
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ ಬಜೆಟ್ನ ಒಟ್ಟು ಗಾತ್ರ 53.47 ಲಕ್ಷ ಕೋಟಿ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಬಜೆಟ್ನ ಗಾತ್ರ ₹50 ಲಕ್ಷ ಕೋಟಿ ಬೃಹತ್ ಗಡಿಯನ್ನು ದಾಟಿದಂತಾಗಿದೆ.
2024-25ರ ಬಜೆಟ್ನ ಗಾತ್ರ 46.52 ಲಕ್ಷ ಕೋಟಿ ರು.ನಷ್ಟಿತ್ತು. ಬಳಿಕ ವರ್ಷಾಂತ್ಯದಲ್ಲಿ ವೆಚ್ಚ ಹೆಚ್ಚಿದ ಕಾರಣ ಬಜೆಟ್ನ ಗಾತ್ರ 50 ಲಕ್ಷ ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪರಿಷ್ಕೃತ ಅಂದಾಜಿನಲ್ಲಿ ಕಳೆದ ವರ್ಷದ ಬಜೆಟ್ ಗಾತ್ರ 49.64 ಲಕ್ಷ ಕೋಟಿ ರು.ಗೆ ಸೀಮಿತವಾಗಬಹುದು ಎಂದು ಸರ್ಕಾರ ಹೇಳಿದೆ.
ಇನ್ನು 2026-27ರಲ್ಲಿ ಸಾಲೇತರ ಆದಾಯ 36.5 ಲಕ್ಷ ಕೋಟಿ ರು.ನಷ್ಟು ಇದ್ದರೆ, 53.5 ಲಕ್ಷ ಕೋಟಿ ರು. ವೆಚ್ಚ ಇರಲಿದೆ. ಅದೇ ರೀತಿ ಕೇಂದ್ರದ ಒಟ್ಟು ತೆರಿಗೆ ಸಂಗ್ರಹ 28.7 ಲಕ್ಷ ಕೋಟಿ ರು. ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಹಣಕಾಸಿನ ವಿತ್ತೀಯ ಕೊರತೆ ತುಂಬಲು ಸರ್ಕಾರ ಸೆಕ್ಯುರಿಟಿಗಳ ಮೂಲಕ 11.7 ಲಕ್ಷ ಕೋಟಿ ರು. ಸಂಗ್ರಹ ಮಾಡುವ ಗುರಿ ಹಾಕಿಕೊಂಡಿದೆ. ಜೊತೆಗೆ ಜೊತೆಗೆ ಬಾಕಿ ಹಣವನ್ನು ಸಣ್ಣ ಉಳಿತಾಯ ಮತ್ತು ಇತರೆ ಆದಾಯಗಳ ಮೂಲಕ ಸಂಗ್ರಹಿಸುವುದಾಗಿ ಸರ್ಕಾರ ಹೇಳಿದೆ. ಇದರೊಂದಿಗೆ ಮಾರುಕಟ್ಟೆಯಿಂದ ಸರ್ಕಾರ ಸಂಗ್ರಹಿಸುವ ಒಟ್ಟು ಸಾಲದ ಮೊತ್ತ 17.2 ಲಕ್ಷ ಕೋಟಿ ರು.ನಷ್ಟು ಇರಲಿದೆ.
ಇನ್ನು 2025-26 ಬಜೆಟ್ ನಿರೀಕ್ಷೆಯಂತೆ ವಿತ್ತೀಯ ಕೊರತೆಯನ್ನು ಶೇ.4.4ಕ್ಕೆ ಸೀಮಿತಗೊಳಿಸುವ ಗುರಿಯನ್ನು ಮುಟ್ಟುವ ವಿಶ್ವಾಸವನ್ನು ಕೂಡಾ ಸರ್ಕಾರ ವ್ಯಕ್ತಪಡಿಸಿದೆ. ಜೊತೆಗೆ 2026-27ನೇ ಸಾಲಿನಲ್ಲಿ ಜಿಡಿಪಿ 393,00,393 ಕೋಟಿ ರು. ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ವಿತ್ತೀಯ ಕೊರತೆಯು ಜಿಡಿಪಿಯ ಶೇ.4.3ರಷ್ಟು ಅಥವಾ 16.95 ಲಕ್ಷ ಕೋಟಿ ರು. ಇರಬಹುದು ಎಂದು ಸರ್ಕಾರ ಹೇಳಿದೆ.
ಶೇ.4.3ರಷ್ಟು ಕೊರತೆ ನೀಗಿಸಲು ಮಾರುಕಟ್ಟೆಯಿಂದ ಸಾಲಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಒಟ್ಟು 17.2 ಕೋಟಿ ರು. ಸಾಲ ಮಾಡಲಿದೆ. ಜೊತೆಗೆ ವಿತ್ತೀಯ ಕೊರತೆಯ ಪ್ರಮಾಣವು ಜಿಡಿಪಿಯ ಶೇ.4.3ರಷ್ಟು ಇರಲಿದೆ ಎಂದು ಹೇಳಿದೆ.ಈ ಸಾಲದ ಪೈಕಿ 11.7 ಲಕ್ಷ ಕೋಟಿ ರು.ಗಳನ್ನು ಸೆಕ್ಯುರಿಟಿ ಬಾಂಡ್ ಬಿಡುಗಡೆ ಮೂಲಕ ಸಂಗ್ರಹಿಸಲಿದೆ. ಬಾಕಿ ಮೊತ್ತವನ್ನು ಸಣ್ಣ ಉಳಿತಾಯ ಮತ್ತು ಇತರೆ ಮೂಲಗಳಿಂದ ಸಂಗ್ರಹ ಮಾಡುವ ಗುರಿ ಹಾಕಿಕೊಂಡಿದೆ.
2027 ಹಣಕಾಸು ವರ್ಷಕ್ಕೆ ಬಂಡವಾಳ ವೆಚ್ಚದ ಗುರಿಯನ್ನು 12.2 ಲಕ್ಷ ಕೋಟಿ ರು.ಗೆ ಏರಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚಕ್ಕೆಂದು 11.2 ಲಕ್ಷ ಕೋಟಿ ರು. ಮೀಸಲಿಡಲಾಗಿತ್ತು. ಆದರೆ ಗುರಿಯನ್ನು 2027ನೇ ಹಣಕಾಸು ವರ್ಷದಲ್ಲಿ 12.2 ಲಕ್ಷ ಕೋಟಿ ರು.ಗಳಗೆ ಏರಿಸಿರುವುದು ಜಿಡಿಪಿಯ ಶೇ. 4.4 ರಷ್ಟಾಗಿದೆ. ಇದುವರೆಗಿನ ಅತ್ಯಧಿಕವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ
ಇದೇ ವೇಳೆ, ದೇಶದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಹಲವಾರು ಕ್ರಮ ಪ್ರಕಟಿಸಲಾಗಿದೆ. ಸರ್ಕಾರವು ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.
ಮೂಲಸೌಕರ್ಯ ವಲಯಕ್ಕೆ ಅಪಾಯ ಖಾತರಿ (ರಿಸ್ಕ್ ಗ್ಯಾರಂಟಿ) ನಿಧಿಯನ್ನು ಸ್ಥಾಪಿಸಲು ಸರ್ಕಾರ ಪ್ರಸ್ತಾಪಿಸಿದೆ. ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಒಂದು ಯೋಜನೆಯನ್ನು ಪರಿಚಯಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.
ಅಲ್ಪಾವಧಿಯ ಮಾಡ್ಯುಲರ್ ಕೋರ್ಸ್ಗಳನ್ನು ಆರಂಭಿಸಲು ಐಸಿಎಐ, ಐಸಿಎಸ್ಐನಂತಹ ವೃತ್ತಿಪರ ಸಂಸ್ಥೆಗಳಿಗೆ ನೆರವು ನೀಡುವ ಉದ್ದೇಶ ಸರ್ಕಾರಕ್ಕಿದೆ ಎಂದರು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.