Asianet Suvarna News Asianet Suvarna News

Lok Sabha Election 2024: ದೇಶದಲ್ಲಿ ಕಾಂಗ್ರೆಸ್ 40 ಸೀಟು ಗೆಲ್ಲಲ್ಲ: ಎ.ಮಂಜುನಾಥ್‌

ಬೆಂಗಳೂರು ಗ್ರಾಮಾಂತರದಲ್ಲಿ ತಮ್ಮ ವಿರುದ್ಧ ನಿಲ್ಲುವಂತವರು ಯಾರು ಇಲ್ಲ ಎಂದು ಭಾಷಣ ಮಾಡುತ್ತಿದ್ದ ಮಹಾನ್ ನಾಯಕರ ಎದುರು ಸ್ಪರ್ಧಿಸಲು ನಮಗೆ ಡಾ. ಮಂಜುನಾಥ್ ಸಿಕ್ಕಿದ್ದಾರೆ. ಅವರ ಮೂಲಕ ಒಂದು ಶಕ್ತಿ ಬಂದು ನಿಂತಿದೆ ಎಂದ ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ 

Congress will Not win 40 seats in the country in Lok Sabha Election 2024 Says A Manjunath grg
Author
First Published Apr 5, 2024, 7:32 AM IST

ರಾಮನಗರ(ಏ.05):  ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೇಶದಲ್ಲಿ ೪೦ ಸ್ಥಾನ ಕೂಡ ಗಳಿಸುವುದಿಲ್ಲ. ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವಷ್ಟು ಅವರಿಗೆ ಸೀಟ್‌ಗಳು ದೊರೆಯುವುದಿಲ್ಲ ಎಂದು ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ ಭವಿಷ್ಯ ನುಡಿದರು. ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರದಲ್ಲಿ ತಮ್ಮ ವಿರುದ್ಧ ನಿಲ್ಲುವಂತವರು ಯಾರು ಇಲ್ಲ ಎಂದು ಭಾಷಣ ಮಾಡುತ್ತಿದ್ದ ಮಹಾನ್ ನಾಯಕರ ಎದುರು ಸ್ಪರ್ಧಿಸಲು ನಮಗೆ ಡಾ. ಮಂಜುನಾಥ್ ಸಿಕ್ಕಿದ್ದಾರೆ. ಅವರ ಮೂಲಕ ಒಂದು ಶಕ್ತಿ ಬಂದು ನಿಂತಿದೆ ಎಂದರು.

ಅವರು ಮೂರು ಬಾರಿ ಸಂಸದರಾದರೂ ಜಿಲ್ಲೆಗೆ ನೀಡಿರುವ ಕೊಡುಗೆ ಶೂನ್ಯ. ಆದರೂ, ಈ ಬಾರಿ ಸೀರೆ, ಕುಕ್ಕರ್ ಹಂಚಿ ಜನರನ್ನು ಯಾಮಾರಿಸಬೇಕು ಎಂದು ನಿರ್ಧರಿಸಿದ್ದಾರೆ. ಆದರೆ, ಇದು ಸಾಧ್ಯವಿಲ್ಲ. ನಮ್ಮ ಕ್ಷೇತ್ರದ ಜನರು ಹಣ, ಆಮಿಷಕ್ಕೆ ಮಾರಿಕೊಳ್ಳುವಂತವರಲ್ಲ. ಕನಕಪುರದ ಜನ ಮಂಜುನಾಥ್‌ಗೆ ಒಂದು ಲಕ್ಷ ಮತ ನೀಡಲು ತೀರ್ಮಾನಿಸಿದ್ದಾರೆ ಎಂದರು. ಡಾ.ಮಂಜುನಾಥ್ ಗೆದ್ದರೆ ಕೇಂದ್ರದಲ್ಲಿ ಸಚಿವರಾಗಲಿದ್ದಾರೆ. ಅವರ ಮೂಲಕ ಜಿಲ್ಲೆಯಲ್ಲಿಯೇ ಒಂದು ಜಯದೇವ ಆಸ್ಪತ್ರೆ ಸ್ಥಾಪಿಸೋಣ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿಯೇ ಒಂದು ಹೃದಯ ಚಿಕಿತ್ಸಾ ಘಟಕ ತೆರೆಯೋಣ ಎಂದರು.

LOK SABHA ELECTION 2024: ಡಾ.ಸಿ.ಎನ್‌.ಮಂಜುನಾಥ್‌ ವಿರುದ್ಧ ಇನ್ನೂ ಮೂವರು ಮಂಜುನಾಥ್‌ ಸ್ಪರ್ಧೆ

ಇದು ವಿಧಾನಸಭೆ ಚುನಾವಣೆ ಅಲ್ಲ: ಅಶ್ವತ್ಥ ನಾರಾಯಣ

ರಾಮನಗರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಬ್ಬ ವ್ಯಕ್ತಿ ಪೇಪರ್, ಪೆನ್ ಕೇಳಿದ್ದರು. ಅದನ್ನು ಜನರು ಅವರಿಗೆ ಕೊಟ್ಟಿದ್ದಾರೆ. ಅವರಿಗೆ ಅವಕಾಶ ನೀಡಲಾಗಿದ್ದು, ಏನು ಮಾಡಬೇಕು ಮಾಡಿ ಎಂದು ಬಿಟ್ಟಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿದರೆ ಏನು ಪ್ರಯೋಜನವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಪರೋಕ್ಷ ಟಾಂಗ್ ನೀಡಿದರು.

ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಆದರೆ, ಇದು ವಿಧಾನಸಭೆ ಚುನಾವಣೆ ಅಲ್ಲ. ಇಲ್ಲಿನವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿದರೆ ಏನು ಉಪಯೋಗ. ಆಯ್ಕೆ ಮಾಡಿದರೆ ಅವರಿಂದ ದೇಶಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ ಉಪಯೋಗ ಆಗಬೇಕು. ಅದಕ್ಕೆ ಮಂಜುನಾಥ್ ಸೂಕ್ತ ವ್ಯಕ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಬೇಕು ಎಂದು ಜನ ನಿರ್ಧರಿಸಿದ್ದಾರೆ ಎಂದರು.
ನಮ್ಮ ಕ್ಷೇತ್ರದಲ್ಲಿ ಮೇಕೆದಾಟು ಯೋಜನೆ ಆಗಬೇಕು. ಶಿಕ್ಷಣ, ನೀರಾವರಿ, ಆರೋಗ್ಯ, ಕೈಗಾರಿಕೆ ಸೇರಿದಂತೆ ಸಾಕಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕಿದೆ. ಸಂಸದ ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಕಂಡಿದ್ದಾರೆಯೆ ಹೊರತು ಅವರದೇ ಆದ ಸ್ವಂತ ಪರಿಶ್ರಮದಿಂದ ಯಾವುದೇ ಯೋಜನೆಯನ್ನು ಕ್ಷೇತ್ರಕ್ಕೆ ತಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಚುನಾವಣೆ ಧರ್ಮ ಅಧರ್ಮದ ನಡುವಿನ ಚುನಾವಣೆಯಾಗಿದೆ. ನಮಗೆ ಪ್ರೀತಿ ವಿಶ್ವಾಸ, ಅಭಿವೃದ್ಧಿ ಮಾಡುವವರ ಬೇಕು. ಹಣ, ಅಧಿಕಾರ, ದೌರ್ಜನ್ಯ, ತೋಲ್ಬಲ ತೋರುವವರು, ಜಮೀನು ಲೂಟಿ ಹೊಡೆಯುವವರು ನಮಗೆ ಬೇಡ. ಡಾ.ಮಂಜುನಾಥ್ ಅಂಥವರು ನಮಗೆ ಬೇಕು. ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಮನೆ-ಮನಗೆ ತೆರಳಬೇಕು ಎಂದರು. ಡಾ. ಮಂಜುನಾಥ್ ನಾಮಪತ್ರ ಸಲ್ಲಿಕೆಗೆ ಐದು ಜನ ಸಾಕು ಎಂದರು, ಆದರೆ, ಜನ ಅವರಾಗಿಯೇ ಬಂದಿದ್ದಾರೆ. ನೀವು ಇಲ್ಲಿಗೆ ಬಂದಿರುವ ಉತ್ಸಾಹದ ರೀತಿಯಲ್ಲಿಯೇ ಕಮಲದ ಗುರುತಿಗೆ ಮತ ಕೊಡಿಸಲು ಶ್ರಮಿಸಬೇಕು ಎಂದರು.

ಅವರು ಕೊಟ್ಟಿದ್ದು ತೆಗೆದುಕೊಳ್ಳಿ, ಬಿಜೆಪಿಗೆ ಮತ ನೀಡಿ!: ಕೃಷ್ಣಪ್ಪ

ರಾಮನಗರ: ಇತ್ತೀಚಿನ ದಿನಗಳಲ್ಲಿ ವಿರೋಧಿಗಳು ಇಲ್ಲಸಲ್ಲದ ಅಪಪ್ರಚಾರ ಶುರು ಮಾಡಿದ್ದು, ಆಮೀಷಗಳನ್ನು ಒಡ್ಡುತ್ತಿದ್ದಾರೆ. ಕ್ಷೇತ್ರದಲ್ಲಿ ದುಡ್ಡು ಬರುತ್ತಿದೆ, ಅವರು ಏನೇ ಕೊಟ್ಟರು ತೆಗೆದುಕೊಳ್ಳಿ ಆದರೆ, ಮತ ಮಾತ್ರ ಬಿಜೆಪಿಗೆ ನೀಡಿ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಕರೆ ನೀಡಿದರು.

ಬಹಿರಂಗ ಸಭೆಯಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರ ಅಂಡರ್ ಗ್ರೌಂಡ್ ಕೇಬಲ್ ಇದ್ದಂತೆ. ಕ್ಷೇತ್ರದಲ್ಲಿ ನನ್ನದೇ ಆದ ಕಾರ್ಯಕರ್ತರ ಪಡೆಯನ್ನು ಹೊಂದಿದ್ದೇನೆ. ನಾನು ಆನೆಯ ರೀತಿ ನಡೆಯುತ್ತೇನೆ, ಅದೇ ರೀತಿ ಕ್ಷೇತ್ರದಲ್ಲಿ ಡಾ.ಮಂಜುನಾಥ್‌ಗೆ ಒಳ್ಳೆಯ ಲೀಡ್ ಕೊಡಲು ಪ್ರಯತ್ನಿಸುತ್ತೇನೆ ಎಂದರು.

ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ರಾಜ್ಯದ ಅಭಿವೃದ್ಧಿ: ಎಚ್.ಡಿ.ಕುಮಾರಸ್ವಾಮಿ

ಎದುರಾಳಿಗಳು ಏನು ಬೇಕಾದರೂ ಮಾತನಾಡಲಿ, ಕಿರುಚಿಕೊಳ್ಳಲಿ ತಲೆ ಕೆಡಿಸಿಕೊಳ್ಳುವುದು ಬೇಡ. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಒಂದಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳೋಣ. ಇಡೀ ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಪೂರಕ ವಾತಾವರಣವಿದೆ. ಈ ಕ್ಷೇತ್ರದಿಂದ ಡಾ.ಮಂಜುನಾಥ್ ಸ್ಪರ್ಧಿಸಿರುವುದು ಕನಕಪುರಕ್ಕೆ ಸ್ವಾತಂತ್ರ್ಯ ಬಂದ ರೀತಿಯಾಗಿದ್ದು, ಈ ಸಾರಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗದ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ, ಡಾ.ಮಂಜುನಾಥ್ ಅವರನ್ನು ಕಂಡು ಈ ಬಾರಿ ಚುನಾವಣೆಯಲ್ಲಿ ನೀವು ಗೆದ್ದೇ ಗೆಲ್ಲುತ್ತೀರಾ, ಕೇಂದ್ರ ಸಂಪುಟದಲ್ಲಿ ನನ್ನ ಜತೆ ಮಂತ್ರಿಯಾಗುತ್ತೀರಾ ಎಂದು ಆಶ್ವಾಸನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥ್ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

Follow Us:
Download App:
  • android
  • ios