ಈ ಬಾರಿಯ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ , ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಘೋಷಿಸಿದ್ದು, ಇದರಿಂದ ರಫ್ತು ದ್ವಿಗುಣಗೊಳ್ಳುವ ಜೊತೆಗೆ ಭವಿಷ್ಯದಲ್ಲಿ 55ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ.
ನವದೆಹಲಿ (ಫೆ.1): 2024ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ಅನ್ನು ಇಂದು ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮೀನುಗಾರಿಕಾ ವಲಯದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಪೂರಕವಾದ ಯೋಜನೆಗಳನ್ನು ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು (ಪಿಎಂಎಂಎಸ್ ವೈ) ಘೋಷಿಸಲಾಗಿದ್ದು, ಇದು ಮೀನುಗಾರಿಕಾ ವಲಯದಲ್ಲಿ ಉತ್ಪಾದನೆ ಹೆಚ್ಚಳದ ಜೊತೆಗೆ ಸಮುದ್ರ ಉತ್ಪನ್ನಗಳ ರಫ್ತನ್ನು ದ್ವಿಗುಣಗೊಳಿಸುವ ಗುರಿಯನ್ನು ಕೂಡ ಹೊಂದಿದೆ. ಈ ಯೋಜನೆ ಮೂಲಕ ದೇಶದ ಸಮುದ್ರ ಉತ್ಪನ್ನಗಳ ರಫ್ತನ್ನು 1ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿರುವ ಬಗ್ಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಯಿಂದ ಭವಿಷ್ಯದಲ್ಲಿ 55ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಕೂಡ ಇದೆ.
'ಮೀನುಗಾರರಿಗೆ ನೆರವಿನ ಅಗತ್ಯವಿರೋದನ್ನು ಮನಗಂಡು ನಮ್ಮ ಸರ್ಕಾರ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಿತು. ಇದು ಒಳನಾಡಿನ ಮೀನುಗಾರಿಕೆ ಹಾಗೂ ಮೀನುಸಾಕಣೆ ಎರಡರ ಉತ್ಪಾದನೆಯನ್ನು ದ್ವಿಗುಣಗೊಳಿಸಲಿದೆ. 2013-14ನೇ ಸಾಲಿನಿಂದ ಸಮುದ್ರ ಉತ್ಪನ್ನಗಳ ರಫ್ತು ಕೂಡ ದ್ವಿಗುಣಗೊಂಡಿದೆ' ಎಂದು ಬಜೆಟ್ ಮಂಡನೆ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Union Budget 2024:ಬಡವರ ಕಲ್ಯಾಣದಿಂದ ದೇಶದ ಕಲ್ಯಾಣ; ಬಡತನ ನಿರ್ಮೂಲನೆಗೆ ಹಲವು ಕ್ರಮ
2013-14ನೇ ಸಾಲಿನಲ್ಲಿ ಒಳನಾಡು ಮೀನುಗಾರಿಕೆ ಉತ್ಪಾದನೆ 61 ಲಕ್ಷ ಟನ್ ಗಳಿಂದ 161 ಲಕ್ಷ ಟನ್ ಗಳಿಗೆ ಏರಿಕೆಯಾಗಿದೆ. ಇನ್ನು 2022-23ನೇ ಸಾಲಿನಲ್ಲಿ ಭಾರತದ ಮೀನುಗಾರಿಕೆ ಉತ್ಪಾದನೆ 174 ಲಕ್ಷ ಟನ್ ಗಳಷ್ಟಿತ್ತು. ಭಾರತವು ವಿಶ್ವದಲ್ಲಿ ಮೂರನೇ ಅತೀದೊಡ್ಡ ಮೀನು ಉತ್ಪಾದನಾ ರಾಷ್ಟ್ರವಾಗಿದೆ. ಒಟ್ಟು ಜಾಗತಿಕ ಮೀನು ಉತ್ಪಾದನೆಗೆ ಭಾರತದ ಕೊಡುಗೆ ಶೇ.8ರಷ್ಟಿದೆ.
ಪಿಎಂಎಂಎಸ್ ವೈ ಅನುಷ್ಠಾನದಿಂದ ಮೀನು ಸಾಕಣೆಯ ಉತ್ಪಾದನೆ ಪ್ರತಿ ಹೆಕ್ಟೇರ್ ಗೆ ಈಗಿರುವ 3ರಿಂದ 5ಟನ್ ಗಳಿಗೆ ಹೆಚ್ಚಳವಾಗಲಿದೆ. ಇನ್ನು ರಫ್ತು ಎರಡು ಪಟ್ಟು ಹೆಚ್ಚಲಿದ್ದು, 1ಲಕ್ಷ ಕೋಟಿ ರೂ. ತಲುಪಲಿದೆ. ಅಲ್ಲದೆ, ಈ ಯೋಜನೆ ಜಾರಿಯಿಂದ ಭವಿಷ್ಯದಲ್ಲಿ 55ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಹಾಗೆಯೇ 5 ಸಂಯೋಜಿತ ಅಕ್ವಾ ಪಾರ್ಕ್ ಗಳನ್ನು ಕೂಡ ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ನೀಲಿ ಆರ್ಥಿಕತೆ 2.0
ಇನ್ನು ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ 'ನೀಲಿ ಆರ್ಥಿಕತೆ 2.0' ಬಗ್ಗೆ ಕೂಡ ಪ್ರಾಸ್ತಪಿಸಿದ್ದಾರೆ. ನೀಲಿ ಆರ್ಥಿಕತೆ ಸಮುದ್ರ ಉತ್ಪನ್ನಗಳಿಂದ ಹಿಡಿದು ಒಳನಾಡು ಮೀನುಗಾರಿಕೆ ತನಕ ದೇಶಾದ್ಯಂತ ಪರಿಣಾಮ ಬೀರಲಿದೆ. ಅಕ್ವಾ ಪಾರ್ಕ್ ಗಳ ಮೂಲಕ ರಫ್ತು ಉತ್ತೇಜನ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮೂಲಕ ಮೀನುಗರಿಕೆಯ ಬೆಳವಣಿಗೆ ಹಾಗೂ ಉತ್ಪಾದನೆ ಎರಡರ ಮೇಲೆ ಕೂಡ ಬಜೆಟ್ ಗಮನ ಕೇಂದ್ರೀಕರಿಸಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Union Budget 2024: ಬಜೆಟ್ ನಲ್ಲಿ ಕೃಷಿಗೆ ಧಕ್ಕಿದ್ದು ಅತ್ಯಲ್ಪ;ಆದ್ರೂ ರೈತರ ಆದಾಯ ಹೆಚ್ಚಳಕ್ಕೆ ಸಂಕಲ್ಪ!
ಏಪ್ರಿಲ್ ಹಾಗೂ ಮೇನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಕಾರಣ ಈ ಬಾರಿ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲದ ಕಾರಣಕ್ಕೆ ಇದರಲ್ಲಿ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಿಲ್ಲ. ಅಲ್ಪಾವಧಿಗೆ ಅಂದರೆ ಕೆಲವೇ ತಿಂಗಳುಗಳ ಕಾಲ ಸರ್ಕಾರದ ವೆಚ್ಚಗಳ ನಿರ್ವಹಣೆಗೆ ಈ ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಈ ಹಣಕಾಸಿನ ವರ್ಷದಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ತನಕದ ಅವಧಿಗೆ ಮಧ್ಯಂತರ ಬಜೆಟ್ ಸೀಮಿತವಾಗಿರುತ್ತದೆ. ಸಾಮಾನ್ಯವಾಗಿ ಈ ಬಜೆಟ್ ನಲ್ಲಿ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಲಾಗುವುದಿಲ್ಲ. ಅಲ್ಲದೆ, ಮಧ್ಯಂತರ ಬಜೆಟ್ ಅನ್ನು 'ವೋಟ್-ಆನ್-ಅಕೌಂಟ್' ಎಂದೂ ಕರೆಯುತ್ತಾರೆ. ವೋಟ್ ಆನ್ ಅಕೌಂಟ್ ಅವಧಿಯಲ್ಲಿ ಯಾವುದೇ ಪ್ರಮುಖ ನೀತಿಗಳನ್ನು ಪ್ರಕಟಿಸುವಂತಿಲ್ಲ.