೆ.
ಹಂತ 3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ಡ್ರಾಪ್-ಡೌನ್‌ ವಿವರಗಳನ್ನು ಆಯ್ಕೆಮಾಡಿ.
ಹಂತ 4: ಗೆಟ್‌ ರಿಪೋರ್ಟ್‌ ಎನ್ನುವ ಟ್ಯಾಬ್‌ ಕ್ಲಿಕ್‌ ಮಾಡಿ, ಫಲಾನುಭವಿಗಳ ಪಟ್ಟಿಯ ವಿವರಗಳು ಪ್ರಕಟವಾಗುತ್ತದೆ.

click me!