Union Budget 2024:ಬಡವರ ಕಲ್ಯಾಣದಿಂದ ದೇಶದ ಕಲ್ಯಾಣ; ಬಡತನ ನಿರ್ಮೂಲನೆಗೆ ಹಲವು ಕ್ರಮ

By Suvarna NewsFirst Published Feb 1, 2024, 6:20 PM IST
Highlights

ಕೇಂದ್ರ ಸರ್ಕಾರ 2024ನೇ ಸಾಲಿನ ಮಧ್ಯಂತರ ಬಜೆಟ್ ನಲ್ಲಿ ಬಡವರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದೆ. 

ನವದೆಹಲಿ (ಫೆ.1): ಕೇಂದ್ರ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದಾರೆ. ಇದರಲ್ಲಿ ಬಡವರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬಡವರ ಕಲ್ಯಾಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಂಬಿದ್ದಾರೆ. ಹೀಗಾಗಿ ಬಡವರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಬಡವರ ಸಬಲೀಕರಣದಿಂದ ದೇಶದ ಅಭಿವೃದ್ಧಿಯಲ್ಲಿ ಅವರು ಕೂಡ ಪಾಲುದಾರರಾಗುತ್ತಾರೆ. ಇದರಿಂದ ಅಭಿವೃದ್ಧಿಯ ವೇಗ ಹೆಚ್ಚುತ್ತದೆ ಎಂದು ವಿತ್ತ ಸಚಿವೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

25 ಕೋಟಿ ಜನರಿಗೆ ಬಡತನದಿಂದ ಹೊರಬರಲು ನೆರವು
ಕಳೆದ 10 ವರ್ಷಗಳಲ್ಲಿ 'ಸಾಬ್ ಕಾ ಸಾಥ್' ಎಂಬ ಘೋಷ ವಾಕ್ಯದೊಂದಿಗೆ ಸರ್ಕಾರ 25 ಕೋಟಿ ಜನರಿಗೆ ವಿವಿಧ ವಿಧದ ಬಡತನಗಳಿಂದ ಹೊರಬರಲು ನೆರವು ನೀಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದು ಸರ್ಕಾರಕ್ಕೆ ಇಂಥ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲು ಉತ್ತೇಜನ ನೀಡಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಪಿಎಂ ಜನ್ ಧನ್ ಖಾತೆಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಈ ತನಕ ವಿವಿಧ ಯೋಜನೆಗಳ ಫಲಾನುಭವಿಗಳಿಗೆ 34 ಲಕ್ಷ ಕೋಟಿ ರೂ. ವರ್ಗಾವಣೆ ಮಾಡಿದೆ. ಈ ನೇರ ವರ್ಗಾವಣೆಯಿಂದ (ಡಿಬಿಟಿ) ಸರ್ಕಾರಕ್ಕೆ 2.7ಲಕ್ಷ ಕೋಟಿ ರೂ. ಉಳಿತಾಯವಾಗಿದೆ. ಈ ಉಳಿತಾಯವು 'ಗರೀಬಿ ಕಲ್ಯಾಣಕ್ಕೆ' ಇನ್ನಷ್ಟು ಹಣ ನೀಡಲು ನೆರವು ನೀಡಿದೆ.

ಪಿಎಂ ಸ್ವನಿಧಿ ಯೋಜನೆ
ಪಿಎಂ ಸ್ವನಿಧಿ ಯೋಜನೆ 78ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ನೀಡಿದೆ. 

ಪಿಎಂ ಜನ್ ಮನ್ ಯೋಜನೆ
ಪಿಎಂ ಜನ್ ಮನ್ ಯೋಜನೆ ಬಡ ಬುಡಕಟ್ಟು ವರ್ಗದ ಜನರನ್ನು ತಲುಪಿದೆ. ಇದರಿಂದ ಬುಡಕಟ್ಟು ವರ್ಗದ ಜನರಿಗೆ ನೆರವು ದೊರಕಿದೆ.

ಪಿಎಂ ವಿಶ್ವಕರ್ಮ ಯೋಜನೆ
ಪಿಎಂ ವಿಶ್ವಕರ್ಮ ಯೋಜನೆ  ಕುಶಲಕರ್ಮಿಗಳು ಹಾಗೂ ಕಲಾಕಾರರು ಸೇರಿದಂತೆ 18 ವ್ಯವಹಾರಗಳಲ್ಲಿ ತೊಡಗಿರೋರಿಗೆ ನೆರವು ನೀಡಿದೆ.

ದಿವ್ಯಾಂಗ ಹಾಗೂ ತೃತೀಯ ಲಿಂಗಿಗಳ ಅಭಿವೃದ್ಧಿ
ದಿವ್ಯಾಂಗ ಹಾಗೂ ತೃತೀಯ ಲಿಂಗಿಗಳ ಅಭಿವೃದ್ಧಿಗೆ ಕೂಡ ಸರ್ಕಾರ ಯೋಜನೆ ರೂಪಿಸಿದೆ. ಈ ಮೂಲಕ ಎಲ್ಲ ವರ್ಗದ ಬಡಜನರ ಪ್ರಗತಿಗೆ ಸೂಕ್ತವಾದ ಕ್ರಮಗಳನ್ನು ಕೈಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 

ಬಡ ರೈತರಿಗೆ ಆರ್ಥಿಕ ನೆರವು
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ಮಧ್ಯಮ ಹಾಗೂ ಸಣ್ಣ ರೈತರು ಸೇರಿದಂತೆ ಒಟ್ಟು 11.8 ಕೋಟಿ ರೈತರಿಗೆ ನೆರವಾಗಿದೆ. ಪಿಎಂ ಫಸಲ್ ಬಿಮಾ ಯೋಜನೆ ಅಡಿಯಲ್ಲಿ 4 ಕೋಟಿ ರೈತರಿಗೆ ಬೆಳೆ ವಿಮೆ ಸಿಕ್ಕಿದೆ. 

Live Blog ಕೇಂದ್ರ ಬಜೆಟ್‌ 2024: ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, 5.94 ಲಕ್ಷ ಕೋಟಿ ರೂಪಾಯಿ ಮೀಸಲು!...

ರೈತರ ಆದಾಯ ಹೆಚ್ಚಳಕ್ಕೆ ಒತ್ತು
ಕೃಷಿ ವಲಯದಲ್ಲಿ ಮೌಲ್ಯವರ್ಧನೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯಿಂದ 38ಲಕ್ಷ ರೈತರಿಗೆ ಪ್ರಯೋಜನವಾಗಿದೆ. 10ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಪ್ರಧಾನ ಮಂತ್ರಿ ಫಾರ್ಮಲೈಸೇಷನ್ ಆಫ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ ಪ್ರೈಸರ್ಸ್ ಯೋಜನೆ 2.4ಲಕ್ಷ ಸ್ವಸಹಾಯ ಗುಂಪುಗಳಿಗೆ ನೆರವು ನೀಡಿದೆ. ಹಾಗೆಯೇ 60 ಸಾವಿರ ಜನರಿಗೆ ಹಣಕಾಸು ಒದಗಿಸಿದೆ. ಹಾಗೆಯೇ ಕಟಾವಿನ ಬಳಿಕದ ನಷ್ಟ ತಗ್ಗಿಸಲು, ಉತ್ಪಾದನೆ ಹಾಗೂ ಆದಾಯ ಹೆಚ್ಚಿಸಲು ಕೂಡ ಇತರ ಯೋಜನೆಗಳು ಪ್ರಯತ್ನಿಸುತ್ತಿವೆ. 
 

click me!