Dormant accounts:ಬ್ಯಾಂಕ್ ನಿಷ್ಕ್ರಿಯ ಖಾತೆಗಳಲ್ಲಿ 26,697 ಕೋಟಿ ರೂ.: ನಿರ್ಮಲಾ ಸೀತಾರಾಮನ್

By Suvarna NewsFirst Published Dec 2, 2021, 6:05 PM IST
Highlights

ದೇಶದ ವಿವಿಧ ಬ್ಯಾಂಕ್ಗಳಲ್ಲಿ 10 ವರ್ಷಗಳಿಂದ ನಿಷ್ಕ್ರಿಯವಾಗಿರೋ ಸುಮಾರು 9 ಕೋಟಿ ಖಾತೆಗಳಲ್ಲಿ ಒಟ್ಟು 26,697 ಕೋಟಿ ರೂ. ಹಣವಿದೆ ಎಂಬ ಮಾಹಿತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ನೀಡಿದ್ದಾರೆ.ಇವುಗಳಲ್ಲಿರೋ ಹಣವನ್ನು DEAFಗೆ ವರ್ಗಾಯಿಸಲಾಗೋದು ಎಂದಿದ್ದಾರೆ.

ನವದೆಹಲಿ(ಡಿ.2): ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂಪಾಯಿ ಕೊಳೆಯುತ್ತ ಬಿದ್ದಿರೋ ವಿಚಾರ ಎಲ್ಲರಿಗೂ ಗೊತ್ತು. ಆದ್ರೆ ಎಷ್ಟಿದೆ ಎಂಬ ಅಂದಾಜು ಯಾರಿಗೂ ಇಲ್ಲ. ಆದ್ರೆ ಈ ಬಗ್ಗೆ ಸ್ವತಃ ವಿತ್ತ ಸಚಿವೆವರೇ ಮಾಹಿತಿ ನೀಡಿದ್ದು,ಆ ಮೊತ್ತ ಕೇಳಿದ್ರೆ ಒಂದು ಕ್ಷಣ ಎಂಥವರು ಶಾಕ್ ಆಗಲೇಬೇಕು. ಕೋಆಪರೇಟಿವ್ ಬ್ಯಾಂಕ್ಗಳು (cooperative banks) ಸೇರಿದಂತೆ ದೇಶದ ವಿವಿಧ ಬ್ಯಾಂಕ್ಗಳ ನಿಷ್ಕ್ರಿಯ ಖಾತೆಗಳಲ್ಲಿ(dormant accounts) ಒಟ್ಟು 26,697 ಕೋಟಿ ರೂ. ಠೇವಣಿಯಿದೆ ಎಂದು ವಿತ್ತ ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitharaman) ಮಂಗಳವಾರ (ಡಿ.1) ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 2020 ಡಿಸೆಂಬರ್ 31ರ ತನಕದ ಅಂಕಿಅಂಶಗಳ ಪ್ರಕಾರ 10 ವರ್ಷಗಳಿಂದ ನಿಷ್ಕ್ರಿಯವಾಗಿರೋ ಸುಮಾರು 9 ಕೋಟಿ ಖಾತೆಗಳಲ್ಲಿಇಷ್ಟು ಮೊತ್ತದ ಹಣವಿರೋದು ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.  ಭಾರತೀಯ ರಿಸರ್ವ್ ಬ್ಯಾಂಕ್  (RBI) ನೀಡಿರೋ ಮಾಹಿತಿ ಪ್ರಕಾರ ಡಿಸೆಂಬರ್ 31, 2020 ತನಕ ಇಂಥ 8,13,34,849 ಖಾತೆಗಳು ನಿಗದಿತ ವಾಣಿಜ್ಯ ಬ್ಯಾಂಕ್ಗಳಲ್ಲಿವೆ. ಈ ಖಾತೆಗಳಲ್ಲಿ ಒಟ್ಟು 24,356 ಕೋಟಿ ರೂ. ಠೇವಣಿ ಹಣವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸೋ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು. ಅದೇರೀತಿ ಡಿಸೆಂಬರ್ 31, 2020ಕ್ಕೆ ಅನ್ವಯಿಸುವಂತೆ ಪಟ್ಟಣ ಕೋ-ಆಪರೇಟಿವ್ ಬ್ಯಾಂಕ್ ಗಳ (UCBs) 77,03,819 ಖಾತೆಗಳಲ್ಲಿ2,341 ಕೋಟಿ ರೂ.ಠೇವಣಿಯಿದೆ ಎಂಬ ಮಾಹಿತಿ ನೀಡಿದ್ದಾರೆ. 2021ರ ಮಾರ್ಚ್ 31ಕ್ಕೆ ಅನ್ವಯಿಸುವಂತೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ  (NBFCs) ಒಟ್ಟು 64 ಠೇವಣಿ ಖಾತೆಗಳಿದ್ದು(ಇದು ಸಾರ್ವಜನಿಕ ಠೇವಣಿಯಾಗಿದ್ದು,ಅವಧಿ ಪೂರ್ಣಗೊಂಡಿದ್ದರೂ 7 ವರ್ಷಗಳಿಂದ ಹಣ ಹಿಂಪಡೆದಿಲ್ಲ) ಇವುಗಳಲ್ಲಿ 0.71 ಕೋಟಿ ರೂ. ಹಣವಿದೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್ಗಳಿಗೆ  RBI ಸೂಚನೆ
RBI 'ಬ್ಯಾಂಕ್ಗಳಲ್ಲಿ ಗ್ರಾಹಕರ ಸೇವೆ' ಎಂಬ ಮಾಸ್ಟರ್ ಸುತ್ತೋಲೆ ಹೊರಡಿಸಿದ್ದು, ಅದ್ರಲ್ಲಿ ಬ್ಯಾಂಕ್ಗಳು ಖಾತೆಗಳ ವಾರ್ಷಿಕ ಪರಿಶೀಲನೆ ನಡೆಸಿ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕ್ರಿಯಾಶೀಲರಾಗಿರದ ಗ್ರಾಹಕರನ್ನು ಸಂಪರ್ಕಿಸಿ ಅವರ ಖಾತೆಯಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ ಎಂಬ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡೋ ಜೊತೆ ಕಾರಣವನ್ನೂ ಕೋರುವಂತೆ ಸೂಚನೆ ನೀಡಿದೆ. ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರೋ ಖಾತೆಗಳ ಹಕ್ಕುದಾರರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಪತ್ತೆಹಚ್ಚಲು ವಿಶೇಷ ಕಾರ್ಯಕ್ರಮ ಪ್ರಾರಂಭಿಸುವಂತೆ ಬ್ಯಾಂಕ್ಗಳಿಗೆ ಸಲಹೆ ನೀಡಲಾಗಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ. ಬ್ಯಾಂಕ್ ಗಳು ತಮ್ಮ ವೆಬ್ ಸೈಟ್ ಗಳಲ್ಲಿ ಠೇವಣಿ ಹಿಂಪಡೆಯದ ಅಥವಾ ಯಾವುದೇ ವ್ಯವಹಾರ ನಡೆಸದ ನಿಷ್ಕ್ರಿಯ ಅಥವಾ 10 ವರ್ಷಗಳಿಂದ ಸಕ್ರಿಯವಾಗಿರದ ಖಾತೆಗಳ ಪಟ್ಟಿಯನ್ನುಪ್ರಕಟಿಸಬೇಕು.ಇದ್ರಲ್ಲಿ ಖಾತೆದಾರರ ಹೆಸರು ಹಾಗೂ ವಿಳಾಸ ಕೂಡ ಇರಬೇಕು. 

10 ಸಾವಿರ ರೂ.ಗಿಂತ ಅಧಿಕ ನಗದು ಡ್ರಾಗೆ ಒಟಿಪಿ ಕಡ್ಡಾಯ, ಸಮಸ್ಯೆಯಾದ್ರೆ ಬ್ಯಾಂಕ್ ಸಂಪರ್ಕಿಸಲು SBI ಸೂಚನೆ

ನಿಷ್ಕ್ರಿಯ ಖಾತೆ ಹಣ DEAFಗೆ ವರ್ಗಾ
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ತಿದ್ದುಪಡಿ ಹಾಗೂ ಈ ಕಾಯ್ದೆಗೆ ಸೆಕ್ಷನ್ 26ಎ ಸೇರ್ಪಡೆ ಬಳಿಕ ಆರ್ ಬಿಐ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ ನಿಧಿ (DEAF) ಯೋಜನೆ 2014 ರೂಪಿಸಿದ್ದು, ಅದರ ಅನ್ವಯ ನಿಷ್ಕ್ರಿಯ ಖಾತೆಗಳಲ್ಲಿರೋ ಠೇವಣಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಇದರ ಅನ್ವಯ ಬ್ಯಾಂಕ್ ಗಳು 10 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಸಕ್ರಿಯವಾಗಿರದ ಎಲ್ಲ ಖಾತೆಗಳ ಬ್ಯಾಲೆನ್ಸ್ ಅನ್ನು ಬಡ್ಡಿ ಸಮೇತ ಲೆಕ್ಕ ಹಾಕಿ ಹಣವನ್ನು DEAF ಗೆ ವರ್ಗಾಯಿಸಬೇಕು. RBI ನಿರ್ದೇಶನದಂತೆ ಠೇವಣಿದಾರರ ಹಿತ ಕಾಯಲು ಹಾಗೂ ಅಂಥ ಇತರ ಉದ್ದೇಶಗಳಿಗೆ DEAF ಬಳಸಲಾಗುತ್ತದೆ.ಒಂದು ವೇಳೆ DEAFಗೆ ಹಣ ವರ್ಗಾಯಿಸಿರೋ ಖಾತೆಯ ಗ್ರಾಹಕ ತನ್ನ ಠೇವಣಿ ಹಣಕ್ಕೆ ಬೇಡಿಕೆಯಿಟ್ಟರೆ ಅಂಥ ಸಂದರ್ಭದಲ್ಲಿ ಬ್ಯಾಂಕ್  ಗ್ರಾಹಕರಿಗೆ ಬಡ್ಡಿ ಸಹಿತ ಹಣವನ್ನು ಮರುಪಾವತಿ ಮಾಡಬೇಕು ಹಾಗೂ ತನಗೆ ಮರುಪಾವತಿ ಮಾಡುವಂತೆ DEAFಗೆ ಮನವಿ ಮಾಡಬೇಕು. 

21.38 ಕೋಟಿ ಇಪಿಎಫ್ ಖಾತೆಗೆ ಬಡ್ಡಿ ಜಮೆ, ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಬಡ್ಡಿದರ ನಿಗದಿಗೆ ಅಧಿಕಾರ
RBI ತನ್ನ ಮಾಸ್ಟರ್ ಸರ್ಕ್ಯೂಲರ್ (master circular) ಮೂಲಕ ಪ್ರತಿ ಗೃಹ ಹಣಕಾಸು ಸಂಸ್ಥೆಗಳ ಆಡಳಿತ ಮಂಡಳಿಗೆ ಸಾಲಗಳ ಮೇಲೆ ಎಷ್ಟು ಬಡ್ಡಿ ವಿಧಿಸಬೇಕು ಎಂಬುದನ್ನು ಕೆಲವೊಂದು ಅಂಶಗಳನ್ನು ಪರಿಗಣಿಸಿ ನಿರ್ಧರಿಸೋ ಅಧಿಕಾರವನ್ನು ನೀಡಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸೋ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು. 

click me!