ನ.19ರಿಂದ ಬೆಂಗಳೂರು ಟೆಕ್‌ ಶೃಂಗ: ಮಹತ್ವದ 12 ಒಪ್ಪಂದಗಳಿಗೆ ಸಹಿ

By Kannadaprabha NewsFirst Published Nov 14, 2020, 9:11 AM IST
Highlights

ಡಿಸಿಎಂ ಅಶ್ವತ್ಥನಾರಾಯಣ ಸಾರಥ್ಯದಲ್ಲಿ ಆಯೋಜನೆ| ವಿಡಿಯೋ ಕಾನ್ಫರೆನ್ಸ್‌ನಲ್ಲಿ ಶೃಂಗಕ್ಕೆ ಮೋದಿ ಚಾಲನೆ| ಶೃಂಗದಲ್ಲಿ 25 ದೇಶಗಳು ಭಾಗಿ| ಮಹತ್ವದ 12 ಒಪ್ಪಂದಗಳಿಗೆ ಪಾಲುದಾರ ದೇಶಗಳ ಜತೆ ಸಹಿ| ಬೆಂಗಳೂರು ಹೊರತಾದ ದ್ವಿತೀಯ ಸ್ತರದ ನಗರಗಳಲ್ಲಿ ಐಟಿ ಅಭಿವೃದ್ಧಿ| 

ಬೆಂಗಳೂರು(ನ.14): ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಉತ್ತೇಜನ ನೀಡಲು ಕಟಿಬದ್ಧವಾಗಿರುವ ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಮೂರು ದಿನಗಳ ಕಾಲ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ನಡೆಯಲಿದೆ. ನ.19ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್‌ ಮೂಲಕ ಶೃಂಗದ ಉದ್ಘಾಟನೆ ಮಾಡಲಿದ್ದಾರೆ.

ಬೆಂಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಯಲ್ಲಿ ಐಟಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ, ಅಲ್ಲಿ ಉದ್ಯೋಗ ಸೃಷ್ಟಿಗೆ ಪಣತೊಟ್ಟಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಬೆಂಗಳೂರಲ್ಲಿ ಬೃಹತ್‌ ಸಮ್ಮೇಳನ ಆಯೋಜಿಸಿ ರಾಜ್ಯದ ಅಭಿವೃದ್ಧಿಯನ್ನು ಹೊಸ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಸಚಿವರು ಮುಂದಾಗಿದ್ದಾರೆ.

ವಿಶ್ವದ ಗಮನ ಸೆಳೆಯುವ ನಿಟ್ಟಿನಲ್ಲಿ ವಿಶ್ವದ ವಿವಿಧೆಡೆಯಿಂದ ಹೂಡಿಕೆದಾರರನ್ನು ಆಹ್ವಾನಿಸಿ ಐಟಿ ಕೈಗಾರಿಕೋದ್ಯಮ ಬೆಳವಣಿಗೆಯ ವೇಗ ಹೆಚ್ಚಿಸಲು ಶ್ರಮವಹಿಸುತ್ತಿದ್ದಾರೆ. ಕೋವಿಡ್‌-19ರ ನಡುವೆಯೂ ನಡೆಯುತ್ತಿರುವ ಅತಿದೊಡ್ಡ ಸಮ್ಮೇಳನ ಇದಾಗಿದೆ. ನ.19ರಿಂದ ಆರಂಭವಾಗುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬಿಟಿಎಸ್‌)ನಲ್ಲಿ ಸಮ್ಮೇಳನದಲ್ಲಿ 25ಕ್ಕೂ ಹೆಚ್ಚು ದೇಶಗಳು ಭಾಗಿಯಾಗುತ್ತಿವೆ. ಮಹತ್ವದ 12 ಒಪ್ಪಂದಗಳಿಗೆ ಜಾಗತಿಕ ಆವಿಷ್ಕಾರ ಮೈತ್ರಿಕೂಟದ ಪಾಲುದಾರ ದೇಶಗಳ ಜತೆ ಸಹಿ ಹಾಕಲಾಗುತ್ತದೆ. ಕೃಷಿ ಸಂಶೋಧನೆ, ಅಭಿವೃದ್ಧಿ, ಸ್ಟಾರ್ಟ್‌ ಅಪ್‌ಗಳ ಸ್ಥಾಪನೆ ಪಾಲುದಾರಿಕೆ ಸೇರಿದಂತೆ 7 ಹೊಸ ಒಪ್ಪಂದಗಳ ಸಹಿ ಖಚಿತವಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಸೇರಿದಂತೆ ಐಟಿ ದಿಗ್ಗಜರು ಶೃಂಗದಲ್ಲಿ ಭಾಗವಹಿಸಲಿದ್ದಾರೆ.

ಇತಿಹಾಸದಲ್ಲಿ ಮೊದಲ ಬಾರಿ ಭಾರತದಲ್ಲಿ ಆರ್ಥಿಕ ಕುಸಿತ!

ವಿವಿಧ ಕಾರ್ಯಕ್ರಮ:

ಸಮ್ಮೇಳನ ಸುಸಜ್ಜಿತವಾಗಿ ನಡೆಯಲು ಡಾ. ಅಶ್ವತ್ಥ ನಾರಾಯಣ ಅವರು ಉಸ್ತುವಾರಿ ವಹಿಸಿಕೊಂಡು ಸಿದ್ಧತೆ ನಡೆಸುತ್ತಿದ್ದಾರೆ. ಜಾಗತಿಕ ಮಟ್ಟದ ಆವಿಷ್ಕಾರ ಮೈತ್ರಿಗೆ ಸಂಬಂಧಪಟ್ಟಂತೆ ವಿಚಾರ ವಿನಿಮಯ ಜರುಗಲಿದೆ. ಈ ಸಂಬಂಧ 15ಕ್ಕೂ ಹೆಚ್ಚು ಅಧಿವೇಶನಗಳು ನಡೆಯಲಿವೆ. 60ಕ್ಕೂ ಹೆಚ್ಚು ಮಂದಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಲಿದ್ದಾರೆ. ವಿವಿಧ ದೇಶಗಳ ಸಚಿವರ ಮಟ್ಟದ ಹತ್ತು ನಿಯೋಗಗಳು ಭಾಗಿಯಾಗಲಿವೆ. ಇದಲ್ಲದೇ, 500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ನಿಯೋಗಗಳು ಭೇಟಿ ನೀಡುತ್ತಿವೆ. ವ್ಯವಸಾಯ ಕ್ಷೇತ್ರದ ಸುಧಾರಣೆಗೆ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಬಳಸಲು ಒತ್ತು ನೀಡಲೇಬೇಕು ಎಂಬುದು ಅಶ್ವತ್ಥ ನಾರಾಯಣ ಅವರ ಪ್ರಮುಖ ಉದ್ದೇಶವಾಗಿದೆ. 

ರಾಜ್ಯದ ಸುಮಾರು 60ರಷ್ಟುಮಂದಿ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದೆಡೆ ಆರ್ಥಿಕತೆ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಕೃಷಿಯ ಕೊಡುಗೆ ಹೆಚ್ಚಿಸುವ ಬಗ್ಗೆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ರಾಜ್ಯದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಈಗ ಕೇವಲ ಶೇ.16ರಷ್ಟಿದ್ದು, ಇದನ್ನು ಮುಂದಿನ ಐದು ವರ್ಷದಲ್ಲಿ ಶೇ.30ರಷ್ಟು ವರಗೆ ಆದರೂ ಬೆಳೆಯಲೇ ಬೇಕು. ಆಗ ಮಾತ್ರ ಹಳ್ಳಿಗರ ವಲಸೆ ತಪ್ಪುವುದರ ಜತೆಗೆ ಬೆಂಗಳೂರು ಹೊರತಾದ ಪ್ರದೇಶಗಳು ಬೆಳವಣಿಗೆ ಕಾಣುತ್ತವೆ ಎಂಬ ಅಭಿಲಾಷೆಯನ್ನು ಅಶ್ವತ್ಥ ನಾರಾಯಣ ಹೊಂದಿದ್ದಾರೆ.

ಜೈವಿಕ ತಂತ್ರಜ್ಞಾನದ ಬೆಳವಣಿಗೆಯು ಕೃಷಿ ಮತ್ತು ಆರೋಗ್ಯ ಸೇವೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಉಂಟು ಮಾಡಲಿದೆ. ಇದನ್ನು ಬಳಸಿಕೊಂಡು ಆಹಾರೋತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ ಮತ್ತಿತರ ವಿಧಾನಗಳ ಮೂಲಕ ವ್ಯವಸಾಯ ಕ್ಷೇತ್ರ ಅವಲಂಬಿತರಿಗೆ ಬಲ ತುಂಬುವ ಅಗತ್ಯ ಇದೆ. ಶಿಕ್ಷಣದಿಂದ ಮಾತ್ರ ಸುಸ್ಥಿತ ಬೆಳವಣಿಗೆ ಸಾಧ್ಯ. ಪೌಷ್ಟಿಕತೆ, ಪರಿಸರ, ನೈರ್ಮಲ್ಯ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಶಿಕ್ಷಣದ ಹಂತದಿಂದಲೇ ಅರಿವು ಮೂಡಿಸಬೇಕು. ಹಾಗೆಯೇ ಉದ್ಯಮಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಶಿಕ್ಷಣದ ಹಂತದಲ್ಲಿಯೇ ಸಜ್ಜು ಮಾಡಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಹೆಚ್ಚಿನ ಸಹಭಾಗಿತ್ವ ಬೆಳೆಯಲೇ ಬೇಕು ಎಂಬುದಕ್ಕೆ ಅಶ್ವತ್ಥ ನಾರಾಯಣ ಅವರು ಒತ್ತು ನೀಡಿದ್ದಾರೆ.

ದೇಶದ ಜನತೆಗೆ ಕೇಂದ್ರದಿಂದ ದೀಪಾವಳಿ ಗಿಫ್ಟ್; ಆತ್ಮ ನಿರ್ಭರ್ ಭಾರತ್‌ಗೆ ಮುನ್ನುಡಿ

ಪಾಲುದಾರಿಕೆ ದೇಶಗಳು

ಆಸ್ಪ್ರೇಲಿಯಾ, ಫಾನ್ಸ್‌, ಜರ್ಮನಿ, ಇಸ್ರೇಲ್‌, ನೆದರ್‌ ಲ್ಯಾಂಡ್‌, ಸ್ವಿಡ್ಜರ್‌ಲೆಂಡ್‌, ಇಂಗ್ಲೆಂಡ್‌ ರಾಷ್ಟ್ರಗಳು ತಂತ್ರಜ್ಞಾನ ಸಮ್ಮೇಳನದ ಪಾಲುದಾರ ದೇಶಗಳಾಗಿವೆ. ಈ ರಾಷ್ಟ್ರಗಳಿಂದ ಕರ್ನಾಟಕ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಅನುಕೂಲವಾಗುವಂತೆ ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಜಾಗತಿಕ ಆವಿಷ್ಕಾರ ಒಪ್ಪಂದ ಅಧಿವೇಶನಗಳಿಗಾಗಿ ಟ್ರ್ಯಾಕ್‌ ರಚಿಸಲಾಗಿದೆ. ಪರಿಸರ ವ್ಯವಸ್ಥೆಯ ಸಂಪರ್ಕಗಳು, ವಿಚಾರಗಳು ಮತ್ತು ಜನಾಭಿಪ್ರಾಯಗಳ ವಿನಿಯಮ, ನೀತಿ ಪರಿಸರದ ಕುರಿತ ಚರ್ಚೆಗಳಿಗಾಗಿ ದೇಶಗಳು ಅವಧಿ ನಿಗದಿ ಮಾಡಿಸಲಾಗಿದೆ.

ಹೂಡಿಕೆಗೆ ವಿವಿಧ ದೇಶಗಳ ಉತ್ಸುಕತೆ

ಆಸ್ಪ್ರೇಲಿಯಾ ಹಲವು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದು, ಸೈಬರ್‌ ಸೆಕ್ಯೂರಿಟಿಯಲ್ಲಿ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದೆ. ಕರ್ನಾಟಕದ ಜತೆ ತಂತ್ರಜ್ಞಾನ, ಬಾಹ್ಯಾಕಾಶ, ಸೈಬರ್‌ ಭದ್ರತೆ, ಖನಿಜ ಮುಂತಾದ ಕ್ಷೇತ್ರದಲ್ಲಿ ಮತ್ತಷ್ಟುವಿಸ್ತೃತವಾಗಿ ಕೆಲಸ ಮಾಡಲು ಸಿದ್ಧವಿದೆ. ಸ್ವಿಟ್ಜರ್‌ಲ್ಯಾಂಡ್‌ನ ಉದ್ದಿಮೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ನೆದರ್‌ಲ್ಯಾಂಡ್‌ ಕರ್ನಾಟಕದ ಜತೆ ಅತ್ಯುತ್ತಮ ಪಾಲುದಾರಿಕೆಯನ್ನು ಹೊಂದಿದೆ. ತಂತ್ರಜ್ಞಾನದ ಜತೆಗೆ ಸರಕು ಮತ್ತು ಸೇವೆಗಳನ್ನು ಯೂರೋಪ್‌ ಮಾರುಕಟ್ಟೆಗೆ ತಲುಪಿಸಲು ನೆದರ್‌ಲ್ಯಾಂಡ್‌ ಮಹಾದ್ವಾರ ಆಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಭಾರತದ ಬಾಹ್ಯಾಕಾಶಕ್ಕೆ ಸಂಬಂಧಪಟ್ಟಂತೆ ಸ್ವೀಡನ್‌ ಹಿಂದಿನಿಂದಲೂ ಕೆಲಸ ಮಾಡುತ್ತಿದೆ. ಚಂದ್ರಯಾನ-1ರಲ್ಲಿ ತಂತ್ರಜ್ಞಾನ ನೀಡಿಕೆ ವಿಚಾರದಲ್ಲಿ ಸ್ವೀಡನ್‌ ಭಾರತದ ಜತೆ ಕೈ ಜೋಡಿಸಿತ್ತು. ಈಗ ಶುಕ್ರಯಾನ ಯೋಜನೆಯಲ್ಲಿಯೂ ಭಾರತಕ್ಕೆ ನೆರವಾಗಲು ಸ್ವೀಡನ್‌ ಮುಂದಾಗಿದೆ.

100 ಸ್ಟಾರ್ಟಪ್‌ಗಳು ಭಾಗಿ

100ಕ್ಕೂ ಹೆಚ್ಚು ಸ್ಟಾರ್ಟ್‌ಆಪ್‌ಗಳ ಭಾಗವಹಿಸುವಿಕೆಗೆ ಸಮ್ಮೇಳನ ಸಾಕ್ಷಿಯಾಗಲಿದೆ. 4 ಸಾವಿರಕ್ಕೂ ಹೆಚ್ಚು ವ್ಯಾಪಾರ ಪ್ರತಿನಿಧಿಗಳು, 40 ಸಾವಿರಕ್ಕೂ ಹೆಚ್ಚು ಸಂದರ್ಶಕರು, ಮಲ್ಟಿಟ್ರ್ಯಾಕ್‌ ಪ್ರದರ್ಶನಗಳು, ರಸಪ್ರಶ್ನೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ.
 

click me!