Asianet Suvarna News Asianet Suvarna News

ಕೆರೆಗಳ ನಡುವೆ ಸಂಪರ್ಕಕ್ಕೆ ವಿದ್ಯುತ್ ಕಂಬಗಳೇ ಅಡ್ಡಿ!

  • ಕೆರೆಗಳ ಅಂತರ್‌ ಸಂಪರ್ಕಕ್ಕೆ ಕಂಬಗಳೇ ಅಡ್ಡಿ!
  • ಮುತ್ತಾನಲ್ಲೂರು-ಬಿದರನಗುಪ್ಪೆ ಕೆರೆ ನಡುವಿನ ಕಾಲುವೆಯಲ್ಲಿ ಕಂಬ ನೆಟ್ಟಬೆಸ್ಕಾಂ
  • ತೆರವಿಗೆ ಡೀಸಿ ಸೂಚಿಸಿದ್ದರೂ ನಿರ್ಲಕ್ಷ್ಯ
Electric poles are the obstacle to the connection between the lakes bengaluru rav
Author
First Published Sep 28, 2022, 12:05 PM IST

ಮಯೂರ ಹೆಗಡೆ

ಬೆಂಗಳೂರು (ಸೆ.28) : ನಗರ ಜಿಲ್ಲೆಯ ಆನೇಕಲ್‌ ತಾಲೂಕಿನಲ್ಲಿ ಸಮುದಾಯ ಒಗ್ಗೂಡುವಿಕೆಯಿಂದ ಕೈಗೆತ್ತಿಕೊಂಡ 11 ಕೆರೆಗಳ ನಡುವೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಗೆ ಬೆಸ್ಕಾಂನ ರಾಜಕಾಲುವೆ ಅತಿಕ್ರಮಣ ಅಡ್ಡಿಯಾಗಿದೆ. ಐದು ವರ್ಷದ ಹಿಂದೆ ಮಳೆ ಇಲ್ಲದೆ ಸರ್ಜಾಪುರ ಹೋಬಳಿಯ ಮುತ್ತಾನಲ್ಲೂರು ಕೆರೆ ಹಾಗೂ ಬಿದರನಗುಪ್ಪೆ ಕೆರೆ ನಡುವಿನ ಕಾಲುವೆ ಬರಿದಾಗಿತ್ತು. ಆಗ ಬೆಸ್ಕಾಂನವರು ಕಾಲುವೆ ನಡುವೆಯೇ ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ ಅಳವಡಿಸಿದ್ದಾರೆ. ಇದರಿಂದಲೂ ಕೆರೆ ಕಾಲುವೆ ಭಾಗಶಃ ಮುಚ್ಚಿದೆ. ಹೀಗಾಗಿ ನೀರು ಸಲೀಸಾಗಿ ಹರಿಯದೆ ಕೆರೆ ತುಂಬುತ್ತಿಲ್ಲ. ಅಲ್ಲದೆ, ಮಳೆ ನೀರು ನುಗ್ಗಿ ಸುತ್ತಲ ಪ್ರದೇಶವನ್ನು ಜಲಾವೃತವಾಗುತ್ತಿದೆ.

ಈ ಹಳ್ಳಿಗೆ ಯಾರೂ ಹೆಣ್ಣು ಕೊಡೋದಿಲ್ಲ; ಇಲ್ಲಿನ ಹೆಣ್ಣನ್ನು ಯಾರೂ ಮದುವೆ ಮಾಡಿಕೊಳ್ಳುವುದಿಲ್ಲ!

ಕಳೆದ ವರ್ಷವೇ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಚಾರ ತಂದಾಗ ಅವರು ಸ್ಥಳ ಪರಿಶೀಲನೆ ಮಾಡಿದ್ದರು. ಡೀಸಿ ಸೂಚನೆ ಮೇರೆಗೆ ಹಿಂದಿನ ತಹಸೀಲ್ದಾರ್‌ 2021ರ ಜೂನ್‌, ಜುಲೈನಲ್ಲೆ ಬೆಸ್ಕಾಂಗೆ ಪತ್ರ ಬರೆದು, ತಕ್ಷಣ ಕೆರೆ, ರಾಜಕಾಲುವೆಯಿಂದ ವಿದ್ಯುತ್‌ ಕಂಬಗಳ ತೆರವಿಗೆ ಸೂಚಿಸಿದ್ದರು. ಆಗಲೇ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಕೂಡ ಈ ಬಗ್ಗೆ ಪತ್ರ ಬರೆದಿತ್ತು. ಆದರೆ, ಬೆಸ್ಕಾಂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

‘ಕಾಲುವೆ ಮುಚ್ಚಿದ ಪರಿಣಾಮ ಮಳೆಯಿಂದಾಗಿ 300 ಎಕರೆಗೂ ಹೆಚ್ಚಿನ ಪ್ರದೇಶ ಜಲಾವೃತ ಆಗುತ್ತಿದೆ. ಎರಡು ವರ್ಷದಿಂದ ಇಲ್ಲಿ ಕೃಷಿ ಮಾಡಲಾಗುತ್ತಿಲ್ಲ. ಅಲ್ಲದೆ ಹಲವು ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ ನೀರಿನಲ್ಲೆ ಇದ್ದು, ಶಾರ್ಚ್‌ ಸಕ್ರ್ಯೂಟ್‌ ಭಯವಿದೆ’ ಎಂದು ಮುತ್ತಾನಲ್ಲೂರು ಲೋಹಿತ್‌ ಆತಂಕ ವ್ಯಕ್ತಪಡಿಸಿದರು.

‘ಕೆರೆ ಸಂರಕ್ಷಣೆ ಹೋರಾಟಗಾರ ಕ್ಯಾ.ಸಂತೋಷ ಕುಮಾರ್‌ ‘ಆನೇಕಲ್‌ ಕೆರೆಗಳನ್ನು ಪುನರುಜ್ಜೀವನ ಮಾಡಲು ರಾಜಕಾಲುವೆಗಳ ಹೂಳೆತ್ತುವುದು ಅಗತ್ಯ. ಆದರೆ, ಇಲ್ಲಿ ಸ್ವತಃ ಬೆಸ್ಕಾಂ ಕಾಲುವೆಯನ್ನು ಅತಿಕ್ರಮಣ ಮಾಡಿದೆ. ಇದನ್ನು ತೆರವು ಮಾಡದೆ ತಾಲೂಕಿನ 11 ಕೆರೆಗಳಿಗೆ ಸಂಪರ್ಕ ಕಲ್ಪಿಸುವ ಕಾಲುವೆಯ ಹೂಳೆತ್ತುವ ಕೆಲಸ ಆಗಲಾರದು’ ಎಂದರು.

‘ವಿವಿಧ ಸಂಘಟನೆಯ ಸದಸ್ಯರು ಗ್ರಾಮಸ್ಥರ ಸಹಕಾರದಲ್ಲಿ ಕೆರೆ, ರಾಜಕಾಲುವೆ ಹೂಳೆತ್ತಲು ಮುಂದಾಗಿದ್ದೇವೆæ. ಆದರೆ, ಅದಕ್ಕೂ ಮುನ್ನ ಬೆಸ್ಕಾಂ ಇಲ್ಲಿಂದ ವಿದ್ಯುತ್‌ ಕಂಬ ಸ್ಥಳಾಂತರಿಸಬೇಕು. ಶೀಘ್ರ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ವಿವಿಧ ಸಂಘ ಸಂಸ್ಥೆಗಳಿಂದ ಪಿಐಎಲ್‌ ದಾಖಲಿಸಲು ಚಿಂತನೆ ನಡೆಸಬೇಕಾಗುತ್ತದೆ’ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಏನಿದು ಕೆರೆಗಳ ಸಂಪರ್ಕ ಯೋಜನೆ?

ಆನೇಕಲ್‌ ತಾಲೂಕಿನ 11 ಕೆರೆ ಸಂಪರ್ಕಿಸುವ 15 ಕಿ.ಮೀ. ರಾಜಕಾಲುವೆ ಹೂಳೆತ್ತಿ ನೀರು ಸಲೀಸಾಗಿ ಹರಿಯಲು, ಕರೆಗಳ ಜೀರ್ಣೋದ್ಧಾರಕ್ಕಾಗಿ ಸಂಘ ಸಂಸ್ಥೆಗಳು ಮುಂದಾಗಿವೆ. ಆನೇಕಲ್‌ ತಾಲೂಕು ಪರಿಸರ ಸಂರಕ್ಷಣೆ ಒಕ್ಕೂಟ, ಫ್ರೆಂಡ್‌್ಸ ಆಫ್‌ ಲೇಕ್ಸ್‌, ವಾಟರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬೆಂಗಳೂರು ಮತ್ತು ಇಂಡಿಯಾ ಕೇರ್ಸ್‌ ¶ೌಂಡೇಶನ್‌ ಸೇರಿ ಸ್ಥಳೀಯರ ಸಹಕಾರದಲ್ಲಿ .3 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದೆ. ಕಂದಾಯ ಇಲಾಖೆ ಕಾಲುವೆ ಸರ್ವೇಗೆ ಸಹಕಾರ ನೀಡಲಿದೆ. ಆದರೆ, ಬೆಸ್ಕಾಂ ಕಾಲುವೆ ಅತಿಕ್ರಮಣ ಯೋಜನೆಗೆ ಅಡ್ಡಿಯಾಗಿದೆ.

Anekal: ಅಡ್ಡ ಮತದಾನ ಮಾಡಿದ ನಾಲ್ವರು ಬಿಜೆಪಿ ಪುರಸಭೆ ಸದಸ್ಯರ ವಜಾ

ಕೆರೆ ಕಾಲುವೆಯಲ್ಲಿ ವಿದ್ಯುತ್‌ ಕಂಬ ಇರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ವಹಿಸುತ್ತೇವೆ.

-ಕೆ.ಶ್ರೀನಿವಾಸ, ಜಿಲ್ಲಾಧಿಕಾರಿ, ನಗರ ಜಿಲ್ಲೆ

Follow Us:
Download App:
  • android
  • ios