ವ್ಯಾಪಾರಿಗಳ ವಂಚನೆಗೆ ಬ್ರೇಕ್ ಹಾಕಲು ಗ್ರಾಹಕರಿಗೆ ಸರ್ಕಾರದ ಡಿಸ್ಕೌಂಟ್ ಆಫರ್!

By Web DeskFirst Published Apr 16, 2019, 10:30 AM IST
Highlights

ವ್ಯಾಪಾರಿಗಳಿಂದ ಜಿಎಸ್‌ಟಿ ವಂಚನೆ ತಪ್ಪಿಸಲು ಸರ್ಕಾರದ ಯೋಚನೆ| ಬಿಲ್‌ ಕೇಳಿ ಪಡೆಯುವ ಗ್ರಾಹಕರಿಗೆ ಸಿಗುತ್ತೆ ರಿಯಾಯ್ತಿ

ನವದೆಹಲಿ[ಏ.16]: ತೆರಿಗೆ ವಂಚಿಸಲು ಗ್ರಾಹಕರಿಗೆ ಬಿಲ್‌ ನೀಡದೆ ‘ರಾಮನ ಲೆಕ್ಕ ಕೃಷ್ಣನ ಲೆಕ್ಕ’ ನಿರ್ವಹಿಸುವ ವ್ಯಾಪಾರಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಹೊಸತೊಂದು ಉಪಾಯ ಹುಡುಕಿದೆ. ಅದು - ಬಿಲ್‌ ಕೇಳಿ ಪಡೆಯುವ ಗ್ರಾಹಕರಿಗೆ ಡಿಸ್ಕೌಂಟ್‌ ನೀಡುವುದು.

ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯನ್ನು ಹಿಗ್ಗಿಸಲು ಹಾಗೂ ಎಲ್ಲರೂ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವಂತೆ ಮಾಡಲು ‘ಬಿಲ್‌ ಕೇಳುವ ಗ್ರಾಹಕರಿಗೆ ಡಿಸ್ಕೌಂಟ್‌ ನೀಡುವ’ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆಯೆಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಪಾರಿಗಳು ಬಿಲ್‌ ನೀಡಿದರೆ ತೆರಿಗೆ ವಂಚಿಸಲು ಸಾಧ್ಯವಿಲ್ಲ. ಅದರಿಂದಾಗಿ ಸರ್ಕಾರಕ್ಕೆ ಜಿಎಸ್‌ಟಿ ಸಂಗ್ರಹ ಹೆಚ್ಚುತ್ತದೆ. ಆದರೆ, ಬಹಳಷ್ಟುವ್ಯಾಪಾರಿಗಳು ಗ್ರಾಹಕರಿಗೆ ಬಿಲ್‌ ನೀಡುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಅದನ್ನು ಸರಿಪಡಿಸಲು ಗ್ರಾಹಕರನ್ನೇ ಬಿಲ್‌ ಕೇಳಲು ಉತ್ತೇಜಿಸಬೇಕು. ಹೀಗೆ ಬಿಲ್‌ ಕೇಳುವ ಗ್ರಾಹಕರಿಗೆ ಸ್ಥಳದಲ್ಲೇ ಒಂದಷ್ಟುಡಿಸ್ಕೌಂಟ್‌ ನೀಡಬೇಕು ಅಥವಾ ಕಾರ್ಡ್‌ನಲ್ಲಿ ಪಾವತಿಸುವ ಗ್ರಾಹಕರಿಗೆ ಅವರ ಖಾತೆಗೆ ಡಿಸ್ಕೌಂಟ್‌ ಹಣ ಮರುಪಾವತಿಯಾಗುವಂತೆ ಮಾಡಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸದ್ಯ ಚುನಾವಣೆ ನೀತಿಸಂಹಿತೆ ಇರುವುದರಿಂದ ಇದನ್ನು ಅಧಿಕೃತವಾಗಿ ಪ್ರಕಟಿಸದೆ, ಮೇ 23ರ ನಂತರ ಹೊಸ ಸರ್ಕಾರ ಬಂದಾಗ ಜಾರಿಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಆದರೆ, ಎಷ್ಟುಡಿಸ್ಕೌಂಟ್‌ ನೀಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಬಿಲ್‌ನ ಮೊತ್ತದ ನಿರ್ದಿಷ್ಟಶೇಕಡಾವಾರು ಹಣವನ್ನು ಡಿಸ್ಕೌಂಟ್‌ ರೂಪದಲ್ಲಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

‘ತೆರಿಗೆ ವಂಚನೆ ಪ್ರಮಾಣ ಈಗಲೂ ಸಾಕಷ್ಟಿದೆ. ಅದರಲ್ಲೂ ವ್ಯಾಪಾರಿ-ಗ್ರಾಹಕನ ನಡುವಿನ ವ್ಯವಹಾರದಲ್ಲಿ ಅತಿ ಹೆಚ್ಚು ತೆರಿಗೆ ವಂಚನೆಯಾಗುತ್ತಿದೆ. ಅದನ್ನು ತಪ್ಪಿಸಲು ಡಿಸ್ಕೌಂಟ್‌ನಂತಹ ಕ್ರಮಗಳು ಸಹಾಯ ಮಾಡುತ್ತವೆ. ಇನ್ನುಮುಂದೆ ಜಿಎಸ್‌ಟಿ ದರವನ್ನು ಏರಿಸುವ ಅವಕಾಶಗಳು ಕಡಿಮೆಯಿರುವುದರಿಂದ ಗ್ರಾಹಕರಲ್ಲಿ ಜಾಗೃತಿ ಮೂಡಿಸಿ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಬಗ್ಗೆಯೇ ಸರ್ಕಾರ ಗಮನ ಹರಿಸಬೇಕಾಗುತ್ತದೆ’ ಎಂದು ತೆರಿಗೆ ತಜ್ಞರೊಬ್ಬರು ಹೇಳಿದ್ದಾರೆ.

ಜಿಎಸ್‌ಟಿ ಜಾರಿಯ ನಂತರ ಕೇಂದ್ರ ಸರ್ಕಾರಕ್ಕೆ ಹರಿದುಬರುವ ಪರೋಕ್ಷ ತೆರಿಗೆ ಪ್ರಮಾಣ ಹೆಚ್ಚಾಗಿದ್ದು, 2019ರ ಮಾಚ್‌ರ್‍ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ದಾಖಲೆಯ 1.06 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗಿದೆ. ಇದು 2018ರ ಮಾಚ್‌ರ್‍ನಲ್ಲಿ ಆದ ಸಂಗ್ರಹಕ್ಕಿಂತ ಶೇ.15.6ರಷ್ಟುಹೆಚ್ಚು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!