Invest Karnataka; ರಾಜ್ಯದಲ್ಲಿ 10 ಲಕ್ಷ ಕೋಟಿಗೂ ಅಧಿಕ ಹೂಡಿಕೆಗೆ ಮುಂದಾದ ವಿಶ್ವ ಉದ್ಯಮಿಗಳು

By Gowthami KFirst Published Nov 4, 2022, 9:11 PM IST
Highlights

ವಿಶ್ವದಲ್ಲೇ ಮುಂಚೂಣಿಯಲ್ಲಿರುವ  ಉದ್ಯಮಿಗಳು ರಾಜ್ಯದಲ್ಲಿ 10 ಲಕ್ಷ ಕೋಟಿ ಗೂ ಅಧಿಕ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಈ ಸಲ ನಡೆದ ಸಮಾವೇಶದಲ್ಲಿ ರಾಜ್ಯ ಸರಕಾರ 5 ಲಕ್ಷ ಕೋಟಿ ರೂ ಹೂಡಿಕೆ ಬಂಡವಾಳ ಮತ್ತು  5 ಲಕ್ಷ ಉದ್ಯೋಗದ ಸೃಷ್ಠಿಯಾಗುವ ನಿರೀಕ್ಷೆ ಇಟ್ಟುಕೊಂಡಿತ್ತು.

ಬೆಂಗಳೂರು (ನ.4): ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭ ನಡೆದಿದ್ದು, ಜಾಗತಿಕ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದೆ. ಈ ಸಮಾವೇಶದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ  ಉದ್ಯಮಿಗಳು ರಾಜ್ಯದಲ್ಲಿ 10 ಲಕ್ಷ ಕೋಟಿ ಗೂ ಅಧಿಕ ಬಂಡವಾಳ ಹೂಡಲು ಮುಂದೆ ಬಂದಿರುವುದು ಸಂತಸದ ವಿಷಯ ಜೊತೆಗೆ ನಮ್ಮ ನಿರೀಕ್ಷೆ ಇನ್ನಷ್ಟು ಹೆಚ್ಚುವಂತೆ ಮಾಡಿದೆ ಎಂದು ಕೇಂದ್ರ ಸಚಿವ  ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ. ಈ ಸಲ ನಡೆದ ಸಮಾವೇಶದಲ್ಲಿ ನಮ್ಮ ಸರಕಾರ 5 ಲಕ್ಷ ಕೋಟಿ ರೂ ಹೂಡಿಕೆ ಬಂಡವಾಳ ಮತ್ತು  5 ಲಕ್ಷ ಉದ್ಯೋಗದ ಸೃಷ್ಠಿಯಾಗುವ ನಿರೀಕ್ಷೆ ಇಟ್ಟುಕೊಂಡಿತ್ತು.  ಈ ಬಾರಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಎಷ್ಟು ಒಪ್ಪಂದ ಆಗಿದೆ ಅಂತ ನಾಳೆ ವಿವರ ಬಹಿರಂಗವಾಗಲಿದೆ. ಸಿಎಂ‌ ನೇತೃತ್ವದಲ್ಲಿ ನಾಳೆ ಪತ್ರಿಕಾಗೋಷ್ಠಿ ನಡೆಸಿ ವಿವರ ಬಹಿರಂಗ ಮಾಡ್ತೇವೆ ಎಂದು ಕೇಂದ್ರ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಕರ್ನಾಟಕ ಜಗತ್ತಿನ ನಕ್ಷೆಯಲ್ಲಿ ಸದಾ ಕಾಲ ಇರುತ್ತೇವೆ. ಹಲವು ವಲಯದಲ್ಲಿ ರಾಜ್ಯ ಮುಂದಿದೆ. ಮುಂದಿನ 2-3 ವರ್ಷದ ಅವಧಿಯಲ್ಲಿ 10 ಸಾವಿರ ಕೋಟಿ ರೂ ಬಂಡವಾಳ ಧಾರವಾಡ ಕ್ಲಸ್ಟರ್ ಗೆ ಹರಿದು ಬರಲಿದೆ. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. 2025ರಲ್ಲಿ ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶ ಮುಖ್ಯಮಂತ್ರಿ ಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಇದೇ ವೇಳೆ ನಿರಾಣಿ ಮಾಹಿತಿ ನೀಡಿದ್ದಾರೆ. 

ಮುಂದಿನ‌ ಆರ್ಥಿಕ ಬೆಳವಣಿಗೆಗೆ ಈ ಸಮಾವೇಶ ಪೂರಕ: ಸಿಎಂ
ಬುದ್ದಿಮತ್ತೇ ಮತ್ತು ಪರಿಶ್ರಮ ಯಾರೊಬ್ಬರ ಸ್ವತ್ತಲ್ಲ. ಈ ಸಮಾವೇಶದಲ್ಲಿ ಬಂಡವಾಳ ಹೂಡಿಕೆಯಾಗಿದೆ ಮತ್ತು ಪ್ರೇರಣೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದು ಬರಲು ಅಧಿಕಾರಿ ವರ್ಗ ಬಹಳ ಕೆಲಸ ಮಾಡಿದೆ. ಅವರ ಶ್ರಮಕ್ಕೆ ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ. ಈ ಬಾರಿಯ ಹೂಡಿಕೆದಾರರ ಸಮಾವೇಶ ಬಹಳ ಅಗತ್ಯ ಆಗಿದೆ. ಪ್ರಪಂಚದಲ್ಲಿ ಆರ್ಥಿಕ ಹಿಂಜರಿತ ಇದೆ. ಆರ್ಥಿಕ ಸಮಸ್ಯೆ ಗಳು ಸಹ ಇದೆ. ಇಂತಹ ಪರಿಸ್ಥಿತಿ ಮಧ್ಯದಲ್ಲಿಯೂ ಹೂಡಿಕೆದಾರರ ಸಮಾವೇಶ ಮಾಡಲು ಧೈರ್ಯ ತೋರಿದೇವು. ನಮ್ಮ ಜನವೇ ನಮಗೆ ಬಲ. ಕೌಶಲ್ಯ ಯುತ ಜನರೇ ನಮಗೆ ಬಲ. ನಮ್ಮ‌ನೀತಿಗಳೇ ನಮಗೆ ಬಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಕರ್ನಾಟಕ ಇಂದು ಯೋಚನೆ ಮಾಡೋದನ್ನು ಭಾರತ ನಾಳೆ ಯೋಚನೆ ಮಾಡುತ್ತದೆ. ಬೆಂಗಳೂರಿಗೆ ಪ್ರತಿದಿನ 10 ಸಾವಿರ ಇಂಜಿನಿಯರ್ ಗಳು ಬರ್ತಾರೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಮ್ಮ‌ನೀತಿ, ಚಿಂತನೆಗಳ ಬದಲಾವಣೆಗಳನ್ನು ನಿರಂತರವಾಗಿ ಮಾಡ್ತಿದ್ದೇವೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಮ್ಮ ಕಾರ್ಯದಕ್ಷತೆ ಹೆಚ್ಚಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವು ಗಲ್ಫ್ ರಾಷ್ಟ್ರಗಳ ಜೊತೆಗೆ ಸ್ಪರ್ಧೆಗೆ ಮುಂದಾಗುತ್ತಿದ್ದೇವೆ. ಇದು ನಮ್ಮ ಗುರಿ ಎಂದು ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಈ ಬಾರಿಯ ಹೂಡಿಕೆದಾರರ ಸಮಾವೇಶ ನಮ್ಮ ಮುಂದಿನ‌ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ. ತೀವ್ರತರದ ಆರ್ಥಿಕ ಸುಧಾರಣೆಗೆ ದಾರಿಯಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಸಿದ್ದು ಸರ್ಕಾರದ ಅವಧಿಯಲ್ಲಿ ಪಾವಗಡ ಸೋಲಾರ್ ಪಾರ್ಕ್ ಕಾರ್ಯನಿರ್ವಹಣೆಗೆ ಸಚಿವ ಸುನೀಲ್ ಮೆಚ್ಚುಗೆ: ಹಸಿರು ಇಂಧನ ಉತ್ಪಾದನೆಗೆ ರಾಜ್ಯ ಪ್ರಸಕ್ತವಾಗಿದೆ. ಹಲವು ವರ್ಷಗಳಿಂದ ಈ ಪ್ರಯತ್ನ ಮುಂದುವರೆದಿದೆ. ಸೋಲಾರ ಮತ್ತು ವಿಂಡ್ ಹೈಬ್ರೀಡ್ ಪಾರ್ಕ್ ಮಾಡಲು ಸರ್ಕಾರ ಘೋಷಣೆ ಮಾಡಿದೆ. ಇಂಧನ ಹೂಡಿಕೆಗೆ ಸೂಕ್ತ ತಯಾರಿ ಸರ್ಕಾರ ಮಾಡ್ತಾ ಇದೆ. ಭವಿಷ್ಯದ ದೃಷ್ಟಿಯಿಂದ ಯೋಚಿಸಿ ಇಂಧನ ಕ್ಷೇತ್ರದಲ್ಲಿ ಸರ್ಕಾರ ಮೂಲಭೂತ ಸೌಕರ್ಯಗಳ ಸೃಷ್ಟಿ ಮಾಡ್ತಿದೆ. ಈ ಬಾರಿ ಹೂಡಿಕೆದಾರರ ಸಮಾವೇಶದಲ್ಲಿ 2ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆಯಾಗಿದೆ.

Invest Karnataka 2022: ಏಷ್ಯಾದಲ್ಲೇ ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ: ವಿಜಯ್‌ ನಿರಾಣಿ

ಈ ಹೂಡಿಕೆಗೆ ಪೂರಕವಾಗಿ ಅಗತ್ಯ ಸೌಕರ್ಯಗಳ ಪೂರೈಕೆ ಮಾಡಲು ಕ್ರಮ. ಪಾವಗಡದ ಸೋಲಾರ್ ಪಾರ್ಕ್ ಸ್ಥಾಪನೆ ಮತ್ತು ನಿರ್ವಹಣೆ ಚೆನ್ನಾಗಿ ಆಗಿದೆ. ನಮ್ಮ ಸರ್ಕಾರದ ನೂತನ ಸೋಲಾರ್ ಪಾರ್ಕ್ ಇಂಧನ ಕ್ಷೇತ್ರಕ್ಕೆ ಪೂರಕವಾಗಿದೆ ಎಂದ ಸಚಿವ ಸುನೀಲ್ ಕುಮಾರ್,  ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆದ ಪಾವಗಡ ಸೋಲಾರ್ ಪಾರ್ಕ್ ಕಾರ್ಯನಿರ್ವಹಣೆ ಬಗ್ಗೆ ಸಮಾವೇಶದಲ್ಲಿ ‌ಮೆಚ್ಚುಗೆ ವ್ಯಕ್ತಪಡಿಸಿದರು. ಪಾವಗಡ ಸೋಲಾರ್ ಪಾರ್ಕ್ ನಿರ್ಮಿಸುವ ಮೂಲಕ ಸೋಲಾರ್ ಶಕ್ತಿಯಲ್ಲಿ ಕರ್ನಾಟಕ ಜಗತ್ತಿನ ನಂಬರ್ 1 ರಾಜ್ಯ ಆಗಿದೆ ಎಂದು ಇದೇ ವೇಳೆ  ಸುನೀಲ್ ಕುಮಾರ್ ಹೇಳಿದರು.

click me!