
ಭಾರತೀಯ ಮೂಲದ ಅಮೆರಿಕನ್ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಮೈಕ್ರೋಸಾಫ್ಟ್ನ ಈಗಿನ ಹಾಗೂ ಹಿಂದಿನ ಸಿಇಒಗಳು ಗಾಜಾದಲ್ಲಿ ನರಹತ್ಯೆಗೆ ತಾಂತ್ರಿಕ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ ಕೆಲಸ ತೊರೆದಂತಹ ಘಟನೆ ನಡೆದಿದೆ. ಮೈಕ್ರೋಸಾಫ್ಟ್ ಸಂಸ್ಥೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ನ ಮುಖ್ಯ ಕಚೇರಿಯಲ್ಲಿ ನಡೆದ 50ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿಯೇ ಈ ಘಟನೆ ನಡೆದಿದೆ. ಮೈಕ್ರೋಸಾಫ್ಟ್ ಸಂಸ್ಥೆಯ ಈಗಿನ ಮತ್ತು ಹಿಂದಿನ ಸಿಇಒಗಳಾದ ಸತ್ಯ ನಾಡೆಲ್ಲಾ, ಸ್ಟೀವ್ ಬಾಲ್ಮರ್ ಮತ್ತು ಬಿಲ್ ಗೇಟ್ಸ್ ಅವರು ವೇದಿಕೆಯಲ್ಲಿದ್ದಾಗ ಜೋರಾಗಿ ಯುವತಿ ಕೂಗಾಡಿದ್ದಾಳೆ. ಮೈಕ್ರೋಸಾಫ್ಟ್ ಕಂಪನಿಯ ತಂತ್ರಜ್ಞಾನವನ್ನು 'ಗಾಜಾದಲ್ಲಿ ನರಮೇಧಕ್ಕೆ ಸಹಾಯ ಮಾಡಲು ಬಳಸುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಕೂಡಲೇ ಆಕೆಯನ್ನು ಹಾಲ್ನಿಂದ ಹೊರಗೆ ಹಾಕಲಾಗಿದೆ.
ಈ ವೇಳೆ ಆಕೆ 'ನಿಮಗೆಲ್ಲರಿಗೂ ನಾಚಿಕೆಯಾಗಬೇಕು. ನೀವೆಲ್ಲರೂ ಕಪಟಿಗಳೇ' ಎಂದು ಸಭಾಂಗಣದಿಂದ ಹೊರಗೆ ಕರೆದೊಯ್ಯುವಾಗ ಅವಳು ಕೂಗಾಡಿದ್ದಾಳೆ. 50 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉದ್ಯೋಗಿಗಳು ಮುಖ್ಯಸ್ಥರು ಸಿಇಒಗಳು ನರೆದಿದ್ದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಮೈಕ್ರೋಸಾಫ್ಟ್ನ ಮೂರು ಹಿರಿಯ ಮುಖಗಳು ದಿಗ್ಭ್ರಮೆಯಿಂದ ನೋಡುತ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ. ಹೀಗೆ ಗದ್ದಲವೆಬ್ಬಿಸಿ ಉದ್ಯೋಗ ತೊರೆದ ಯುವತಿಯನ್ನು ವಾನಿಯಾ ಅಗರ್ವಾಲ್ ಎಂದು ಗುರುತಿಸಲಾಗಿದೆ. ಗಾಜಾದಲ್ಲಿ 50,000 ಪ್ಯಾಲೆಸ್ಟೀನಿಯನ್ನರನ್ನು ಮೈಕ್ರೋಸಾಫ್ಟ್ ತಂತ್ರಜ್ಞಾನದಿಂದ ಕೊಲ್ಲಲಾಗಿದೆ. ನಿಮಗೆ ಎಷ್ಟು ಧೈರ್ಯ. ಅವರ ರಕ್ತದ ಮೇಲೆ ನಿಮ್ಮ 50ನೇ ವಾರ್ಷಿಕೋತ್ಸವ ಆಚರಿಸಿದ್ದಕ್ಕಾಗಿ ನಿಮ್ಮೆಗೆಲ್ಲರಿಗೂ ನಾಚಿಕೆಗೇಡು. ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ಕಡಿತಗೊಳಿಸಿ ಎಂದು ಆಕೆ ಕಿರುಚಾಡಿದ್ದಾಳೆ.
ಕೂಡಲೇ ವಾನಿಯಾ ಅಗರ್ವಾಲ್ನನ್ನು ಕಾರ್ಯಕ್ರಮದ ಹಾಲ್ನಿಂದ ಹೊರಗೆ ಕಳುಹಿಸಲಾಗಿದೆ. ಈ ವೇಳೆ ಬಿಲ್ಗೇಟ್ಸ್ ಮಂದಸ್ಮಿತದಿಂದ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ತಮ್ಮ ಸಂಸ್ಥೆಯ ವಾರ್ಷಿಕೋತ್ಸವದ ಮಾತು ಮುಂದುವರೆಸಿದ ಬಿಲ್ ಗೇಟ್ಸ್, ಸ್ಟೀವ್ ಮತ್ತು ನಾನು ಸಂಸ್ಥೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದೆವು ಎಂದು ನಾನು ಭಾವಿಸುತ್ತೇನೆ, ಮತ್ತು ನಮ್ಮ ಜೀವನವೇ ಕಂಪನಿಯಾಗಿತ್ತು, ಮತ್ತು ಸತ್ಯ ನಮ್ಮಂತೆಯೇ ಕಾಳಜಿ ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ ಆದರೆ ಹೆಚ್ಚಿನ ತಂಡದೊಂದಿಗೆ ಎಂದು ಬಿಲ್ಗೇಟ್ಸ್ ಮಾತು ಮುಂದುವರೆಸಿದ್ದಾರೆ.
ಆದರೆ ಘಟನೆಯ ನಂತರ ವಾನಿಯಾ ರಾಜೀನಾಮೆ ಪತ್ರವನ್ನು ನೀಡಿದ್ದಾರೆ., ಅದರಲ್ಲಿ ಅವರು ಕಚೇರಿಯಲ್ಲಿ ತಮ್ಮ ಕೊನೆಯ ದಿನ ಏಪ್ರಿಲ್ 11 . ತುಳಿತಕ್ಕೊಳಗಾದವರ ಬದಲು ದಮನಕಾರಿಗಳಿಗೆ ಅಧಿಕಾರ ನೀಡುವ ಸಂಘಟನೆಯ ಭಾಗವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಗಾಜಾ ವಿರುದ್ಧ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಮೈಕ್ರೋಸಾಫ್ಟ್ ಭಾಗಿಯಾಗಿದೆ ಎಂದು ವಾನಿಯಾ ತಮ್ಮ ಸುದೀರ್ಘ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಮೈಕ್ರೋಸಾಫ್ಟ್ನ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವೂ ಇಸ್ರೇಲಿ ಮಿಲಿಟರಿಯನ್ನು ಗಾಜಾದಲ್ಲಿ ಹೆಚ್ಚು ಮಾರಕ ಮತ್ತು ವಿನಾಶಕಾರಿಯಾಗಿ ವರ್ತಿಸಲು ಅನುವು ಮಾಡಿಕೊಡುತ್ತದೆ. ಮೈಕ್ರೋಸಾಫ್ಟ್ನ ಅಜುರೆ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆಯ ಬೆಳವಣಿಗೆಗಳು ಇಸ್ರೇಲ್ನ ಸ್ವಯಂಚಾಲಿತ ವರ್ಣಭೇದ ನೀತಿ ಮತ್ತು ನರಮೇಧ ವ್ಯವಸ್ಥೆಗಳ ತಾಂತ್ರಿಕ ಬೆನ್ನೆಲುಬನ್ನು ರೂಪಿಸುತ್ತವೆ ಎಂಬುದನ್ನು ನಿರ್ವಿವಾದವಾಗಿ ಹೇಳಬಹುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ದಿ ವರ್ಜ್ ವರದಿ ಮಾಡಿದೆ.
ಇದೆಲ್ಲವೂ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ, ನಮ್ಮ ತಂತ್ರಜ್ಞಾನದಿಂದ ನಾವು ಯಾವ ಜನರನ್ನು ಸಬಲೀಕರಣಗೊಳಿಸುತ್ತಿದ್ದೇವೆ? ವರ್ಣಭೇದ ನೀತಿಯನ್ನು ಜಾರಿಗೊಳಿಸುವ ದಬ್ಬಾಳಿಕೆಗಾರರನ್ನೇ?, ನರಮೇಧವನ್ನು ಎಸಗುತ್ತಿರುವ ಯುದ್ಧ ಅಪರಾಧಿಗಳೇ? ದುರದೃಷ್ಟವಶಾತ್, ಈ ಹಂತದಲ್ಲಿ, ಮೈಕ್ರೋಸಾಫ್ಟ್ ಇದರಲ್ಲಿ ಭಾಗಿಯಾಗಿದೆ ಎಂಬುದನ್ನು ನಿರಾಕರಿಸಲಾಗದು,. ಅವರು ಕಣ್ಗಾವಲು, ವರ್ಣಭೇದ ನೀತಿ ಮತ್ತು ನರಮೇಧಕ್ಕೆ ಶಕ್ತಿ ನೀಡುವ ಡಿಜಿಟಲ್ ಶಸ್ತ್ರಾಸ್ತ್ರ ತಯಾರಕರಾಗಿದ್ದಾರೆ.. ಮತ್ತು ಈ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ, ನಾವೆಲ್ಲರೂ ಇದರಲ್ಲಿ ಭಾಗಿಯಾಗಿದ್ದೇವೆ ಎಂದು ಅವರು ಕಂಪನಿಯಿಂದ ಹೊರನಡೆಯಲು ಕಾರಣಗಳನ್ನು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ವಾನಿಯಾ ಅಗರ್ವಾಲ್ ಮಾತ್ರವಲ್ಲದೇ ಮತ್ತೊಬ್ಬ ಉದ್ಯೋಗಿ ಇಬ್ತಿಹಾಲ್ ಅಬೌಸಾದ್ ಎಂಬಾತ ಮೈಕ್ರೋಸಾಫ್ಟ್ನ AI ಸಿಇಒ ಮುಸ್ತಫಾ ಸುಲೇಮಾನ್ ಅವರನ್ನು ಯುದ್ಧದ ಲಾಭಕೋರ ಎಂದು ಕರೆದಿದ್ದರು. ಇದರಿಂದ ಮೈಕ್ರೋಸಾಫ್ಟ್ನ 50ನೇ ವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮದಲ್ಲಿ ನಡೆದ 2ನೇ ಅಡಚಣೆ ಇದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ