Asianet Suvarna News Asianet Suvarna News

ಕಲಬುರಗಿ: ಕೋಡ್ಲಾ ವಸತಿ ಶಾಲೆಯ 23 ವಿದ್ಯಾರ್ಥಿನಿಯರು ಅಸ್ವಸ್ಥ

ಸೋಮವಾರ, ಮಂಗಳವಾರ ಎರಡೂ ದಿನ ಈ ಸಮಸ್ಯೆ ಕಾಡಿದೆ. ಬೆಳಗ್ಗೆ ಮತ್ತೆ ಹತ್ತು ವಿದ್ಯಾರ್ಥಿಗಳಿಗೆ ತೊಂದರೆ ಕಾಣಿಸಿಕೊಂಡಿದ್ದು, ಸೇಡಂ ತಾಲೂಕಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲ 33 ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

23 Students sick of the Residential School at Kodla in Kalaburagi grg
Author
First Published Dec 21, 2023, 10:40 PM IST

ಕಲಬುರಗಿ(ಡಿ.21):  ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಕಳೆದ ರಾತ್ರಿ ಊಟ ಸೇವಿಸಿದ ನಂತರ ಹೊಟ್ಟೆ ನೋವು, ವಾಂತಿಬೇಧಿಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಸತಿ ಶಾಲೆಯಲ್ಲಿ ಒಟ್ಟು 176 ವಿದ್ಯಾರ್ಥಿಗಳಿದ್ದು, ರಾತ್ರಿ ಹತ್ತು ಗಂಟೆ ಸುಮಾರಿಗೆ 23 ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸೇಡಂ ತಾಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ, ಮಂಗಳವಾರ ಎರಡೂ ದಿನ ಈ ಸಮಸ್ಯೆ ಕಾಡಿದೆ. ಬೆಳಗ್ಗೆ ಮತ್ತೆ ಹತ್ತು ವಿದ್ಯಾರ್ಥಿಗಳಿಗೆ ತೊಂದರೆ ಕಾಣಿಸಿಕೊಂಡಿದ್ದು, ಸೇಡಂ ತಾಲೂಕಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲ 33 ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಅಫಜಲಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ

ಮೇಲ್ನೋಟಕ್ಕೆ ವಿಷಪೂರಿತ ಆಹಾರ ಎಂದು ಕಂಡುಬಂದಿದೆ. ವಿದ್ಯಾರ್ಥಿನಿಯರು ಸೇವಿಸಿದ ನೀರು ಮತ್ತು ಆಹಾರ ಕಲುಷಿತಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲವು ದಿನಗಳಿಂದ ಸ್ಥಳೀಯ ಕಾರ್ಖಾನೆಯೊಂದರಿಂದ ರಾಸಾಯನಿಕ ಪದಾರ್ಥ ಹೊರಬಿಡುತ್ತಿದ್ದು, ಇದರಿಂದ ಸಾರ್ವಜನಿಕರಲ್ಲಿ ತಲೆನೋವು, ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ. ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ಇದೇ ಕಾರಣ ಇರಬಹುದು ಎಂದು ಹೇಳಲಾಗಿದೆ.

ವಸತಿ ಶಾಲೆಯ ವಾರ್ಡನ್ ಘಟನೆಗೆ ಕಾರ್ಖಾನೆಯ ದುರ್ವಾಸನೆಯೇ ಕಾರಣ ಎನ್ನುತ್ತಿದ್ದಾರೆ. ವಾರ್ಡನ್ ಮಾತಿನಂತೆ ದುರ್ವಾಸನೆ ಎನ್ನುವುದಾದರೆ ಅದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ತೊಂದರೆಯಾಗುತ್ತದೆಯೇ? ಅಲ್ಲಿನ ಶಿಕ್ಷಕರಿಗೆ ಹಾಗೂ ಗ್ರಾಮಸ್ಥರಿಗೆ ಯಾಕೆ ಏನೂ ಆಗಿಲ್ಲ. ಕಾರ್ಖಾನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಿಲ್ಲ. ವಾರ್ಡನ್ ತಮ್ಮ ತಪ್ಪು ಮುಚ್ಚಿಕೊಳ್ಳಲು ಪೋಷಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸ್ಥಳೀಯರ ಆಕ್ರೋಶ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಲಬುರಗಿ: ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳಿಗೆ ಕಾಡುತ್ತಿದೆ ನೀರಿನ ಬರ..!

ಕಾರ್ಖಾನೆಯ ಹೊಗೆ ಕೆಟ್ಟದಾಗಿ ಬರುತ್ತದೆ. ಅದನ್ನು ತೆಗೆದುಕೊಂಡರೆ ವಾಂತಿ ಬರುತ್ತದೆ. ಒಮ್ಮಿಂದೊಮ್ಮೆಲೆ ತಲೆನೋವು, ಹೊಟ್ಟೆನೋವು ಆಗುತ್ತದೆ. ಎಲ್ಲರಿಗೂ ಹೀಗೆಯೇ ಆಗಿದೆ. ಬೆಳಗ್ಗೆ 20 ಜನರಿಗೆ ಹಾಗೂ ಉಳಿದವರಿಗೆ ರಾತ್ರಿ ಇದೇ ರೀತಿ ಆಗಿದೆ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳಿದ್ದಾಳೆ. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.

ಬಹುಜನ ಸಮಾಜ ಪಕ್ಷದ ಅಧ್ಯಕ್ಷ ರೇವಣಸಿದ್ದಪ್ಪ ಸಿಂಧೆ ಅವರು ಈ ಕುರಿತು ಮಾತನಾಡಿ, ಕೋಡ್ಲಾ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಶ್ರೀ ಸಿಮೆಂಟ್ ಕಂಪೆನಿ ಹೊಲಸು ದುರ್ವಾಸನೆಯಿಂದ ಉಸಿರಾಟ ಸಮಸ್ಯೆಯಿಂದ ತೊಂದರೆ ಆಗುತ್ತಿದೆ ಎಂದು ಸುಪರಿಟೆಂಡೆಂಟ್ ಹಾಗೂ ಸಿಬ್ಬಂದಿಗಳು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

Follow Us:
Download App:
  • android
  • ios