ರಾಜಸ್ಥಾನ ರಾಯಲ್ಸ್‌ ಮಾಜಿ ಆಟಗಾರ ಈಗ RCB ಹೊಸ ಬಾಸ್‌: ಯಾರು ಈ ಆರ್ಯಮಾನ್‌ ಬಿರ್ಲಾ?

Published : Mar 24, 2026, 10:40 PM IST
Aryaman Vikram Birla RCB Chairman

ಸಾರಾಂಶ

ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತಕ್ಕೆ ಆರ್‌ಸಿಬಿ ತಂಡ ಮಾರಾಟವಾಗಿದ್ದು, ಆದಿತ್ಯ ಬಿರ್ಲಾ ಗ್ರೂಪ್‌ ಮತ್ತು ಟೈಮ್ಸ್‌ ಆಫ್‌ ಇಂಡಿಯಾ ಒಕ್ಕೂಟ ಇದನ್ನು ಖರೀದಿಸಿದೆ.   ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ ಆರ್ಯಮಾನ್‌ ವಿಕ್ರಮ್‌ ಬಿರ್ಲಾ ಆರ್‌ಸಿಬಿಯ ನೂತನ ಚೇರ್ಮನ್‌ ಆಗಿ ನೇಮಕಗೊಂಡಿದ್ದಾರೆ.

ಬೆಂಗಳೂರು (ಮಾ.24): ಭಾರತದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಮೊತ್ತಕ್ಕೆ ಸ್ಪೋರ್ಟ್ಸ್‌ ಟೀಮ್‌ ಮಾರಾಟವಾಗಿದೆ. ಬರೋಬ್ಬರಿ 16,706 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್‌ ಹಾಗೂ ಟೈಮ್ಸ್‌ ಆಫ್‌ ಇಂಡಿಯಾ ಮಾಲೀಕತ್ವದ ಒಕ್ಕೂಟ ಖರೀದಿ ಮಾಡಿದೆ. ಆದರೆ, ಈ ಖರೀದಿ ಇನ್ನೂ ಬಿಸಿಸಿಐ ಹಾಗೂ ಭಾರತೀಯ ಸ್ಪರ್ಧಾ ಆಯೋಗದ (CCI) ಅಧಿಕೃತ ಅನುಮೋದನೆಗೆ ಒಳಪಟ್ಟಿದೆ. ಇದೆಲ್ಲದರ ನಡುವೆ ಅತ್ಯಂತ ಮಹತ್ವದ ವಿಚಾರ ಗೊತ್ತಾಗಿರೋದು ಏನೆಂದರೆ, 2018ರಲ್ಲಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಸ್ಥಾನ ಪಡೆದಿದ್ದ ಮುಂಬೈ ಬ್ಯಾಟ್ಸ್‌ಮನ್‌ ಆರ್ಯಮಾನ್‌ ವಿಕ್ರಮ್‌ ಬಿರ್ಲಾ ಆರ್‌ಸಿಬಿಯ ಹೊಸ ಚೇರ್ಮನ್‌ ಆಗಿದ್ದಾರೆ.

ಕ್ರಿಕೆಟ್‌ನಲ್ಲಿ ಯಶಸ್ಸು ಸಿಗದ ಹಿನ್ನಲೆಯಲ್ಲಿ ತಂದೆ ಶತಕೋಟ್ಯಧಿಪತಿ ಆದಿತ್ಯ ಬಿರ್ಲಾ ಗ್ರೂಪ್‌ನ ಚೇರ್ಮನ್‌ ಆಗಿರುವ ಕುಮಾರ ಮಂಗಲಂ ಬಿರ್ಲಾ ಅವರ ವ್ಯವಹಾರಕ್ಕೆ ಕೂಡಿಕೊಂಡಿದ್ದರು. ಈಗ ಅವರು ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕರಾಗಿದ್ದಾರೆ.

ಮುಂಬೈ ಪರವಾಗಿ ಲಿಸ್ಟ್‌ ಎ ಹಾಗೂ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿದ್ದ ಆರ್ಯಮಾನ್‌ ಬಿರ್ಲಾ, ಪ್ರಖ್ಯಾತ ಬಿರ್ಲಾ ಉದ್ಯಮಿ ಕುಟುಂಬದ 6ನೇ ತಲೆಮಾರಿನ ಸದಸ್ಯ. ಕುಮಾರ್ ಮಂಗಳಂ ಬಿರ್ಲಾ ಅವರು ಭಾರತದ ಮೂರನೇ ಅತಿದೊಡ್ಡ ಖಾಸಗಿ ವಲಯದ ಸಂಘಟಿತ ಸಂಸ್ಥೆಯಾದ 'ಆದಿತ್ಯ ಬಿರ್ಲಾ ಗ್ರೂಪ್'ನ ಅಧ್ಯಕ್ಷ. ಸಹೋದರಿ ಅನನ್ಯ ಬಿರ್ಲಾ ಅವರು 2016 ರಿಂದ ಪಾಪ್ ಮತ್ತು ಎಲೆಕ್ಟ್ರೋ ಪಾಪ್ ಪ್ರಕಾರದ ಪಾಶ್ಚಿಮಾತ್ಯ ಸಂಗೀತದಲ್ಲಿ ಗಾಯಕಿ ಹಾಗೂ ಗೀತರಚನೆಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಆಕೆಯೂ ಕೂಡ ಮ್ಯೂಸಿಕ್‌ನ ಮೇಲಿನ ಆಸಕ್ತಿಯನ್ನು ತೊರೆದು ಬಿರ್ಲಾ ಗ್ರೂಪ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

1997ರಲ್ಲಿ ಆರ್ಯಮಾನ್‌ ಬಿರ್ಲಾ ಜನನ

1997ರಲ್ಲಿ ಜನಿಸಿದ್ದ ಆರ್ಯಮಾನ್‌ ಬಿರ್ಲಾ, ವ್ಯವಹಾರದ ಕೌಟುಂಬಿಕ ಸಂಪ್ರದಾಯಕ್ಕಿಂತ ಭಿನ್ನವಾಗಿ, ಅವರು ಕ್ರಿಕೆಟ್ ಅನ್ನು ಆರಿಸಿಕೊಂಡಿದ್ದರು. ಮಹಾರಾಷ್ಟ್ರ ದೇಶಿಯ ತಂಡದ ಪರ ಆಡಿದ್ದ ಆರ್ಯಮಾನ್‌, 2017-18ರ ರಣಜಿ ಟ್ರೋಫಿಯ ಭಾಗವಾಗಿ 25 ನವೆಂಬರ್ 2017 ರಂದು ತಮ್ಮ ಮೊದಲ ಪಂದ್ಯವನ್ನು ಆಡಿದರು. ಒಡಿಶಾ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಎರಡು ಇನ್ನಿಂಗ್ಸ್‌ಗಳಲ್ಲಿ 16 ಮತ್ತು 6 ರನ್ ಗಳಿಸಿದರು ಮತ್ತು ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 51 ರನ್ ಗಳಿಸುವ ಮೂಲಕ ತಮ್ಮ ಮೊದಲ ಅರ್ಧಶತಕವನ್ನು ದಾಖಲಿಸಿದ್ದರು. ನವೆಂಬರ್ 2018 ರಲ್ಲಿ ತಮ್ಮ ಮೂರನೇ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವನ್ನು ಬಾರಿಸಿದರು.

2018ರಲ್ಲಿ ರಾಜಸ್ಥಾನ ರಾಯಲ್ಸ್‌ ಐಪಿಎಲ್‌ ಟೀಮ್‌ಗೆ ಸೇರಿಕೊಂಡಿದ್ದ ಅವರು ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ಛತ್ತೀಸ್‌ಗಢ ವಿರುದ್ಧದ ಮಧ್ಯಪ್ರದೇಶದ ಅಂಡರ್-13 ಪಂದ್ಯದಲ್ಲಿ ದ್ವಿಶತಕ ಬಾರಿಸಿ 10 ವಿಕೆಟ್‌ಗಳನ್ನು ಪಡೆದಿದ್ದು, ಐಪಿಎಲ್ ಆಡಿಷನ್‌ನಲ್ಲಿ ಸ್ಥಾನ ಪಡೆಯಲು ಅವರಿಗೆ ಸಹಾಯ ಮಾಡಿತು. ಸಿಕೆ ನಾಯ್ಡು ಟ್ರೋಫಿಯಲ್ಲಿ ಅವರು 6 ಪಂದ್ಯಗಳಲ್ಲಿ 79.5 ರ ಸರಾಸರಿಯಲ್ಲಿ 795 ರನ್ ಗಳಿಸಿದ್ದೂ ಕೂಡ ಐಪಿಎಲ್‌ ಒಪ್ಪಂದ ಪಡೆಯಲು ನೆರವಿಗೆ ಬಂದಿತ್ತು.

ಆರ್‌ಸಿಬಿಯ ಹೊಸ ಬಾಸ್‌ ಆರ್ಯಮಾನ್‌ ಬಿರ್ಲಾ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

  1. ಇವರ ತಂದೆಯ ಕಡೆಯ ಅಜ್ಜ ಆದಿತ್ಯ ವಿಕ್ರಮ್ ಬಿರ್ಲಾ ಮತ್ತು ಮುತ್ತಜ್ಜ ಬಸಂತ್ ಕುಮಾರ್ ಬಿರ್ಲಾ ಕೈಗಾರಿಕೋದ್ಯಮಿಗಳು. ಅಜ್ಜಿ ಪದ್ಮಭೂಷಣ ರಾಜಶ್ರೀ ಬಿರ್ಲಾ ಸಾಮಾಜಿಕ ಕಾರ್ಯದಿಂದಲೇ ಹೆಸರು ಮಾಡಿದ್ದವರು. ಇವರ ಮುತ್ತಜ್ಜಿ ಸರಳಾ ಬಿರ್ಲಾ ಉದ್ಯಮಿಯಾಗಿ ಹೆಸರು ಮಾಡಿದ್ದರು.
  2. ಇವರ ಮುತ್ತಜ್ಜಿ ಸರಳಾ ಬಿರ್ಲಾ ಅವರ ಮೂಲಕ ಇವರು ಸ್ವಾತಂತ್ರ್ಯ ಹೋರಾಟಗಾರ ಬ್ರಜ್‌ಲಾಲ್ ಬಿಯಾನಿ ಅವರಿಗೆ ಸಂಬಂಧಿಯಾಗಿದ್ದಾರೆ. ಸರಳಾ ಬಿರ್ಲಾ ಅವರು ಬ್ರಜ್‌ಲಾಲ್ ಬಿಯಾನಿ ಅವರ ಪುತ್ರಿ.
  3. ಘನಶ್ಯಾಮ್ ದಾಸ್ ಬಿರ್ಲಾ (ಜಿಡಿ ಬಿರ್ಲಾ), ರಾಮೇಶ್ವರ್ ದಾಸ್ ಬಿರ್ಲಾ (ಆರ್‌ಡಿ ಬಿರ್ಲಾ), ಬಲದೇವ್ ದಾಸ್ ಬಿರ್ಲಾ (ಬಿಡಿ ಬಿರ್ಲಾ), ಕೃಷ್ಣ ಕುಮಾರ್ ಬಿರ್ಲಾ (ಕೆಕೆ ಬಿರ್ಲಾ), ಗಂಗಾ ಪ್ರಸಾದ್ ಬಿರ್ಲಾ, ಚಂದ್ರಕಾಂತ್ ಬಿರ್ಲಾ ಮತ್ತು ಯಶೋವರ್ಧನ್ ಬಿರ್ಲಾ ಅವರು ಬಿರ್ಲಾ ಕುಟುಂಬದ ವಿವಿಧ ತಲೆಮಾರುಗಳ ಇತರ ಪ್ರಮುಖ ವ್ಯಕ್ತಿಗಳು. ಇವರಲ್ಲಿ ಹೆಚ್ಚಿನವರು ವ್ಯವಹಾರ ಮತ್ತು ಕೈಗಾರಿಕೋದ್ಯಮಿಗಳಾಗಿ ಪ್ರಸಿದ್ಧರಾಗಿದ್ದಾರೆ.
  4. ಆರ್ಯಮಾನ್‌ ವಿಕ್ರಮ್‌ ಬಿರ್ಲಾ ತಮ್ಮ ತಂದೆಯ ಶತಮಾನಗಳಷ್ಟು ಹಳೆಯದಾದ ವ್ಯವಹಾರದ ಪರಂಪರೆಯನ್ನು ಮುಂದುವರಿಸಲು ಆರಂಭದಲ್ಲಿ ಬಯಸಿರಲಿಲ್ಲ. ಕ್ರಿಕೆಟಿಗರಾಗಬೇಕು ಎನ್ನುವ ಆಸಕ್ತಿ ಇವರಲ್ಲಿತ್ತು. ಕ್ರಿಕೆಟ್‌ ಸಲುವಾಗಿ ತಮ್ಮೆಲ್ಲಾ ಐಷಾರಾಮಿ ಜೀವನವನ್ನು ತೊರೆದು 'ರೇವಾ' ಎಂಬ ಸಣ್ಣ ಪಟ್ಟಣಕ್ಕೆ ತೆರಳಿ ಅಭ್ಯಾಸ ಮಾಡಿದ್ದರಯ.
  5. ಇವರು 21 ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಯಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ 189 ಎಸೆತಗಳಲ್ಲಿ 103 ರನ್ ಗಳಿಸುವ ಮೂಲಕ ತಮ್ಮ ಚೊಚ್ಚಲ ಶತಕ ದಾಖಲಿಸಿದರು. 2018 ರಲ್ಲಿ ಬಂಗಾಳದ ವಿರುದ್ಧ ಮಧ್ಯಪ್ರದೇಶ ತಂಡಕ್ಕಾಗಿ ಈ ಶತಕವನ್ನು ಬಾರಿಸಿದರು.
  6. ಹಚ್ಚೆಗಳನ್ನು ಆರ್ಯಮಾನ್‌ ವಿಕ್ರಮ್‌ ಬಿರ್ಲಾ ಇಷ್ಟಪಡುತ್ತಾರೆ. ತಮ್ಮ ಎಡಗೈ ಮೇಲೆ ಅಕ್ಷರಗಳಿರುವ ಟ್ಯಾಟುವನ್ನು ಅವರು ಹೊಂದಿದ್ದಾರೆ.
  7. ಇವರು ಎಡಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಆರ್ಥೊಡಾಕ್ಸ್ ಸ್ಪಿನ್ ಬೌಲರ್ ಆಗಿದ್ದಾರೆ.
  8. ಕೋಟ್ಯಧೀಶನಾಗಿದ್ದರೂ, ಆರ್ಯಮನ್ ಯಾವಾಗಲೂ ಐಷಾರಾಮಿ ಜೀವನವನ್ನು ಬದಿಗಿಟ್ಟು ಸರಳ ಜೀವನಶೈಲಿಯನ್ನು ಆರಿಸಿಕೊಂಡಿದ್ದಾರೆ. ಅವರು ಪ್ರಯಾಣಕ್ಕಾಗಿ ರೈಲುಗಳಲ್ಲಿ ನಾನ್-ಎಸಿ ಕಂಪಾರ್ಟ್‌ಮೆಂಟ್‌ಗಳನ್ನು ಇಷ್ಟಪಡುತ್ತಾರೆ, ಪ್ರವಾಸಗಳ ಸಮಯದಲ್ಲಿ ಸಣ್ಣ ರೆಸಾರ್ಟ್‌ಗಳಲ್ಲಿ ಉಳಿಯುತ್ತಾರೆ ಮತ್ತು ತಮ್ಮ ಗುರಿಯನ್ನು ತಲುಪಲು 48 ಡಿಗ್ರಿ ತಾಪಮಾನದಲ್ಲಿಯೂ ಅಭ್ಯಾಸ ಮಾಡುತ್ತಾರೆ.
  9. ಇವರ ಮುತ್ತಜ್ಜ ಬಸಂತ್ ಕುಮಾರ್ ಬಿರ್ಲಾ ಅವರು 2019 ರಲ್ಲಿ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾದರು.
  10. 19 ನೇ ಶತಮಾನದ ಆರಂಭದಲ್ಲಿ ಬದುಕಿದ್ದ ಸೇಠ್ ಭುಧರ್ಮಲ್ ಅವರ ಮೊಮ್ಮಗ ಸೇಠ್ ಶೋಭಾರಾಮ್ ಅವರು ಬಿರ್ಲಾ ಕುಟುಂಬದಿಂದ ವ್ಯಾಪಾರ ಮತ್ತು ವ್ಯವಹಾರಕ್ಕೆ ಇಳಿದ ಮೊದಲ ವ್ಯಕ್ತಿ. ಅವರು ಸ್ಥಳೀಯ ವ್ಯಾಪಾರಿಯಾಗಿದ್ದರು. ಅವರ ಮಗ ಸೇಠ್ ಶಿವನಾರಾಯಣ ಅವರು 19 ನೇ ಶತಮಾನದ ಕೊನೆಯಲ್ಲಿ ತಮ್ಮ ತವರು ಪಟ್ಟಣವಾದ ಪಿಲಾನಿ (ಈಗ ರಾಜಸ್ಥಾನದ ಭಾಗ) ಹೊರಗೆ ವ್ಯವಹಾರವನ್ನು ವಿಸ್ತರಿಸಿದರು. ಅಂದಿನಿಂದ ಬಿರ್ಲಾ ಕೈಗಾರಿಕಾ ಕುಟುಂಬ ಪ್ರವರ್ಧಮಾನಕ್ಕೆ ಬಂದಿತು.
  11. ಶೋಭನಾ ಭಾರ್ತಿಯಾ (ಕೃಷ್ಣ ಕುಮಾರ್ ಬಿರ್ಲಾ ಅವರ ಪುತ್ರಿ) ಬಿರ್ಲಾ ಕುಟುಂಬದ ಪ್ರಮುಖ ಮಹಿಳಾ ಸದಸ್ಯೆ (ರಾಜಶ್ರೀ ಬಿರ್ಲಾ ಮತ್ತು ಸರಳಾ ಬಿರ್ಲಾ ಈ ಕುಟುಂಬದ ಸೊಸೆಯಂದಿರು). ಅವರು ತಮ್ಮ ತಂದೆಯಿಂದ ಉತ್ತರಾಧಿಕಾರವಾಗಿ ಪಡೆದ 'ಹಿಂದೂಸ್ತಾನ್ ಟೈಮ್ಸ್ ಗ್ರೂಪ್'ನ ಅಧ್ಯಕ್ಷೆ ಮತ್ತು ಸಂಪಾದಕೀಯ ನಿರ್ದೇಶಕರಾಗಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Breaking: 16,706 ಕೋಟಿ ರೂಪಾಯಿಗೆ ಮಾರಾಟವಾದ RCB: ಆದಿತ್ಯ ಬಿರ್ಲಾ-ಟೈಮ್ಸ್‌ ಗ್ರೂಪ್‌ ಹೊಸ ಮಾಲೀಕರು!
ಅದಾನಿ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ 850 ಕೋಟಿ ಹಣ ಬಾಕಿ!