ಎಎಪಿಗೆ ಮತ್ತೆ ಆಘಾತ;ಉಗ್ರನ ಬಿಡುಗಡೆಗೆ ಕೇಜ್ರಿವಾಲ್ ಗೆ 16 ಮಿಲಿಯನ್ ಡಾಲರ್ ನೀಡಿದ್ದೇವೆ: ಖಲಿಸ್ತಾನಿ ನಾಯಕನ ಆರೋಪ

By Suvarna NewsFirst Published Mar 25, 2024, 1:01 PM IST
Highlights

ಎಎಪಿಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಉಗ್ರ ಭುಲ್ಲರ್ ಬಿಡುಗಡೆಗೆ ಕೇಜ್ರಿವಾಲ್ ಗೆ 16 ಮಿಲಿಯನ್ ಡಾಲರ್ ನೀಡಿರೋದಾಗಿ ಖಲಿಸ್ತಾನ ಉಗ್ರ ಸಂಘಟನೆ ನಾಯಕ ಮಾಹಿತಿ ನೀಡಿದ್ದಾನೆ. 

ನವದೆಹಲಿ (ಮಾ.25): ಆಮ್ ಆದ್ಮಿ ಪಾರ್ಟಿಗೆ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ಮದ್ಯ ಲೈಸೆನ್ಸ್‌ ಹಗರಣದಲ್ಲಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ. ಈಗ ಅಮೆರಿಕ ಮೂಲದ ಖಲಿಸ್ತಾನ ಉಗ್ರ ಸಂಘಟನೆ 2014 ಹಾಗೂ 2022ರ ನಡುವಿನ ಅವಧಿಯಲ್ಲಿ ಎಎಪಿಗೆ 16 ಮಿಲಿಯನ್ ಡಾಲರ್ ಹಣ ನೀಡಿರೋದಾಗಿ ತಿಳಿಸಿದೆ. ಹೀಗಾಗಿ ಎಎಪಿ ಈಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಖಲಿಸ್ತಾನ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನೂನ್ ಈ ಆರೋಪ ಮಾಡಿದ್ದಾನೆ. ಇದರಿಂದ ಎಎಪಿಯ ಹಣಕಾಸಿನ ಸಮಗ್ರತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಹಾಗೆಯೇ ಈ ಪಕ್ಷ ಉಗ್ರ ಸಂಘಟನೆಗಳ ಜೊತೆಗೆ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಇಷ್ಟೇ ಅಲ್,  ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಣ ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಶಿಕ್ಷೆಗೆ ಗುರಿಯಾಗಿರುವ ಉಗ್ರ ದೇವೇಂದ್ರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಿಡುಗಡೆ ಮಾಡಿರೋದಾಗಿ ಪನ್ನೂನ್ ಗಂಭೀರ ಆರೋಪ ಮಾಡಿದ್ದಾನೆ. ಇದು ಈ ಪ್ರಕರಣದ ಬಿಸಿಯನ್ನು ಇನ್ನಷ್ಟು ಹೆಚ್ಚಿಸಿದೆ. ಭುಲ್ಲರ್ 1993ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾನೆ. 

ಖಲಿಸ್ತಾನದ ಉಗ್ರ ಪನ್ನೂನ್ ದೆಹಲಿ ಸಿಎಂ ಮೇಲೆ ಇನ್ನೂ ಅನೇಕ ಆರೋಪಗಳನ್ನು ಮಾಡಿದ್ದಾನೆ. 2014ರಲ್ಲಿ ಗುರ್ದ್ವಾರ ರಿಚ್ಮಂಡ್ ಹಿಲ್ಸ್ ನಲ್ಲಿ ಕೇಜ್ರಿವಾಲ್ ಹಾಗೂ ಖಲಿಸ್ತಾನ್ ಪರ ಸಿಖ್ಖಗಳ ರಹಸ್ಯ ಸಭೆ ಕೂಡ ನಡೆದಿತ್ತು ಎಂದು ಪನ್ನೂನ್ ತಿಳಿಸಿದ್ದಾನೆ. ಈ ಸಭೆಯಲ್ಲಿ ಕೇಜ್ರಿವಾಲ್ ಹಣಕಾಸಿನ ನೆರವಿಗೆ ಪ್ರತಿಯಾಗಿ ಉಗ್ರ ಭುಲ್ಲರ್ ಅನ್ನು ಬಿಡುಗಡೆಗೊಳಿಸುವ ವಾಗ್ದಾನ ಮಾಡಿದ್ದರು ಎಂಬ ಮಾಹಿತಿ ನೀಡಿದ್ದಾನೆ.  

ಇಡಿ ಕಸ್ಟಡಿಯಿಂದಲೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಅರವಿಂದ್‌ ಕೇಜ್ರಿವಾಲ್‌!

ಈ ಕಳಂಕ ತರುವ ಆಪಾದನೆಗಳು ಎಎಪಿಯನ್ನು ಇನ್ನಷ್ಟು ಸಂಕಟದ ಪರಿಸ್ಥಿತಿಗೆ ನೂಕಿದೆ. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲೇ ಒಂದರ ಮೇಲೊಂದರಂತೆ ಆಘಾತಗಳು ಎದುರಾಗುತ್ತಿದ್ದು, ಎಎಪಿಗೆ ಭಾರೀ ಮುಜುಗರ ಉಂಟಾಗಿದೆ.  ಅಕ್ರಮ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮಾ.21ರಂದು ಬಂಧಿಸಿತ್ತು.  ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಇಡಿ ಕಳೆದ ವರ್ಷದಿಂದಲೂ ಅರವಿಂದ್‌ ಕೇಜ್ರಿವಾಲ್‌ಗೆ ಸಮನ್ಸ್‌ ನೀಡಿ ವಿಚಾರಣೆಗೆ ಬರುವಂತೆ ಕೇಳುತ್ತಲೇ ಇತ್ತು. ಆದರೆ, ಇಲ್ಲಿಯವರೆಗೂ 9 ಸಮನ್ಸ್‌ಗಳನ್ನು ಅವರು ತಪ್ಪಿಸಿಕೊಂಡಿದ್ದರು. ಸಿಎಂ ಆಗಿರುವುದರಿಂದ ವಿವಿಧ ಕಾರ್ಯಕ್ರಮಗಳ ಕಾರಣ ನೀಡಿ ಈ ಎಲ್ಲಾ ಸಮನ್ಸ್‌ಗೆ ಉತ್ತರಿಸಲು ನಿರಾಕರಿಸಿದ್ದರು. ಇತ್ತೀಚೆಗೆ ಕೋರ್ಟ್‌ ಮೆಟ್ಟಿಲೇರಿದ್ದ ಅರವಿಂದ್‌ ಕೇಜ್ರಿವಾಲ್‌, ಇಡಿಯ ಸಮನ್ಸ್‌ ಅಸಂವಿಧಾನಿಕ ಎಂದಿದ್ದರು.

ಜೈಲು ಪಾಲಾಗಿರುವ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿಪಕ್ಷಗಳು ಒತ್ತಾಯಿಸುತ್ತಿದ್ದರೂ ಎಎಪಿ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕೇಜ್ರಿವಾಲ್ ಜೈಲಿನಿಂದಲೇ ಅಧಿಕಾರ ನಡೆಸುತ್ತಿದ್ದರೆ ಇತ್ತ ಎಎಪಿ ಅವರಿಗೆ ತನ್ನ ಬೆಂಬಲವನ್ನು ದುಪ್ಪಟ್ಟುಗೊಳಿಸುವ ನಿರ್ಧಾರ ಕೈಗೊಂಡಿದೆ. ಇನ್ನೊಂದೆಡೆ 'ಮೈ ಬೀ ಕೇಜ್ರಿವಾಲ್' ಎಂಬ ಅಭಿಯಾನವನ್ನು ಎಎಪಿ ಪ್ರಾರಂಭಿಸಿದೆ. ಈ ಮೂಲಕ ತಳಮಟ್ಟದಿಂದ ತಮ್ಮ ನಾಯಕನಿಗೆ ಬೆಂಬಲ ಕ್ರೋಢೀಕರಿಸೋದು ಎಎಪಿ ಉದ್ದೇಶವಾಗಿದೆ. 

ಇಡಿ ಕಸ್ಟಡಿಯಿಂದ ಸಿಎಂ ಕೇಜ್ರಿವಾಲ್ ಹೊರಡಿಸಿದ ಆರ್ಡರ್ ನಕಲಿ, ದಾಖಲೆ ಬಹಿರಂಗಪಡಿಸಿದ ಬಿಜೆಪಿ!

ಇನ್ನು ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಇಂಡಿಯಾ ಮೈತ್ರಿ ಒಕ್ಕೂಟ ಪಕ್ಷಗಳು ಪ್ರತಿಭಟನೆಗೆ ಕರೆ ನೀಡಿದೆ. ಮಾರ್ಚ್ 31ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಮೈತ್ರಿ ಒಕ್ಕೂಟಗಳು ಸಜ್ಜಾಗಿವೆ. ಇದರಲ್ಲಿ ಎಎಪಿ, ಕಾಂಗ್ರೆಸ್ ಸೇರಿದಂತೆ ಈ ಮೈತ್ರಿ ಕೂಟದ ವಿವಿಧ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ಅಬಕಾರಿ ಹಗರಣದಲ್ಲಿ ಈ ಹಿಂದೆಯೇ ಎಎಪಿಯ ಹಿರಿಯ ನಾಯಕರಾದ ಮನೀಷ್‌ ಸಿಸೋಡಿಯಾ, ಸತ್ಯೇಂದ್ರ ಜೈನ್‌ ಮತ್ತು ಸಂಜಯ್‌ ಸಿಂಗ್‌ ಜೈಲು ಸೇರಿದ್ದಾರೆ. 


 

click me!