ತೈಲ ಬೆಲೆ ಕಡಿಮೆಯಾಗಬೇಕಾ?: ದೇಶಕ್ಕೆ ಹೊಸ ಟಾಸ್ಕ್ ನೀಡಿದ ಮೋದಿ!

By Web DeskFirst Published Aug 11, 2018, 9:14 PM IST
Highlights

ತೈಲ ಆಮದು ವೆಚ್ಛ ಇಳಿಸಲು ಮೋದಿ ಪ್ಲ್ಯಾನ್! ಎಥೆನಾಲ್ ಉತ್ಪಾದನೆ ಹೆಚ್ಚಳಕ್ಕೆ ಮೋದಿ ಮುಂದು! 12,000 ಕೋಟಿ ರೂ. ಉಳಿತಾಯ ಮಾಡುವ ಗುರಿ! ಬೆಳೆ ತ್ಯಾಜ್ಯ ಬಳಸಿ ಎಥೆನಾಲ್ ಉತ್ಪಾದನೆ ಗುರಿ

ನವದೆಹಲಿ(ಆ.11): ತೈಲ ಬೆಲೆ ಹೆಚ್ಚಳ, ಆಮದು ತಕರಾರು ಮುಂತಾದ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಫುಲ್ ಸ್ಟಾಪ್ ಹಾಕಲು ನಿರ್ಧರಿಸಿದ್ದಾರೆ.

ಮುಂದಿನ ನಾಲ್ಕು ವರ್ಷಗಳಲ್ಲಿ ಜೈವಿಕ ಇಂಧನ ಎಥೆನಾಲ್ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಲು ಮೋದಿ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಮೂಲಕ ತೈಲ ಆಮದು ವಲ್ಲಿ ಸುಮಾರು 12,000 ಕೋಟಿ ರೂ. ಉಳಿತಾಯ ಮಾಡುವ ಗುರಿಯನ್ನು ಮೋದಿ ಘೋಷಿಸಿದ್ದಾರೆ.

ವಿಶ್ವ ಜೈವಿಕ ಇಂಧನ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಬ್ಬು ಹಾಗೂ ಇತರ ಬೆಳೆಗಳ ತ್ಯಾಜ್ಯವನ್ನು ಬಳಸಿ ಎಥೆನಾಲ್‌ ಉತ್ಪಾದಿಸಬಹುದು. ಹೀಗಾಗಿ ರೈತರ ಆದಾಯ ಹೆಚ್ಚಳಕ್ಕೂ ಇದು ಕಾರಣವಾಗಲಿದೆ.  ದೇಶದಲ್ಲಿ 12 ಜೈವಿಕ ಇಂಧನ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು 10,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುತ್ತಿದೆ ಎಂದರು. 

ನಗರಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನೂ ಎಥೆನಾಲ್‌ ಬಳಕೆಗೆ ವಿನಿಯೋಗಿಸಬಹುದು. ಬೆಳೆಗಳ ತ್ಯಾಜ್ಯವನ್ನೂ ಉಪಯೋಗಿಸಬಹುದು. ಪೆಟ್ರೋಲ್‌ ಜೊತೆಗೆ ಎಥೆನಾಲ್‌ ಮಿಶ್ರಣ ಮಾಡುವುದರಿಂದ ತೈಲ ಆಮದು ವೆಚ್ಚವನ್ನೂ ಉಳಿಸಬಹುದು ಎಂದು ಮೋದಿ ಅಭಿಪ್ರಾಯಪಟ್ಟರು. 

ರೈತರಿಗೂ ಪೂರಕ ಆದಾಯ ಹಾಗೂ ಉದ್ಯೋಗ ಸೃಷ್ಟಿ ಇದರಿಂದ ಸಾಧ್ಯ ಎಂದ ಪ್ರಧಾನಿ, ತೈಲ ಆಮದಿನ ಮೇಲಿನ ವೆಚ್ಛವನ್ನು ಕಡಿಮೆ ಮಾಡಿದರೆ ಭಾರೀ ಉಳಿತಾಯವಾಗಲಿದೆ ಎಂದು ಹೇಳಿದರು.

ವಿಶ್ವದ ಮೂರನೇ ಅತಿ ದೊಡ್ಡ ತೈಲ ಬಳಕೆದಾರ ರಾಷ್ಟ್ರವಾದ ಭಾರತ ಶೇ.81ರಷ್ಟು ಬೇಡಿಕೆಗೆ ಆಮದನ್ನು ಅವಲಂಬಿಸಿದೆ. ಭಾರತ 2002ರಲ್ಲಿ ಎನ್‌ಡಿಎ ಅವಧಿಯಲ್ಲಿ ಎಥೆನಾಲ್‌ ಬಳಕೆ ಆರಂಭಿಸಿತ್ತು. ಯುಪಿಎ ಅವಧಿಯಲ್ಲಿ ಇದು ಮಂದಗತಿಗೆ ತಿರುಗಿತ್ತು. 2014ರಲ್ಲಿ ಎನ್‌ಡಿಎ ಬಂದ ನಂತರ ಮತ್ತೆ ಚುರುಕಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

click me!