
ಇಂದಿನ ದಿನಗಳಲ್ಲಿ ರಸ್ತೆಯಲ್ಲಿ ರೋಡ್ ರೇಜ್ ಪ್ರಕರಣಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ಮನೆಯಲ್ಲಿ, ಕಚೇರಿಯಲ್ಲಿ ಶಾಂತಮೂರ್ತಿಯಾಗಿ ಇರುವವನು ಕೂಡ ವಾಹನ ಚಲಾಯಿಸುವಾಗ ಯಾರಾದರೂ ಸಿಗ್ನಲ್ ನೀಡದೇ ಅಡ್ಡ ಬಂದರೆ, ತನ್ನ ಗಾಡಿಗೆ ಉಜ್ಜಿಕೊಂಡು ಹೋದರೆ ದೂರ್ವಾಸನಂತೆ ಕೆಂಡಾಮಂಡಲ ಸಿಟ್ಟಿಗೆದ್ದು ಕೂಗಾಡಿಬಿಡುತ್ತಾನೆ. ಅದ್ಯಾಕೆ ಹಾಗೆ ಒತ್ತಡ ಹಾಗೆ ಮಾಡಿಸುತ್ತದೆ. ಕೆಲವೊಮ್ಮೆ ನೀವು ಎಷ್ಟೇ ಎಚ್ಚರಿಕೆಯಿಂದ ವಾಹನ ಚಲಾಯಿಸಿದರೂ, ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೂ, ಅಪಘಾತಗಳು ಸಂಭವಿಸುತ್ತವೆ. ಜ್ಯೋತಿಷಿಗಳ ಪ್ರಕಾರ ಇಂತಹ ಘಟನೆಗಳಿಗೆ ದೈಹಿಕ ಕಾರಣಗಳಷ್ಟೇ ಅಲ್ಲ, ಶಕ್ತಿಯ ಅಸಮತೋಲನ ಮತ್ತು ಗ್ರಹಗಳ ಪ್ರಭಾವವೂ ಕಾರಣ ಆಗಿರುತ್ತದೆ.
ಹಾಗಾದರೆ ಏನು ಮಾಡಬಹುದು? ಹೀಗೆ- ವಾಹನ ಚಲಾಯಿಸುವ ಮೊದಲು ಕೇವಲ ಐದು ಸೆಕೆಂಡುಗಳ ಕಾಲ ನಿಂತು ಅಥವಾ ಕುಳಿತು ಮನಸ್ಸಿನಲ್ಲಿ ಒಂದು ಸರಳ ಸುರಕ್ಷತಾ ಮಂತ್ರವನ್ನು ಪಠಿಸಿದರೆ, ಜೀವನದಲ್ಲಿ ದೊಡ್ಡ ಅಪಘಾತಗಳನ್ನು ತಪ್ಪಿಸಬಹುದು. ಹಾಗೇ ಚಲಾಯಿಸುವಾಗಲೂ ಮೈಂಡ್ ಕೂಲ್ ಆಗಿರಲು ಕೆಲವು ಮಂತ್ರಗಳನ್ನು ಪಠಿಸುತ್ತಾ ಚಲಾಯಿಸಬಹುದು. ಪ್ರತಿಯೊಂದು ಪ್ರಯಾಣವೂ ಒಂದು ಹೊಸ ಆರಂಭವಾಗಿದೆ. ಜೀವನದಲ್ಲಿ ಯಾವುದೇ ಹೊಸ ಕೆಲಸವನ್ನು ಆರಂಭಿಸುವಾಗ ದೇವರನ್ನು ಸ್ಮರಿಸುವಂತೆ, ವಾಹನ ಚಲಾಯಿಸುವ ಮೊದಲು ದೇವರ ಹೆಸರನ್ನು ಮನಸ್ಸಿನಲ್ಲಿ ಪಠಿಸಿದರೆ ಆ ಪ್ರಯಾಣವು ಸುರಕ್ಷಿತ ಮತ್ತು ಶುಭಕರವಾಗಿರುತ್ತದೆ. ಇದು ಮಾನಸಿಕ ಶಾಂತಿಯನ್ನು ನೀಡುವುದರ ಜೊತೆಗೆ ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಹಾಗಾದರೆ ಅವು ಯಾವುವು?
ಓಂ ಶ್ರೀ ಗಣೇಶಾಯ ನಮಃ- ಗಣೇಶನು ಎಲ್ಲ ಕೆಲಸಗಳ ಆರಂಭದಲ್ಲಿ ಪೂಜಿತನಾಗುತ್ತಾನೆ. ಈ ಮಂತ್ರವು ಪ್ರಯಾಣದಲ್ಲಿನ ಅಡೆತಡೆಗಳನ್ನು ತೊಡೆದುಹಾಕುತ್ತದೆ. ವಾಹನವನ್ನು ಸ್ಟಾರ್ಟ್ ಮಾಡುವ ಮೊದಲು ಈ ಮಂತ್ರವನ್ನು ಮನಸ್ಸಿನಲ್ಲಿ ಪುನರಾವರ್ತಿಸಿ.
ಓಂ ನಮಃ ಶಿವಾಯ- ಶಿವನ ಸ್ಮರಣೆಯು ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿ ಇಡುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಅಪಘಾತಗಳಿಂದ ರಕ್ಷಣೆ ಸಿಗುತ್ತದೆ.
ಓಂ ಹಂ ಹನುಮತೇ ನಮಃ- ಹನುಮಂತನು ತೊಂದರೆಗಳನ್ನು ನಿವಾರಿಸುವವನೆಂದು ಪರಿಗಣಿತನಾಗಿದ್ದಾನೆ. ಈ ಮಂತ್ರವು ಪ್ರಯಾಣದ ಸುರಕ್ಷತೆಯನ್ನು ಖಾತರಿಪಡಿಸುತ್ತದೆ.
ಓಂ ಅಂತೇ ರಕ್ಷಾಯ ನಮಃ- ಈ ಮಂತ್ರವು ನೇರವಾಗಿ ರಕ್ಷಣೆಗೆ ಸಂಬಂಧಿಸಿದೆ. ಇದು ಚಾಲಕರಿಗೆ ಸಾಮಾನ್ಯವಾಗಿ ಉಪಯೋಗವಾಗುವ ಮಂತ್ರವಾಗಿದೆ. ಇದರ ಪಠಣೆಯಿಂದ ಮಾನಸಿಕ ರಕ್ಷಣಾತ್ಮಕ ಗೋಡೆಯು ನಿರ್ಮಾಣವಾಗುತ್ತದೆ.
ಕೇವಲ ಮಂತ್ರಗಳ ಪಠಣ ಸಾಕಾಗುವುದಿಲ್ಲ. ವಾಹನದಲ್ಲಿ ಕೆಲವು ಸರಳ ವಾಸ್ತು ಕ್ರಮಗಳನ್ನು ಅನುಸರಿಸಿದರೆ ಧನಾತ್ಮಕ ಶಕ್ತಿಯ ಉತ್ತೇಜನಕ್ಕೂ ಸಹಾಯವಾಗುತ್ತದೆ. ವಾಹನದಲ್ಲಿ ಗಣೇಶ, ಶಿವ ಅಥವಾ ಹನುಮಂತನ ಸಣ್ಣ ವಿಗ್ರಹ ಅಥವಾ ಚಿತ್ರವನ್ನು ಇಡಿ. ಇದು ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ವಾಹನದ ಡ್ಯಾಶ್ಬೋರ್ಡ್ನಲ್ಲಿ ಅಥವಾ ವಾಹನದ ಬಾಗಿಲಿನ ಮೇಲೆ ಮುಳ್ಳಿನ ಗಿಡಗಳನ್ನು ಇಡಬೇಡಿ; ಇವು ನಕಾರಾತ್ಮಕತೆಯನ್ನು ತರುತ್ತವೆ.
ವಾಹನವನ್ನು ಸ್ಟಾರ್ಟ್ ಮಾಡುವ ಮೊದಲು 3 ರಿಂದ 5 ಸೆಕೆಂಡುಗಳ ಕಾಲ ಕಾಯಿರಿ, ಕಣ್ಮುಚ್ಚಿ ಮಂತ್ರವನ್ನು ಪಠಿಸಿ. ಯಾವಾಗಲೂ ಬಲಗೈಯಿಂದಲೇ ವಾಹನವನ್ನು ಸ್ಟಾರ್ಟ್ ಮಾಡಿ; ಇದು ಶುಭಕರವೆಂದು ಪರಿಗಣಿಸಲಾಗುತ್ತದೆ. ವಾಹನದಲ್ಲಿ ಕೆಂಪು ಅಥವಾ ಹಳದಿ ಬಣ್ಣದ ವಸ್ತ್ರವನ್ನು ಇಡಿ. ಈ ಬಣ್ಣಗಳು ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಮನಸ್ಸಿಗೆ ಸ್ಥೈರ್ಯವನ್ನು ನೀಡುತ್ತವೆ.