Protest against Reliance: ರಿಲಯನ್ಸ್‌ ವಿರುದ್ಧ ಸಿಡಿದ 4.50 ಲಕ್ಷ ಸೇಲ್ಸ್‌ಮನ್‌!

By Kannadaprabha NewsFirst Published Dec 6, 2021, 6:00 AM IST
Highlights
  • ರಿಲಯನ್ಸ್‌ ವಿರುದ್ಧ ಸಿಡಿದ 4.50 ಲಕ್ಷ ಸೇಲ್ಸ್‌ಮನ್‌!
  • ರಿಲಯನ್ಸ್‌ನಿಂದ ವ್ಯಾಪಾರ ಶೇ.25ರಷ್ಟುಕುಸಿತದ ಆರೋಪ
  • ರಿಲ್‌ಗೆ ಕಡಿಮೆ ದರಕ್ಕೆ ಸರಕು ಮಾರಾಟ ಮಾಡದಂತೆ ಪಟ್ಟು

ಮುಂಬೈ(ಡಿ.06): ದೇಶದ ನಂ.1 ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ದಿನಬಳಕೆ ವಸ್ತುಗಳನ್ನು ಉತ್ಪಾದಿಸುವ ದೇಶದ ಬೃಹತ್‌ ಕಂಪನಿಗಳ ವಿರುದ್ಧ ದೇಶಾದ್ಯಂತ ಇರುವ 4.50 ಲಕ್ಷ ಮಾರಾಟ ಪ್ರತಿನಿಧಿಗಳು ಸಿಡಿದೆದ್ದಿದ್ದಾರೆ. ಒಂದು ವೇಳೆ ರಿಲಯನ್ಸ್‌ಗೆ ಕಡಿಮೆ ದರಕ್ಕೆ ಸರಕು ಪೂರೈಕೆ ನಿಲ್ಲಿಸದೇ ಹೋದರೆ ದೇಶಾದ್ಯಂತ ಇರುವ ಕಿರಾಣಿ ಅಂಗಡಿಗಳಿಗೆ ನಿಮ್ಮ ಉತ್ಪನ್ನಗಳ ಪೂರೈಕೆ ಸ್ಥಗಿತಗೊಳಿಸುತ್ತೇವೆ ಎಂದು ಪ್ರತಿನಿಧಿಗಳು ಬೆದರಿಕೆ ಹಾಕಿದ್ದಾರೆ.

ಏನಿದು ಪ್ರಕರಣ?:

ರಿಲಯನ್ಸ್‌ ತನ್ನ ಜಿಯೋ ಮಾರ್ಟ್‌(Jio mart) ಆ್ಯಪ್‌ ಮೂಲಕ ಕಿರಾಣಿ ಅಂಗಡಿ ಮಾಲೀಕರನ್ನು ತನ್ನ ಗ್ರಾಹಕರನ್ನಾಗಿ ಮಾಡಿಕೊಂಡಿದೆ. ಅವರಿಗೆ ಕಡಿಮೆ ದರಕ್ಕೆ ಸಗಟು ದರದಲ್ಲಿ ಎಲ್ಲಾ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಆದರೆ ಉತ್ಪಾದನಾ ಕಂಪನಿಗಳು ತಮಗೆ ನೀಡುವ ದರಕ್ಕಿಂತ ಕಡಿಮೆ ದರಕ್ಕೆ ರಿಲಯನ್ಸ್‌ಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಹೀಗಾಗಿ ರಿಲಯನ್ಸ್‌ ತಮಗಿಂತಲೂ ಕಡಿಮೆ ದರಕ್ಕೆ ಚಿಲ್ಲರೆ ಅಂಗಡಿಗಳಿಗೆ ಉತ್ಪನ್ನಗಳನ್ನು ಪೂರೈಸುತ್ತಿವೆ. ಪರಿಣಾಮ ತಮ್ಮ ಮೂಲಕ ನಡೆಯುವ ವ್ಯಾಪಾರದಲ್ಲಿ ಶೇ.25ರಷ್ಟುಕುಸಿತವಾಗಿದೆ ಎಂಬುದು ಪ್ರತಿನಿಧಿಗಳ ವಾದ.

ಕಂಪನಿಗಳು ರಿಲಯನ್ಸ್‌ಗೆ ಹೀಗೆ ಕಡಿಮೆ ದರಕ್ಕೆ ಉತ್ಪನ್ನ ನೀಡುತ್ತಿರುವ ಕಾರಣ 4.50 ಲಕ್ಷ ಸೇಲ್ಸ್‌ಮನ್‌ಗಳು ಅತಂತ್ರರಾಗುವ ಭೀತಿ ಎದುರಾಗಿದೆ. ಜ.1ರ ಒಳಗಾಗಿ ರಿಲಯನ್ಸ್‌ಗೆ ಕಡಿಮೆ ಬೆಲೆಗೆ ಸರಕು ಮಾರಾಟ ನಿಲ್ಲಿಸಬೇಕು. ಇಲ್ಲದಿದ್ದರೆ ಕಿರಾಣಿ ಅಂಗಡಿಗಳಿಗೆ ಯಾವುದೇ ವಸ್ತುಗಳನ್ನು ಪೂರೈಸಲ್ಲ. ಜತೆಗೆ ಹೊಸದಾಗಿ ಮಾರುಕಟ್ಟೆಪ್ರವೇಶಿಸಬೇಕಿರುವ ಸರಕುಗಳನ್ನು ಒದಗಿಸದೆ ಅಸಹಕಾರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

ಜಿಯೋ ಬೃಹತ ಯೋಜನೆ

ಭಾರತದ ಚಿಲ್ಲರೆ ಮಾರುಕಟ್ಟೆವಲಯವು ವಾರ್ಷಿಕ 67 ಲಕ್ಷ ಕೋಟಿ ರು. ವಹಿವಾಟು ನಡೆಸುತ್ತವೆ. ಇದರಲ್ಲಿ ಶೇ.80ರಷ್ಟುಪಾಲು ಕಿರಾಣಿ ಅಂಗಡಿಗಳದ್ದು. ಆದರೆ ಕೆಲ ತಿಂಗಳಿನಿಂದ 150 ನಗರಗಳ 3 ಲಕ್ಷ ಕಿರಾಣಿ ಅಂಗಡಿಗಳು ಜಿಯೋ ಮಾರ್ಟ್‌ ಮೂಲಕ ಖರೀದಿ ನಡೆಸುತ್ತಿವೆ. 2024ರ ವೇಳೆಗೆ ತನ್ನ ವಹಿವಾಟು ಜಾಲಕ್ಕೆ 1 ಕೋಟಿ ಕಿರಾಣಿ ಅಂಗಡಿಗಳನ್ನು ಸೇರಿಸಿಕೊಳ್ಳುವ ಗುರಿ ಹಾಕಿಕೊಂಡಿದೆ.

click me!