
ಬೆಂಗಳೂರು, (ಮಾ.03): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಕರ್ನಾಟಕ ಬಜೆಟ್ 2022-23ರ (Karnataka Budget 2022) ಮಂಡನೆಗೆ ಜನರು ಎದುರು ನೋಡುತ್ತಿದ್ದಾರೆ.
ನಾಳೆ ಅಂದ್ರೆ ಮಾ.04ರಂದು ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸರಿಯಾಗಿ ಮಧ್ಯಾಹ್ನ 12.30ಕ್ಕೆ 2022-23ನೇ ಸಾಲಿಕ ಕರ್ನಾಟಕ ಬಜೆಟ್ ಮಂಡಿಸಲಿದ್ದಾರೆ.
Karnataka Budget 2022-23: ಉತ್ತರದ ಹೆಬ್ಬಾಗಿಲಿಗೆ ಸಿಎಂ ತೋರಣ..!
ದೊಡ್ಡ ಪ್ರಮಾಣದ ಸಾಲದ ಹೊರೆ, ಕೇಂದ್ರದಿಂದ ಬರಬೇಕಾದ ಸಹಾಯ ಧನದಲ್ಲಿ ಖೋತಾ, ಮತ್ತೊಂದು ಕಡೆ ಮುಂದಿನ ವರ್ಷ ಎದುರಾಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಮನ ಗೆಲ್ಲಲು ಜನಪ್ರಿಯ ಕಾರ್ಯಕ್ರಮಗಳಿರುವ ಬಜೆಟ್(Budget) ಮಂಡಿಸಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಬೊಮ್ಮಾಯಿ ಇದ್ದಾರೆ.
ಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ
ರಾಜ್ಯದಲ್ಲಿ(Karnataka) ಆರ್ಥಿಕ ಚಟುವಟಿಕೆಗಳು ಬಹುತೇಕ ಸಾಮಾನ್ಯ ಸ್ಥಿತಿಗೆ ಬಂದಿವೆ. ತೆರಿಗೆ ಸಂಗ್ರಹ ಸಹ ಕೂಡ ನಿಧಾನವಾಗಿ ಏರಿಕೆಯಾಗುತ್ತಿದೆ. ಆದರೆ ಕೋವಿಡ್(Covid-19) ಕಾರಣದಿಂದ ಜಾರಿಗೆ ತಂದ ಲಾಕ್ಡೌನ್, ನಿರ್ಬಂಧಗಳು ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಹಾನಿ ಮಾಡಿವೆ. ಹೀಗಾಗಿ ಸಹಜವಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಹಿಂದಿನ ಬಜೆಟ್ಗಳಲ್ಲಿ ಘೋಷಿಸಿದ ಅನೇಕ ಯೋಜನೆ, ಕಾರ್ಯಕ್ರಮಗಳಿಗೆ ಈಗ ಹಣ ಬಿಡುಗಡೆ ಮಾಡುವಂತಹ ಪರಿಸ್ಥಿತಿ ಇದೆ.
ಇಂತಹ ಸ್ಥಿತಿ ನಡುವೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಲಿರುವ ಆಯವ್ಯಯದಲ್ಲಿ ಪ್ರಮುಖವಾಗಿ ನೀರಾವರಿ, ಕೃಷಿ ಹಾಗೂ ಕೃಷಿಗೆ ಪೂರಕವಾದ ವಲಯ, ಶಿಕ್ಷಣ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ಇಲಾಖೆಗೆ ಹೆಚ್ಚಿನ ಹಣ ಒದಗಿಸುವ ಜೊತೆಗೆ ಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ. ಆ ಮೂಲಕ ರೈತರು, ಪರಿಶಿಷ್ಟರು, ಹಿಂದುಳಿದ ವರ್ಗ, ಮಹಿಳೆಯರು, ಕಾರ್ಮಿಕರನ್ನು ಸೆಳೆಯುವ ಉದ್ದೇಶವನ್ನು ಹೊಂದಿದ್ದಾರೆ.
ಈ ಬಾರಿ ಶೇ. 10ರವರೆಗೆ ಹೆಚ್ಚಿಸುವ ಲೆಕ್ಕಾಚಾರ
ಕಳೆದ ಆರ್ಥಿಕ ವರ್ಷದ ಆಯವ್ಯಯದಲ್ಲಿ ವೆಚ್ಚದ ಒಟ್ಟು ಮೊತ್ತ 2.47 ಲಕ್ಷ ಕೋಟಿ ರು. ಇತ್ತು. ಸಾಮಾನ್ಯವಾಗಿ ವೆಚ್ಚವನ್ನು ಪ್ರತಿ ವರ್ಷ ಶೇ. 5ರಷ್ಟುಹೆಚ್ಚಿಸುವುದು ವಾಡಿಕೆ. ಆದರೆ ಈ ಬಾರಿ ಶೇ. 10ರವರೆಗೆ ಹೆಚ್ಚಿಸುವ ಲೆಕ್ಕಾಚಾರ ಹಾಕಲಾಗಿದೆ.
ಇದೇ ವೇಳೆ ಹೊಸ ಕಾರ್ಯಕ್ರಮ, ಹೊಸ ಯೋಜನೆ, ಅಭಿವೃದ್ಧಿ ಯೋಜನೆಗೆ ಹಣ ಹೊಂದಿಸಲು ಇನ್ನಷ್ಟುಸಾಲದ ಮೊರೆ ಹೋಗಲೇಬೇಕಾಗಿದೆ. 2021-22 ಸಾಲಿನಲ್ಲಿ ಸಾಲದ ಮೊತ್ತ 4.57 ಲಕ್ಷ ಕೋಟಿ ರು. ತಲುಪಿದೆ. ಸದ್ಯ ಎಲ್ಲ ಬಗೆಯ ತೆರಿಗೆಗಳ ಸಂಗ್ರಹ ನಿರೀಕ್ಷಿತ ಗುರಿ ಇದ್ದರೂ ಹೆಚ್ಚಿನ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಕೇಂದ್ರದಿಂದ ಬರಬೇಕಾದ ಅನುದಾನ(Grants) ವರ್ಷದಿಂದ ಕಡಿಮೆಯಾಗುತ್ತಿದೆ. ಜಿಎಸ್ಟಿ ಪರಿಹಾರ(GST Compensation) ಸುಮಾರು 11 ಸಾವಿರ ಕೋಟಿ ರು. ಕೇಂದ್ರದಿಂದ ಬರಬೇಕಾಗಿದೆ. ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು 7851 ಕೋಟಿ ರು. ಬಾಕಿ ಇದೆ. ಹೀಗಾಗಿ ಅಭಿವೃದ್ಧಿ ಕೆಲಸ, ಹೊಸ ಕಾರ್ಯಕ್ರಮ ಜಾರಿಗೆ ತರಲು ರಾಜ್ಯ ಸರ್ಕಾರ ಈ ವರ್ಷವೂ ವಿವಿಧ ಮೂಲಗಳಿಂದ ಸಾಲ ತರುವಂತಹ ಅನಿವಾರ್ಯ ಪರಿಸ್ಥಿತಿಯಲ್ಲಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ವೈ (BS Yeddyurapppa) ಸಂಪುಟದಲ್ಲಿ ನೀರಾವರಿ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಬೊಮ್ಮಾಯಿ ನೀರಾವರಿ ಇಲಾಖೆಯ ಬಗ್ಗೆ ಹೆಚ್ಚು ಹಿಡಿತ ಸಾಧಿಸಿದ್ದಾರೆ. ನೀರಾವರಿ ಯೋಜನೆಗಳಿಂದ ರೈತಾಪಿ ಕುಟುಂಬಗಳನ್ನ ಸೆಳೆಯಲು ಸುಲಭ ಎಂಬ ಲೆಕ್ಕಾಚಾರ ಆಗಿದೆ.
ಈ ಕಾರಣಕ್ಕೆ ಅಭಿವೃದ್ಧಿ ಕೆಲಸಕ್ಕೆ ಮೀಸಲಿಡುವ ಹಣಕಾಸಿನಲ್ಲಿ ನೀರಾವರಿ ಯೋಜನೆಗೆ ಸಿಂಹಪಾಲು ಎನ್ನಲಾಗಿದೆ. ಇದರ ಜತೆಗೆ ಕಾಂಗ್ರೆಸ್ ನೀರಾವರಿ ಯೋಜನೆಗಳಿಗೆ ಪಾದಯಾತ್ರೆಗೆ ಕೌಂಟರ್ ಕೊಡಲು ಸರಣಿ ನೀರಾವರಿ ಘೋಷಣೆಗಳ ಜೊತೆಗೆ ನೀರಾವರಿ ಇಲಾಖೆಯಲ್ಲಿ ಒಂದು ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.