ತುಳಸಿಗೆ ಥ್ಯಾಂಕ್ಸ್ ಹೇಳುತ್ತಲೇ ಆಣೆ ಪಡೆದುಕೊಂಡ ಶಾರ್ವರಿ! ಅಷ್ಟಕ್ಕೂ ತುಳಸಿಗೆ ತಿಳಿದ ರಹಸ್ಯವೇನು?
ತುಳಸಿಗೆ ರಹಸ್ಯವೊಂದು ತಿಳಿದಿದೆ. ಇದನ್ನು ಯಾರಿಗೂ ಹೇಳದಂತೆ ಶಾರ್ವರಿ ಅವಳಿಂದ ಆಣೆ ಪಡೆದುಕೊಂಡಿದ್ದಾಳೆ. ಅಷ್ಟಕ್ಕೂ ತುಳಸಿಗೆ ತಿಳಿದ ಸತ್ಯವೇನು?
ರಾತ್ರೋರಾತ್ರಿ ಮನೆಬಿಟ್ಟು ಹೋಗಿದ್ದ ಶಾರ್ವರಿಯ ಮಗಳು ನಿಧಿ ಎಲ್ಲರ ಕಣ್ಣಿಗೆ ಮಣ್ಣೆರಚಿ ಕದ್ದುಮುಚ್ಚಿ ಮನೆ ಸೇರಿದ್ದಳು. ಅವಳು ಮನೆಬಿಟ್ಟು ಹೋಗಿದ್ದನ್ನು ಅರಿತಿದ್ದ ತುಳಸಿಗೆ ಅವಳು ಹಿಂಬಾಲಿನಿಂದ ಮನೆಗೆ ಬಂದಿದ್ದು ತಿಳಿದಿರಲಿಲ್ಲ. ಇದು ತಿಳಿದಿದ್ದ ದೀಪಿಕಾ, ತುಳಸಿಯನ್ನು ಸಿಕ್ಕಿಸಿಹಾಕುವ ಕಾರಣದಿಂದ ತುಳಸಿಗೆ ಆ ವಿಷಯವನ್ನು ಹೇಳದೇ ನಿಧಿ ಮನೆಬಿಟ್ಟು ಹೋಗಿರುವುದನ್ನು ಮಾತ್ರ ಹೇಳಿದ್ದಳು. ಇದನ್ನು ತುಳಸಿ ಅಮ್ಮಾ ನೋಡಿರುವುದಾಗಿ ತಿಳಿಸಿದ್ದಳು. ಕೊನೆಗೆ ಮನೆಯವರು ನಿಧಿಯ ಕೋಣೆಗೆ ಹೋಗಿ ನೋಡಿದಾಗ, ನಿಧಿ ಅಲ್ಲಿಯೇ ಮಲಗಿದ್ದದ್ದನ್ನು ನೋಡಿ ಶಾರ್ವರಿ ಸೇರಿದಂತೆ ಎಲ್ಲರೂ ತುಳಸಿಯನ್ನೇ ಅಪರಾಧಿಯನ್ನಾಗಿ ಮಾಡಿದ್ದರು. ತನ್ನ ಮಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದಾಗಿ ಶಾರ್ವರಿ ಕೆಂಡಾಮಂಡಲವಾಗಿದ್ದರೆ, ಎಲ್ಲವನ್ನೂ ಅರಿತಿದ್ದ ದೀಪಿಕಾ ತಾನು ಅಂದುಕೊಂಡಂತೆ ಆಯಿತು ಎಂದು ಕುಹಕ ನಗು ಬೀರಿದ್ದಳು.
ಆದರೆ ಪ್ರತಿ ಸಲವೂ ಹಾಗೇ ಆಗಬೇಕೆಂದೇನಿಲ್ಲವಲ್ಲ. ಈಗ ರಾತ್ರಿ ನಿಧಿ ಕುಡಿದು ಬಂದು ತೂರಾಡುತ್ತಿದ್ದಾಗ ಪೊಲೀಸರು ಅವಳನ್ನು ಹಿಡಿದಿದ್ದಾರೆ. ಈ ಸಮಯದಲ್ಲಿ ತುಳಸಿ ಮತ್ತು ಸಮರ್ಥ್ ಬರುತ್ತಿದ್ದರು. ಪೊಲೀಸರನ್ನು ಕಾಡಿ ಬೇಡಿ ನಿಧಿಯನ್ನು ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಮಗಳಿಗೆ ಏನಾಯಿತೆಂದು ಶಾರ್ವರಿ ಗಾಬರಿಯಿಂದ ಬಂದಾಗ ನಡೆದ ವಿಷಯವನ್ನು ತುಳಸಿ ಹೇಳಿದ್ದಾಳೆ. ಕೊನೆಗೂ ತುಳಸಿಗೆ ಥ್ಯಾಂಕ್ಸ್ ಹೇಳಿದ ಶಾರ್ವರಿ, ಈ ವಿಷಯವನ್ನು ಮನೆಯಲ್ಲಿ ಯಾರಿಗೂ ಹೇಳದಂತೆ ತುಳಸಿಯ ಕೈಯಲ್ಲಿ ಆಣೆ ಮಾಡಿಸಿಕೊಂಡಿದ್ದಾಳೆ. ಅಷ್ಟಕ್ಕೂ ತುಳಸಿಯೇನೂ ಈ ವಿಷಯ ಹೇಳಲ್ಲ, ಆದರೆ ಸಮರ್ಥ್ಗೆ ಎಲ್ಲವೂ ಗೊತ್ತಲ್ಲ, ಅವನೇನೂ ಯಾರಿಗೂ ಆಣೆ ಮಾಡಿಲ್ಲವಲ್ಲ, ಅಗತ್ಯಬಿದ್ದರೆ ಅವನೇ ಬಹುಶಃ ಮನೆಯವರಿಗೆ ವಿಷಯ ತಿಳಿಸಿದರೂ ತಿಳಿಸಬಹುದು. ಆದರೆ ಸದ್ಯ ಅಂತೂ ತುಳಸಿ ಕಂಡಂತೆ ಉರಿದುಕೊಳ್ಳುತ್ತಿದ್ದ ಶಾರ್ವರಿ ಆಕೆಗೇ ಧನ್ಯವಾದ ಅರ್ಪಿಸುವ ಕಾಲ ಬಂದಿದೆ.
ಸ್ನಾನ ಸ್ಕಿಪ್ ಮಾಡುವ ಸೀಕ್ರೇಟ್ ಹೇಳಿದ ನಟಿ ತಮನ್ನಾ ಭಾಟಿಯಾ: ಏನಿದು ಮಿಲ್ಕಿ ಬ್ಯೂಟಿಯ ಸಂಡೇ ಗುಟ್ಟು?
ಅಷ್ಟಕ್ಕೂ ಇದಾಗಲೇ ಶಾರ್ವರಿಗೆ ಕೆಟ್ಟ ದಿಸೆ ಆರಂಭವಾಗಿ ಬಿಟ್ಟಿದೆ. ತುಳಸಿ, ಪೂರ್ಣಿ ಮತ್ತು ಮಾಧವ್ ಮೇಲೆ ಸದಾ ಕಿಡಿ ಕಾರುತ್ತಾ, ಅವರನ್ನು ತುಳಿಯಲು ನೋಡುತ್ತಾ, ಇನ್ನಿಲ್ಲದ ಮಸಲತ್ತು ಮಾಡುತ್ತಿರುವ ಶಾರ್ವರಿಗೆ ಈಗ ಸಂಕಟ ಎದುರಾಗಿದೆ. ಅದೂ ಖುದ್ದು ಪತಿ ಮಹೇಶ್ನಿಂದಲೇ. ಮಹೇಶ್ನಿಗೆ ಶಾರ್ವರಿಯ ಎಲ್ಲಾ ಮಸಲತ್ತುಗಳ ಪರಿಚಯ ಚೆನ್ನಾಗಿಯೇ ಇದೆ. ಇದೀಗ ಸಂಪೂರ್ಣವಾಗಿ ಹುಷಾರಾದ ಮೇಲೂ ಆ ವಿಷಯವನ್ನು ಕೆದಕಿರಲಿಲ್ಲ. ಆದರೆ ಪತ್ನಿ ಶಾರ್ವರಿಯ ಕುತಂತ್ರ ಆತನಿಗೆ ಚೆನ್ನಾಗಿ ಗೊತ್ತು. ಇದೀಗ ಪತ್ನಿಯನ್ನು ಹೊಗಳುವಂತೆ ಮಾಡಿ, ಮತ್ತೆ ಖರ್ಜೂರದ ವಿಷಯ ತೆಗೆದಿದ್ದ. ತುಳಸಿ, ಪೂರ್ಣಿಯನ್ನು ಯಾಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮಹೇಶ್ ಕೇಳಿದಾಗ, ಅವರಿಬ್ಬರೂ ಹೊರಗಿನವರಲ್ವಾ, ಅದಕ್ಕೆ ಹಾಗೆ ಅಂದಿದ್ದಾಳೆ ಶಾರ್ವರಿ. ಹಾಗಿದ್ದರೆ ದೀಪಿಕಾ ಕೂಡ ಹೊರಗಿನವಳಲ್ವಾ ಎಂದಿದ್ದ ಮಹೇಶ್. ಅದಕ್ಕೆ ಶಾರ್ವರಿ, ಹಾಗೇನು ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎನ್ನುವುದೇ ನನ್ನ ಆಸೆ ಎಂದಿದ್ದಳು.
ಇದೀಗ ಮತ್ತೆ ಮಹೇಶ್ ಪತ್ನಿಗೆ ಶಾಕ್ ಕೊಟ್ಟಿದ್ದಾನೆ. ಅಪಘಾತಕ್ಕೂ ಮುನ್ನ ಕೆಲವೊಬ್ಬರಿಂದ ಸಾಲ ಮಾಡಿದ್ದೆ. ಇನ್ನೂ ಕೆಲವು ಕೆಲಸ ಬಾಕಿ ಇದೆ. ಯಾವ ಕೆಲಸವನ್ನೂ ಉಳಿಸಿಕೊಳ್ಳಬಾರದು. ಎಲ್ಲವನ್ನೂ ವಸೂಲು ಮಾಡಬೇಕು ಎಂದು ದ್ವಂದ್ವಾರ್ಥದಲ್ಲಿ ಮಹೇಶ್ ಹೇಳಿದ್ದಾನೆ. ಎಲ್ಲರೂ ಇದೇನು ಹೇಳುತ್ತಿದ್ದೀರಿ ಎಂದು ಗೊತ್ತಾಗುತ್ತಿಲ್ಲ ಎಂದಾಗ, ಶಾರ್ವರಿಗೆ ಎಲ್ಲವೂ ಅರ್ಥವಾಗಿದೆ. ಇದಕ್ಕೆ ಸುಮ್ಮನಾಗದ ಮಹೇಶ್, ನಿಮಗೆ ಅರ್ಥವಾಗಲ್ಲ... ಶಾರ್ವರಿಗೆ ಅರ್ಥವಾಗತ್ತೆ ಎಂದು ಶಾಕ್ ಕೊಟ್ಟಿದ್ದಾನೆ. ಸದಾ ಕುತಂತ್ರ ಮಾಡುತ್ತಿರುವ ಶಾರ್ವರಿಗೆ ಈಗ ಪತಿಯಿಂದಲೇ ಶಾಕ್ ಮೇಲೆ ಶಾಕ್ ಎದುರಾಗಿದೆ. ಇಷ್ಟಕ್ಕೆ ಸುಮ್ಮನಾಗದ ಮಹೇಶ್ ಎಲ್ಲವೂ ವಾಪಸ್ ಬರಲೇಬೇಕು. ಅದಕ್ಕೇ ಕರ್ಮ ರಿಟರ್ನ್ಸ್ ಎನ್ನೋದು ಅಲ್ವಾ ಶಾರ್ವರಿ ಎಂದು ಪ್ರಶ್ನಿಸಿದ್ದಾನೆ. ಇದನ್ನು ಕೇಳಿ ಎಲ್ಲರಿಗೂ ಅಚ್ಚರಿಯಾದರೂ ತುಳಸಿಗೆ ಏನೋ ಅನುಮಾನ ಶುರುವಾಗಿದೆ. ಇದರ ಮಧ್ಯೆಯೇ ಮಗಳು ನಿಧಿಯ ವಿಷಯದಲ್ಲಿ ಮತ್ತೆ ಶಾರ್ವರಿಗೆ ಹಿನ್ನಡೆ ಉಂಟಾಗಿದೆ.
ಸೀರಿಯಲ್ ತಾರೆಯರ ಯುಗಾದಿ ಸಂಭ್ರಮದ ಶೂಟಿಂಗ್ ಹೇಗಿತ್ತು? ತೆರೆಮರೆಯ ಝಲಕ್ ಇಲ್ಲಿದೆ ನೋಡಿ...