ಡಿಮಾನಿಟೈಸೇಶನ್ ಗೆ 3 ವರ್ಷ: ಅಪನಗದೀಕರಣ ಮತ್ತೆ ಆದರೂ ಆಗಬಹುದು!

By Kannadaprabha NewsFirst Published Nov 8, 2019, 8:41 AM IST
Highlights

ನೋಟು ಅಮಾನ್ಯ ಘೋಷಿಸಿ ಇಂದಿಗೆ ಮೂರು ವರ್ಷ |  ₹2000 ನೋಟು ಕಾಳಧನಿಕರಿಂದ ದಾಸ್ತಾನು: ಗರ್ಗ್ ಶಂಕೆ | ಜನರಿಗೆ ತೊಂದರೆ ಆಗದಂತೆ ಅಮಾನ್ಯ ಆಗಲೂಬಹುದು | 

ನವದೆಹಲಿ (ನ. 08): ‘2016 ರಲ್ಲಿ ಕೇಂದ್ರ ಸರ್ಕಾರ 500 ರು. ಹಾಗೂ 1000 ರು. ನೋಟುಗಳನ್ನು ರದ್ದು ಮಾಡಿ, ಅದರ ಬೆನ್ನಲ್ಲೇ ಚಲಾವಣೆಗೆ ತಂದಿದ್ದ 2000 ರು. ಮುಖಬೆಲೆಯ ನೋಟುಗಳನ್ನು ಭಾರೀ ಪ್ರಮಾಣದಲ್ಲಿ ಕಾಳಧನಿಕರು ಗುಪ್ತವಾಗಿ ಕೂಡಿಟ್ಟಿರುವ ಶಂಕೆ ಇದೆ. ಹೀಗಾಗಿ ಈ ನೋಟುಗಳ ಅಪನಗದೀಕರಣ ಆಗಲೂಬಹುದು’ ಎಂದು ಕೇಂದ್ರ ಹಣಕಾಸು ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಸುಭಾಷ್ ಚಂದ್ರಗರ್ಗ್ ಸುಳಿವು ನೀಡಿದ್ದಾರೆ.

ಇದೇ ನವೆಂಬರ್ 8 ಕ್ಕೆ (ಶುಕ್ರವಾರ) ಮೋದಿ ಅವರು ಅಪನಗದೀಕರಣ ಘೋಷಣೆ ಮಾಡಿ ೩ ವರ್ಷ ಪೂರ್ತಿಯಾಗಲಿದೆ. ಈ ವೇಳೆಯೇ ಗರ್ಗ್ ಈ ಹೇಳಿಕೆ ನೀಡಿರುವುದು ಇಲ್ಲಿ ಗಮನಾರ್ಹ. ‘2000 ರು. ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟಾರೆ ಕರೆನ್ಸಿ ನೋಟುಗಳ ಪೈಖಿ ಶೇ.33 ರಷ್ಟು ಪಾಲು ಹೊಂದಿವೆ. ಆದರೆ ಈ ಪೈಕಿ ಸಾಕಷ್ಟು ನೋಟುಗಳು ಈಗ ಚಲಾವಣೆಯಲ್ಲೇ ಇಲ್ಲ. ಇವುಗಳನ್ನು ಅಕ್ರಮವಾಗಿ ಕಾಳಧನಿಕರು ದಾಸ್ತಾನು ಮಾಡಿಟ್ಟಿರುವ ಶಂಕೆ ಇದೆ’ ಎಂದರು. 

2 ಸಾವಿರ ನೋಟು ಮುದ್ರಣವೇ ಸ್ಥಗಿತ; ಚಲಾವಣೆ ನಿಲ್ಲುತ್ತಾ?

ಈ ನೋಟುಗಳನ್ನು ಜನರಿಗೆ ಯಾವುದೇ ತೊಂದರೆ ಆಗದ ರೀತಿ ಅಪನಗದೀ ಕರಣ ಮಾಡಲು ಅವಕಾಶವಿದೆ. ಈ ನೋಟುಗಳನ್ನು ನಿಮ್ಮ ಖಾತೆಗಳಲ್ಲಿ ಜಮೆ ಇರಿಸಿ ಎಂದು ಜನರಿಗೆ ಸೂಚಿಸಬಹುದು’ ಎಂದು ಗರ್ಗ್ ಹೇಳಿದರು. ‘೩ ವರ್ಷದ ಹಿಂದೆ ನೋಟು ರದ್ದು ಮಾಡಿದಾಗ ಬ್ಯಾಂಕ್ ಕೌಂಟರ್‌ಗಳಲ್ಲಿ ಜನರು ರದ್ದಾದ ನೋಟುಗಳನ್ನು ನೀಡಿ, ಬದಲಿ ನೋಟು ಪಡೆದಿದ್ದರು. ಆದರೆ ಈಗ ಖಾತೆಗಳಲ್ಲಿ ಬಂದು ನೋಟು ಜಮಾ ಮಾಡಿ ಎಂದು ಸೂಚಿಸಿದರೆ ಬದಲಿ ನೋಟನ್ನು ಕೌಂಟರ್ ನಲ್ಲಿ ನೀಡುವುದಿಲ್ಲ. ಮುಂದೆ ಜನರು ಖಾತೆಯಿಂದ ಹಣ ಹಿಂತೆಗೆದಾಗ ಅವರಿಗೆ ಬೇರೆ ಮೌಲ್ಯದ ನೋಟುಗಳನ್ನು ನೀಡಲಾಗುತ್ತದೆ’ ಎಂದು ಗರ್ಗ್ ವಿವರಿಸಿದರು.

ನೋಟು ಅಮಾನ್ಯ ಘೋಷಿಸಿ ಇಂದಿಗೆ ಮೂರು ವರ್ಷ
ಕಪ್ಪುಹಣ ನಿಗ್ರಹ, ನಗದು ರಹಿತ ವ್ಯವಹಾರಕ್ಕೆ ಉತ್ತೇಜನ, ಭಯೋತ್ಪಾದನೆಗೆ ಪೂರೈಕೆಯಾಗುತ್ತಿರುವ ಹಣ ಪೂರೈಕೆ ಸ್ಥಗಿತ ಸೇರಿದಂತೆ ಇನ್ನಿತರ ಮಹತ್ವದ ಉದ್ದೇಶಗಳನ್ನಿ ಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು 500 ರು. ಮತ್ತು 1000 ರು. ಮುಖಬೆಲೆ ನೋಟುಗಳ ಅಪನಗದೀಕರಣಗೊಳಿಸಿ ಶುಕ್ರವಾರಕ್ಕೆ ಬರೋಬ್ಬರಿ 3 ತುಂಬಲಿದೆ.

2016 ರ ನವೆಂಬರ್ 8 ರಂದು ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಮಧ್ಯರಾತ್ರಿಯಿಂದಲೇ 500 ರು. ಮತ್ತು 1000 ರು. ಮುಖಬೆಲೆ ನೋಟುಗಳು ಅಮಾನ್ಯೀಕರಣ ವಾಗಲಿವೆ ಎಂದು ಘೋಷಣೆ ಮಾಡಿದ್ದರು.

ಸರ್ಕಾರದ ಈ ಕ್ರಮವು ಸಾರ್ವಜನಿಕರನ್ನು ಗೊಂದಲಕ್ಕೆ ಸಿಲುಕಿಸಿತು. ಅಲ್ಲದೆ, ತಮ್ಮಲ್ಲಿರುವ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳು ರದ್ದಿ ಪೇಪರ್ ಆಗಲಿವೆ ಎಂದು ಆತಂಕಕ್ಕೊಳಗಾದ ಕೆಲವರು ಆತ್ಮಹತ್ಯೆಗೂ ಶರಣಾಗಿದ್ದರು. ಜೊತೆಗೆ, ನೋಟು ಅಪನಗದೀಕರಣ ಕ್ರಮದಿಂದ ಸಣ್ಣ-ಪುಟ್ಟ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿಕೊಂಡವು.

ಇದು ದೇಶದ ಆರ್ಥಿಕ ಪ್ರಗತಿ ಕುಂಠಿತಕ್ಕೂ ಕಾರಣವಾಯಿತು ಎಂಬ ಆರೋಪ ವ್ಯಕ್ತವಾಗಿತ್ತು. ಅಲ್ಲದೆ, ಆಗ ಚಲಾವಣೆಯಲ್ಲಿದ್ದ ಭಾರೀ ಪ್ರಮಾಣದ ಕಪ್ಪುಹಣವು ಬ್ಯಾಂಕಿಂಗ್ ವ್ಯವಸ್ಥೆಗೆ ಬರುವುದಿಲ್ಲ ಎಂಬ ವಿಶ್ವಾಸದಲ್ಲಿತ್ತು ಸರ್ಕಾರ. ಆದರೆ, ಶೇ.99 ರಷ್ಟು ಅಪನಗದೀಕರಣ ಗೊಂಡ ನೋಟುಗಳು ಬ್ಯಾಂಕಿಂಗ್ ವಲಯಕ್ಕೆ ಸೇರ್ಪಡೆಯಾಗಿತ್ತು. 

 

click me!