
ಬೆಂಗಳೂರು(ಮಾ.26): ಗಗನಕ್ಕೇರಿದ್ದ ಪೆಟ್ರೋಲ್, ಡೀಸೆಲ್ ದರ ನಾಲ್ಕು ತಿಂಗಳಿನಿಂದ ತಟಸ್ಥವಾಗಿತ್ತು. ಇದು ವಾಹನ ಸವಾರರನ್ನು ಕೊಂಚ ಸಮಾಧಾನಗೊಳ್ಳುವಂತೆ ಮಾಡಿತ್ತು. ಆದರೀಗ ಮತ್ತೆ ಇಂಧನ ದರ ಏರಿಕೆ ಬಿಸಿ ಗ್ರಾಹಕರನ್ನು ಕಂಗಾಲುಗೊಳಿಸಿದೆ. ನಾಲ್ಕು ತಿಂಗಳ ಬಳಿಕ ವಾಹನ ಸವಾರರು ಪರದಾಡುವಂತಾಗಿದೆ.
ಹೌದು ಬೆಂಗಳೂರಿನಲ್ಲಿ 100.60 ಪೈಸೆ ಇದ್ದ ಪೆಟ್ರೋಲ್ ದರ ಇದೀಗ 103.95 ಪೈಸೆಗೆ ಏರಿಕೆಯಾಗಿದೆ. ಅಲ್ಲದೇ 86.60 ಪೈಸೆ ಇದ್ದ ಡೀಸೆಲ್ ದರ ಇದೀಗ 88.15 ಪೈಸೆಯಾಗಿದೆ. ಸತತ 3 ದಿನಗಳಿಂದ ಏರಿಕೆ ಕಾಣುತ್ತಿರುವ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗಿದೆ. ಕೇವಲ 3 ದಿನಕ್ಕೆ ಪೆಟ್ರೋಲ್ ದರ 3 ರೂಪಾಯಿ 35 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ದರ 1.55 ಪೈಸೆ ಮೇಲಕ್ಕೆ ಹೋಗಿದೆ.
ಮಾರ್ಚ್ 23ಕ್ಕೆ ಪೆಟ್ರೋಲ್ ದರ 84 ಪೈಸೆ ಹಾಗೂ ಡೀಸೆಲ್ 79 ಪೈಸೆ ಏರಿಕೆಯಾಗಿತ್ತು. ಇಂದೂ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಹಾಡಿ ಹಿಡಿದಿದ್ದು, ಇವತ್ತು ಪೆಟ್ರೋಲ್ ದರದಲ್ಲಿ 83 ಪೈಸೆ ಹಾಗೂ ಡೀಸೆಲ್ ದರದಲ್ಲಿ 77 ಪೈಸೆ ಏರಿಕೆಯಾಗಿದೆ. ಈ ಮೂಲಕ ನವೆಂಬರ್ ಬಳಿಕ ಮತ್ತೆ ಪೆಟ್ರೋಲ್ ಡೀಸೆಲ್ ದರ ಪರಿಷ್ಕರಣೆಯಾಗಿದೆ.
ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.
GST ಇಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.