Bengaluru Tech Summit: ಬೆಂಗಳೂರಿಗೆ 5 ವರ್ಷದಲ್ಲಿ ಆರ್ಥಿಕ ರಾಜಧಾನಿ ಪಟ್ಟ: ಸಿಎಂ ಬೊಮ್ಮಾಯಿ

By Govindaraj SFirst Published Nov 19, 2022, 9:15 AM IST
Highlights

ರಾಜ್ಯವು ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸ್ಟಾರ್ಟಪ್‌ಗಳಲ್ಲಿ ಉತ್ತಮ ಸ್ಥಾನದಲ್ಲಿದೆ. ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಾಗಿರದೆ 5 ವರ್ಷದಲ್ಲಿ ದೇಶದ ಆರ್ಥಿಕತೆಯ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು (ನ.19): ರಾಜ್ಯವು ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸ್ಟಾರ್ಟಪ್‌ಗಳಲ್ಲಿ ಉತ್ತಮ ಸ್ಥಾನದಲ್ಲಿದೆ. ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಾಗಿರದೆ 5 ವರ್ಷದಲ್ಲಿ ದೇಶದ ಆರ್ಥಿಕತೆಯ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಬಳ್ಳಾರಿ ರಸ್ತೆಯ ಬೆಂಗಳೂರು ಅರಮನೆಯಲ್ಲಿ ಆಯೋಜಿಸಿದ್ದ ‘ಬೆಂಗಳೂರು ಟೆಕ್‌ ಸಮ್ಮಿಟ್‌-2022’ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸ್ಟಾರ್ಟಪ್‌ಗಳಿಗೆ ಅಭಿನಂದನಾ ಹಾಗೂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ‘ಸೋಲಿಗೆ ಹೆದರದೆ ಗೆಲ್ಲಲೇಬೇಕೆಂಬ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. 

ಎಲ್ಲ ರಂಗಗಳಲ್ಲೂ ಸಾಧನೆ ಮಾಡುತ್ತಿರುವುದರಿಂದ ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಾಗಿರದೆ ಮುಂದಿನ 5 ವರ್ಷದಲ್ಲಿ ದೇಶದ ಆರ್ಥಿಕತೆಯ ರಾಜಧಾನಿಯಾಗಲಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಯೋಜನೆಗಳನ್ನು ರೂಪಿಸಲಿದೆ’ ಎಂದು ಭರವಸೆ ನೀಡಿದರು. ‘ಕರ್ನಾಟಕವು ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸ್ಟಾರ್ಟಪ್‌ಗಳಲ್ಲಿ ಉತ್ತಮ ಸ್ಥಾನದಲ್ಲಿದೆ. ಬೆಂಗಳೂರನ್ನು ಹೊರತುಪಡಿಸಿ ಉಳಿದ ಭಾಗವೂ ಅಭಿವೃದ್ಧಿಯಾಗಬೇಕು. ಕೃಷಿ, ತಂತ್ರಜ್ಞಾನ, ಆರ್ಥಿಕತೆ ಹೀಗೆ ಎಲ್ಲ ರಂಗಗಳಲ್ಲಿಯೂ ಕರ್ನಾಟಕ ಹಾಗೂ ಬೆಂಗಳೂರು ಅತ್ಯುತ್ತಮ ಶ್ರೇಯಾಂಕ ಹೊಂದಿವೆ. ಇದರಿಂದ ನಮ್ಮ ಜವಾಬ್ದಾರಿಯೂ ಹೆಚ್ಚಿದ್ದು ಸಮರ್ಥವಾಗಿ ನಿಭಾಯಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

Bengaluru: ನಿಜವಾದ ಸಂತೋಷ ಆತ್ಮಸಾಕ್ಷಿಯಲ್ಲಿದೆ: ಸಿಎಂ ಬೊಮ್ಮಾಯಿ

ಬಂಗಾರದ ಹೃದಯವುಳ್ಳ ನಗರ: ‘ಎಲ್ಲ ಕ್ಷೇತ್ರಗಳಲ್ಲೂ ನಾವು ಮುಂಚೂಣಿಯಲ್ಲಿ ಇರುವುದರ ಜೊತೆಗೆ ಪ್ರಥಮ ಸ್ಥಾನ ಕಾಯ್ದಿರಿಸಿಕೊಂಡಿರುವುದು ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಪರಿಶ್ರಮ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾಡಿನ ಎಂಜಿನಿಯರ್‌ಗಳು, ವಿಜ್ಞಾನಿಗಳು ಹಾಗೂ ಅವರ ಪರಿಶ್ರಮದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಆಧುನಿಕ ತಂತ್ರಜ್ಞಾನವು ಮಾನವನ ಒಳಿತಿಗೆ, ಉತ್ತಮ ಸಮಾಜ ನಿರ್ಮಾಣಕ್ಕೆ ಬಳಕೆಯಾಗಬೇಕು’ ಎಂದು ಕರೆ ನೀಡಿದರು.

‘ಆತ್ಮವಿಶ್ವಾಸವೇ ಟೆಕ್‌ ಸಮಿಟ್‌ನ ಸ್ಫೂರ್ತಿಯಾಗಿದೆ. ಬೆಂಗಳೂರಿನಲ್ಲಿ ಎಲ್ಲರೂ ಒಟ್ಟುಗೂಡಿ ಟೆಕ್‌ ಸಮ್ಮಿಟ್‌ ಯಶಸ್ವಿಗೊಳಿಸಿದ್ದೇವೆ. ಇದನ್ನು ಮುಂದಕ್ಕೆ ಕೊಂಡೊಯ್ಯಬೇಕು. ಮೂರು ದಿನದ ಈ ಉತ್ಸವದಲ್ಲಿ ಪಾಲ್ಗೊಂಡವರ ಭಾವನೆಗಳೇನು ಎನ್ನುವುದು ಬಹಳ ಮುಖ್ಯ. ಬೆಂಗಳೂರು ಎಂದರೆ ಬಂಗಾರದ ಊರು. ಬಂಗಾರದಂಥ ಹೃದಯವುಳ್ಳ ಜನರ ನಗರವಿದು’ ಎಂದು ಬಣ್ಣಿಸಿದರು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌, ಭಾರೀ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ , ಸ್ಟಾರ್ಟಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಐಟಿ-ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌ ಉಪಸ್ಥಿತರಿದ್ದರು.

ಸೂರ್ಯ, ಚಂದ್ರ ಇರುವವರೆಗೆ ಕನ್ನಡಕ್ಕೆ ಆಪತ್ತಿಲ್ಲ; ಸಿಎಂ ಬೊಮ್ಮಾಯಿ

ಕೆಂಪೇಗೌಡರು ಕಟ್ಟಿದ ಬೆಂಗಳೂರು ಪ್ರಗತಿಯ ಸಂಕೇತವಾಗಿದ್ದು, 500 ವರ್ಷಗಳ ನಂತರವೂ ನಿರಂತರವಾಗಿ ಅದೇ ಹಾದಿಯಲ್ಲಿ ಸಾಗುತ್ತಿದೆ. ಹೂಡಿಕೆದಾರರ ಸಮಾವೇಶದಲ್ಲಿ ‘ಕಾಂತಾರ’ ಸಿನಿಮಾ ಬಗ್ಗೆ ಉಲ್ಲೇಖಿಸಿದ್ದ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರು, ಬಿಟಿಎಸ್‌ ಸಮಾರೋಪದಲ್ಲಿ ‘ಪ್ರಗತಿಯ ಪ್ರತಿಮೆ’ ಬಗ್ಗೆ ಉಲ್ಲೇಖಿಸಿದ್ದಾರೆ. ಇವೆರಡೂ ಕನ್ನಡಿಗರ ಹೃದಯಕ್ಕೆ ಹತ್ತಿರವಾದ ಸಂಗತಿಗಳಾಗಿವೆ.
-ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಐಟಿ-ಬಿಟಿ ಸಚಿವ

click me!