
ನವದೆಹಲಿ: ಕೇಂದ್ರ ಸರ್ಕಾರ ಭಾನುವಾರ ಮಂಡಿಸಿದ ಬಜೆಟ್ನಲ್ಲಿ ಕರ್ನಾಟಕಕ್ಕೆ 63,050 ಕೋಟಿ ರು. ಅನುದಾನವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರೊಂದಿಗೆ 16ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ, ಆದಾಯ ಹಂಚಿಕೆಯ ಹೊಸ ಫಾರ್ಮುಲಾದಡಿ ಅತಿ ಹೆಚ್ಚು ಲಾಭ ಪಡೆದ ನಂ.1 ರಾಜ್ಯವಾಗಿ ಹೊರಹೊಮ್ಮಿದೆ.
15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ.3.65ರಷ್ಟು ತೆರಿಗೆ ಆದಾಯ ಹಂಚಿಕೆಗೆ ಶಿಫಾರಸು ಮಾಡಿತ್ತು. ಆದರೆ 16ನೇ ಆಯೋಗವು ಈ ಪ್ರಮಾಣವನ್ನು ಶೇ.4.13ಕ್ಕೆ ಹೆಚ್ಚಳ ಮಾಡಿದೆ.
ಇದರ ಪರಿಣಾಮ 2026-31ರ ಅವಧಿಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ಹೆಚ್ಚುವರಿ 7387 ಕೋಟಿ ರು. ವಾರ್ಷಿಕ ಅನುದಾನ ಸಿಗಲಿದೆ. ಈ ಮೂಲಕ ಏರಿಕೆ ಪ್ರಮಾಣದಲ್ಲಿ ಅತಿ ಹೆಚ್ಚು ಲಾಭ ಕರ್ನಾಟಕಕ್ಕೆ ಆಗಿದೆ ಎಂದು ಅಂಕಿ ಅಂಶಗಳು ಹೇಳಿವೆ.
ರಾಜ್ಯಗಳಿಗೆ ಆದಾಯ ಹಂಚಿಕೆ ಮಾಡುವಾಗ ಪರಿಗಣಿಸುವ ಮಾನದಂಡಗಳಿಗೆ ಈ ಬಾರಿ ಹಣಕಾಸು ಆಯೋಗವು ಜಿಡಿಪಿಗೆ ನೀಡಿದ ಪಾಲಿಗೆ ಶೇ.10ರಷ್ಟು ವೆಯ್ಟೇಜ್ ನೀಡಿದೆ. ಜೊತೆಗೆ ಜನಸಂಖ್ಯಾ ಕಡಿತಕ್ಕೂ ಕೂಡಾ ವೆಯ್ಟೇಜ್ ನೀಡಿದೆ. ಹೀಗಾಗಿ ಜನಸಂಖ್ಯೆ ಕಡಿತ ಮಾಡಿದ ಅಂಕಗಳು ಮತ್ತು ಜಿಡಿಪಿಗೆ ದೇಶದಲ್ಲೇ 2ನೇ ಅತಿದೊಡ್ಡ ಪಾಲು ನೀಡುವ ಕರ್ನಾಟಕದ ಒಟ್ಟಾರೆ ಅಂಕಗಳು ಹೆಚ್ಚಾದ ಕಾರಣ ಕರ್ನಾಟಕಕ್ಕೆ ನಿಗದಿ ಪಡಿಸಿದ ತೆರಿಗೆ ಹಂಚಿಕೆ ಪಾಲು ಶೇ.3.65ರಿಂದ ಶೇ.4.13ಕ್ಕೆ ಹೆಚ್ಚಳ ಆಗಿದೆ.
ಇನ್ನು ಕರ್ನಾಟಕ ಹೊರತುಪಡಿಸಿದರೆ ಇದೇ ಕಾರಣಕ್ಕೆ ದಕ್ಷಿಣದ ಮತ್ತೊಂದು ರಾಜ್ಯವಾದ ಹೆಚ್ಚಿನ ಲಾಭ ಪಡೆದ 2ನೇ ರಾಜ್ಯವಾಗಿ ಹೊರಹೊಮ್ಮಿದೆ. ಕೇರಳದ ತೆರಿಗೆ ಪಾನ್ನು ಶೆ.1.93ರಿಂದ ಶೇ.2.38ಕ್ಕೆ ಹೆಚ್ಚಳ ಮಾಡಲಾಗಿದೆ. ಇನ್ನು ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದ ಪಾಲು ಅಲ್ಪ ಹೆಚ್ಚಳ ಕಂಡು ಶೇ.6.44ಕ್ಕೆ ತಲುಪಿದೆ.
ಇನ್ನೊಂದೆಡೆ ಮಧ್ಯಪ್ರದೇಶ ಅತಿ ಹೆಚ್ಚು ನಷ್ಟಕ್ಕೊಳಗಾದ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದ ಪಾಲು ಶೇ.7.85ರಿಂದ ಇಳಿದಿದೆ. ಹೀಗಾಗಿ ರಾಜ್ಯಕ್ಕೆ ಸಿಗುವ 1.12 ಲಕ್ಷ ಕೋಟಿ ರು. ಅನುದಾನದಲ್ಲಿ 7677 ಕೋಟಿ ರು. ಇಳಿಕೆಯಾಗಲಿದೆ. ಇನ್ನು ಉತ್ತರಪ್ರದೇಶಕ್ಕೆ ವಾರ್ಷಿಕ 4884 ಕೋಟಿ ರು. ಮತ್ತು ಪಶ್ಚಿಮ ಬಂಗಾಳಕ್ಕೆ 4701 ಕೋಟಿ ರು. ಕಡಿತವಾಗಲಿದೆ.
ದಕ್ಷಿಣ ವಾದಕ್ಕೆ ಅಲ್ಪ ಬೆಲೆ:
ದಕ್ಷಿಣದ ರಾಜ್ಯಗಳು ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿವೆ. ಜನಸಂಖ್ಯೆ ಕಡಿಮೆ ಮಾಡಬೇಕೆಂಬ ಕೇಂದ್ರದ ನಿಯಮವನ್ನೂ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿವೆ. ಆದರೆ ಜಿಎಸ್ಟಿ ಮತ್ತು ಜನಸಂಖ್ಯೆ ಎರಡೂ ವಿಷಯ ಕಡೆಗಣಿಸಿದ ಕಾರಣ ಭಾರೀ ತೆರಿಗೆ ಅನ್ಯಯವಾಗುತ್ತಿದೆ ಎಂದು ವಾದಿಸಿದ್ದವು. ಸೆಂಟ್ರಲ್ ಪೂಲ್ನಲ್ಲಿ ಶೇ.50ರಷ್ಟು ಪಾಲನ್ನು ರಾಜ್ಯಗಳಿಗೆ ಮರಳಿಸಬೇಕು ಎಂದು ಕರ್ನಾಟಕ ಸೇರಿ 22 ರಾಜ್ಯಗಳು ವಾದಿಸಿದ್ದವು. ಆದರೆ ಹಂಚಿಕೆ ಪಾಲನ್ನು ಶೇ.41ಕ್ಕೇ ಸೀಮಿತಗೊಳಿಸಿರುವ ಹಣಕಾಸು ಆಯೋಗ, ಹೆಚ್ಚಿನ ತೆರಿಗೆ ಮತ್ತು ಜನಸಂಖ್ಯೆ ಕಡಿತದ ಅಂಶಗಳನ್ನು ಆದಾಯ ಹಂಚಿಕೆ ಮಾನದಂಡದಲ್ಲಿ ಪ್ರಮುಖವಾಗಿ ಪರಿಗಣಿಸಿದ ಕಾರಣ ಇವುಗಳಿಗೆ ಹೆಚ್ಚಿನ ಆದಾಯ ಸಿಕ್ಕಿದೆ.
ಹೆಚ್ಚಿನ ಲಾಭ ಪಡೆದ ಟಾಪ್ 3 ರಾಜ್ಯಗಳು
ರಾಜ್ಯ 15ನೇ ಆಯೋಗ 16ನೇ ಆಯೋಗ ವ್ಯತ್ಯಾಸ ₹ಕೋಟಿ
ಕರ್ನಾಟಕ ₹ಕೋಟಿ 55663 ₹ಕೋಟಿ 63050 ₹ಕೋಟಿ 7387
ಕೇರಳ ₹ಕೋಟಿ 29380 ₹ಕೋಟಿ 36355 ₹ಕೋಟಿ 6975
ಗುಜರಾತ್ ₹ಕೋಟಿ 53083 ₹ಕೋಟಿ 57311 ₹ಕೋಟಿ 4090
ಕಡಿಮೆ ಲಾಭ ಪಡೆದ ಟಾಪ್ 3 ರಾಜ್ಯಗಳು
ರಾಜ್ಯ 15ನೇ ಆಯೋಗ 16ನೇ ಆಯೋಗ ವ್ಯತ್ಯಾಸ
ಮಧ್ಯಪ್ರದೇಶ ₹ಕೋಟಿ 119811 ₹ಕೋಟಿ 112134 ₹ಕೋಟಿ 7677
ಅರುಣಾಚಲಪ್ರದೇಶ ₹ಕೋಟಿ 26816 ₹ಕೋಟಿ 20665 ₹ಕೋಟಿ 6151
ಉತ್ತರಪ್ರದೇಶ ₹ಕೋಟಿ 273795 ₹ಕೋಟಿ 268911 ₹ಕೋಟಿ 4884
…………………………………………………………………………………………………….
- 16ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಗೆ ಹೊಸ ಫಾರ್ಮುಲಾ
- ಜನಸಂಖ್ಯೆ ನಿಯಂತ್ರಿಸಿದ್ದಕ್ಕೆ, ಹೆಚ್ಚಿನ ಜಿಎಸ್ಟಿ ನೀಡಿದ್ದಕ್ಕೆ ಅನುದಾನ ಏರಿಕೆ
- ಕಳೆದ ವಿತ್ತೀಯ ವರ್ಷದಲ್ಲಿ ತೆರಿಗೆಯಲ್ಲಿ ಕರ್ನಾಟಕದತೆ ಶೇ.3.65 ಇತ್ತು
- ಈ ಬಾರಿ ರಾಜ್ಯಕ್ಕೆ ಕೊಂಚ ರಿಲೀಫ್: ತೆರಿಗೆ ಪಾಲು ಶೇ.4.13ಕ್ಕೆ ಹೆಚ್ಚಳ
- ಕಳೆದ ಸಲ ₹55663 ಕೋಟಿ ಪಡೆದ ರಾಜ್ಯಕ್ಕೆ ಈಗ ₹63,050 ಕೋಟಿ
- ತೆರಿಗೆ ಪಾಲು ಹೆಚ್ಚಿಸಿ ಎಂದ ದಕ್ಷಿಣದ ರಾಜ್ಯಗಳ ದೊಡ್ಡ ಬೇಡಿಕೆಗೆ ಮನ್ನಣೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.