ಭಾರೀ ಶ್ರೀಮಂತರ ಮೇಲಿನ ತೆರಿಗೆ ಶೇ.39ಕ್ಕೆ ಇಳಿಕೆ: ಮಹಿಳೆಯರಿಗೆ ಹೊಸ ಸೇವಿಂಗ್‌ ಸ್ಕೀಂ

By Kannadaprabha NewsFirst Published Feb 2, 2023, 8:16 AM IST
Highlights

ವಾರ್ಷಿಕ 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಇದುವರೆಗೆ ವಿಧಿಸಲಾಗುತ್ತಿದ್ದ ತೆರಿಗೆ ಪ್ರಮಾಣವನ್ನು ಶೇ.42.74ರಿಂದ ಶೇ.39ಕ್ಕೆ ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ವಾರ್ಷಿಕ 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಇದುವರೆಗೆ ವಿಧಿಸಲಾಗುತ್ತಿದ್ದ ತೆರಿಗೆ ಪ್ರಮಾಣವನ್ನು ಶೇ.42.74ರಿಂದ ಶೇ.39ಕ್ಕೆ ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2020-21ರಲ್ಲಿ ಮೊದಲ ಬಾರಿಗೆ ಭಾರೀ ಶ್ರೀಮಂತ ವರ್ಗಕ್ಕೆ ಭರ್ಜರಿ ಶೇ.42.74ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ ಈ ಮೂಲಕ ಸರ್ಕಾರಕ್ಕೆ ಹೆಚ್ಚಿನ ಆದಾಯವೇನೂ ಹರಿದುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಈ ವರ್ಗದ ಶ್ರೀಮಂತರ ಆದಾಯದ ಮೇಲೆ ವಿಧಿಸುತ್ತಿದ್ದ ಸರ್‌ಚಾಜ್‌ರ್‍ ಅನ್ನು ಶೇ.37ರಿಂದ ಶೇ.25ಕ್ಕೆ ಇಳಿಸಲಾಗಿದೆ. ಇದರ ಪರಿಣಾಮ ತೆರಿಗೆ ಪ್ರಮಾಣದಲ್ಲೂ ಇಳಿಕೆಯಾಗಿ, ಶೇ.42.74ರಿಂದ ಶೇ.39ಕ್ಕೆ ಇಳಿಯಲಿದೆ. ಈ ಇಳಿಕೆ ಬಳಿಕ 2023-24ನೇ ಸಾಲಿನಲ್ಲಿ ವಾರ್ಷಿಕ 2 ಕೋಟಿ ರು. ಮೇಲ್ಪಟ್ಟಆದಾಯ ಹೊಂದಿದವರೆಲ್ಲಾ ಶೇ.25ರಷ್ಟು ಸರ್‌ಚಾರ್ಜ್‌ಗೆ ಒಳಪಡಲಿದ್ದಾರೆ.

ಯಾರಿಗೆ ಎಷ್ಟು ಸರ್‌ಚಾರ್ಜ್‌

ಪ್ರಸಕ್ತ 50 ಲಕ್ಷ- 1ಕೋಟಿ ರು. ಆದಾಯಕ್ಕೆ ಶೇ.10ರಷ್ಟು ಸರ್‌ಚಾರ್ಜ್‌, 1-2 ಕೋಟಿಗೆ ಶೇ.15ರಷ್ಟು ಸರ್‌ಚಾರ್ಜ್‌, 2-5 ಕೋಟಿಗೆ ಶೇ.25ರಷ್ಟು ಸರ್‌ಚಾರ್ಜ್‌, 5 ಕೋಟಿ ಮೇಲ್ಪಟ್ಟ ಆದಾಯದವರಿಗೆ ಶೇ.37ರಷ್ಟು ಸರ್‌ಚಾರ್ಜ್‌ ವಿಧಿಸಲಾಗುತ್ತಿತ್ತು. ಇದೀಗ ಬದಲಾವಣೆ ಬಳಿಕ 2 ಕೋಟಿ ರು. ಮೇಲ್ಪಟ ಆದಾಯ ಹೊಂದಿದವರೆಲ್ಲಾ ಶೇ.25ರಷ್ಟು ಸರ್‌ಚಾರ್ಜ್‌ ವ್ಯಾಪ್ತಿಗೆ ಒಳಪಡಲಿದ್ದಾರೆ.

Budget 2023: ದೇಶದ ಭವಿಷ್ಯಕ್ಕೆ ಆದ್ಯತೆ ನೀಡಿರುವ ನಿರ್ಮಲ ಬಜೆಟ್‌: ವಿಜಯರಾಜೇಶ್‌

ಮಹಿಳೆಯರಿಗೆ ಬರಲಿದೆ ಹೊಸ ಸೇವಿಂಗ್‌ ಸ್ಕೀಂ

ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಸೀಮಿತ ಅವಧಿಯ ಉಳಿತಾಯ ಯೋಜನೆಯೊಂದನ್ನು ಪ್ರಕಟಿಸಿರುವ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌, ಅದಕ್ಕೆ ‘ಮಹಿಳಾ ಸಮ್ಮಾನ್‌ ಸೇವಿಂಗ್‌್ಸ ಸರ್ಟಿಫಿಕೆಟ್‌’ ಎಂದು ಹೆಸರಿಟ್ಟಿದ್ದಾರೆ. ಈ ಯೋಜನೆಯಡಿ ಮಹಿಳೆಯರು ಅಥವಾ ಹೆಣ್ಣುಮಕ್ಕಳ ಹೆಸರಿನಲ್ಲಿ 2 ವರ್ಷದ ಅವಧಿಗೆ ಗರಿಷ್ಠ 2 ಲಕ್ಷ ರು.ಗಳನ್ನು ಠೇವಣಿ ಇರಿಸಬಹುದು. ಅದಕ್ಕೆ ಶೇ.7.5ರಷ್ಟುನಿಶ್ಚಿತ ಬಡ್ಡಿ ದರ ಲಭಿಸಲಿದೆ. ಅವಧಿಗೂ ಮುನ್ನ ಭಾಗಶಃ ಹಣವನ್ನು ಹಿಂಪಡೆಯುವ ಅವಕಾಶವೂ ಇದೆ.

‘ಮಹಿಳಾ ಸಮ್ಮಾನ್‌ ಸೇವಿಂಗ್‌ ಪತ್ರ’ ಹೆಸರಿನ ಒಂದು ಅವಧಿಯ ಹೊಸ ಸಣ್ಣ ಉಳಿತಾಯ ಯೋಜನೆಯನ್ನು ಜಾರಿಗೊಳಿಸಲಾಗುವುದು. ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಇದರ ಅನುಕೂಲ ಪಡೆದುಕೊಳ್ಳಬಹುದು ಎಂದು ನಿರ್ಮಲಾ ಹೇಳಿದ್ದಾರೆ.

Budget 2023: ಅಂತರ್ಗತ ಅಭಿವೃದ್ಧಿಗೆ ಉತ್ತೇಜನ ನೀಡುವ ಬಜೆಟ್‌: ಡಾ.ಎಸ್‌.ಆರ್‌.ಕೇಶವ


ಭಾರತದ ಬಜೆಟ್‌ಗೆ ಸಿಂಗಾಪುರ, ಬ್ರಿಟನ್‌, ಯುಎಇ ಎನ್ನಾರೈಗಳ ಮೆಚ್ಚುಗೆ

ಭಾರತದ ಬಜೆಟ್‌ಗೆ ಕೇವಲ ಭಾರತವಲ್ಲದೇ ವಿದೇಶದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದ ಬಜೆಟ್‌ಗೆ ವಿಶ್ವವೇ ಕಾದಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ಭಾರತದ ಬಜೆಟ್‌ಗೆ ಸಿಂಗಾಪುರ್‌, ಬ್ರಿಟನ್‌, ಯುಎಇಯಲ್ಲಿನ ಅನಿವಾಸಿ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಸಿರು ಆರ್ಥಿಕತೆ, ಸ್ವಯಂ ಉದ್ಯಮ ಹಾಗೂ ಪರಿಸರ ಸ್ನೇಹಿ ಉಪಕ್ರಮದಂತಹ ಕಲ್ಪನೆಗಳ ಮೇಲೆ ಭಾರತ ಬೆಳಕು ಚೆಲ್ಲಿದೆ. ಮಧ್ಯಮ ಹಾಗೂ ಬಡವರ್ಗದ ಜನರಿಗೆ ಉಪಯುಕ್ತವಾಗಲಿದೆ. ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಹಾಗೂ ಸಿರಿಧಾನ್ಯಗಳನ್ನು ಜಗತ್ತಿನಲ್ಲಿ ಮರುಬಳಕೆಗೆ ಬರುವಂತೆ ಮಾಡುವ ದೊಡ್ಡ ಸಾಹಸಕ್ಕೆ ಭಾರತ ಕೈಹಾಕಿದೆ ಎಂದು ಯುಎಇ ಅನಿವಾಸಿ ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ವರ್ಗದ ಜನರಿಗೆ, ಉದ್ಯಮಗಳಿಗೆ ಉತ್ತೇಜನ ನೀಡುವ ಬಜೆಟ್‌ ಇದಾಗಿದೆ. ಬಂಡವಾಳ ಹಂಚಿಕೆಯು ದೇಶದ ಸುಸ್ಥಿರ ಅಭಿವೃದ್ಧಿಗೆ ಬೆನ್ನೆಲುಬಾಗಲಿದೆ ಎಂದು ಸಿಂಗಾಪುರದಲ್ಲಿರುವ ಭಾರತೀಯ ಮೂಲದ ಆರ್ಥಿಕ ತಜ್ಞರು ಬಜೆಟ್‌ ಅನ್ನು ಶ್ಲಾಘಿಸಿದ್ದಾರೆ. ಮಧ್ಯಮ ಹಾಗೂ ಬಡವರ್ಗ ಸೇರಿದಂತೆ ಉದ್ಯೋಗಿಗಳು, ಉದ್ಯಮ ಮಾಡುವವರಿಗೆ ಉತ್ತಮ ಅವಕಾಶವೊಂದನ್ನು ಭಾರತ ಒದಗಿಸುತ್ತಿದೆ ಎಂದು ಬ್ರಿಟನ್‌ ಅನಿವಾಸಿ ಭಾರತೀಯರು ಹೇಳಿದ್ದಾರೆ.

click me!