ಮಂಗಳೂರು: ಕರ್ಣಾಟಕ ಬ್ಯಾಂಕ್‌ ತೃತೀಯ ತ್ರೈಮಾಸಿಕದ ನಿವ್ವಳ ಲಾಭ

By Kannadaprabha NewsFirst Published Feb 3, 2023, 3:00 AM IST
Highlights

ಹಿಂದಿನ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ 146.42 ಕೋಟಿ ರು. ಆಗಿತ್ತು. ಇದರಿಂದಾಗಿ ತೃತೀಯ ತ್ರೈಮಾಸಿಕದ ಅಂತ್ಯಕ್ಕೆ ವಾರ್ಷಿಕ 118.680 ರು. ವೃದ್ಧಿ ದರದೊಂದಿಗೆ 826.15 ಕೋಟಿ ರು. ನಿವ್ವಳ ಲಾಭ ಗಳಿಸಿ ದಾಖಲೆ ಬರೆದಿದೆ. 

ಮಂಗಳೂರು(ಫೆ.03): ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ವಿತ್ತೀಯ ವರ್ಷದ ತೃತೀಯ ತ್ರೈಮಾಸಿಕದಲ್ಲಿ ಶೇ. 105.32 ವೃದ್ಧಿ ದರದೊಂದಿಗೆ 300.63 ಕೋಟಿ ರು.ಗಳ ನಿವ್ವಳ ಲಾಭ ಘೋಷಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ 146.42 ಕೋಟಿ ರು. ಆಗಿತ್ತು. ಇದರಿಂದಾಗಿ ತೃತೀಯ ತ್ರೈಮಾಸಿಕದ ಅಂತ್ಯಕ್ಕೆ ವಾರ್ಷಿಕ 118.680 ರು. ವೃದ್ಧಿ ದರದೊಂದಿಗೆ 826.15 ಕೋಟಿ ರು. ನಿವ್ವಳ ಲಾಭ ಗಳಿಸಿ ದಾಖಲೆ ಬರೆದಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ 377.79 ಕೋಟಿ ರು.ಗಳಾಗಿತ್ತು.

ಮಂಗಳೂರಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ವಿತ್ತೀಯ ವರ್ಷ 2022-23 ರ ತೃತೀಯ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಬ್ಯಾಂಕಿನ ಸ್ವತ್ತುಗಳ ಗುಣಮಟ್ಟದಲ್ಲೂ ಗಮನಾರ್ಹ ವೃದ್ಧಿ ಕಂಡಿದೆ. ಬ್ಯಾಂಕಿನ ಸ್ಕೂಲ ಅನುತ್ಪಾದಕ ಸ್ವತ್ತುಗಳು ಬೇಸಿಸ್‌ ಪಾಯಿಂಟ್‌ ಗಳಷ್ಟುಕಡಿಮೆಯಾಗಿದ್ದು, ಶೇ. 3.28 ಕ್ಕೆ ಇಳಿಕೆ ಕಂಡಿವೆ. ಇದು ಹಿಂದಿನ ತ್ರೈಮಾಸಿಕ ಅಂತ್ಯಕ್ಕೆ (30-09-2022) ಶೇ. 3.36 ರಷ್ಟಿದ್ದವು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಕೂಡ 6 ಬೇಸಿಸ್‌ ಪಾಯಿಂಟ್‌ಗಳಷ್ಟು ಕಡಿಮೆಯಾಗಿದ್ದು, ಶೇ. 1.66ಕ್ಕೆ ಇಳಿಕೆ ಕಂಡಿವೆ. ಪೊವಿಶನ್‌ ಕವರೇಜ್‌ ಅನುಪಾತ ದಾಖಲೆಯ ಶೇ. 80.21 ಕ್ಕೆ ತಲುಪಿದ್ದು, ಕಳೆದ ವಿತ್ತೀಯ ವರ್ಷ(2021-22ರ) ತೃತೀಯ ತ್ರೈಮಾಸಿಕದ ಅಂತ್ಯಕ್ಕೆ ಇದು ಶೇ.7,366 ಆಗಿತ್ತು.

ಕಸಾಪಗೆ ಕರ್ಣಾಟಕ ಬ್ಯಾಂಕ್‌ 20 ಲಕ್ಷ ರು. ದೇಣಿಗೆ ಹಸ್ತಾಂತರ

ಬ್ಯಾಂಕಿನ ಒಟ್ಟು ವ್ಯವಹಾರ (3.12.2022 ಅಂತ್ಯಕ್ಕೆ) ಶೇ. 9.79ರ ದರದಲ್ಲಿ ವೃದ್ಧಿ ಕಂಡಿದ್ದು, 1,47,128.51 ಕೋಟಿ ರು.ಗೆ ಏರಿದೆ. ಬ್ಯಾಂಕಿನ ಠೇವಣಿಗಳು ಶೇ.7.86ರ ದರದಲ್ಲಿ ವೃದ್ಧಿ ಕಂಡು 84,596.40 ಕೋಟಿ ರು.ಗಳಷ್ಟಿವೆ ಹಾಗೂ ಮುಂಗಡಗಳು ಶೇ. 12.51 ದರದಲ್ಲಿ ವೃದ್ಧಿ ಕಂಡು 62,532.11 ಕೋಟಿ ರು.ಗಳಿಗೆ ತಲುಪಿವೆ.

ಬ್ಯಾಂಕಿನ ತೃತೀಯ ತ್ರೈಮಾಸಿಕದ ಫಲಿತಾಂಶ ಘೋಷಿಸಿದ ಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಮಹಾಬಲೇಶ್ವರ ಎಂ.ಎಸ್‌. ಅವರು, ಶತಮಾನದ ಸಂಭ್ರಮದಲ್ಲಿರುವ ಕರ್ಣಾಟಕ ಬ್ಯಾಂಕ್‌ 2022-23ರ ಆರ್ಥಿಕ ವರ್ಷದ ಕಳೆದೆರಡು ತ್ರೈಮಾಸಿಕದಂತೆ ಈ ತ್ರೈಮಾಸಿಕದಲ್ಲೂ ಕೂಡ ಉತ್ತಮ ಸಾಧನೆಯ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಬ್ಯಾಂಕ್‌ನ ಸ್ಥಿರ ಮತ್ತು ದೃಢವಾದ ಸಾಧನೆ ಬ್ಯಾಂಕನ್ನು ಮತ್ತಷ್ಟುಪ್ರಗತಿಯೆಡೆಗೆ ಕೊಂಡೊಯ್ಯುವುದೆಂಬ ಭರವಸೆಯಿದೆ. ಬ್ಯಾಂಕಿಂಗ್‌ ಕ್ಷೇತ್ರದ ಮೂಲಭೂತ ಅಂಶಗಳೆಡೆಗೆ ಗಮನವಿರಿಸಿದ ಉತ್ಕೃಷ್ಟಮತ್ತು ಜಾಗ್ರತ ವ್ಯವಹಾರ ಪ್ರಜ್ಞೆಯೇ ಈ ಸಾಧನೆಗೆ ಕಾರಣ, ಈ ಫಲಿತಾಂಶ ಪರಿಣಾಮಕಾರಿಯಾದ ಸರ್ವಾಂಗೀಣ ಕಾರ್ಯಕ್ಷಮತೆಗೆ ಸಾಕ್ಷಿಯಾಗಿ ನಮ್ಮ ಮುಂದಿದೆ. ಎನ್‌ಐಐ ಅನುಪಾತ ಶೇ. 26.74 ವೃದ್ಧಿ ಕಂಡಿದೆ. ಎನ್‌ಐಎಂ ಅನುಪಾತ ದಾಖಲೆಯ ಶೇ. 3.63 ಕ್ಕೆ ವೃದ್ಧಿ ಕಂಡಿದ್ದು, ಅದು ಹಿಂದಿನ ವರ್ಷದ ದಶಂಬರ ಅಂತ್ಯಕ್ಕೆ ಶೇ. 3.15 ರಷ್ಟಿದ್ದವು. ಬ್ಯಾಂಕಿನ ಸ್ಕೂಲ ಅನುತ್ಪಾದಕ ಸ್ವತ್ತುಗಳು ಶೇ.3.36 ರಿಂದ ಶೇ 3.28 ಕ್ಕೆ ಇಳಿಕೆ ಕಂಡಿವೆ. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ. 1.72 ರಿಂದ ಶೇ. 1.66 ಕ್ಕೆ ಇಳಿಕೆ ಕಂಡಿವೆ ಎಂದಿದ್ದಾರೆ.

ಸ್ಥಿರತೆಯಿಂದ ಕೂಡಿದ ಈ ಸರ್ವಾಂಗೀಣ ಪ್ರಗತಿ ಬ್ಯಾಂಕಿನ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟುಯಶಸ್ಸನ್ನು ಸಾಧಿಸಲು ಬ್ಯಾಂಕ್‌ ಬದ್ಧವಾಗಿದೆ. ಗ್ರಾಹಕ ಕೇಂದ್ರಿತ ನಮ್ಮ ಪಯಣ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ದಾಖಲೆಗಳನ್ನು ನಿರ್ಮಿಸಿ ಕರ್ಣಾಟಕ ಬ್ಯಾಂಕ್‌ನ ಶತಮಾನೋತ್ಸವ ವರ್ಷ ಬ್ಯಾಂಕ್‌ ಹಾಗೂ ಗ್ರಾಹಕರ ಸಂಬಂಧಕ್ಕೆ ಹೊಸ ಭಾಷ್ಯವನ್ನು ಬರೆಯಲಿದೆ ಎಂದರು.

click me!