Asianet Suvarna News Asianet Suvarna News

ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಧಿಕಾರ ಯತ್ನ: ಮುಖ್ಯಮಂತ್ರಿ ಚಂದ್ರು

ಲೋಕಸಭಾ ಚುನಾವಣೆ ಪೂರ್ವದಿಂದಲೇ ಅವರು ದೇಶದ ಜನರಲ್ಲಿ ತಮ್ಮ ಅಧಿಕಾರವಧಿಯ ಸಾಧನೆಗಳನ್ನು ಪ್ರಸ್ತಾಪಿಸದೇ ಕೇವಲ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಒಲವು ಗಳಿಸಿ, ಅಧಿಕಾರಕ್ಕೆ ಯತ್ನಿಸುತ್ತಿದ್ದಾರೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದರು.

Karnataka AAP President Mukhyamantri Chandru Slams On BJp Central Govt At Yadgir gvd
Author
First Published Feb 1, 2024, 6:04 PM IST

ಯಾದಗಿರಿ (ಫೆ.01): ಕಳೆದ 10 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ, ಅವರು ಕಾರ್ಪೊರೇಟ್ ವಲಯದ ಪರ ಕೆಲಸ ಮಾಡುತ್ತಿದ್ದಾರೆ, ಬರುವ ಲೋಕಸಭಾ ಚುನಾವಣೆ ಪೂರ್ವದಿಂದಲೇ ಅವರು ದೇಶದ ಜನರಲ್ಲಿ ತಮ್ಮ ಅಧಿಕಾರವಧಿಯ ಸಾಧನೆಗಳನ್ನು ಪ್ರಸ್ತಾಪಿಸದೇ ಕೇವಲ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಒಲವು ಗಳಿಸಿ, ಅಧಿಕಾರಕ್ಕೆ ಯತ್ನಿಸುತ್ತಿದ್ದಾರೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದರು.

ಯಾದಗಿರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾಯಿತು, ನಾವು ಅದನ್ನು ಸ್ವಾಗತಿಸುತ್ತೇವೆ, ಶ್ರೀರಾಮನನ್ನು ಇಡೀ ದೇಶದ ಜನರು ಪೂಜಿಸುತ್ತಾರೆ, ಆದರೆ ಈ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡಿ, ಲಾಭ ಮಾಡಿಕೊಳ್ಳಲು ಯತ್ನಿಸಿದ ರೀತಿ ನಾವೂ ಖಂಡಿಸುತ್ತೇವೆ ಎಂದರು. ದೇಶದಲ್ಲಿ ಮೊದಲು ಪ್ರಾದೇಶಿಕ ಪಕ್ಷವಾಗಿದ್ದ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಕಳೆದ 65 ವರ್ಷಗಳಿಂದ ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಜನರ ಸಮಸ್ಯೆಗಳ ಪಟ್ಟಿ ಮಾಡಿ, ಅವರಿಗೆ ಶಿಕ್ಷಣ, ಆರೋಗ್ಯ, ವಿದ್ಯುತ್, ಶುದ್ಧ ಕುಡಿಯುವ ನೀರು ಹಾಗೂ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ ಎಂದರು.

ನಮ್ಮ ದೇಶದ ಬಲಿಷ್ಠ ಯುವಪಡೆ ವಿಶ್ವಕ್ಕೆ ಮಾದರಿ: ಕೇಂದ್ರ ಸಚಿವ ಭಗವಂತ ಖೂಬಾ

ನಂತರ ನಡೆದ ಚುನಾವಣೆಯಲ್ಲಿ ಕೂಡ ಅವರು 3ನೇ ಬಾರಿ ದೆಹಲಿ ಮುಖ್ಯಮಂತ್ರಿಯಾದರು, ಅದರ ಪ್ರಭಾವ ನೆರೆಯ ಪಂಜಾಬ್ ಇತರ ರಾಜ್ಯಗಳ ಮೇಲೆ ಬೀರಿತು, ಮತದಾರರು ಜಾಗೃತರಾಗಿ ಪಂಜಾಬ್‌ನಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಧಿಕ್ಕರಿಸಿ, ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದರು ಎಂದು ತಿಳಿಸಿದರು. ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ವಾಧಿಕಾರಿ ದೋರಣೆ ಆಡಳಿತ ನೀಡಲು ಯತ್ನಿಸುತ್ತಿದ್ದಾರೆ, ಅದು ಒಳ್ಳೆಯದಲ್ಲ, ದೇಶದ ಇತರ ರಾಜ್ಯಗಳಲ್ಲಿ ಜನರಿಗೆ ಉತ್ತಮ ಆಡಳಿತ ನೀಡುತ್ತಿರುವ ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನು ನಾಶ ಮಾಡುತ್ತಿದ್ದಾರೆ, ಅದು ಎಂದಿಗೂ ಸಾಧ್ಯವಿಲ್ಲ ಎಂದು ಟೀಕಿಸಿದರು.

ಉಚಿತ ಯೋಜನೆಗಳ ಲಾಭ ಪ್ರಾಮಾಣಿಕವಾಗಿ ತಲುಪುತ್ತಿಲ್ಲ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಬೇಕಾಬಿಟ್ಟಿ ಜನರಿಗೆ ಉಚಿತ ಯೋಜನೆಗಳ ಭರವಸೆ ನೀಡಿ, ಬಂದಿತು, ಆದರೆ ಆ ಯೋಜನೆಗಳ ಲಾಭ ಇಂದು ಎಲ್ಲರಿಗೂ ಪ್ರಾಮಾಣಿಕವಾಗಿ ತಲುಪುತ್ತಿಲ್ಲ, ಅಲ್ಲದೇ ಮುಖ್ಯಮಂತ್ರಿಗಳು ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿ, ಸರ್ಕಾರ ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಅಸಮಧಾನ ವ್ಯಕ್ತಪಡಿಸಿದರು.

ನನಗೆ ಮೊದಲಿನಿಂದ ಕಲ್ಯಾಣ ಕರ್ನಾಟಕ ಭಾಗ ಪರಿಚಯವಿದೆ, ನಾನು ಪಕ್ಷದ ಅಧ್ಯಕ್ಷನಾದ ಮೇಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕ್ರಿಯಾಶೀಲವಾಗಿ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದ ಅವರು, ದೇಶದಲ್ಲಿ ನಮ್ಮ ಪಕ್ಷ ಇಂಡಿಯಾ ಮೈತ್ರಿಕೂಟದಲ್ಲಿದೆ, ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳ ಪೈಕಿ 2 ಸ್ಥಾನಗಳನ್ನು ನಮಗೆ ನೀಡಲು ಮನವಿ ಮಾಡಿದ್ದೇವೆ, ಅದರಂತೆಯೇ, ಬರುವ ಈಶಾನ್ಯ ಪದವಿಧರರ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ನಾರಾ ಪ್ರತಾಪರಡ್ಡಿ ಬಳ್ಳಾರಿ ಅವರನ್ನು ನಮ್ಮ ಪಕ್ಷ ಬೆಂಬಲಿಸಲಿದೆ ಎಂದರು.

ಜನಾರ್ದನ ರೆಡ್ಡಿ ಒಬ್ಬರೇ ಗೆದ್ದು ಸಾಧನೆ ಮಾಡಿದ್ದಾದರೂ ಏನು: ಸೋಮಶೇಖರ ರೆಡ್ಡಿ

ಪ್ರತಾಪರೆಡ್ಡಿ ಅವರು ಈ ಭಾಗದ ಪದವೀಧರರಿಗೆ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಮೊದಲಿನಿಂದ ಸ್ಪಂದಿಸುತ್ತಾ ಬಂದಿದ್ದಾರೆ, ಕಳೆದ ಚುನಾವಣೆಯಲ್ಲಿ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ, ಕಡಿಮೆ ಮತಗಳ ಅಂತರದಿಂದ ಪರಾಜಯಗೊಂಡಿದ್ದಾರೆ, ಅವರು ಆಯ್ಕೆಯಾದರೆ ಈ ಭಾಗದಲ್ಲಿ ಅವರು ಕಟ್ಟಿಕೊಂಡಿರುವ ಕನಸುಗಳು ಸಾಕಾರಗೊಳ್ಳಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾರಾ ಪ್ರತಾಪರಡ್ಡಿ ಬಳ್ಳಾರಿ, ಜಿಲ್ಲಾ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರ, ವೆಂಕಟೇಶ ಭಕ್ರಿ, ಸುಭಾಷ ತೆಲ್ಕೂರ, ಶಿವನಗೌಡ ಗುಳಬಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow Us:
Download App:
  • android
  • ios