Global Investors Meet 2022: ಕುಲಕರ್ಣಿ, ಗೌಡ, ಪಾಟೀಲರು ಉದ್ಯಮಿ ಆಗ್ಬೇಕು: ಸಿಎಂ ಬೊಮ್ಮಾಯಿ

By Govindaraj SFirst Published Nov 5, 2022, 3:20 AM IST
Highlights

ಉದ್ಯಮಗಳಲ್ಲಿ ಕೇವಲ ಓಸ್ವಾಲ್‌ (ಮಾರ್ವಾಡಿ ಜೈನ್‌) ಹಾಗೂ ಅಗರವಾಲ್‌ಗಳು (ವೈಶ್ಯ-ಬನಿಯ) ಮಾತ್ರವಲ್ಲ. ಕನ್ನಡಿಗರಾದ ಪಾಟೀಲರು, ಕುಲಕರ್ಣಿಗಳು, ಗೌಡರು ಸೇರಿದಂತೆ ಎಲ್ಲ ವರ್ಗದವರು ಉದ್ಯಮಿಗಳಾಗಬೇಕು. ಬುದ್ಧಿವಂತಿಕೆ ಹಾಗೂ ಪರಿಶ್ರಮ ಯಾವುದೇ ಸೀಮಿತ ವರ್ಗದ ಸ್ವತ್ತಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬೆಂಗಳೂರು (ನ.05): ಉದ್ಯಮಗಳಲ್ಲಿ ಕೇವಲ ಓಸ್ವಾಲ್‌ (ಮಾರ್ವಾಡಿ ಜೈನ್‌) ಹಾಗೂ ಅಗರವಾಲ್‌ಗಳು (ವೈಶ್ಯ-ಬನಿಯ) ಮಾತ್ರವಲ್ಲ. ಕನ್ನಡಿಗರಾದ ಪಾಟೀಲರು, ಕುಲಕರ್ಣಿಗಳು, ಗೌಡರು ಸೇರಿದಂತೆ ಎಲ್ಲ ವರ್ಗದವರು ಉದ್ಯಮಿಗಳಾಗಬೇಕು. ಬುದ್ಧಿವಂತಿಕೆ ಹಾಗೂ ಪರಿಶ್ರಮ ಯಾವುದೇ ಸೀಮಿತ ವರ್ಗದ ಸ್ವತ್ತಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶುಕ್ರವಾರ ಅರಮನೆ ಆವರಣದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದವರು ಹೂಡಿಕೆ ಮಾಡಿ ಜಗತ್ತಿಗೆ ಉದ್ಯಮಿಯಾದರೆ ಬಹಳ ಸಂತೋಷ, ಆ ಸಾಮರ್ಥ್ಯ ಕನ್ನಡಿಗರಿಗೆ ಬರಬೇಕು. 

ಕೇವಲ ಒಸ್ವಾಲ್‌, ಅಗರ್‌ವಾಲ್‌ಗಳು ಮಾತ್ರವಲ್ಲ ಪಾಟೀಲರು, ಕುಲಕರ್ಣಿ, ಗೌಡರು ಉದ್ಯಮದಲ್ಲಿ ಬಂಡವಾಳ ಹೂಡಬೇಕು ಎಂದು ಕರೆ ನೀಡಿದರು. ‘ಇತ್ತೀಚೆಗೆ ಕೆಲ ದಲಿತ ಉದ್ಯಮಿಗಳನ್ನು ಭೇಟಿ ಮಾಡಿದ್ದೆ. ಅವರಲ್ಲಿನ ಉತ್ಸಾಹ ನೋಡಿ ಖುಷಿಯಾಯಿತು. ಉದ್ಯಮಗಳು, ಹೂಡಿಕೆ ಮಾಡುವ ಶಕ್ತಿ ಒಂದು ವರ್ಗಕ್ಕೆ ಸೀಮಿತವಾಗಬಾರದು. ಬುದ್ಧಿವಂತಿಕೆ ಮತ್ತು ಪರಿಶ್ರಮ ಯಾವುದೇ ವಕ್ತಿ, ವರ್ಗದ ಸ್ವತ್ತಲ್ಲ. ಹೀಗಾಗಿ ಎಲ್ಲಾ ವರ್ಗದವರೂ ಹೂಡಿಕೆ ಮಾಡುವ ಶಕ್ತಿ ಪಡೆಯಬೇಕು’ ಎಂದು ಹೇಳಿದರು.

ಚಂದ್ರು ಸಾವಿನ ಬಗ್ಗೆ ಅನುಮಾನ, ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ: ಸಿಎಂ ಬೊಮ್ಮಾಯಿ

ಪ್ರಾಮಾಣಿಕ ಹಾಗೂ ಪಾರದರ್ಶಕತೆ ನೀತಿ: ‘ಪ್ರಸ್ತುತ ಹೂಡಿಕೆದಾರರ ಸಮಾವೇಶದಲ್ಲಿ 9.8 ಲಕ್ಷ ಕೋಟಿ ರು. ಒಡಂಬಡಿಕೆಗೆ ಸಹಿ ಆಗಿದೆ. ಇವುಗಳಲ್ಲಿ ಎಷ್ಟುಅನುಮೋದನೆಗೊಂಡವು ಎಷ್ಟುತಿರಸ್ಕರಿಸಲ್ಪಟ್ಟವು ಎಂಬ ಅಂಕಿ-ಅಂಶ ಮೂರು ತಿಂಗಳಲ್ಲಿ ಜನರ ಮುಂದಿಡಬೇಕು. ಹೂಡಿಕೆದಾರರ ಸಮಾವೇಶದಲ್ಲಿ ಹೂಡಿಕೆ ಘೋಷಿಸಿ ತನ್ಮೂಲಕ ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡಿಕೊಳ್ಳುವವರು ಇದ್ದಾರೆ. ಅಂತಹವರಿಗೆ ಅವಕಾಶ ಮಾಡಿಕೊಡುವುದಕ್ಕೆ ನಾವು (ಕರ್ನಾಟಕ ಸರ್ಕಾರ) ಇಲ್ಲಿ ಇಲ್ಲ. ನಮ್ಮದು ಪಾರದರ್ಶಕ ನೀತಿ’ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ರಾಜ್ಯದಲ್ಲಿ ನಾಲ್ಕು ಜಾಗತಿಕ ಹೂಡಿಕೆದಾರರ ಸಮಾವೇಶಗಳು ನಡೆದಿವೆ. 2000 ರಲ್ಲಿ 27 ಸಾವಿರ ಕೋಟಿ ರು. ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಬಿದ್ದಿದ್ದರೂ 12,000 ಕೋಟಿ ರು. (ಶೇ.44) ರಷ್ಟುಮಾತ್ರ ಅನುಷ್ಠಾನಗೊಂಡಿದ್ದವು. ‘ಇನ್ನು 2010ರಲ್ಲಿ 3,94,768 ಕೋಟಿ ರು. ಎಂಒಯು ಘೋಷಣೆಯಾದರೂ ಶೇ.14 ರಷ್ಟುಮಾತ್ರ ಅನುಷ್ಠಾನಗೊಂಡಿತ್ತು. 2012ರಲ್ಲಿ 6,66,158 ಕೋಟಿ ರು. ಘೋಷಣೆಯಾದರೂ ಕೇವಲ ಶೇ.8 ರಷ್ಟುಮಾತ್ರ ಅನುಮೋದನೆಯಾಗಿ ಕಾರ್ಯರೂಪಕ್ಕೆ ಬಂದಿತ್ತು. 2016ರಲ್ಲಿ 3.05 ಲಕ್ಷ ಕೋಟಿ ರು. ಮೊತ್ತದ ಒಡಂಬಡಿಕೆಗಳು ಘೋಷಣೆಯಾಗಿ ಶೇ.15 ರಷ್ಟುಮಾತ್ರ ಅನುಷ್ಠಾನಗೊಂಡಿದ್ದವು. ಈ ವೈಫಲ್ಯದ ಅಂಕಿ-ಅಂಶಗಳನ್ನು ಯಾವ ರಾಜ್ಯ ಸರ್ಕಾರವೂ ಬಿಟ್ಟು ಕೊಡುವುದಿಲ್ಲ. ಆದರೆ, ಪ್ರಾಮಾಣಿಕತೆ ಮುಖ್ಯ. ಜನರಿಗೆ ಹಾಗೂ ಉದ್ಯಮಿಗಳಿಗೆ ಪ್ರಾಮಾಣಿಕತೆಯಿಂದ ಸೆಳೆಯಲು ನಾನು ಇವನ್ನು ಬಿಚ್ಚಿಡುತ್ತಿದ್ದೇನೆ’ ಎಂದು ಹೇಳಿದರು.

ಇಂದು ಕರ್ನಾಟಕದ ಯೋಚನೆ, ಭಾರತ ನಾಳೆ ಯೋಚನೆ: ‘ಈ ಬಾರಿಯ ಹೂಡಿಕೆದಾರರ ಸಮಾವೇಶ ನಡೆಸುವ ಅಗತ್ಯ ಹೆಚ್ಚಿತ್ತು. ಹಲವು ದೇಶಗಳು ಆರ್ಥಿಕ ಹಿಂಜರಿತ ಎದುರಿಸುತ್ತಿರುವ ಸಂದರ್ಭದಲ್ಲಿ ಹೂಡಿಕೆದಾರರ ಸಮಾವೇಶ ಮಾಡಲು ಧೈರ್ಯ ತೋರಿದ್ದೇವೆ. ನಮ್ಮ ಜನರು, ನಮ್ಮ ನೀತಿಗಳೇ ನಮಗೆ ಬಲ. ಈ ಸಮಾವೇಶ ನಮಗೆ ಹಾಗೂ ದೇಶದ ಸದೃಢ ಆರ್ಥಿಕತೆಗೆ ಮುಂದಿನ ದಾರಿಯನ್ನು ತೋರಲಿದೆ. ಕರ್ನಾಟಕ ಇಂದು ಏನು ಯೋಚಿಸುತ್ತದೆಯೋ, ನಾಳೆ ಭಾರತ ಅದನ್ನು ಯೋಚನೆ ಮಾಡುತ್ತದೆ’ ಎಂದು ಬಸವರಾಜ ಬೊಮ್ಮಾಯಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಫೈನಾನ್ಷಿಯಲ್‌ ಹಬ್‌ ಆಗಲಿದೆ: ಈವರೆಗೆ ರಾಜ್ಯವನ್ನು ಕೇವಲ ಐಟಿ ಹಬ್‌ ಎನ್ನುತ್ತಿದ್ದರು. ಒಂದೊಂದೇ ಹಣಕಾಸು ಸಂಸ್ಥೆಗಳು ತಮ್ಮ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುತ್ತಿವೆ. ಈ ಮೂಲಕ ರಾಜ್ಯದ ಮೂಲಸೌಕರ್ಯಗಳನ್ನು ಬಳಸಿಕೊಂಡು ಬೆಳೆಯಲು ಯತ್ನಿಸುತ್ತಿವೆ. ಹೀಗಾಗಿ ಅತಿ ಶೀಘ್ರದಲ್ಲೇ ಕರ್ನಾಟಕ ಫೈನಾನ್ಷಿಯಲ್‌ ಹಬ್‌ ಆಗಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಬಳ್ಳಾರಿಗೆ ವಿಮಾನ ನಿಲ್ದಾಣ, ಎರಡು ಹೊಸ ಕ್ರಿಕೆಟ್‌ ಕ್ರೀಡಾಂಗಣ: ಕ್ಯಾಬಿನೆಟ್‌ ಸಭೆಯ ಮುಖ್ಯಾಂಶ

ಮೂಲ ಸೌಕರ್ಯ ವ್ಯವಸ್ಥೆಯಿದೆ: ‘ಸುಮಾರು 10 ಲಕ್ಷ ಕೋಟಿ ರು. ಹೂಡಿಕೆಯಾಗುತ್ತಿದೆ. ಇಷ್ಟುಉದ್ಯಮಗಳಿಗೆ ಮೂಲ ಸೌಕರ್ಯಗಳನ್ನು ಹೇಗೆ ಸೃಜಿಸುತ್ತೀರಿ ಎಂಬ ಪ್ರಶ್ನೆ ಬರಬಹುದು. ನಮ್ಮ ರಾಜ್ಯ ಸರ್ಕಾರದ ಸಾಮರ್ಥ್ಯವನ್ನು ನೋಡಿಯೇ ಇಷ್ಟುಮೊತ್ತದ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ. ಅವರು ಪೂರ್ವಾಪರ ವಿಶ್ಲೇಷಿಸದೆ ಬರುವುದಿಲ್ಲ. ನಮ್ಮ ರಾಜ್ಯದ ಬಳಿ ಈಗಾಗಲೇ 50 ಸಾವಿರ ಎಕರೆ ಭೂ ಬ್ಯಾಂಕ್‌ ಇದೆ. ಬೆಂಗಳೂರು ಹಾಗೂ ಅದರ ಆಚೆಗೂ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದೇವೆ. ಶಿವಮೊಗ್ಗ, ಬಿಜಾಪುರದಲ್ಲಿ ಎರಡು ವಿಮಾನ ನಿಲ್ದಾಣ ಶುರುವಾಗುತ್ತಿವೆ. ಮೂಲ ಸೌಕರ್ಯಗಳು ರಾಜ್ಯದ ಶಕ್ತಿ’ ಎಂದರು.

click me!