ಪ್ರಧಾನಿಗೆ ಮಮತಾ ಬ್ಯಾನರ್ಜಿ ಪತ್ರ; ಪಶ್ಚಿಮ ಬಂಗಾಳದಲ್ಲಿ ಹಲವರ ಆಧಾರ್ ಕಾರ್ಡ್ ರದ್ದತಿಗೆ ಕಾರಣ ಕೇಳಿದ ದೀದಿ

By Suvarna NewsFirst Published Feb 20, 2024, 6:46 PM IST
Highlights

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಹಲವರ ಆಧಾರ್ ಕಾರ್ಡ್ ಅನ್ನು ದಿಢೀರ್ ಆಗಿ ರದ್ದುಗೊಳಿಸಿರೋದು ಏಕೆ ಎಂದು ಪ್ರಶ್ನಿಸಿದ್ದಾರೆ. 
 

ನವದೆಹಲಿ (ಫೆ.20): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ದಿಢೀರ್  ಆಗಿ ಕೆಲವು ಜನರ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಕ್ರಮದ ಹಿಂದಿರುವ ಕಾರಣವೇನು ಎಂದು ಅವರು ಈ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದು ಸಾಮಾಜಿಕ ನ್ಯಾಯದ ವಿರುದ್ಧವಾದ ಕ್ರಮ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುತ್ತಿರುವ ಬಗ್ಗೆ ಈ ಜನರಿಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

'ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಸಮುದಾಯಕ್ಕೆ ಸೇರಿದ ಜನರ ಆಧಾರ್ ಕಾರ್ಡ್ ಗಳನ್ನು ದಿಢೀರ್ ಆಗಿ ನಿಷ್ಕ್ರಿಯಗೊಳಿಸಿರುವ ತಾರತಮ್ಯದ ಗಂಭೀರ ಘಟನೆಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ' ಎಂದು ಪತ್ರದಲ್ಲಿ ಬ್ಯಾನರ್ಜಿ ಬರೆದಿದ್ದಾರೆ. ಅಲ್ಲದೆ, ಈ ನಿರ್ದಿಷ್ಟ ಸಮುದಾಯಕ್ಕೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡದೆ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಭಾರತದ ಟಾಟಾ ಕಂಪನಿ ಪಾಕಿಸ್ತಾನಕ್ಕಿಂತಲೂ ಶ್ರೀಮಂತ

'ಈ ಸಂಬಂಧ ಯಾವುದೇ ವಿಚಾರಣೆ ಅಥವಾ ಸಂಬಂಧಿತ ವ್ಯಕ್ತಿಗಳ ಹೇಳಿಕೆಗಳನ್ನು ಪಡೆಯದೆ ಹಾಗೂ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನವದೆಹಲಿಯಲ್ಲಿರುವ ಯುಐಡಿಎಐ ಮುಖ್ಯ ಕಚೇರಿ ವ್ಯಕ್ತಿಗಳು ಹಾಗೂ ಅವರ ಕುಟುಂಬಕ್ಕೆ ನೇರವಾಗಿ ಪತ್ರಗಳನ್ನು ನೀಡಿದ್ದು, ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿರುವ ಬಗ್ಗೆ ಮಾಹಿತಿ ನೀಡಿದೆ' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತಿಳಿಸಿದ್ದಾರೆ.

'ಈ ಸಂಬಂಧ ಪರಿಹಾರ ನೀಡುವಂತೆ ದೊಡ್ಡ ಸಂಖ್ಯೆಯಲ್ಲಿ ಬಾಧಿತ ಜನರು ರಾಜ್ಯಾಡಳಿತದ ಬಳಿ ಬರುತ್ತಿದ್ದಾರೆ ಎಂದು ಪಿಎಂಗೆ ಬರೆದ ಪತ್ರದಲ್ಲಿ ಮಮತಾ ಬ್ಯಾನರ್ಜಿ ಉಲ್ಲೇಖಿಸಿದ್ದಾರೆ. 'ಈ ವಿಚಾರದಲ್ಲಿ ರಾಜ್ಯದ ಪ್ರತಿಯೊಬ್ಬ ನಾಗರಿಕನು ಭಯಭೀತನಾಗಿದ್ದಾನೆ. ಯಾವುದೇ ಕಾರಣ ನೀಡದೆ ದಿಢೀರ್ ಆಗಿ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿರೋದಕ್ಕೆ ಕಾರಣವೇನು ಎಂಬುದನ್ನು ನಿಮ್ಮಿಂದ ತಿಳಿಯಲು ಬಯಸುತ್ತೇನೆ' ಎಂದು ಪತ್ರದಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಅವರನ್ನು ಕೋರಿದ್ದಾರೆ. 

'ಬೆಂಗಾಳದಲ್ಲಿ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿರೋದು ಲೋಕಸಭಾ ಚುನಾವಣೆಗಳಿಗಿಂತಲೂ ಮೊದಲು ಕಲ್ಯಾಣ ಕಾರ್ಯಕ್ರಮಗಳಿಂದ ಅರ್ಹ ಫಲಾನುಭವಿಗಳನ್ನು ಹೊರಗಿಡೋದು ಇದೊಂದು ಯೋಜಿತ ಯೋಜನೆಯಾಗಿದೆ' ಎಂದು  ಬ್ಯಾನರ್ಜಿ ಆರೋಪಿಸಿದ್ದಾರೆ.

2024ರ ಚುನಾವಣೆಗೂ ಮುನ್ನ ಎನ್ ಆರ್ ಸಿ ಅನುಷ್ಠಾನಕ್ಕೆ ಯೋಜನೇನಾ?
ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಂಗಾಳದಲ್ಲಿ ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿ ಕೂಡ ನಡೆಸಿದ್ದರು. 'ಎಸ್ ಸಿ, ಎಸ್ ಟಿ ಹಾಗೂ ಬಡತನ ರೇಖೆಗಿಂತ ಕೆಳಗಿರುವ ನಿರ್ದಿಷ್ಟ ವರ್ಗದ ಜನರನ್ನು ಆಧಾರ್ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಲಾಗಿದೆ. ರಾಜ್ಯ ಸರ್ಕಾರ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಈ ಬಗ್ಗೆ ಮಾಹಿತಿ ನೀಡದೆ ಈ ಕ್ರಮ ಕೈಗೊಳ್ಳಲಾಗಿದೆ. ಜನರು ಅಸಹಾಯಕರಾಗಿದ್ದಾರೆ' ಎಂದು ಅವರು ತಿಳಿಸಿದ್ದಾರೆ. 

ಕೇಂದ್ರದ ನಿಯಮಕ್ಕೆ ತಲೆಬಾಗಿದ ಚೀನಾ ಮೊಬೈಲ್‌ ದೈತ್ಯ, ಭಾರತದ ಕಂಪನಿಗಳ ಜೊತೆ ಒಪ್ಪಂದ!

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ, ನಾಗರಿಕರ  ರಾಷ್ಟ್ರೀಯ ನೋಂದಣಿ  (NRC) ಜಾರಿಗೆ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅಲ್ಲದೆ, ಈಗಾಗಲೇ ನೋಟು ಅಮಾನ್ಯೀಕರಣದ ಮೂಲಕ ನೀವು ಜನರಿಗೆ ಹಿಂಸೆ ನೀಡಿದ್ದೀರಿ. ಆ ಬಳಿಕ ಆಧಾರ್ ಕಾರ್ಡ್ ಮಾಡುವಂತೆ ಒತ್ತಡ ಹೇರಿದ್ದೀರಿ. ಈಗ ಆಧಾರ್ ಕಾರ್ಡ್ ರದ್ದುಗೊಳಿಸಿರುವ ಜೊತೆಗೆ 1000ರೂ. ದಂಡ ಕೂಡ ವಿಧಿಸಿದ್ದೀರಿ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

click me!