
ದಾವಣಗೆರೆ (ಆ.17): ಬಹಿರ್ದೆಸೆಗೆ ಹೋಗಿದ್ದ ಒಂಟಿ ಮಹಿಳೆ ಮೇಲೆ ಕರಡಿಯೊಂದು ತನ್ನ ಎರಡು ಮರಿಗಳ ಜತೆ ದಿಢೀರ್ ದಾಳಿ ಮಾಡಿದರೂ ಆಕೆ ಎದೆಗುಂದದೇ ಹೋರಾಡಿ ಪ್ರಾಣಾಪಾಯದಿಂದ ಪಾರಾದ ಘಟನೆ ಜಗಳೂರು ತಾಲೂಕಿನ ಗೋಪಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಜೇನಹಳ್ಳಿ ಗ್ರಾಮದ ನೇತ್ರಾವತಿ ಕರಡಿಯೊಂದಿಗೆ ಸೆಣಸಾಡಿದ ಧೀರಮಹಿಳೆ. ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿರುವ ಅವರು ಪತಿ, ಮಕ್ಕಳೊಂದಿಗೆ ಫಾರಂನಲ್ಲಿಯೇ ವಾಸ ಮಾಡುತ್ತಿದ್ದಾರೆ. ಕೋಳಿ ಫಾರಂ ಸುತ್ತಲಿನ ಪ್ರದೇಶದಲ್ಲಿ ದಟ್ಟ ಅರಣ್ಯವಿದೆ. ಅರಣ್ಯಕ್ಕೆ ಬಹಿರ್ದೆಸೆಗೆಂದು ಕಾಡು ಹಾದಿಯಲ್ಲಿ ನೇತ್ರಾವತಿ ಹೋಗಿದ್ದರು. ಈ ವೇಳೆ ಎರಡು ಮರಿಗಳಿದ್ದ ತಾಯಿ ಕರಡಿ ಏಕಾಏಕಿ ದಾಳಿ ಮಾಡಿದೆ.
ರಕ್ಷಣೆಗಾಗಿ ಕೂಗಾಡಿದ್ದಾರೆ. ರಕ್ಷಣೆಗೆ ಯಾರೂ ಬಂದಿಲ್ಲ. ಎದೆಗುಂದದೆ ಹೋರಾಡಿದ ನೇತ್ರಾವತಿ ದೊಡ್ಡ ಕರಡಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಆದರೂ ಕರಡಿ ಅವರನ್ನು ಬೆನ್ನಟ್ಟಿದೆ. ದಾಳಿ ವೇಳೆ ನೇತ್ರಾವತಿ ಅವರ ಕಣ್ಣು, ಕೈ, ಕಾಲುಗಳಿಗೆ ಗಾಯವಾಗಿವೆ. ಬಳಿಕ ದೊಡ್ಡ ಮರವೊಂದರ ಪೊದೆಯಲ್ಲಿ ರಕ್ಷಣೆ ಪಡೆಯಲು ಯತ್ನಿಸಿದ್ದಾರೆ.
ಓಡುವಾಗ ಗುಂಡಿಯಲ್ಲಿ ಬಿದ್ದರೂ, ಧೃತಿಗೆಡದೆ ಅರಣ್ಯ ಪ್ರದೇಶದಿಂದ ರಸ್ತೆ ತಲುಪಿದ ಪರಿಣಾಮ ಅವರು ಬದುಕುಳಿದಿದ್ದಾರೆ. ಬಳಿಕ ನೇತ್ರಾವತಿಯನ್ನು ಅವರ ತಾಯಿ ಆಸ್ಪತ್ರೆಗೆ ಸೇರಿಸಿದ್ದಾರೆ.