
Business Desk:ಈ ತಿಂಗಳು ಮುಗಿಯಲು ಇನ್ನು 10 ದಿನಗಳಷ್ಟೇ ಬಾಕಿ ಉಳಿದಿವೆ. ಹೀಗಿರುವಾಗ ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ಹಣಕಾಸು ಸಂಬಂಧಿ ಕೆಲಸಗಳಿಗೆ ಅಂತಿಮ ಗಡುವಿದೆ. ಹೀಗಾಗಿ ಈ ಹಣಕಾಸು ಸಂಬಂಧಿ ಕೆಲಸಗಳನ್ನು ಈ ತಿಂಗಳ ಅಂತ್ಯದೊಳಗೆ ಮಾಡಿ ಮುಗಿಸೋದು ಅಗತ್ಯ. ಇಲ್ಲವಾದರೆ ಹೆಚ್ಚಿನ ಹಣ ಕೈಜಾರುವ ಜೊತೆಗೆ ಕೆಲವು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಗೆ ಆಧಾರ್ ಸಂಖ್ಯೆ ಸಲ್ಲಿಕೆ, 2000ರೂ. ನೋಟುಗಳನ್ನು ಬ್ಯಾಂಕ್ ಗಳಲ್ಲಿ ವಿನಿಮಯ ಅಥವಾ ಠೇವಣಿ, ಡಿಮ್ಯಾಟ್ ಖಾತೆಗೆ ನಾಮನಿರ್ದೇಶನ ಸೇರಿದಂತೆ ಅನೇಕ ಕೆಲಸಗಳಿಗೆ ಸೆಪ್ಟೆಂಬರ್ 30 ಅಂತಿಮ ಗಡುವಾಗಿದೆ. ಹೀಗಾಗಿ ಈ ಕೆಲಸಗಳನ್ನು ಅಂತಿಮ ದಿನಾಂಕದ ತನಕ ಕಾಯದೆ ಆದಷ್ಟು ಬೇಗ ಮಾಡಿ ಮುಗಿಸೋದು ಉತ್ತಮ. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
1.ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಸಂಖ್ಯೆ ಸಲ್ಲಿಕೆ
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್ ) ಅಥವಾ ಇತರ ಅಂಚೆ ಕಚೇರಿ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದ್ದರೆ ನಿಮ್ಮ ಆಧಾರ್ ಸಂಖ್ಯೆಯಲ್ಲಿ 2023ರ ಸೆಪ್ಟೆಂಬರ್ 30ರೊಳಗೆ ಸಲ್ಲಿಕೆ ಮಾಡಬೇಕು. ನೀವು ಸಣ್ಣ ಉಳಿತಾಯ ಯೋಜನೆಯ ಖಾತೆ ಹೊಂದಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಗೆ ಆಧಾರ್ ಸಂಖ್ಯೆಯನ್ನು ಸಲ್ಲಿಕೆ ಮಾಡಬೇಕು. ಮಾ.31ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅಂತಿಮ ಗಡುವಿನೊಳಗೆ ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡದಿದ್ದರೆ ಅವರ ಖಾತೆಗಳನ್ನು ಅಕ್ಟೋಬರ್ 1ರಿಂದ ನಿಷ್ಕ್ರಿಯಗೊಳಿಸಲಾಗುವುದು ಎಂದು ಕೂಡ ತಿಳಿಸಲಾಗಿದೆ.
ಆನ್ ಲೈನ್ ಶಾಪಿಂಗ್ ಮಾಡೋರು ಗಮನಿಸಿ; ಇಂದಿನಿಂದ ಈ ಇ-ಕಾಮರ್ಸ್ ತಾಣದಲ್ಲಿ 2 ಸಾವಿರ ರೂ. ನೋಟು ನಡೆಯಲ್ಲ!
2.2,000ರೂ. ನೋಟು ಹಿಂತಿರುಗಿಸಲು ಅಂತಿಮ ಗಡುವು
2,000ರೂ. ನೋಟುಗಳನ್ನು ಬ್ಯಾಂಕ್ ನಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸೆ.30 ಅಂತಿಮ ಗಡುವು. ಭಾರತೀಯ ರಿಸರ್ವ್ ಬ್ಯಾಂಕ್ (RBI) 2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕೆ ನೀಡಿರುವ ಗಡುವನ್ನು ಹಣಕಾಸು ಸಚಿವಾಲಯ ವಿಸ್ತರಿಸುವ ಸಾಧ್ಯತೆ ಕಾಣಿಸುತ್ತಿಲ್ಲ. ಜುಲೈ ಕೊನೆಯಲ್ಲಿ ಲೋಕಸಭೆಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, ಬ್ಯಾಂಕ್ ಗಳಲ್ಲಿ 2,000ರೂ. ನೋಟುಗಳನ್ನು ಸೆಪ್ಟೆಂಬರ್ 30ರ ಬಳಿಕ ಕೂಡ ವಿಸ್ತರಿಸುವ ಸಾಧ್ಯತೆಗಳಿವೆಯಾ ಎಂಬ ಪ್ರಶ್ನೆಗೆ ಉತ್ತರಿಸುತ್ತ ಅಂಥ ಸಾಧ್ಯತೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು.
3. ಎಸ್ ಬಿಐ ವಿಕೇರ್ ಠೇವಣಿ ಯೋಜನೆ'
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿ ನೀಡುವ ವಿಶೇಷ ಸ್ಥಿರ ಠೇವಣಿ (ಎಫ್ ಡಿ) ಯೋಜನೆಯನ್ನು ಹೊಂದಿದೆ. ಇದನ್ನು 'ಎಸ್ ಬಿಐ ವಿಕೇರ್ ಠೇವಣಿ ಯೋಜನೆ' ಎಂದು ಕರೆಯಲಾಗುತ್ತಿದ್ದು, ಇದು ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿ ಹಣಕಾಸಿನ ಸುರಕ್ಷತೆ ನೀಡುವ ಉದ್ದೇಶದಿಂದ ರೂಪಿಸಿರುವ ಈ ಯೋಜನೆ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತಿದೆ.
ನಿಮ್ಮ ಎಲ್ ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ಮತ್ತೆ ಸಕ್ರಿಯಗೊಳಿಸಲು ಹೀಗೆ ಮಾಡಿ
4. ಡಿಮ್ಯಾಟ್, ಟ್ರೇಡಿಂಗ್ ಖಾತೆಗಳಿಗೆ ನಾಮನಿರ್ದೇಶನ ಸಲ್ಲಿಕೆಗೆ ಅಂತಿಮ ಗಡುವು
ಪ್ರಸ್ತುತ ಇರುವ ಅರ್ಹ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆದಾರರಿಗೆ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸೆಪ್ಟೆಂಬರ್ 30ರ ತನಕ ತಮ್ಮ ಖಾತೆಗಳಿಗೆ ಫಲಾನುಭವಿಯನ್ನು ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಿದೆ. ಈ ಹಿಂದೆ ಈ ಕೆಲಸಕ್ಕೆ 2023ರ ಮಾರ್ಚ್ 31ರ ತನಕ ಗಡುವು ನೀಡಲಾಗಿತ್ತು. ಅದಕ್ಕೂ ಮುನ್ನ 2022ರ ಮಾರ್ಚ್ 31ರ ತನಕ ಗಡುವು ನೀಡಲಾಗಿತ್ತು.
5 ಐಡಿಬಿಐ ಅಮೃತ ಮಹೋತ್ಸವ ಎಫ್ ಡಿ
ಐಡಿಬಿಐ ಬ್ಯಾಂಕ್ ತನ್ನ ವಿಶೇಷ ಎಫ್ ಡಿ ಯೋಜನೆ 'ಅಮೃತ ಮಹೋತ್ಸವ' ಮುಕ್ತಾಯದ ಅವಧಿಯನ್ನು ಸೆಪ್ಟೆಂಬರ್ 30ರತನಕ ವಿಸ್ತರಣೆ ಮಾಡಿದೆ. ಇದರಲ್ಲಿ ಹಿರಿಯ ನಾಗರಿಕರಿಗೆ ಎರಡು ಅವಧಿಗಳಲ್ಲಿ ಶೇ.7.10ರಿಂದ ಶೇ.7.65ರಷ್ಟು ಬಡ್ಡಿ ನೀಡಲಾಗುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.