
ಬೆಂಗಳೂರು: ಉದ್ಯಮಿ ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣವು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಪ್ರಕರಣದ ಹಿಂದೆ ಇರುವ ಐಟಿ ತನಿಖೆಯ ವಿವರಗಳು ಇದೀಗ ಬೆಳಕಿಗೆ ಬಂದಿವೆ. ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಲಭಿಸಿರುವ ಎಕ್ಸ್ಕ್ಲೂಸಿವ್ ಮಾಹಿತಿಯ ಪ್ರಕಾರ, ಸಿ.ಜೆ. ರಾಯ್ ವಿರುದ್ಧ ಆದಾಯ ತೆರಿಗೆ ಇಲಾಖೆ (ಐಟಿ) ಒಂದು ಮಹತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿತ್ತು.
ಲಭ್ಯವಾದ ಮಾಹಿತಿಯಂತೆ, ಉದ್ಯಮಿ ಸಿ.ಜೆ. ರಾಯ್ ಅವರು ಕೇರಳ ರಾಜ್ಯದಲ್ಲಿ 156ಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡಿದ್ದರು. ಈ ನಿವೇಶನಗಳನ್ನು ಮಾರಾಟ ಮಾಡುವಾಗ, ಮಾರುಕಟ್ಟೆ ಮೌಲ್ಯಕ್ಕಿಂತಲೂ ಬಹಳ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದೆ ಎಂಬುದು ಐಟಿ ಅಧಿಕಾರಿಗಳ ಗಮನಕ್ಕೆ ಬಂದಿದೆ.
ನಿವೇಶನಗಳ ಮಾರಾಟದ ವೇಳೆ ದಾಖಲೆಗಳಲ್ಲಿ ಉಲ್ಲೇಖಿಸಲಾದ ರಿಜಿಸ್ಟ್ರೇಷನ್ ಮೌಲ್ಯವು ಮಾರುಕಟ್ಟೆ ಮೌಲ್ಯಕ್ಕಿಂತ ಗಣನೀಯವಾಗಿ ಕಡಿಮೆಯಾಗಿತ್ತು. ಇದರಿಂದಾಗಿ, ವಾಸ್ತವಿಕ ವ್ಯವಹಾರ ಮೌಲ್ಯವನ್ನು ಮುಚ್ಚಿಡಲಾಗಿದೆ ಎಂಬ ಅನುಮಾನವನ್ನು ಐಟಿ ಇಲಾಖೆ ವ್ಯಕ್ತಪಡಿಸಿದೆ.
ಇನ್ನೂ ಗಂಭೀರವಾದ ಅಂಶವೆಂದರೆ, ಈ ನಿವೇಶನಗಳ ಮಾರಾಟದಿಂದ ಬಂದ ಹಣದ ಒಂದು ದೊಡ್ಡ ಭಾಗವನ್ನು ನಗದು ರೂಪದಲ್ಲಿ ಪಡೆದಿದ್ದಾರೆ ಎಂಬ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ನಗದು ವ್ಯವಹಾರವೇ ತನಿಖೆಯ ಕೇಂದ್ರಬಿಂದುವಾಗಿತ್ತು.
ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಯಲ್ಲಿ ನಿವೇಶನ ಮಾರಾಟ ಮಾಡಿರುವುದರ ಹಿಂದೆ ಏನು ಉದ್ದೇಶ? ಆಡಿಟಿಂಗ್ ಪ್ರಕ್ರಿಯೆಯಲ್ಲಿ ಈ ವ್ಯತ್ಯಾಸವನ್ನು ಹೇಗೆ ಹೊಂದಾಣಿಕೆ ಮಾಡಲಾಗಿದೆ? ನಗದು ವ್ಯವಹಾರಗಳ ಮೂಲಕ ತೆರಿಗೆ ವಂಚನೆ ನಡೆಸಲಾಗಿದೆಯೇ? ಎಂಬ ಹಲವು ಪ್ರಶ್ನೆಗಳ ಕುರಿತು ಐಟಿ ಇಲಾಖೆ ಸವಿಸ್ತಾರ ತನಿಖೆ ನಡೆಸುತ್ತಿತ್ತು.
ಈ ಹಿನ್ನೆಲೆಯಲ್ಲಿ, ಸಣ್ಣದಾಗಿ ಕಾಣಿಸಿದರೂ ತೆರಿಗೆ ವಂಚನೆ ದೃಷ್ಟಿಯಿಂದ ಮಹತ್ವ ಪಡೆದಿರುವ ಈ ಪ್ರಕರಣವನ್ನು ದಾಖಲಿಸಿಕೊಂಡು ಐಟಿ ಅಧಿಕಾರಿಗಳು ಆರ್ಥಿಕ ದಾಖಲೆಗಳು, ಲೆಕ್ಕಪತ್ರಗಳು ಹಾಗೂ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದರು ಎಂದು ತಿಳಿದುಬಂದಿದೆ.
ಐಟಿ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲೇ ಸಿ.ಜೆ. ರಾಯ್ ಆತ್ಮ*ಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆಯ ಒತ್ತಡವೇ ಈ ದುರಂತದ ಹಿಂದೆ ಕಾರಣವಾಗಿತೇ? ಅಥವಾ ಇನ್ನೇನಾದರೂ ಅಡಗಿದ ಅಂಶಗಳಿವೆಯೇ? ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಹಾಗೂ ಇತರೆ ತನಿಖಾ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆ ಇದ್ದು, ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ತನಿಖೆಯ ಫಲಿತಾಂಶವೇ ನಿರ್ಣಾಯಕವಾಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.