Asianet Suvarna News Asianet Suvarna News

ಅನುದಾನ ಬಿಡುಗಡೆ ಮಾಡದ ಸರ್ಕಾರ: ಶಾಲೆಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಗ್ಯಾಸ್‌ ಟ್ರಬಲ್‌..!

ರಾಜ್ಯ ಸರಕಾರವು ಕಳೆದ ಮೂರು ತಿಂಗಳಿಂದ ಸುರಪುರ ಮತಕ್ಷೇತ್ರದಲ್ಲಿರುವ ಗ್ಯಾಸ್ ಏಜೆನ್ಸಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಏಜೆನ್ಸಿಯವರು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಇನ್ನೂ ಕೆಲವರು ಹಣವಿಲ್ಲದೆ ಬಡ್ಡಿಗೆ ತಂದು ಶಾಲೆ ಮಕ್ಕಳ ಬಿಸಿಯೂಟಕ್ಕೆ ತೊಂದರೆ ಆಗಬಾರದೆಂದು ವಿತರಿಸುತ್ತಿದ್ದಾರೆ.

Gas Not Supplied for Schools For Midday Meal at Surapura in Yadgir grg
Author
First Published Oct 5, 2023, 11:30 PM IST

ನಾಗರಾಜ್ ನ್ಯಾಮತಿ

ಸುರಪುರ(ಅ.05):  ಸರಕಾರಿ ಶಾಲೆಗಳಿಗೆ ಅಡುಗೆ ಅನಿಲ ಸಮರ್ಪಕ ಪೂರೈಕೆಯಾಗದ ಪರಿಣಾಮ ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕೆ ಅಡುಗೆ ಮಾಡಲು ಪರದಾಡುವ ಸ್ಥಿತಿ ಸುರಪುರ ಮತಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಮತಕ್ಷೇತ್ರದಲ್ಲಿ 411 ಶಾಲೆಗಳಿದ್ದು, ಇದರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 181, ಹಿರಿಯ ಪ್ರಾಥಮಿಕ ಶಾಲೆ 170, ಪ್ರೌಢಶಾಲೆ 70 ಇವೆ. ಬಹುತೇಕ ಶಾಲೆಗಳಲ್ಲಿ ಜುಲೈನಿಂದ ಸೆಪ್ಟೆಂಬರ್‌ವರೆಗೆ ಅಡುಗೆ ಅನಿಲ ಸಮರ್ಪಕವಾಗಿ ವಿತರಣೆಯಾಗಿಲ್ಲ.
ಪ್ರಸ್ತುತ ಕಳೆದೆರಡು ತಿಂಗಳುಗಳಿಂದ ಸಮಸ್ಯೆ ಎದುರಾಗಿದ್ದರೂ ಯಾರೊಬ್ಬರೂ ಬಾಯಿಬಿಟ್ಟು ಹೇಳುತ್ತಿಲ್ಲ. ಶಿಕ್ಷಕರು ಇರುವುದರಲ್ಲೇ ಹೊಂದಾಣಿಕೆ ಮಾಡುವ ಕೆಲಸ ಮಾಡುತ್ತಿದ್ದಾರೆ.

ಕೆಲವು ಶಾಲೆಗಳಲ್ಲಿ ಅಡುಗೆ ಅನಿಲ ದೊರೆಯದ ಪಕ್ಷದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಸೌದೆ ಒಲೆಯಿಂದಾದರೂ ಮಧ್ಯಾಹ್ನದ ಬಿಸಿಯೂಟ ಮಕ್ಕಳಿಗೆ ಊಣಬಡಿಸಲೇ ಬೇಕೆಂದು ತಾಕೀತು ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅಕ್ಕಿ ಫ್ರೀ, ಬಸ್‌ ಫ್ರೀ ಕೊಟ್ಟು, ಮದ್ಯ ಮಾರಿ ಹಣ ವಾಪಸ್‌: ಯತ್ನಾಳ್‌

ಅನುದಾನ ಸ್ಥಗಿತ:

ರಾಜ್ಯ ಸರಕಾರವು ಕಳೆದ ಮೂರು ತಿಂಗಳಿಂದ ಸುರಪುರ ಮತಕ್ಷೇತ್ರದಲ್ಲಿರುವ ಗ್ಯಾಸ್ ಏಜೆನ್ಸಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಏಜೆನ್ಸಿಯವರು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಇನ್ನೂ ಕೆಲವರು ಹಣವಿಲ್ಲದೆ ಬಡ್ಡಿಗೆ ತಂದು ಶಾಲೆ ಮಕ್ಕಳ ಬಿಸಿಯೂಟಕ್ಕೆ ತೊಂದರೆ ಆಗಬಾರದೆಂದು ವಿತರಿಸುತ್ತಿದ್ದಾರೆ. ಒಂದು ತಿಂಗಳಿಗೆ ಸುಮಾರು 3 ಲಕ್ಷ ದಿಂದ 6 ಲಕ್ಷ ರು.ಗಳವರೆಗೆ ಬೇಕಾಗುತ್ತದೆ. ಅಡುಗೆ ಅನಿಲ ನೀಡುವವರು ನಗದು ಪಾವತಿಸಿದ ಬಳಿಕವೇ ಅಡುಗೆ ಸಿಲಿಂಡರ್‌ಗಳನ್ನು ನೀಡತ್ತಾರೆ.

ಏಜೆನ್ಸಿಗಳು:

ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿರುವ ಶಾಲೆಗಳಿಗೆ ಅಡುಗೆ ಅನಿಲ ವಿತರಿಸಲು ಕೆಂಭಾವಿ, ಕಕ್ಕೇರಾ, ಹುಣಸಗಿ, ಕೊಡೇಕಲ್ ಏಜೆನ್ಸಿಗಳು ಪಡೆದುಕೊಂಡಿವೆ. ಮತಕ್ಷೇತ್ರದ ಕೊಡೇಕಲ್‌ನ ಅಮಾರೇಶ್ವರ ಏಜೆನ್ಸಿಗೆ 49 ಅಕ್ಷರ ದಾಸೋಹ ಕೇಂದ್ರಗಳಿದ್ದು, 8929 ವಿದ್ಯಾರ್ಥಿಗಳಿಗೆ ಒಟ್ಟು 94 ಸಿಲಿಂಡರ್ ಬೇಡಿಕೆಯಿದೆ. ಆದರೆ ಈ ಪೈಕಿ 91 ಅಡುಗೆ ಅನಿಲ ಸಿಲಿಂಡರ್‌ ವಿತರಿಸಲಾಗುತ್ತದೆ.

ಪೂರೈಕೆ:

ಕೆಂಭಾವಿ ಶ್ರೀನಿಧಿ ಗ್ಯಾಸ್ ಏಜೆನ್ಸಿಯಿಂದ 90 ಅಕ್ಷರ ದಾಸೋಹ ಕೇಂದ್ರಗಳಿಗೆ 16,891 ವಿದ್ಯಾರ್ಥಿಗಳಿಗೆ 171 ಸಿಲಿಂಡರ್ ಬೇಡಕೆಯಿದ್ದು, 178 ಪೂರೈಸಲಾಗುತ್ತದೆ. ಕಕ್ಕೇರಾ ಬೃಂದಾ ಗ್ಯಾಸ್ ಏಜೆನ್ಸಿ ವ್ಯಾಪ್ತಿಯ ಅಕ್ಷರ ದಾಸೋಹ ಕೇಂದ್ರಗಳಿಗೆ 21,166 ವಿದ್ಯಾರ್ಥಿಗಳಿಗೆ 336 ಬೇಡಿಕೆಯಿದ್ದು, 333 ಸಿಲಿಂಡರ್ ವಿತರಿಸಲಾಗುತ್ತದೆ. ಹುಣಸಗಿಯ ಸಹನಾ ಗ್ಯಾಸ್ ಏಜೆನ್ಸಿಯ 71 ಅಕ್ಷರ ದಾಸೋಹ ಕೇಂದ್ರಗಳಿಗೆ 12,776 ವಿದ್ಯಾರ್ಥಿಗಳಿಗೆ 162 ಸಿಲಿಂಡರ್ ಬೇಡಿಕೆಯಿದ್ದು, 162 ಪೂರೈಸಲಾಗುತ್ತಿದೆ.

ಹೊಂದಾಣಿಕೆ:

ಗ್ಯಾಸ್ ಏಜೆನ್ಸಿಗಳಿಗೆ 3 ತಿಂಗಳುಗಳಿಂದ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ಸುರಪುರ ಮತಕ್ಷೇತ್ರದಲ್ಲಿ ಶಾಲೆಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ ಎನ್ನಲಾಗುತ್ತಿದೆ.
ಇದರಿಂದ ಶಿಕ್ಷಕರು ಮನೆಯಿಂದ ಸಿಲಿಂಡರ್ ತಂದರೆ ಇನ್ನೂ ಕೆಲವರು ಸೌದೆಯಿಂದ ಅಡುಗೆ ಮಾಡುತ್ತಿದ್ದಾರೆ. ಇದನ್ನೆಲ್ಲ ಹೊರಗಡೆ ಹೇಳಿದರೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭಯದಿಂದ ಏನನ್ನು ಹೇಳಲಾಗುತ್ತಿಲ್ಲ ಎಂದು ಹಿರಿಯ ಮುಖ್ಯಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಶಾಲೆಗಳಲ್ಲಿ ಅಡುಗೆ ಅನಿಲ ಇಲ್ಲದೆ ಅಡುಗೆ ಮಾಡಲು ಕಷ್ಟವಾಗುತ್ತಿದೆ. ಸೌದೆಯಿಂದಲೇ ಅಡುಗೆ ಮಾಡಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಬಾಳೆ ಹಣ್ಣು, ಮೊಟ್ಟೆ, ಹಾಲು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಸಿಲಿಂಡರ್ ಒದಗಿಸುವಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಸಿಐಟಿಯು ತಾಲೂಕು ಅಧ್ಯಕ್ಷೆ ಶಹಜಾದಿ ಬೇಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕೆಲವು ಶಾಲೆಗಳಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯಿದ್ದು ಗಮನಕ್ಕೆ ಇದ್ದರೂ ನಿರ್ಲಕ್ಷ್ಯತನದಿಂದ ಮತನಾಡುತ್ತಾರೆ. ಮಾಧ್ಯಮದವರ ಎದುರಿಗೆ ಕಟ್ಟಿಗೆಯಿಂದಾರೂ ಅಡುಗೆ ಮಾಡಿ ಮಧ್ಯಾಹ್ನದ ಬಿಸಿಯೂಟ ನಿಲ್ಲಬಾರದು ಎನ್ನುವ ಮಾತುಗಳನ್ನು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಶಿಕ್ಷಕರಿಗೆ ತಿಳಿಸಿರುವುದು ಸಮಸ್ಯೆ ಇದೆ ಎಂಬುದು ಇದರಿಂದಲೇ ತಿಳಿಯುತ್ತದೆ.

ರಾಜ್ಯದಲ್ಲಿ ನರಸತ್ತ ಸರ್ಕಾರ ಇರೋದ್ರಿಂದ ಮತಾಂಧರು ಹಿಂದುಗಳ ಮನೆಮೇಲೆ ಕಲ್ಲು ತೂರಿದ್ದಾರೆ: ಆಂದೋಲಶ್ರೀ

ಕಳೆದ ಮೂರು ತಿಂಗಳಿಂದ ಗ್ಯಾಸ್ ಏಜೆನ್ಸಿಗಳಿಗೆ ಅಕ್ಷರ ದಾಸೋಹ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಏಜೆನ್ಸಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಸುಮಾರು ೧೮ ಲಕ್ಷ ರು.ಗಳು ಬಾಕಿಯಿದ್ದು, ಕೂಡಲೇ ಪಾವತಿಸಲು ಸಂಬಂಧಿಸಿದವರು ಕ್ರಮ ಕೈಗೊಂಡು ಗ್ಯಾಸ್ ಏಜೆನ್ಸಿಯವರ ಹಿತ ಕಾಪಾಡಬೇಕು ಎಂದು ಕಕ್ಕೇರಾದ ಬೃಂದ ಗ್ಯಾಸ್ ಏಜೆನ್ಸಿ ಮಾಲೀಕರು ಹೇಳಿದ್ದಾರೆ. 

ತಾಲೂಕಿನಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಲ್ಲ. ಎಲ್ಲ ಶಾಲೆಗಳಿಗೂ ಸಿಲಿಂಡರ್ ವಿತರಿಸಲಾಗಿದೆ. ಏಜೆನ್ಸಿಗಳಿಗೆ ಅನುದಾನ ನೀಡದಿದ್ದರೂ ಮೂರು ತಿಂಗಳಿಂದ ಸಿಲಿಂಡರ್ ನೀಡುತ್ತಿದ್ದಾರೆ. ಸಿಲಿಂಡರ್ ಇಲ್ಲದ ಕಡೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಸುರಪುರದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯಲ್ಲಪ್ಪ ಚಂದನಕೇರಿ ತಿಳಿಸಿದ್ದಾರೆ.  

Follow Us:
Download App:
  • android
  • ios