Asianet Suvarna News Asianet Suvarna News

ಚಾಮರಾಜನಗರ: ಬೀಳುಬಿದ್ದ ಜಮೀನಿನಲ್ಲಿ ಹುಲಿ ಹಾಗೂ ಹುಲಿ ಮರಿ ಕಳೇಬರ ಪತ್ತೆ

ಕೊತ್ತಲವಾಡಿ ಗ್ರಾಮದ ಬೀಳುಬಿದ್ದ ಕಂದಾಯ ಇಲಾಖೆ ಜಮೀನಿನ ಪೊದೆಯಲ್ಲಿ ಎರಡು ಹುಲಿಯ ಕಳೇಬರಗಳು ಪತ್ತೆಯಾಗಿದೆ. ಮೇಲ್ನೋಟಕ್ಕೆ ಹುಲಿ ಹಾಗೂ ಮರಿಯ ಕಳೇಬರ ಎಂಬುದು ದೃಢಪಟ್ಟಿದೆ.

Dead Bodies of Tiger and Tiger Cub Found in Chamarajanagara grg
Author
First Published Dec 8, 2023, 4:12 PM IST

ವರದಿ: ಪುಟ್ಟರಾಜು. ಆರ್.ಸಿ.ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಡಿ.08):  
ಇದು ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳ ಹೊಂದಿರುವ ಜಿಲ್ಲೆ. ಹುಲಿಗಳ ನಾಡು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಚಾಮರಾಜನಗರದಲ್ಲಿ  ಇಂದು ಎರಡು ಹುಲಿಗಳ ಮೃತದೇಹ ಪತ್ತೆಯಾಗಿದೆ. ಅನುಮಾನಸ್ಪದವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹುಲಿ ಮೃತದೇಹ ನೂರೆಂಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಹುಲಿ ಸಾವಿನ ಅಸಲಿಯತ್ತಿನ ಕುರಿತು ಅರಣ್ಯಾಧಿಕಾರಿಗಳು ಹೇಳುವುದಾದ್ರು ಏನು ಅಂತೀರಾ ಈ ಸ್ಟೋರಿ ನೋಡಿ..

ಸುತ್ತಲು ಗುಂಪುಗಟ್ಟಿ ನಿಂತಿರುವ ಗ್ರಾಮಸ್ಥರು. ಕಣ್ಣಾಡಿಸಿದ ಕಡೆಯೆಲ್ಲಾ ಅರಣ್ಯಾಧಿಕಾರಿಗಳ ದಂಡು. ನೆರೆದಿದ್ದ ಅರಣ್ಯಾಧಿಕಾರಿಗಳ ಮೇಲೆ ಎಗರಿ ಬೀಳುತ್ತಿರೊ ಮಂದಿ. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಮೇಲೂರು  ತೆರಕಣಾಂಬಿ ಗ್ರಾಮಗಳ ಗಡಿ ಭಾಗದಲ್ಲಿರುವ ಮೇಲೂರು ಗ್ರಾಮದ ಸ.ನಂ. 107 ರ ಪಾಳು ಬಿದ್ದಿರುವ ಜಮೀನಿನ ಎರಡು ಕಡೆ ಒಂದು ವಯಸ್ಸಾದ ಹಾಗು ಮರಿ ಹುಲಿಗಳ ಕಳೇಬರ ಪತ್ತೆಯಾಗಿದ್ದು, ನಿನ್ನೆ ಜಾನುವಾರುಗಳನ್ನು  ಮೇಯಿಸುವ ವೇಳೆಯಲ್ಲಿ ಪೊದೆಯ ಕಡೆಯಿಂದ ವಾಸನೆ ಬರುತ್ತಿದ್ದು ಹೋಗಿ ನೋಡಿದಾಗ ಸತ್ತ ಹುಲಿಗಳು ಕೊಳೆತ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಇದರಿಂದಾಗಿ  ಜನರ ಈ ರೋಷಾವೇಶಕ್ಕೆ ಕಾರಣ ಮತ್ತೇನು ಅಲ್ಲ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ. ಕಳೆದ ಎರಡು, ಮೂರು ತಿಂಗಳಿನಿಂದ ಕೊತ್ತಲವಾಡಿ, ಮೇಲೂರು ಗ್ರಾಮದ ಹೊರ ವಲಯದಲ್ಲಿ ಹುಲಿಗಳ ಚಲನವಲನವಿತ್ತು. ಈ ಕುರಿತು ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ರು ಪ್ರಯೋಜನಕ್ಕೆ ಬಂದಿರಲಿಲ್ಲ ಆಗ ಬಂದು ಕೂಂಬಿಂಗ್ ನಡೆಸಿ ಹುಲಿಗಳನ್ನ ಸೆರೆ ಹಿಡಿದಿದ್ರೆ ಬಹುಷಃ ಇಂದು ಎರಡು ಹುಲಿಗಳು ಬದುಕುಳಿಯುತ್ತಿತ್ತು. 

ಚಾಮರಾಜನಗರ: ಅಪಘಾತದಲ್ಲಿ ಮೆದುಳಿಗೆ ಹಾನಿಯಾಗಿ ಸಾವು, ಅಂಗಾಂಗ ದಾನ ಮಾಡಿ ಸಾವಿನಲ್ಲೂ ದರ್ಶನ್‌ ಸಾರ್ಥಕತೆ

ಇಂದು ಅನುಮಾನಸ್ಪದವಾಗಿ ಎರಡು ಹುಲಿ ಸಾವನ್ನಪ್ಪಿರುವ ಹಿಂದೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಜನಾಕ್ರೋಶ ವ್ಯಕ್ತವಾಯ್ತು. ಈ ಭಾಗದಲ್ಲಿ ಆಗಾಗ್ಗೆ ಹುಲಿಗಳು, ಚಿರತೆಗಳು ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸುತ್ತಿವೆ. ಜಮೀನುಗಳಿಗೆ ತೆರಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ಒಂದು ಕುದುರೆ ಹಾಗೂ ಹಸುವನ್ನು ಹುಲಿ ಕೊಂದು ತಿಂದು ಹಾಕಿತ್ತು. ಹಾಗಾಗಿ ಹುಲಿ ಸಾವಿನ ಸುತ್ತ ಅನುಮಾನಗಳು ಮೂಡಿವೆ. 

ಕಳೆದ ಹದಿನೈದು ಇಪ್ಪತ್ತು ದಿನಗಳ ಹಿಂದೆಯೇ ಎರಡು ಹುಲಿಗಳು ಸತ್ತು ಹೋಗಿವೆ. ಒಂದು ಮರಿ ಹುಲಿಯ ಕಳೇಬರ ತೊರೆಯ ಪಕ್ಕದಲ್ಲಿ ಪತ್ತೆಯಾದ್ರೆ ಮತ್ತೊಂದು ಹುಲಿಯ ಕಳೇಬರ 100 ಮೀಟರ್ ದೂರದಲ್ಲಿ ಸಿಕ್ಕಿದೆ. ಈ ಎರೆಡು ಹುಲಿಗಳ ಸಾವು ಈಗ ನೂರೆಂಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಯಾರೊ ದುಷ್ಕರ್ಮಿಗಳು ವಿಷ ವಿಕ್ಕಿ ಕೊಂದು ಹಾಕಿದ್ದಾರಾ..? ಅಥವಾ ಬೇಟೆಯಾಡಿದ್ದಾರ ಎಂಬುದು ತನಿಖೆಯಿಂದಷ್ಟೇ ತಿಳಿಯ ಬೇಕಿದೆ. ಎರಡು ಹುಲಿಯ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಇರುವ ಕಾರಣ ಸಾವಿಗೆ ಅಸಲಿ ಕಾರಣ ತಿಳಿದು ಬಂದಿಲ್ಲ. 

ಗುಂಡ್ಲುಪೇಟೆ: ಎಸ್ಸಿ, ಎಸ್ಟಿ ಸ್ಮಶಾನ ಒತ್ತುವರಿ: ಡಿಸಿಗೆ ಸಚಿವ ಮಹದೇವಪ್ಪ ಪತ್ರ

ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಭೇಟಿ ಕೊಟ್ಟು ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದ್ದು ವರದಿ ಬಂದ ನಂತರವಷ್ಟೇ ಎಷ್ಟು ವಯೋ ಮಾನದ ಹುಲಿಗಳ ಮೃತದೇಹವಿದು ಹಾಗೂ ಯಾವ ಕಾರಣದಿಂದ ಸಾವನ್ನಪ್ಪಿದೆ ಎಂದು ಬೆಳಕಿಗೆ ಬರಲಿದೆ.

ಒಟ್ನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಜಿಲ್ಲೆ ಎಂಬ ಖ್ಯಾತಿ ಪಡೆದಿರುವ ಚಾಮರಾಜನಗರ ಇತ್ತೀಚಿನ ದಿನಗಳಲ್ಲಿ ಹುಲಿಗಳ ಸಾವಿನಿಂದ ಸುದ್ದಿಯಾಗುತ್ತಿರುವುದು ನಿಜಕ್ಕೂ ದುರಂತವೇ ಸರಿ...

Follow Us:
Download App:
  • android
  • ios