
ನವದೆಹಲಿ(ಡಿ.08): ಭಾರತದ ಅರ್ಥ ವ್ಯವಸ್ಥೆ ನಿರಂತರವಾಗಿ ಕುಸಿಯುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿ ಸುತ್ತ ಇರುವ ಜನ ಕಾರಣ ಎಂದು ಆರ್ಬಿಐ ಮಾಜಿ ಗರ್ವನರ್ ರಘುರಾಮ್ ರಾಜನ್ ಆರೋಪಿಸಿದ್ದಾರೆ.
ಕುಸಿತದ ಹಾದಿಯಲ್ಲಿರುವ ಅರ್ಥ ವ್ಯವಸ್ಥೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ಪಗರಯತ್ನವನ್ನೇ ಮಾಡುತ್ತಿಲ್ಲ. ಈ ಉಡಾಫೆಗೆ ಭವಿಷ್ಯದಲ್ಲಿ ಭಾರತ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ರಾಜನ್ ಎಚ್ಚರಿಸಿದ್ದಾರೆ.
ಮತ್ತೆ ಮೋದಿ ಟೀಕಿಸಿದ ರಾಜನ್: ಈ ಬಾರಿಯ ಟೀಕೆ ಏನು?
ಪ್ರಧಾನಿ ಕಚೇರಿಯನ್ನು ನಿಯಂತ್ರಣಕ್ಕೆ ಪಡೆದಿರುವ ಕೆಲವು ಸಣ್ಣ ವ್ಯಕ್ತಿಗಳು ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ರಘುರಾಮ್ ರಾಜನ್ ಕಿಡಿಕಾರಿದ್ದಾರೆ.
ಪ್ರಧಾನಿ ಕಚೇರಿಯಲ್ಲಿ ಕುಳಿತಿರುವ ಈ ಸಣ್ಣ ವ್ಯಕ್ತಿಗಳ ಗುಂಪಿಗೆ ಆರ್ತಿಕ ನೀತಿಗಳ ಗಂಧ ಗಾಳಿಯೂ ಗೊತ್ತಿಲ್ಲ. ಪ್ರಧಾನಿ ಇವರ ಮಾತು ಕೇಳುವ ಅನಿವಾರ್ಯತೆ ಸೃಷ್ಟಿಯಾಗಿರುವುದು ವಿಪರ್ಯಾಸ ಎಂದು ರಾಜನ್ ಬೇಸರ ವ್ಯಕ್ತಪಡಿಸಿದ್ದಾರೆ.
ನೋಟ್ ಬ್ಯಾನ್ ಬಳಿಕ ಆರ್ಥಿಕ ಪ್ರಗತಿ ಕುಂಠಿತ!: ರಾಜನ್
ಇದೇ ವೇಳೆ ಆರ್ಥಿಕ ಪುನಶ್ಚೇತನಕ್ಕೆ ಮಾರ್ಗೋಪಾಯದ ಕುರಿತು ಚರ್ಚಿಸಿರುವ ರಘುರಾಮ್ ರಾಜನ್, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಂಡವಾಳ, ಭೂಮಿ ಮತ್ತು ಕಾರ್ಮಿಕ ಮಾರುಕಟ್ಟೆಗಳನ್ನು ಉದಾರೀಕರಣಗೊಳಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ ಎಂದು ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.
ಮೋದಿಗೆ ಯಾರೂ ಬೈಯದ ಹಾಗೆ ಬೈದ ರಘುರಾಮ್ ರಾಜನ್!
ಹೂಡಿಕೆಯನ್ನು ಉತ್ತೇಜಿಸಲು ಉದಾರೀಕರಣವೊಂದೇ ಸದ್ಯ ನಮ್ಮ ಮುಂದಿರುವ ಮಾರ್ಗ ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಮೋದಿ ಸರ್ಕಾರ ಈ ಯಾವ ಮಾರ್ಗಳನ್ನು ಆಯ್ದುಕೊಳ್ಳದಿರುವುದು ಆರ್ಥಿಕ ಪುನಶ್ಚೇತನ ಕಷ್ಟಸಾಧ್ಯ ಎಂದು ಅವರು ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.