
ಚಿಕ್ಕಬಳ್ಳಾಪುರ ಜಿಲ್ಲೆಯ ಮಾರುಕಟ್ಟೆಗಳಲ್ಲಿ ವೀಳ್ಯದೆಲೆಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಗ್ರಾಹಕರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಪ್ರಸ್ತುತ ಒಂದು ಕಟ್ಟು ವೀಳ್ಯದೆಲೆ ಬೆಲೆ ₹150 ರಿಂದ ₹200 ಗಡಿ ದಾಟಿದ್ದು, ಕಳೆದ ದಶಕದಲ್ಲೇ ಅಪರೂಪದ ದಾಖಲೆ ಏರಿಕೆಯಾಗಿ ಪರಿಣಮಿಸಿದೆ. ದುಬಾರಿಯಾದರೂ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ವೀಳ್ಯದೆಲೆ ದೊರೆಯುತ್ತಿಲ್ಲ ಎಂಬ ಅಸಮಾಧಾನ ಗ್ರಾಹಕರಿಂದ ವ್ಯಾಪಕವಾಗಿ ಕೇಳಿಬರುತ್ತಿದೆ.
ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ವೀಳ್ಯದೆಲೆ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇತ್ತೀಚಿನ ಒಂದು ವಾರದಲ್ಲೇ ಒಂದು ಕಟ್ಟಿನ ಬೆಲೆ ₹50 ರಿಂದ ₹60 ರವರೆಗೆ ಹೆಚ್ಚಳವಾಗಿರುವುದು ಗ್ರಾಹಕರ ಮೇಲೆ ಭಾರೀ ಹೊರೆಯಾಗುತ್ತಿದೆ. ಒಂದು ಕಟ್ಟಿನಲ್ಲಿ ಸಾಮಾನ್ಯವಾಗಿ 100 ವೀಳ್ಯದೆಲೆಗಳು ಇರುತ್ತವೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೀಳ್ಯದೆಲೆ ಸರಾಸರಿ ₹2ರ ದರದಲ್ಲಿ ಮಾರಾಟವಾಗುತ್ತಿದೆ.
ವೀಳ್ಯದೆಲೆ ಬೆಳೆ ಮೇಲೆ ಹವಾಮಾನವೂ ದೊಡ್ಡ ಪರಿಣಾಮ ಬೀರುತ್ತಿದೆ. ಪ್ರತಿ ವರ್ಷ ನವೆಂಬರ್ನಿಂದ ಫೆಬ್ರವರಿವರೆಗೆ ದಟ್ಟ ಮಂಜು ಬೀಳುವುದರಿಂದ ವೀಳ್ಯದೆಲೆ ತೋಟಗಳಲ್ಲಿ ಸರಿಯಾದ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಈ ಅವಧಿಯಲ್ಲಿ ಎಲೆಗಳಿಗೆ ಬೇಕಾದಷ್ಟು ಚಿಗುರು ಬಿಡುವುದಿಲ್ಲ. ತೋಟಗಳಿಗೆ ಹೆಚ್ಚಿನ ಪ್ರಮಾಣದ ನೀರು ನೀಡಿದರೂ ಸಹ ಉತ್ತಮ ಇಳುವರಿ ಲಭ್ಯವಾಗುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಇದರಿಂದಾಗಿ ಈ ಬಾರಿ ವೀಳ್ಯದೆಲೆ ಉತ್ಪಾದನೆ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಎಲೆಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ.
ವೀಳ್ಯದೆಲೆ ಮಾರಾಟಗಾರರ ಪ್ರಕಾರ, ಫೆಬ್ರವರಿ ತಿಂಗಳು ಮುಗಿಯುವವರೆಗೆ ಬೆಲೆ ಇಳಿಕೆ ಸಾಧ್ಯವಿಲ್ಲ. ಹವಾಮಾನ ಸುಧಾರಣೆ ಆಗಿ ಹೊಸ ಎಲೆಗಳು ಉತ್ತಮವಾಗಿ ಬೆಳೆಯಲು ಇನ್ನೂ ಸಮಯ ಬೇಕು. ಅದುವರೆಗೆ ವೀಳ್ಯದೆಲೆ ಬೆಲೆ ಇದೇ ರೀತಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಅಂದಾಜು ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಾರುಕಟ್ಟೆಗಳಿಗೆ ವೀಳ್ಯದೆಲೆಗಳನ್ನು ತುಮಕೂರು ಜಿಲ್ಲೆಯ ಪಾವಗಡ, ಹಾವೇರಿ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ಅಮಲಾಪುರದಿಂದ ತರಲಾಗುತ್ತಿದೆ. ಜೊತೆಗೆ ಜಿಲ್ಲೆಯೊಳಗಿನ ಗೌರಿಬಿದನೂರು, ಮಂಚೇನಹಳ್ಳಿ ಸೇರಿದಂತೆ ಕೆಲವು ಭಾಗಗಳಿಂದಲೂ ವೀಳ್ಯದೆಲೆ ಸರಬರಾಜು ಆಗುತ್ತಿದೆ. ಆದರೆ ಸರಬರಾಜು ಇದ್ದರೂ ಬೇಡಿಕೆಗೆ ಹೋಲಿಸಿದರೆ ಪ್ರಮಾಣ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ವೀಳ್ಯದೆಲೆಗೆ ಇನ್ನೂ ಹೆಚ್ಚಿನ ಬೇಡಿಕೆ ಇದೆ. ದಿನನಿತ್ಯದ ಉಪಯೋಗ ಮತ್ತು ಸಂಪ್ರದಾಯದ ಭಾಗವಾಗಿ ವೀಳ್ಯದೆಲೆ ಬಳಸಲಾಗುತ್ತಿದ್ದು, ಬೆಲೆ ದುಬಾರಿಯಾದರೂ ಗ್ರಾಹಕರು ಖರೀದಿಸಲು ಅನಿವಾರ್ಯವಾಗಿದ್ದಾರೆ. ಆದರೆ ಸತತ ಎರಡು–ಮೂರು ವರ್ಷಗಳಿಂದ ವೀಳ್ಯದೆಲೆ ಬೆಲೆ ಗಗನಕ್ಕೇರುತ್ತಿರುವುದು ಗ್ರಾಹಕರ ಕೈ ಸುಡುವಂತೆ ಮಾಡಿದೆ.
ವೀಳ್ಯದೆಲೆ ವ್ಯಾಪಾರಿಗಳು ನಾವು ನಮ್ಮ ತಾತ–ಮುತ್ತಾತನ ಕಾಲದಿಂದಲೂ ವೀಳ್ಯದೆಲೆ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಇಷ್ಟು ದುಬಾರಿಯಾದ ಬೆಲೆಯನ್ನು ನಾವು ಇಂದಿಗೂ ಕಂಡಿರಲಿಲ್ಲ. ತುಮಕೂರು, ಪಾವಗಡ, ಹಾವೇರಿ ಹಾಗೂ ಆಂಧ್ರಪ್ರದೇಶದ ಹಿಂದೂಪುರದ ಅಮಲಾಪುರದಿಂದ ವೀಳ್ಯದೆಲೆ ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಆದರೆ ಇಳುವರಿ ಕಡಿಮೆ ಆಗಿರುವುದರಿಂದ ಬೆಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಒಟ್ಟಾರೆ, ಹವಾಮಾನ ವೈಪರೀತ್ಯ, ಇಳುವರಿ ಕುಸಿತ ಮತ್ತು ಹೆಚ್ಚಿದ ಬೇಡಿಕೆ ಕಾರಣಗಳಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವೀಳ್ಯದೆಲೆ ಬೆಲೆ ದಾಖಲೆಯ ಮಟ್ಟಕ್ಕೆ ಏರಿದ್ದು, ಮುಂದಿನ ಕೆಲವು ವಾರಗಳವರೆಗೆ ಗ್ರಾಹಕರಿಗೆ ಹೆಚ್ಚಿನ ಪರಿಹಾರ ದೊರೆಯುವ ಲಕ್ಷಣಗಳು ಕಾಣುತ್ತಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.