Global Investors Meet: ಭಾರತ ಭವಿಷ್ಯದ ಉತ್ಪಾದನಾ ಹಬ್‌: ಸಚಿವ ಹೆಬ್ಬಾರ್‌

By Kannadaprabha NewsFirst Published Nov 5, 2022, 7:00 AM IST
Highlights

ವಿದೇಶಿ ಬಂಡವಾಳ ಹೂಡಿಕೆ, ಐಟಿ, ಬಯೋಟೆಕ್‌ ಉತ್ಪನ್ನ ಮತ್ತು ರಫ್ತು, ಎಲೆಕ್ಟ್ರಿಕ್‌ ವಾಹನ ಸೇವೆ, ಸಂಶೋಧನೆ ಮತ್ತು ಉತ್ಪಾದನೆ ಸೇರಿದಂತೆ ಹಲವು ಪ್ರಥಮಗಳಿಗೆ ರಾಜ್ಯ ಸಾಕ್ಷಿಯಾಗಿದೆ: ಹೆಬ್ಬಾರ್‌ 

ಬೆಂಗಳೂರು(ನ.05):  ‘ಭವಿಷ್ಯದಲ್ಲಿ ಜಾಗತಿಕ ಉತ್ಪಾದನಾ ಹಬ್‌ ಆಗುವ ಸರ್ವ ಸಾಮರ್ಥ್ಯವೂ ಭಾರತಕ್ಕಿದೆ, ಇದನ್ನು ಸಾಕಾರಗೊಳಿಸಲು ಕರ್ನಾಟಕ ದೇಶಕ್ಕೆ ಸಂಪೂರ್ಣ ಸಾತ್‌ ನೀಡಲಿದೆ’ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಮೂರನೇ ದಿನದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ‘2016ರಿಂದಲೂ ರಾಜ್ಯವೂ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಶೇ.63ರಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದೆ. ವಿದೇಶಿ ಬಂಡವಾಳ ಹೂಡಿಕೆ, ಐಟಿ, ಬಯೋಟೆಕ್‌ ಉತ್ಪನ್ನ ಮತ್ತು ರಫ್ತು, ಎಲೆಕ್ಟ್ರಿಕ್‌ ವಾಹನ ಸೇವೆ, ಸಂಶೋಧನೆ ಮತ್ತು ಉತ್ಪಾದನೆ ಸೇರಿದಂತೆ ಹಲವು ಪ್ರಥಮಗಳಿಗೆ ರಾಜ್ಯ ಸಾಕ್ಷಿಯಾಗಿದೆ. ಕೈಗಾರಿಕೆ ಮತ್ತು ಅಂತರಾಷ್ಟ್ರೀಯ ವಹಿವಾಟಿನಲ್ಲಿ ಉತ್ತಮ ಸಾಧನೆ ಹಿರಿಮೆ ಜತೆಗೆ ಸುಲಭ ವ್ಯಾಪಾರ ಅವಕಾಶಗಳಲ್ಲಿ ಉತ್ತಮ ಶ್ರೇಯಾಂಕ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲೂ ಇದೇ ಸ್ಥಾನವನ್ನು ಕಾಯ್ದುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರವು ಹತ್ತು ಹಲವು ಉದ್ಯಮ ಸ್ನೇಹಿ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ನುಡಿದರು.

GLOBAL INVESTORS MEET 2022: ಕುಲಕರ್ಣಿ, ಗೌಡ, ಪಾಟೀಲರು ಉದ್ಯಮಿ ಆಗ್ಬೇಕು: ಸಿಎಂ ಬೊಮ್ಮಾಯಿ

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ವಿ. ಪ್ರಸಾದ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಜಗತ್ತನ್ನು ಗಮನದಲ್ಲಿ ಇರಿಸಿಕೊಂಡು ಉತ್ಪಾದಿಸಿ

‘ಭವಿಷ್ಯದಲ್ಲಿ ಭಾರತ ಐಟಿ, ಎಲೆಕ್ಟ್ರಾನಿಕ್ಸ್‌, ಸೆಮಿ ಕಂಡಕ್ಟರ್‌ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಉತ್ಪಾದನೆ ಮತ್ತು ಸರಬರಾಜು ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸಲಿದೆ. ಜಾಗತಿಕ ಬೇಡಿಕೆಯನ್ನು ಗಮನದಲ್ಲಿಟ್ಟು ಕೊಂಡು ಭಾರತ ಇನ್ಮುಂದೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಉತ್ಪಾದನೆ, ಸರಬರಾಜು ಸರಪಳಿಯನ್ನು ವಿಸ್ತರಿಸುವ ಅಗತ್ಯವಿದೆ’ ಎಂದು ವಿವಿಧ ಉದ್ಯಮಿಗಳು ಪ್ರತಿಪಾದಿಸಿದ್ದಾರೆ.

Invest Karnataka; ರಾಜ್ಯದಲ್ಲಿ 10 ಲಕ್ಷ ಕೋಟಿಗೂ ಅಧಿಕ ಹೂಡಿಕೆಗೆ ಮುಂದಾದ ವಿಶ್ವ ಉದ್ಯಮಿಗಳು

ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಮೂರನೇ ದಿನದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ‘ಭಾರತ: ಜಾಗತಿಕ ಸರಬರಾಜು ಸರಪಳಿಯ ಕೇಂದ್ರ ಬಿಂದು’ ವಿಷಯ ಕುರಿತ ಸಂವಾದದಲ್ಲಿ ಲಾಕ್ಹೀಡ್‌ ಮಾರ್ಟಿನ್‌ ಕಂಪನಿಯ ಭಾರತದ ಮುಖ್ಯ ಕಾರ್ಯನಿರ್ವಾಹಕ ವಿಲಿಯಂ ಬ್ಲೈರ್‌, ಬಿಸಿಜಿ ಗ್ಲೋಬಲ್‌ ಕಂಪನಿಯ ಅಧ್ಯಕ್ಷ ಹನ್ಸ್‌ ಪೌಲ್‌ ಬರ್ಕನರ್‌, ಗ್ಲೋಬಲ್‌ ಫೌಂಡರಿಸ್‌ನ ಭಾರತೀಯ ವಿಭಾಗದ ಮುಖ್ಯಸ್ಥ ಜಿತೇಂದ್ರ ಚೆಡ್ಡ ಮಾತನಾಡಿದರು.

‘ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿ ಕಂಡಕ್ಟರ್‌ ವಲಯದಲ್ಲಿ ಜಾಗತಿಕವಾಗಿ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಈ ಕ್ಷೇತ್ರದಲ್ಲಿ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ. ಈ ಕ್ಷೇತ್ರಗಳು ಮಾತ್ರವಲ್ಲ ಭಾರತ ಇನ್ಮುಂದೆ ಯಾವುದೇ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಕೇವಲ ವೈಯಕ್ತಿಕ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮಾಡುವುದಲ್ಲ. ಇಡೀ ವಿಶ್ವದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆ ಮತ್ತು ಸರಬರಾಜು ಸರಪಳಿಯನ್ನು ವಿಸ್ತರಿಸಬೇಕಿದೆ. ಇದಕ್ಕೆ ಬೇಕಾದ ಜ್ಞಾನ, ಶಿಕ್ಷಣ, ತರಬೇತಿ, ಕೌಶಲ್ಯ, ಮಾನವ ಸಂಪನ್ಮೂಲ, ಕಚ್ಚಾ ಸಂಪತ್ತು ಸೇರಿದಂತೆ ಎಲ್ಲವೂ ಈ ದೇಶದಲ್ಲಿ ಲಭ್ಯವಿದೆ’ ಎಂದರು.
 

click me!