ಮದ್ವೆ ಮನೆ ಅಲ್ಲ ಇದು ಮತಗಟ್ಟೆ: ತಮಿಳುನಾಡಿನ ಈ ವೋಟಿಂಗ್ ಸೆಂಟರ್ ಸಖತ್ ವೈರಲ್
ತಳಿರು ತೋರಣ ತಹೇವಾರಿ ಹೂವುಗಳಿಂದ ಅಲಂಕರಿಸಿದ ದ್ವಾರ, ಒಳಗೆ ಹೋದಂತೆ ಮಣ್ಣಿನ ಮಡಕೆಯಲ್ಲಿ ಸಿಗುವ ತಣ್ಣನೆ ನೀರು... ಈ ರೀತಿಯ ಸುಂದರ ಅಲಂಕಾರ ಭವ್ಯ ಸ್ವಾಗತ, ಇವೆಲ್ಲಾ ಕಂಡು ಬರುತ್ತಿರುವುದು ಯಾವುದೋ ಮದುವೆ ಮನೆಯಲ್ಲಲ್ಲ, ತಮಿಳುನಾಡಿನ ಚುನಾವಣಾ ಕೇಂದ್ರವೊಂದರ ದೃಶ್ಯವಿದ್ದು...
ಚೆನ್ನೈ: ತಳಿರು ತೋರಣ ತಹೇವಾರಿ ಹೂವುಗಳಿಂದ ಅಲಂಕರಿಸಿದ ದ್ವಾರ, ಒಳಗೆ ಹೋದಂತೆ ಮಣ್ಣಿನ ಮಡಕೆಯಲ್ಲಿ ಸಿಗುವ ತಣ್ಣನೆ ನೀರು... ಈ ರೀತಿಯ ಸುಂದರ ಅಲಂಕಾರ ಭವ್ಯ ಸ್ವಾಗತ, ಇವೆಲ್ಲಾ ಕಂಡು ಬರುತ್ತಿರುವುದು ಯಾವುದೋ ಮದುವೆ ಮನೆಯಲ್ಲಲ್ಲ, ತಮಿಳುನಾಡಿನ ಚುನಾವಣಾ ಕೇಂದ್ರವೊಂದರ ದೃಶ್ಯವಿದ್ದು...
ಹೌದು ಈ ಬಾರಿಯ ಬೇಸಗೆ ಇನ್ನಿಲ್ಲದಂತೆ ಧರಣಿಯನ್ನು ಸುಡುತ್ತಿದ್ದು, ಬಿರು ಬಿಸಿಲಿಗೆ ಜನ ನೆಲದ ಮೇಲೆ ಕಾಲಿಡಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಲೋಕಸಭಾ ಚುನಾವಣೆಯೂ ಬಂದಿದ್ದು, ತಮಿಳುನಾಡಿನಲ್ಲಿ ಈಗಾಗಲೇ ಮೊದಲ ಹಂತದ ಚುನಾವಣೆಯೂ ಆಗಿ ಹೋಗಿದೆ. ಹೀಗಾಗಿ ಬಿರುಬಿಸಿಲಿನಲ್ಲಿ ಮತ ಹಾಕಲು ಮತ ಕೇಂದ್ರಕ್ಕೆ ಬರುವ ಮತದಾರರನ್ನು ತಂಪಾಗಿ ಸ್ವಾಗತಿಸುವುದಕ್ಕಾಗಿ ಈ ಅದ್ದೂರಿ ಎನಿಸುವ ಪರಿಸರ ಸ್ನೇಹಿ ಚುನಾವಣಾ ಕೇಂದ್ರವನ್ನು ನಿರ್ಮಿಸಲಾಗಿತ್ತು..
ಅಂದಹಾಗೆ ಮದುವೆ ಮನೆಯಂತೆ ಕಾಣುವ ಸುಂದರ ಹಾಗೂ ಪರಿಸರ ಸ್ನೇಹಿ ಚುನಾವಣಾ ಕೇಂದ್ರ ಕಂಡು ಬಂದಿದ್ದು, ತಮಿಳುನಾಡಿನ ತಿರುಪಥೂರ್ ಜಿಲ್ಲೆಯ ಪುತುರ್ನಾಡುವಿನಲ್ಲಿ. ಈ ಅದ್ಭುತವೆನಿಸುವ ಚುನಾವಣಾ ಕೇಂದ್ರದ ದೃಶ್ಯವನ್ನು ತಮಿಳುನಾಡಿನ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ. ವೋಟಿಂಗ್ ಜೊತೆಗೆ ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಈ ರೀತಿಯ ಗ್ರೀನ್ ವೋಟಿಂಗ್ ಸೆಂಟರ್ ಅನ್ನು ನಿರ್ಮಾಣ ಮಾಡಲಾಗಿತ್ತು.
ಅಯ್ಯೋ ಫುಲ್ ಸೆಖೆ ಗುರು... ನ್ಯಾಚುರಲ್ ಸ್ವಿಮ್ಮಿಂಗ್ ಫುಲ್ನಲ್ಲಿ ಚಿಲ್ ಮಾಡ್ತಿರುವ ಟೈಗರು.!
ಫಾಮ್ ಮರದ ಎಲೆ, ಕಾಡಿನ ಹೂಗಳು, ಬಿದಿರನ ದಂಡು, ಮುಂತಾದ ಪರಿಸರದಿಂದಲೇ ಸಿಗುವಂತಹ ವಸ್ತುಗಳನ್ನು ಬಳಸಿ ಈ ಬೂತ್ ಅನ್ನು ನಿರ್ಮಿಸಲಾಗಿದ್ದು, ಇದು ಪರಿಸರ ಸ್ನೇಹಿ ನಿರ್ಮಾಣಕ್ಕೆ ಅದ್ಭುತ ಉದಾಹರಣೆ ಎನಿಸಿದೆ. ಇಲ್ಲಿ ಜನ ಬಿಸಿಲಿನಲ್ಲಿ ಸರದಿ ಸಾಲು ನಿಲ್ಲುವ ಬದಲು ಪರಿಸರದಿಂದ ನಿರ್ಮಿಸಿದ ದ್ವಾರ ಹಾಗೂ ಚಪ್ಪರ ಕೆಳಗೆ ಸಾಲಾಗಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶದಿಂದ ಇಲ್ಲಿ ಮಣ್ಣಿನ ಮಡಕೆಯಲ್ಲಿ ಕುಡಿಯುವ ನೀರನ್ನು ಇಡಲಾಗಿತ್ತು. ಬಿಸಿಲಿನ ಬೇಗೆಗೆ ಬೇಸರ ಮಾಡಿಕೊಳ್ಳದೇ ಜನ ಈ ತಂಪು ನೆರಳಿನಲ್ಲಿ ನಿಂತು ಮತ ಚಲಾಯಿಸಿ ಹೊರಟು ಹೋಗುತ್ತಿರುವುದು ಕಂಡು ಬಂತು.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಶೇರ್ ಮಾಡಿಕೊಂಡಿರುವ ಸುಪ್ರಿಯಾ ಸಾಹು ಅವರು ತಮಿಳುನಾಡಿನ ಹವಾಮಾನ ಬದಲಾವಣೆ ಮಿಷನ್ ಅಡಿಯಲ್ಲಿ ಕೆಲಸ ಮಾಡುವ ನಮ್ಮ ಯುವ ಹಸಿರು ಸಹೋದ್ಯೋಗಿಗಳ ಸಹಾಯದೊಂದಿಗೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ತಿರುಪತ್ತೂರ್ ಜಿಲ್ಲೆಯಲ್ಲಿ ನಿರ್ಮಿಸಿದ ಹಸಿರು ಮತಗಟ್ಟೆ ಇದಾಗಿದೆ. ರಾಜ್ಯಾದ್ಯಾಂತ ಇಂತಹ 10 ಬೂತ್ಗಳನ್ನು ನಿರ್ಮಿಸಲಾಗಿದೆ. ಬಿಸಿಲಿನ ತಾಪ ಕಡಿಮೆ ಮಾಡಲು, ತೆಂಗಿನ ಕಾಯಿ ಗರಿ ಹಾಗೂ ಬಿದಿರಿನ ಎಲೆಗಳನ್ನು ನೆರಳಿಗಾಗಿ ಬಳಸಲಾಗಿತ್ತು. ಇದರ ಜೊತೆಗೆ ತಾಳೆಮರದ ಗರಿ ಹಾಗೂ ಬಾಳೆಗಿಡ ಎಲೆಗಳು ಮತದಾರರನ್ನು ಸ್ವಾಗತಿಸಿದವು ಎಂದು ಅವರು ಬರೆದುಕೊಂಡಿದ್ದಾರೆ.
ಸುಪ್ರಿಯಾ ಸಾಹು ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಪರಿಸರಕ್ಕೆ ಸಂಬಂಧಿಸಿದ ಬಹಳ ಅಪರೂಪದ ಹಲವು ವೀಡಿಯೋಗಳನ್ನು ಆಗಾಗ ಪೋಸ್ಟ್ ಮಾಡ್ತಿರ್ತಾರೆ.
ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು: ತಪ್ಪಿಸಿಕೊಂಡ ಬಳಿಕ ಮತ್ತೆ ತಾಯಿ ಮಡಿಲು ಸೇರಿ ಸುಖನಿದ್ದೆಗೆ ಜಾರಿದ ಮರಿಯಾನೆ