ಏರ್‌ ಇಂಡಿಯಾ ವಿಮಾನದಲ್ಲಿ ಅಮಲೇರಿದ ವ್ಯಕ್ತಿಯ ಮತ್ತೊಂದು ಕಿಕ್‌ ಗದ್ದಲ: ಪುಟ್ಟ ಬಾಲಕಿ ಜತೆ ಅಸಭ್ಯ ವರ್ತನೆ

By Kannadaprabha NewsFirst Published Jan 9, 2023, 9:54 AM IST
Highlights

ಏರ್‌ ಇಂಡಿಯಾದಲ್ಲಿ ಮತ್ತೊಬ್ಬ ಕುಡುಕನ ಅವಾಂತರ ಬೆಳಕಿಗೆ ಬಂದಿದೆ. ಮದ್ಯದ ಅಮಲಿನಲ್ಲಿ ಬಾಲಕಿ ಜತೆ ಅಸಭ್ಯ ವರ್ತನೆ ತೋರಿದ್ದು, ಮುಂಬೈ- ಲಂಡನ್‌ ವಿಮಾನದಲ್ಲಿ ಸೆಪ್ಟೆಂಬರಲ್ಲಿ ಈ ಘಟನೆ ನಡೆದಿತ್ತು ಎಂದು ತಿಳಿದುಬಂದಿದೆ.

ನವದೆಹಲಿ: ಏರ್‌ ಇಂಡಿಯಾ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕರು ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಭಾರೀ ಗದ್ದಲಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ, ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ 8 ವರ್ಷದ ಬಾಲಕಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಮುಂಬೈ- ಲಂಡನ್‌ ವಿಮಾನದಲ್ಲಿ ಏರ್‌ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. ಆದರೆ ಒಂದು ಸಮಾಧಾನದ ವಿಷಯವೆಂದರೆ ಈ ಘಟನೆಯಲ್ಲಿ ಆರೋಪಿ ವ್ಯಕ್ತಿಯನ್ನು ವಿಮಾನ ಲಂಡನ್‌ನಲ್ಲಿ ಇಳಿದ ಕೂಡಲೇ ಅಲ್ಲಿನ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು ಎನ್ನಲಾಗಿದೆ.

ಆದರೆ ಈ ವಿಷಯವನ್ನು ಏರ್‌ ಇಂಡಿಯಾ (Air India) ನಾಗರಿಕ ವಿಮಾನಯಾನ ನಿರ್ದೇಶನಾಲಯದ (Ministry of Civil Aviation) ಗಮನಕ್ಕೆ ತಂದಿರದ ಕಾರಣ, ಈ ಪ್ರಕರಣ ಏರ್‌ ಇಂಡಿಯಾ ಪಾಲಿಗೆ ಮತ್ತೊಂದು ಮುಜುಗರ ತಂದಿದೆ. 

ಇದನ್ನು ಓದಿ: ನಾವು ಸ್ಪಷ್ಟವಾಗಿ ಕೆಲವು ಪಾಠ ಕಲಿಯಬೇಕು: ಸಿಬ್ಬಂದಿಗೆ ಏರ್‌ ಇಂಡಿಯಾ ಸಿಇಒ ಕ್ಲಾಸ್‌..!

ಪ್ರಕರಣ ಹಿನ್ನೆಲೆ:
2022ರ ಸೆಪ್ಟೆಂಬರ್‌ 5ರಂದು ಮುಂಬೈನಿಂದ (Mumbai) - ಲಂಡನ್‌ಗೆ (London) ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾದ ಪ್ರಯಾಣಿಕನೊಬ್ಬ ಮದ್ಯದ (Drunk) ಅಮಲಿನಲ್ಲಿ, ವಿಮಾನದಲ್ಲಿದ್ದ 8 ವರ್ಷದ ಬಾಲಕಿಯ (Girl) ಮೈ ಮುಟ್ಟಲು ಯತ್ನಿಸಿದ್ದ. ಈ ವಿಷಯವನ್ನು ಬಾಲಕಿಯ ಕುಟುಂಬ ವಿಮಾನದ ಸಿಬ್ಬಂದಿ ಗಮನಕ್ಕೆ ತಂದಿದ್ದರು. ಈ ವೇಳೆ ಸಿಬ್ಬಂದಿ ಮತ್ತು ಪೈಲಟ್‌ (Pilot) ಎಚ್ಚರಿಕೆ ನೀಡಿದ ಹೊರತಾಗಿಯೂ ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ತನ್ನ ದುರ್ವರ್ತನೆ ಮುಂದುವರೆಸಿದ್ದ ಎನ್ನಲಾಗಿದೆ.

ಹೀಗಾಗಿ ಬಾಲಕಿ, ಆಕೆಯ ತಾಯಿ ಮತ್ತು ಸೋದರನಿಗೆ ಮತ್ತೊಂದು ಸೀಟನ್ನು (Seat) ನೀಡಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಯಿತು. ಬಳಿಕವೂ ಆತ ತನ್ನ ಕೆಟ್ಟ ವರ್ತನೆ ನಿಲ್ಲಿಸಿದ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ವಿಮಾನ ಲಂಡನ್‌ನಲ್ಲಿ ಇಳಿದ ಕೂಡಲೇ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Air India ವಿಮಾನದಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್‌: ಜೈಲುಪಾಲಾದ ಶಂಕರ್‌ ಮಿಶ್ರಾ

ಏರ್‌ ಇಂಡಿಯಾದ ವಿಳಂಬ ಕ್ರಮಕ್ಕೆ ಟಾಟಾ ಸನ್ಸ್‌ ಮುಖ್ಯಸ್ಥ ಅತೃಪ್ತಿ
ಮಹಿಳೆಯೊಬ್ಬರ ಮೇಲೆ ತನ್ನ ವಿಮಾನದಲ್ಲಿ ಕುಡುಕನೊಬ್ಬ ಮೂತ್ರ ಮಾಡಿದ ಪ್ರಕರಣವನ್ನು ಏರ್‌ ಇಂಡಿಯಾ ನಿಭಾಯಿಸಿದ ಬಗ್ಗೆ ಏರ್‌ ಇಂಡಿಯಾದ ಮಾತೃ ಸಂಸ್ಥೆಯಾದ ಟಾಟಾ ಸನ್ಸ್‌ (Tata Sons) ಮುಖ್ಯಸ್ಥ ಎನ್‌. ಚಂದ್ರಶೇಖರನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಘಟನೆಯ ಬಗ್ಗೆ ಏರ್‌ ಇಂಡಿಯಾ ಕೂಡಲೇ ಕ್ರಮ ಜರುಗಿಸಬೇಕಿತ್ತು’ ಎಂದಿದ್ದಾರೆ.
ಭಾನುವಾರ ಈ ಬಗ್ಗೆ ಹೇಳಿಕೆ ನೀಡಿರುವ ಚಂದ್ರಶೇಖರನ್‌, ‘ಏರ್‌ ಇಂಡಿಯಾದ ಪ್ರತಿಕ್ರಿಯೆಯು ಹೆಚ್ಚು ತ್ವರಿತವಾಗಿರಬೇಕಿತ್ತು. ಆ ಸಮಯದಲ್ಲಿ ನಾವು ಎಷ್ಟು ತ್ವರಿತವಾಗಿ ಪ್ರತಿಕ್ರಿಯಿಸಬೇಕೋ ಅಷ್ಟು ತ್ವರಿತಗತಿಯಲ್ಲಿ ಪ್ರತಿಕ್ರಿಯಿಸಲು ವಿಫಲರಾಗಿದ್ದೇವೆ’ ಎಂದು ಒಪ್ಪಿಕೊಂಡಿದ್ದಾರೆ.

‘ಟಾಟಾ ಗ್ರೂಪ್‌ ಮತ್ತು ಏರ್‌ ಇಂಡಿಯಾ ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸಂಪೂರ್ಣ ಬದ್ಧವಾಗಿವೆ. ಇನ್ನು ಇಂತಹ ಘಟನೆಗಳು ನಡೆಯದಂತೆ ತಡೆಯಲು ಪ್ರತಿಯೊಂದು ಘಟನೆಯನ್ನೂ ಪರಿಶೀಲಿಸುತ್ತೇವೆ ಹಾಗೂ ಲೋಪ ಸರಿಪಡಿಸುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ: Air India: ಮಹಿಳಾ ಪ್ರಯಾಣಿಕರ ಬ್ಲಾಂಕೆಟ್‌ ಮೇಲೆ ಮೂತ್ರ ವಿಸರ್ಜನೆ: ಮತ್ತೊಂದು ಘಟನೆ ಬೆಳಕಿಗೆ..!

click me!