ಒಬ್ಬೊಬ್ರೆ ಮೋದಿಗೆ ಕೈ ಕೊಡ್ತಿದ್ದಾರೆ: ನೋಟ್ ಬ್ಯಾನ್ ತಪ್ಪು ಅಂತಿದ್ದಾರೆ!

By Web DeskFirst Published Nov 29, 2018, 4:02 PM IST
Highlights

ಮೋದಿಗೆ ಕೈಕೊಟ್ಟ ಮತ್ತೋರ್ವ ಅಧೀನ ಅಧಿಕಾರಿ! ಅಪನಗದೀಕರಣ ವಿರೋಧಿಸಿದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ! ನೋಟ್ ಬ್ಯಾನ್ ವಿರುದ್ಧ ಧ್ವನಿ ಎತ್ತಿದ ಮಾಜಿ CEA ಅರವಿಂದ್ ಸುಬ್ರಮಣಿಯನ್! ನೋಟ್ ಬ್ಯಾನ್‌ನಿಂದ ದೇಶದ ಜಿಡಿಪಿ ಮೇಲೆ ಭಾರೀ ಹೊಡೆತ! ನೋಟ್ ಬ್ಯಾನ್ ಅವಾಂತರಗಳ ಕುರಿತು ತಮ್ಮ ಪುಸ್ತಕದಲ್ಲಿ ಉಲ್ಲೇಖ

ನವದೆಹಲಿ(ನ.29): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅದರ ಅಡಿಯಲ್ಲೇ ಕೆಲಸ ಮಾಡಿದ ಅಧಿಕಾರಿಗಳು ಕೈ ಕೊಡುತ್ತಿದ್ದಾರೆ ಎಂಬ ಅನುಮಾನ ಕಾಡತೊಡಗಿದೆ.

ಸರ್ಕಾರದ ಭಾಗವಾಗಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಮಹತ್ತರ ನಿರ್ಧಾರವಾದ ಅಪನಗದೀಕರಣವನ್ನು ಬೆಂಬಲಿಸಿ ಹೇಳಿಕೆ ನೀಡುತ್ತಿದ್ದ ಈ ಅಧಿಕಾರಿಗಳು, ಇದೀಗ ನೋಟ್ ಬ್ಯಾನ್ ಒಂದು ತಪ್ಪು ನಿರ್ಧಾರ ಎಂದು ಹೇಳಿಕೆ ನೀಡುತ್ತಿದ್ದಾರೆ.

ಇತ್ತೀಚಿಗಷ್ಟೇ ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ಆರ್ ಬಿಐ ಗರ್ವನರ್ ಊರ್ಜಿತ್ ಪಟೇಲ್, ಕೆಲವು ಸಕಾರಾತ್ಮಕ ಬೆಳವಣಿಗೆಗಳ ಹೊರತಾಗಿಯೂ ನೋಟ್ ಬ್ಯಾನ್ ನಿಂದ ದೇಶದ ಆರ್ಥಿಕ ಪರಿಸ್ಥಿತಿ ಅಂತಂತ್ರವಾಗಿತ್ತು ಎಂದು ಹೇಳಿದ್ದರು.

ಇದೀಗ ಅಪನಗದೀಕರಣವನ್ನು ವಿರೋಧಿಸುವ ಸರದಿ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರದ್ದು. ಹೌದು, ಮೋದಿ ಸರ್ಕಾರದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಸುಬ್ರಮಣಿಯನ್, ಅಪನಗದೀಕರಣ ದೇಶದ ಆರ್ಥಿಕತೆ ಮೇಲೆ ಮಾಡಿದ ಕಠಿಣ ಆಘಾತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಕಾಲ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್, ಅಪನಗದೀಕರಣದ ವೇಳೆಯೂ ಇದೇ ಹುದ್ದೆಯಲ್ಲಿದ್ದರು. ನಂತರ 2018 ರಲ್ಲಿ ವೈಯಕ್ತಿಕ ಕಾರಣ ನೀಡಿ ಸುಬ್ರಮಣಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

My book reflecting on my time as Chief Economic Adviser (CEA) will be out next week (https://t.co/XN7f4I5IUa) Contents incl: GST, demonetization, RBI & Govt., banking challenges, stigmatized capitalism. This thread might pique your interest (& open your wallet?) 1/

— Arvind Subramanian (@arvindsubraman)

ಅಪನಗದೀಕರಣದ ಕುರಿತು "Of Counsel: The Challenges of the Modi-Jaitley Economy" ಎಂಬ ಪುಸ್ತಕ ಬರೆದಿರುವ ಸುಬ್ರಮಣಿಯನ್, ಶೇ.8ರಷ್ಟಿದ್ದ ದೇಶದ ಜಿಡಿಪಿ ಅಪನಗದೀಕರಣದ ಬಳಿಕ ಶೇ.6.8ಕ್ಕೆ ಕುಸಿದಿದ್ದು ದುರಂತವೇ ಸರಿ ಎಂದು ಉಲ್ಲೇಖಿಸಿದ್ದಾರೆ.

ಆದರೆ ಅಪನಗದೀಕರಣದ ವೇಳೆ ಮೋದಿ ಸರ್ಕಾರ ತಮ್ಮ ಅಭಿಪ್ರಾಯವನ್ನು ಕೇಳಿತ್ತಾ ಅಥವಾ ಇಲ್ಲವೋ ಎಂಬುದರ ಕುರಿತು ಸುಬ್ರಮಣಿಯನ್ ತಮ್ಮ ಪುಸ್ತಕದಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. ವಿರೋಧ ಪಕ್ಷಗಳು ಆರೋಪಿಸುವಂತೆ ಸರ್ಕಾರ ಅಪನಗದೀಕರಣದ ವೇಳೆ CEA ಅವರನ್ನು ಸಂಪರ್ಕಿಸಿಯೇ ಇರಲಿಲ್ಲ ಎಂದು ಹೇಳಲಾಗಿದೆ.

click me!