ತಾಜ್ ಮಹಲ್ ಗೂ ತಟ್ಟಿದ ತೆರಿಗೆ ಬಿಸಿ; ಆಸ್ತಿ, ನೀರಿನ ತೆರಿಗೆ ಪಾವತಿಗೆ 15 ದಿನಗಳ ಗಡುವು

By Suvarna NewsFirst Published Dec 20, 2022, 6:23 PM IST
Highlights

*ಬಾಕಿ ತೆರಿಗೆ ಪಾವತಿಸುವಂತೆ ತಾಜ್ ಮಹಲ್ ಗೆ ಆಗ್ರಾ ನಗರ ಪಾಲಿಕೆ ನೋಟಿಸ್
*1ಕೋಟಿ ರೂ. ನೀರಿನ ತೆರಿಗೆ,1.40ಲಕ್ಷ ರೂ. ಆಸ್ತಿ ತೆರಿಗೆ ಬಾಕಿ
*15 ದಿನಗಳೊಳಗೆ ಬಾಕಿ ತೆರಿಗೆ ಪಾವತಿಸದಿದ್ರೆ ಜಪ್ತಿ ಎಚ್ಚರಿಕೆ
 

ನವದೆಹಲಿ (ಡಿ.20): ಜಗತ್ತಿನ ಪ್ರಸಿದ್ಧ ಪ್ರವಾಸಿ ತಾಣ, ವಿಶ್ವದ ಏಳು ಅದ್ಭುತ್ ಗಳಲ್ಲಿ ಒಂದೆಂಬ ಹೆಗ್ಗಳಿಕೆ ಗಳಿಸಿರುವ ತಾಜ್ ಮಹಲ್ ಗೆ ಜಪ್ತಿ ಭೀತಿ ಎದುರಾಗಿದೆ. ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿರುವ ತಾಜ್ ಮಹಲ್ ಗೆ ಆಗ್ರಾ ನಗರ ಪಾಲಿಕೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿ ಬಿಸಿ ಮುಟ್ಟಿಸಿದೆ. 15 ದಿನಗಳೊಳಗೆ ಬಾಕಿ ತೆರಿಗೆ ಪಾವತಿಸದಿದ್ರೆ ಜಪ್ತಿ ಮಾಡೋದಾಗಿಯೂ ನೋಟಿಸ್ ನಲ್ಲಿ ಎಚ್ಚರಿಸಿದೆ. ಮೂರು ಶತಮಾನಗಳಿಗಿಂತಲೂ ಪುರಾತನವಾದ ಈ ಪಾರಂಪರಿಕ ತಾಣಕ್ಕೆ ಇದೇ ಮೊದಲ ಬಾರಿಗೆ ಆಸ್ತಿ ತೆರಿಗೆ ಹಾಗೂ ನೀರಿನ ತೆರಿಗೆ ನೋಟಿಸ್ ನೀಡಲಾಗಿದೆ. ನೀರಿನ ತೆರಿಗೆ ಹಾಗೂ ಆಸ್ತಿ ತೆರಿಗೆಯ ತಲಾ ಒಂದು ನೋಟಿಸ್ ಗಳನ್ನು ನೀಡಲಾಗಿದೆ ಎಂದು ಎಎಸ್ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  1ಕೋಟಿ ರೂ. ನೀರಿನ ತೆರಿಗೆ ಹಾಗೂ1.40ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸುವಂತೆ ಎಎಸ್ ಐಗೆ ನೋಟಿಸ್ ನೀಡಲಾಗಿದೆ. ಆದರೆ, ಸ್ಮಾರಕಗಳಿಗೆ ಆಸ್ತಿ ತೆರಿಗೆ ಅನ್ವಯಿಸೋದಿಲ್ಲ ಎನ್ನುತ್ತಾರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು.

15 ದಿನಗಳ ಗಡುವು
ಮೂರು ದಶಕಗಳಿಂದ ಎಂದೂ ಕಾಡದ ತೆರಿಗೆ ಬಿಸಿ ಈಗ ತಾಜ್ ಮಹಲ್ ಗೆ (Taj Mahal) ತಟ್ಟಿದೆ. ಒಟ್ಟು 1.014 ಕೋಟಿ ರೂ. ಬಾಕಿ ತೆರಿಗೆ ಪಾವತಿಗೆ ಆಗ್ರಾ ನಗರ ಪಾಲಿಕೆ (Agra Municipal Corporation) 15 ದಿನಗಳ ಗಡುವು ನೀಡಿದೆ. ಒಂದು ವೇಳೆ 15 ದಿನಗಳೊಳಗೆ ತೆರಿಗೆ ಪಾವತಿಸಲು ವಿಫಲವಾದ್ರೆ ತಾಜ್ ಮಹಲ್ ಅನ್ನು ಜಪ್ತಿ ಮಾಡೋದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ. ಇನ್ನು ಈ ತನಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಮೇಲೆ ಬಡ್ಡಿ (Interest) ವಿಧಿಸಿರೋದನ್ನು ಕೂಡ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. 

ಕೂಲಿ ಕಾರ್ಮಿಕನಿಗೆ 14 ಕೋಟಿ ರೂ ತೆರಿಗೆ ಪಾವತಿಸುವಂತೆ ನೋಟಿಸ್, ಕಂಗಾಲದ ಕುಟುಂಬ ನಾಪತ್ತೆ!

ಚರ್ಚೆ ಹುಟ್ಟು ಹಾಕಿರುವ ನೋಟಿಸ್
ಮೂರು ದಶಕಗಳಲ್ಲಿ ತೆರಿಗೆ ವಿಚಾರದಲ್ಲಿ ಎಂದೂ ಎದುರಾಗದ ಪ್ರಶ್ನೆಯೊಂದು ಈಗ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರೋದು ಆಗ್ರಾ ನಗರ ಪಾಲಿಕೆ ನೀಡಿರುವ ತೆರಿಗೆ ನೋಟಿಸ್. 'ಸ್ಮಾರಕಗಳಿಗೆ ಆಸ್ತಿ ತೆರಿಗೆ ಅನ್ವಯಿಸೋದಿಲ್ಲ. ಅಲ್ಲದೆ, ತಾಜ್ ಮಹಲ್ ಅನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದ ಕಾರಣ ನೀರಿಗಾಗಿ ನಾವು ತೆರಿಗೆ ಪಾವತಿಸಬೇಕಾದ ಅಗತ್ಯವಿಲ್ಲ. ಸ್ಮಾರಕ ಸುತ್ತಮುತ್ತ ಹಸಿರು ನಿರ್ವಹಣೆಗಾಗಿ ಮಾತ್ರ ನೀರನ್ನು ಬಳಕೆ ಮಾಡಲಾಗುತ್ತದೆ. ನೀರು ಹಾಗೂ ಆಸ್ತಿ ತೆರಿಗೆಗೆ ಸಂಬಂಧಿಸಿ ಇದೇ ಮೊದಲ ಬಾರಿಗೆ ತಾಜ್ ಮಹಲ್ ಗೆ ನೋಟಿಸ್ ನೀಡಲಾಗಿದೆ. ಬಹುಶಃ ತಿಳಿಯದೇ ಈ ನೋಟಿಸ್ ಕಳುಹಿಸಲಾಗಿದೆ' ಎಂದು ಎಎಸ್ ಐ (ASI) ಅಧೀಕ್ಷಕ ರಾಜ್ ಕುಮಾರ್ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ಯಾನ್ ಕಾರ್ಡ್ ಬಳಕೆದಾರರೇ ಗಮನಿಸಿ, ಈ ತಪ್ಪುಗಳನ್ನು ಮಾಡಿದ್ರೆ 10 ಸಾವಿರ ರೂ. ದಂಡ ಖಚಿತ!

ತಾಜ್ ಮಹಲ್ ಅನ್ನು ಆಗ್ರಾದಲ್ಲಿ (Agra) ಯಮುನಾ ನದಿಯ ದಡದ ಮೇಲೆ ತನ್ನ ಪತ್ನಿ ಮುಮ್ತಾಜ್ ಸವಿನೆನಪಿಗಾಗಿ ಮೋಘಲ್ ದೊರೆ ಶಹಜಹಾನ್ (Shah Jahan) 1631 ಹಾಗೂ 1648ರ ನಡುವೆ ನಿರ್ಮಿಸಿದ್ದ. ಈ ಸ್ಮಾರಕವನ್ನು ಪ್ರೇಮಿಗಳ ಸೌಧ ಎಂದೇ ಕರೆಯಲಾಗುತ್ತದೆ. ತಾಜ್ ಮಹಲ್ ಅನ್ನು ಪ್ರೀತಿಯ ದ್ಯೋತಕವಾಗಿ ಪರಿಗಣಿಸಲಾಗುತ್ತದೆ. ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕೂಡ ತಾಜ್ ಮಹಲ್ ಅನ್ನು ಸೇರಿಸಲಾಗಿದೆ. ತಾಜ್ ಮಹಲ್ ಸೌಂದರ್ಯವನ್ನು ನೋಡಲು ಪ್ರತಿದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.  ತಾಜ್ ಮಹಲ್ ವೀಕ್ಷಣೆಗಾಗಿ ಪ್ರತಿ ವರ್ಷ ವಿವಿಧ ರಾಷ್ಟ್ರಗಳಿಂದ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗ್ರಾಕ್ಕೆ ಭೇಟಿ ನೀಡುತ್ತಾರೆ. 

click me!