Asianet Suvarna News Asianet Suvarna News

ರಾಜ್ಯ ಸರ್ಕಾರ ಹೊಸದಾಗಿ ಜಾತಿಗಣತಿ ನಡೆಸಲಿ: ಮಾಜಿ ಸಚಿವ ರೇಣುಕಾಚಾರ್ಯ

ಜಾತಿ ಗಣತಿ ಬಗ್ಗೆ ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿ ವಿವಿಧ ಸಮಾಜಗಳು ಆಕ್ಷೇಪಿಸಿದ್ದು, ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೇರಿ ಅನೇಕ ಸಚಿವರು, ಶಾಸಕರು ಪಕ್ಷಾತೀತವಾಗಿ ವಿರೋಧಿಸಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. 

Let the State Govt conduct a New Caste Census Says MP Renukacharya gvd
Author
First Published Nov 27, 2023, 11:01 PM IST

ದಾವಣಗೆರೆ (ನ.27): ಜಾತಿ ಗಣತಿ ಬಗ್ಗೆ ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿ ವಿವಿಧ ಸಮಾಜಗಳು ಆಕ್ಷೇಪಿಸಿದ್ದು, ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೇರಿ ಅನೇಕ ಸಚಿವರು, ಶಾಸಕರು ಪಕ್ಷಾತೀತವಾಗಿ ವಿರೋಧಿಸಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಅವೈಜ್ಞಾನಿಕ ಜಾತಿ ಗಣತಿ ಬಗ್ಗೆ ವೀರಶೈವ ಲಿಂಗಾಯತ, ಒಕ್ಕಲಿಗ ಸಮುದಾಯಗಳು ತೀವ್ರವಾಗಿ ವಿರೋಧಿಸಿವೆ. ಜಾತಿ ಗಣತಿ ವರದಿ ಬಗ್ಗೆ ವೈಯಕ್ತಿಕವಾಗಿ ನನ್ನ ವಿರೋಧವೂ ಇದೆ. ಬಿಜೆಪಿ ನಾಯಕರು ವರದಿಯ ವಿರೋಧಿಸಿದ್ದಾರೆ. 

ಇಂತಹ ಅವೈಜ್ಞಾನಿಕ ಜಾತಿ ಗಣತಿ ಕೈಬಿಟ್ಟು, ಹೊಸದಾಗಿ, ವ್ಯವಸ್ಥಿತವಾಗಿ ಜಾತಿ ಗಣತಿ ಕಾರ್ಯ ಸರ್ಕಾರ ನಡೆಸಲಿ ಎಂದು ಒತ್ತಾಯಿಸಿದರು. ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿ ಎಲ್ಲಾ ಜಾತಿ, ಜನಾಂಗಗಳಲ್ಲೂ ಆರ್ಥಿಕವಾಗಿ ಹಿಂದುಳಿದವರು, ಕಡು ಬಡವರು ಇದ್ದಾರೆ. ತರಾತುರಿಯಲ್ಲಿ ಜಾತಿ ಗಣತಿ ವರದಿ ಅಂಗೀಕರಿಸುವ ಕೆಲಸ ಸರ್ಕಾರ ಮಾಡಬಾರದು. ಜಾತಿ ಗಣತಿ ಮಾಡಿದವರು ಗಾಜಿನ ಮನೆಯಲ್ಲಿ ಕುಳಿತು, ವರದಿ ತಯಾರಿಸಿದ್ದಾರೆ. ಹೊಸದಾಗಿ ಜಾತಿ ಗಣತಿ ನಡೆಸಿ, ಮನೆ ಮನೆಗೆ ಹೋಗಿ, ವರದಿ ತಯಾರಿಸಲು ಸರ್ಕಾರ ಮುಂದಾಗಬೇಕು. ಅವಸರದಲ್ಲಿ ಈಗಿನ ವರದಿ ಅಂಗೀಕರಿಸುವ ದುಸ್ಸಾಹಸ ಸರ್ಕಾರ ಮಾಡಬಾರದು ಎಂದು ರೇಣುಕಾಚಾರ್ಯ ಕಿವಿಮಾತು ಹೇಳಿದರು.

ಸೋಮಣ್ಣರಿಂದ ಸಿದ್ಧಗಂಗಾ ಮಠದಲ್ಲಿ ರಾಜಕಾರಣವೇಕೆ?: ರೇಣುಕಾಚಾರ್ಯ ಅಸಮಾಧಾನ

ಅವಳಿ ತಾಲೂಕಿನಲ್ಲಿ ಮರಳು ದಂಧೆ ಮಿತಿ ಮೀರಿದೆ: ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಮರಳು ದಂಧೆಯಿಂದಾಗಿ ಬಡವರಿಗೆ ಕಡಿಮೆ ದರಕ್ಕೆ ಮರಳು ಸಿಗುವುದೇ ಕಷ್ಟ ವಾಗಿದೆ. ಆದ್ದರಿಂದ ಎಲ್ಲಾ ಬಡವರಿಗೆ ಮರಳು ಮುಕ್ತವಾಗಿ ಸಿಗುವಂತಾಗಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು. ಹೊನ್ನಾಳಿಯ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಪಟ್ಟಣದಿಂದ 10 ಕಿ.ಮೀ.ವ್ಯಾಪ್ತಿಯಲ್ಲಿ ಬಡವರಿಗೆ ₹5ಸಾವಿರಕ್ಕೆ ಒಂದು ಟ್ರ್ಯಾಕ್ಟರ್‌ ಮರಳು ಸಿಗುತ್ತಿತ್ತು ಆದರೆ ಈಗ ಪರಿಸ್ಥಿತಿ ಬದಲಾಗಿ ಬಡವರಿಗೆ ಮರಳು ಕಡಿಮೆ ದರಕ್ಕೆ ಸಿಗುವುದೇ ದುರ್ಲಭವಾಗಿದೆ ಎಂದು ದೂರಿದರು.

ಡಿಕೆಶಿ ವಕೀಲರೇ ಈಗ ಸರ್ಕಾರದ ಅಡ್ವೋಕೇಟ್ ಜನರಲ್‌: ಎಂ.ಪಿ.ರೇಣುಕಾಚಾರ್ಯ ಟೀಕೆ

ಕಂದಾಯ, ಪೊಲೀಸ್‌, ಗಣಿ ಮತ್ತು ಭೂವಿಜ್ಞಾನ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮರಳು ದಂಧೆಗೆ ಕೂಡಲೇ ಕಡಿವಾಣ ಹಾಕಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನರ ಪರವಾಗಿ ಉಗ್ರ ಹೋರಾಟ ನಡೆಸಲಾಗುವುದು. ಸಾಸ್ವೇಹಳ್ಳಿಯಲ್ಲಿ ಜಪ್ತಿಯಾದ ಮರಳು ತಾಲೂಕಿನ ಜನತೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಉಪಯೋಗವಾಗುವ ಬದಲು ಹೊಸದುರ್ಗ ತಾಲೂಕಿಗೆ ಸಾಗಿಸಲಾಗಿದೆ ಎಂದು ಆರೋಪಿಸಿದರು. ತಾಲೂಕಿನಲ್ಲಿ ಜೂಜು, ಇಸ್ಪೀಟ್‌, ಮಟ್ಕಾ ದಂಧೆ ಮಿತಿ ಮೀರಿ ನಡೆಯುತ್ತಿದ್ದು ಪೊಲೀಸರು ಕೂಡಲೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಜೊತೆಗೆ ಸಮಾಜಘಾತುಕ ಚಟುವಟಿಕೆಗಳ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios