
ನವದೆಹಲಿ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೇಂದ್ರ ಬಜೆಟ್ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾಡಿಕೆಯಂತೆ ಫೆ.1ರಂದೇ ಮಂಡಿಸಲಿದ್ದಾರೆ. ಇದರೊಂದಿಗೆ ಈ ಸಲ ಭಾನುವಾರ ಮಂಡನೆಯ ಕುರಿತಾಗಿ ಇದ್ದಿದ್ದ ಅನುಮಾನಗಳಿಗೆ ಸರ್ಕಾರ ತೆರೆ ಎಳೆದಿದೆ.
ಈ ವರ್ಷ ಫೆ.1 ಭಾನುವಾರ. ಜೊತೆಗೆ ಅದೇ ದಿನ ಗುರು ರವಿದಾಸರ ಜಯಂತಿಯೂ ಬಂದಿದೆ. ಹಾಗಾಗಿ ಅಂದು ಬಜೆಟ್ ಮಂಡನೆಯಾಗುತ್ತದೆಯೋ ಅಥವಾ ಫೆ.2ರಂದು ಮಂಡಿಸಲಾಗುವುದೋ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಕೇಂದ್ರ ಸರ್ಕಾರ ಸಂಪ್ರದಾಯ ಮುರಿಯದಿರಲು ನಿರ್ಧರಿಸಿದೆ. ಫೆ.1ರಂದು ಮಂಡಿಸುವ ಸಂಪ್ರದಾಯ ಆರಂಭವಾದ ನಂತರ ಮೊದಲ ಬಾರಿ ಭಾನುವಾರ ಮಂಡನೆ ಆಗುತ್ತಿದೆ.
ಜ.28ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದಾದ ಎರಡು ದಿನಗಳ ಬಳಿಕ ಸಚಿವೆ ನಿರ್ಮಲಾ ದಾಖಲೆಯ 9ನೇ ಬಜೆಟ್ ಮಂಡಿಸಲಿದ್ದಾರೆ.
ಭಾನುವಾರ ಬಜೆಟ್ ಮಂಡನೆಯಾಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಕೇಂದ್ರ ಬಜೆಟ್ನ್ನು ಫೆ.28ರಂದು ಮಂಡನೆ ಮಾಡಲಾಗುತ್ತಿತ್ತು. ಆ ವೇಳೆ 1999ರಲ್ಲಿ ಅಂದಿನ ವಿತ್ತ ಸಚಿವ ಯಶವಂತ ಸಿನ್ಹಾ ಅವರು ಭಾನುವಾರ ಬಜೆಟ್ ಮಂಡಿಸಿದ್ದರು. ಆ ಬಳಿಕ 2017ರ ನಂತರ ಫೆ.1ರಂದು ಮಂಡಿಸುವ ಸಂಪ್ರದಾಯ ರೂಢಿಯಾಗಿದ್ದು, ಆ ಬಳಿಕದ ಮೊದಲ ಭಾನುವಾರ ಇದಾಗಿದೆ.
ನಮ್ಮಲ್ಲೇ ಮೊದಲು
ಭಾನುವಾರವಾದರೂ ಫೆ.1ರಂದೇ ಕೇಂದ್ರ ಮುಂಗಡಪತ್ರ ಮಂಡನೆ ಆಗಿತ್ತು ಎಂದು ಜ.2ರಂದೇ ಕನ್ನಡಪ್ರಭ ವರದಿ ಮಾಡಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.