ಒಣಗಿದ ನಿರ್ಮಲಾ ಗಂಟಲು: ಮೋದಿ ತಡೆದರು ಬಜೆಟ್ ಪೂರ್ಣ ಭಾಷಣ ಓದಲು!

By Suvarna NewsFirst Published Feb 1, 2020, 3:44 PM IST
Highlights

ಬಜೆಟ್ ಭಾಷಣ ಮಂಡಿಸುತ್ತಿದ್ದ ನಿರ್ಮಲಾಗೆ ಅನಾರೋಗ್ಯ| ಗಂಟಲಿನಲ್ಲಿ ಕಿಚ್ ಕಿಚ್| ದಾಖಲೆಯ ಸುದೀರ್ಘ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿದ ನಿರ್ಮಲಾ| ಸಂಸದರ್, ವಿಪಕ್ಷ ನಾಯಕರ ಮನವಿ ಮೇರೆಗೆ ಭಾಷಣ ನಿಲ್ಲಿಸಿದ ಹಣಕಾಸು ಸಚಿವೆ

ನವದೆಹಲಿ[ಫೆ.01]: ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರದಂದು ಕೇಂದ್ರ ಬಜೆಟ್ ಮಮಡಿಸಿದ್ದಾರೆ. ಈ ವೇಳೆ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಕಾಲ ಬಜೆಟ್ ಮಂಡಿಸಿದ್ದರೂ, ಸಂಪೂರ್ಣವಾಗಿ ಓದಿಲ್ಲ. ಬಜೆಟ್ ಮಂಡನೆ ವೇಳೆ ನಿರ್ಮಲಾ ಆರೋಗ್ಯ ಹದಗೆಟ್ಟ ಪರಿಣಾಮ ಬಜೆಟ್ ನ ಕೊನೆಯ ಕೆಲ ಪುಟಗಳನ್ನು ಓದಲು ಆಗಲಿಲ್ಲ. 

ಹೌದು 2020-21ನೇ ಹಣಕಾಸು ವರ್ಷದ ಬಜೆಟ್ ಭಾಷಣ ಆರಂಭಿಸಿದ್ದ ನಿರ್ಮಲಾ ಸೀತಾರಾಮನ್ ಸುಮಾರು 2 ಗಂಟೆ 41 ಗಂಟೆಗಳವರೆಗೆ ಮುಂದುವರೆಸಿದ್ದಾರೆ. ಈ ನಡುವೆ ಗಂಟಲು ಒಣಗಿದಂತಾಗಿ ಅವರು ಮೂರು ಬಾರಿ ನೀರು ಕುಡಿದಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಅವರ ಪರಿಸ್ಥಿತಿ ಗಮನಿಸಿದ ವಿಪಕ್ಷ ನಾಯಕರು ಭಾಷಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ, ಹೀಗಿರುವಾಗ ಕೇವಲ 2 ಪುಟಗಳು ಬಾಕಿ ಇವೆ. ಓದಿ ಮುಗಿಸುತ್ತೇನೆ ಎಂದಿದ್ದಾರೆ. ಆದರೆ ಮುಂದೆ ಓದಲು ಯತ್ನಿಸಿದರೂ ಅವರಿಂದ ಓದಲಾಗಲಿಲ್ಲ. 

ನೆಲಕಚ್ಚಿದ ಕೈಗಾರಿಕೆ: ಉತ್ತೇಜನಕ್ಕೆ ಮೋದಿ ತಂತ್ರಗಾರಿಕೆ!

ಈ ವೇಳೆ ಸದನದಲ್ಲಿ ಕುಳಿತಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಬಳಿ ಕುಳಿತಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಏನೋ ಹೇಳಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ನಿತಿನ್ ಗಡ್ಕರಿ ನಿರ್ಮಲಾರಿಗೆ ಚಾಕಲೇಟ್ ನೀಡಿದ್ದಾರೆ. ಇದನ್ನು ತಿಂದರೂ ಕೆಮ್ಮು ನಿಲ್ಲಲಿಲ್ಲ. ಅಂತಿಮವಾಗಿ ಇನ್ನು ಸಾಧ್ಯವೇ ಇಲ್ಲ ಎಂದು ಅರಿತ ನಿರ್ಮಲಾ ಸೀತಾರಾಮನ್ ಲೋಕಸಭಾ ಸ್ಪೀಕರ್ ಅನುಮತಿ ಪಡೆದು ಬಜೆಟ್ ಭಾಷಣ ಅರ್ಧಕ್ಕೇ ನಿಲ್ಲಿಸಿ, ಪ್ರತಿಯನ್ನು ಮೇಜಿನ ಮೇಲಿಟ್ಟಿದ್ದಾರೆ. ಬಳಿಕ ರಾಜ್ಯಸಭೆಗೆ ತೆರಳಿದ ನಿರ್ಮಲಾ ಬಜೆಟ್ ಸಂಬಂಧಿತ ದಾಖಲೆಗಳನ್ನು ಅಲ್ಲಿನ ಮೇಜಿನ ಮೇಲಿರಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ನಲ್ಲಿ ಅನೇಕ ಘೋಷಣೆಗಳನ್ನು ಮಾಡಿದ್ದಾರೆ. ತೆರಿಗೆ ಮಿತಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುವುದರೊಂದಿಗೆ, ಕೃಷಿ ಹಾಗೂ ಆರೋಗ್ಯ ಕ್ಷೇತ್ರಕ್ಕೂ ಬಂಪರ್ ಕೊಡುಗೆ ನೀಡಿದ್ದಾರೆ. ಇನ್ನು ಬಜೆಟ್ ಕುರಿತು ಟೀಕೆಗಳೂ ಕೇಳಿ ಬಂದಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸುತ್ತಾ 'ಇದು ಇತಿಹಾಸದಲ್ಲಿ ಬಹು ಉದ್ದದ ಬಜೆಟ್ ಭಾಷಣವಾಗಿರಬಹುದು ಆದರೆ ಇದು ಟೊಳ್ಳು' ಎಂದಿದ್ದಾರೆ.

ಕೇಂದ್ರ ಬಜೆಟ್ 2020: ಎಲ್ಲಾ ಸುದ್ದಿಗಳಿಗಾಘಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಈ ಬಾರಿಯೂ ಭಾರತೀಯ ಸಂಸ್ಕೃತಿಯನ್ನು ಅನುಸರಿಸಿದ ನಿರ್ಮಲಾ ಸೀತಾರಾಮನ್, ಬಜೆಟ್ ಪ್ರತಿಯನ್ನು ಸೂಟ್‌ಕೇಸ್‌ನಲ್ಲಿರಿಸದೆ ಬಾಹಿ ಖಾತಾದಲ್ಲೇ ತಂದಿದ್ದರು. ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ ನಿರ್ಮಲಾರೊಂದಿಗೆ, ಸಂಸತ್ತಿಗೆ ಅವರ ಮಗಳೂ ಬಂದಿದ್ದರೆಂಬುವುದು ಉಲ್ಲೇಖನೀಯ. ಕಾಶ್ಮೀರಿ ಶಾಯರಿಯೊಂದಿಗೆ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್, ಸದೃಢ ಆರ್ಥಕತೆಯ ಹರಿಕಾರ ದಿವಂಗತ ಮಾಜಿ ಹಣಕಾಸು ಸಚಿವರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ಇನ್ನು ತಮ್ಮ ಭಾಷಣದ ನಡುವೆ ತಮಿಳು ಕವಯತ್ರಿ ಅವ್ವೈಯಾರ್ ಹಾಗೂ ಕಾಳಿದಾಸರ ಮಾತುಗಳನ್ನೂ ಉಲ್ಲೇಖಿಸಿದ್ದರೆಂಬುವುದು ವಿಶೇಷ

ಫೆಬ್ರವರಿ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!