ಕೂಲಿ ಕಾರ್ಮಿಕನಿಗೆ 14 ಕೋಟಿ ರೂ ತೆರಿಗೆ ಪಾವತಿಸುವಂತೆ ನೋಟಿಸ್, ಕಂಗಾಲದ ಕುಟುಂಬ ನಾಪತ್ತೆ!

By Suvarna NewsFirst Published Dec 20, 2022, 4:01 PM IST
Highlights

ಆದಾಯ ತೆರಿಗೆ ಪಾವತಿಸುವುದು ಅತ್ಯಂತ ಮುಖ್ಯ. ಪ್ರತಿ ವರ್ಷ ಐಟಿ ರಿಟರ್ನ್ಸ್, ತೆರಿಗೆ ವಿನಾಯಿತಿಗೆ ದಾಖಲೆ ಪತ್ರಗಳ ಸಲ್ಲಿಕೆ ಮಾಡಬೇಕು. ಇವೆಲ್ಲವೂ ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಕಡ್ಡಾಯವಾಗಿದೆ. ಆದರೆ ಇಲ್ಲೊಬ್ಬ ಕೂಲಿ ಕಾರ್ಮಿಕನಿಗೆ ಬರೋಬ್ಬರಿ 14 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇತ್ತ ಕಂಗಾಲಾಗಿರುವ ಕುಟುಂಬ ನಾಪತ್ತೆಯಾಗಿದೆ.

ಪಾಟ್ನಾ(ಡಿ.20):  ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ದಾಖಲೆ ಪತ್ರಗಳನ್ನು ನೀಡುವಾಗ ಎಚ್ಚರಿಕೆ ವಹಿಸಬೇಕು. ಸಿಕ್ಕ ಸಿಕ್ಕ ಕಡೆ ಮಹತ್ವದ ಮಾಹಿತಿಗಳ ದಾಖಲೆಗಳನ್ನು ಬಹಿರಂಗ ಪಡಿಸಬಾರದು. ಇಷ್ಟೇ ಅಲ್ಲ ತಮ್ಮ ದಾಖಲೆ ಪತ್ರಗಳನ್ನು ಯಾರೂ ದುರ್ಬಳಕೆ ಮಾಡಿಕೊಂಡಿಲ್ಲ ಅನ್ನೋದನ್ನು ಖಾತ್ರಿ ಪಡಿಸಬೇಕು. ಆದರೆ ಕೂಲಿ ಕಾರ್ಮಿಕರಿಗೆ ಈ ಕುರಿತು ಹೆಚ್ಚಿನ ಮಾಹಿತಿ ಇರುವುದಿಲ್ಲ. ಇದನ್ನೇ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇದೀಗ ಇಂತದ್ದೆ ಪ್ರಕರಣವೊಂದು ಬಿಹಾರದಲ್ಲಿ ನಡೆದಿದೆ. ಕೂಲಿ ಕಾರ್ಮಿಕನಿಗೆ 14 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ನೋಟಿಸ್‌ನಿಂದ ಗಾಬರಿಗೊಂಡ ಕೂಲಿ ಕಾರ್ಮಿಕನ ಕುಟುಂಬ ಇದೀಗ ಮನೆಯನ್ನು ತೊರೆದು ನಾಪತ್ತೆಯಾಗಿದೆ.

ರೋಹ್ಟಸ್ ಜಿಲ್ಲೆಯ ಮನೋಜ್ ಯಾದವ್ ಕೂಲಿ ಕೆಲಸ ಮಾಡಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ. ಮನೋಜ್ ಯಾದವ್ ದೆಹಲಿ, ಹರ್ಯಾಣ, ಪಂಜಾಬ್ ಸೇರಿದಂತೆ ಹಲವು ಭಾಗಗಳಲ್ಲಿ ಖಾಸಗಿ ಕಂಪನಿಯಲ್ಲಿ ಸಹಾಯಕನಾಗಿ, ಕ್ಲೀನರ್ ಆಗಿ ಕೆಲಸ ಮಾಡಿದ್ದರು. ಆದರೆ ಕೊರೋನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದರು. ಹೀಗಾಗಿ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ತವರಿಗೆ ವಾಪಾಸ್ಸಾದ ಮನೋಜ್ ಯಾದವ್ ಕೂಲಿ ಕೆಲಸ ಮಾಡಲು ಆರಂಭಿಸಿದ್ದಾನೆ.

 

ಆದಾಯ ತೆರಿಗೆ ವಿನಾಯ್ತಿ 5 ಲಕ್ಷಕ್ಕೆ ಹೆಚ್ಚಳ..? ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಸಾಧ್ಯತೆ

2021ರಿಂದ ಕೂಲಿ ಕಾರ್ಮಿಕನಾಗಿ ದುಡಿಯುತ್ತಿರುವ ಮನೋಜ್ ಯಾದವ್ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರೂ, ಎಲ್ಲವನ್ನೂ ಸರಿದೂಗಿಸಲು ಕೊಂಚ ಸಮಯಬೇಕು ಎಂದು ಪ್ರತಿ ದಿನ ರಜೆ ಇಲ್ಲದೆ ದುಡಿಯುತ್ತಿದ್ದ. ಇದೀಗ ಇದಕ್ಕಿದ್ದಂತೆ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 14 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. 

ಮನೋಜ್ ಯಾದವ್ ಬ್ಯಾಂಕ್ ದಾಖಲೆಗಳ ಪ್ರಕಾರ ಕೋಟಿ ಕೋಟಿ ರೂಪಾಯಿ ಟ್ರಾನ್ಸಾಕ್ಷನ್ ನಡೆದಿದೆ. ಇದರ ಪರಿಣಾಮ 14 ಕೋಟಿ ರೂಪಾಯಿ ತೆರಿಗೆ ಪಾವತಿಸಲು ಸೂಚಿಸಲಾಗಿದೆ. ಆದರೆ ನೋಟಿಸ್ ಹಿಡಿದು ಮನೋಜ್ ಯಾದವ್ ಮನೆಗೆ ತೆರಳಿದೆ ಅಧಿಕಾರಿಗಳಿಗೂ ಶಾಕ್ ಆಗಿದೆ. 14 ಕೋಟಿ ರೂಪಾಯಿ ತೆರಿಗೆ ಪಾವತಿಯ ನೋಟಿಸ್ ಹಿಡಿದು ಮನೆತೆರಳಿದ ಅಧಿಕಾರಿಗಳು ಯಾದವ್ ಮನೆ ನೋಡಿ ದಂಗಾಗಿದ್ದಾರೆ. ಗುಡಿಸಲು ಮನೆಯಲ್ಲಿ ವಾಸವಿರುವ ಮನೋಜ್ ಯಾದವ್‌ಗೆ ಅನಿವಾರ್ಯವಾಗಿ ನೋಟಿಸ್ ನೀಡಿದ್ದಾರೆ. ಇದೇ ವೇಳೆ ಮನೋಜ್ ಯಾದವ್ ನನ್ನಲ್ಲಿರುವ ಎಲ್ಲಾ ಆಸ್ತಿಯನ್ನು 20 ಬಾರಿ ಮಾರಾಟ ಮಾಡಿದರೂ 14 ಕೋಟಿ ಪಾವತಿಸಲು ಸಾಧ್ಯವಿಲ್ಲ. ತಾನು ಕೂಲಿ ಕಾರ್ಮಿಕ. ನಾನು ಇಷ್ಟು ಹಣ ಪಾವತಿಸುವುದು ಹೇಗೆ?ಎಂದು ಪ್ರಶ್ನಿಸಿದ್ದಾನೆ.

ಒಂದೇ ಐಟಿಆರ್ ಅರ್ಜಿ ನಮೂನೆ ಭರ್ತಿ ಮಾಡಿದ್ರೆ ಸಾಕು; ಏಕರೂಪದ ಫಾರ್ಮ್ ಗೆ ಐಟಿ ಇಲಾಖೆ ಪ್ರಸ್ತಾವನೆ

ಇತ್ತ ಆದಾಯ ಇಲಾಖೆ ಅಧಿಕಾರಿಗಳು ಕೇಂದ್ರ ಕಚೇರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಮನೋಜ್ ಯಾದವ್ ದಾಖಲೆಗಳಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ದುರ್ಬಳೆ ಮಾಡಿಕೊಂಡಿದೆ. ಮನೋಜ್ ಯಾದವ್ ಹೆಸರಿನಲ್ಲಿ ಖಾತೆ ತೆರೆದು ಕೋಟಿ ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ತೆರಿಗೆ ವಂಚನೆಗೆ ಕೂಲಿ ಕಾರ್ಮಿಕನ ಗೌಪ್ಯ ದಾಖಲೆಗಳನ್ನು ಬಳಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಅಧಿಕಾರಿಗಳು ಪತ್ರ ಬರೆದಿದ್ದಾರೆ.

ಇತ್ತ ನೋಟಿಸ್ ಪಡೆದಿರುವ ಮನೋಜ್ ಯಾದವ್ ಕುಟುಂಬ ಕಂಗಾಲಾಗಿದೆ. ಪರಿಣಾಮ ಮನೆ ಖಾಲಿ ಮಾಡಿ ನಾಪತ್ತೆಯಾಗಿದ್ದಾರೆ. ಕುಟುಂಬಸ್ಥರು, ಆಪ್ತರ ಸಂಪರ್ಕಕ್ಕೂ ಸಿಕಿಲ್ಲ. ಇದೀಗ ಮನೋಜ್ ಯಾದವ್ ಕುಟುಂಬ ಎಲ್ಲಿದೆ ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಯಾದವ್ ಕುಟುಂಬವನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
 

click me!