
ಢಾಕಾ (ಆ.7): ಬಾಂಗ್ಲಾದೇಶದಲ್ಲಿ ಈಗ ಅರಾಜಕತೆಯಿಂದ ಇಡೀ ದೇಶದಲ್ಲಿ ಎಲ್ಲಿ ನೋಡಿದರೂ ಪ್ರತಿಭಟನೆಗಳು ಭುಗಿಲೆದ್ದಿದೆ. ಲೆಕ್ಕವೇ ಇಲ್ಲದಷ್ಟು ಆಸ್ತಿ ಪಾಸ್ತಿಗಳು ಹಾನಿಯಾಗಿದೆ. ಶೇಕ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇದೆಲ್ಲದರ ನಡುವೆ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಅಲ್ಲಿನ ಹಿಂದೂಗಳ ಮೇಲೆ ದಾಳಿಗಳು ಎಷ್ಟು ಹಿಂಸಾತ್ಮಕವಾಗಿದೆ ಎಂದರೆ ಅನೇಕ ಹಿಂದೂಗಳು ಆಶ್ರಯ ಕೋರಿ ಭಾರತದ ಗಡಿಯಲ್ಲಿ ನುಸುಳಲು ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ವರದಿಗಳ ಪ್ರಕಾರ ಬಾಂಗ್ಲಾದ ಪ್ರತಿಷ್ಠಿತ ಹಿಂದೂ ಗಾಯಕ ರಾಹುಲ್ ಆನಂದ ಅವರ 140 ವರ್ಷಗಳ ಹಳೆಯ ಮನೆಯನ್ನು ಪ್ರತಿಭಟನಾಕಾರರು ದಾಳಿ ಮಾಡಿ ಬೆಂಕಿ ಹಚ್ಚಿ, ಮನೆ ಲೂಟಿ ಮಾಡಿ ವಿಕೃತಿ ಮೆರೆದಿದ್ದಾರೆ.
ಕಳೆದ ಜುಲೈ 5ರಂದು ಉದ್ರಿಕ್ತರ ಗುಂಪೊಂದು ರಾಹುಲ್ ಆನಂದ ಅವರ ಮನೆಯನ್ನು ಧ್ವಂಸಗೊಳಿಸಿ ಸುಂದರ ಮನೆಯನ್ನು ಲೂಟಿ ಮಾಡಿ ಬೆಂಕಿ ಹಾಕಿ ಸುಟ್ಟು ಗುರುತೇ ಸಿಗದಂತೆ ಮಾಡಿದೆ. ಅಷ್ಟು ಮಾತ್ರವಲ್ಲ ಮನೆಯಲ್ಲಿದ್ದ 3000ಕ್ಕೂ ಹೆಚ್ಚು ಸಂಗೀತ ವಾದ್ಯಗಳನ್ನು ಗುಂಪು ದೋಚಿದೆ. ಇವೆಲ್ಲವು ಉನ್ನತ ಬೆಲೆಬಾಳುವ ಮತ್ತು ಅತ್ಯಂತ ಹಳೆಯ ಸಂಗೀತ ಸಾಧನಗಳಾಗಿದ್ದವು.
ಘಟನೆಯ ಬಳಿಕ ಗಾಯಕನ ಕುಟುಂಬವು ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದು, ಈ ದಾಳಿಯಿಂದ ರಾಹುಲ್ ಅವರ ಕುಟುಂಬವು ತತ್ತರಿಸಿ ಹೋಗಿರುವುದು ಮಾತ್ರವಲ್ಲ ಇಡೀ ಕುಟುಂಬವು ರಹಸ್ಯ ಸ್ಥಳದಲ್ಲಿ ಉಳಿದುಕೊಂಡಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜೋಲರ್ ಗಾನ್ ( ಸ್ವತಂತ್ರ ಜಾನಪದ ಬ್ಯಾಂಡ್) ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಸೈಫುಲ್ ಇಸ್ಲಾಂ ಜರ್ನಾಲ್ ಎಂಬವರು ರಾಹುಲ್ ದಾ ಮತ್ತು ಅವರ ಕುಟುಂಬವು ಈ ಘಟನೆಯಿಂದ ಶಾಕ್ ಗೆ ಒಳಗಾಗಿದೆ. ರಹಸ್ಯ ಸ್ಥಳದಲ್ಲಿ ಆಶ್ರಯ ಪಡೆದಿದೆ. ನಮಗೆ ಇನ್ನೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅದು ಅವರ ಮನೆ ಕೂಡ ಅಲ್ಲ. ದಶಕಗಳಿಂದ ಆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ದಾಳಿ ಆದ ತಕ್ಷಣ ರಾಹುಲ್ ಅವರ ಪತ್ನಿ ಶುಕ್ಲಾ ದಿ, ಮಗ ತೋಟ ಮತ್ತು ಇತರ ಕುಟುಂಬ ಸದಸ್ಯರು ತಪ್ಪಿಸಿಕೊಂಡು ಹೊರ ಬಂದರು ಎಂದಿದ್ದಾರೆ.
ಬಾಂಗ್ಲಾದೇಶ ಹಿಂಸಾಚಾರ: ಒಂದೇ ದಿನದಲ್ಲಿ ಪೊಲೀಸರು ಸೇರಿ 1000 ಜನರ ಹತ್ಯೆ!
ರಾಹುಲ್ ಆನಂದ ಅವರು ಅನೇಕ ವರ್ಷಗಳಲ್ಲಿ ತಾವೇ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ 3000 ಕ್ಕೂ ಹೆಚ್ಚು ವಿವಧ ವಾದ್ಯಗಳು ಆ ಮನೆಯಲ್ಲಿತ್ತು. ಮನೆಯಲ್ಲಿರುವ ಎಲ್ಲಾ ಉಪಕರಣಗಳು, ಬೆಲೆಬಾಳುವ ವಸ್ತುಗಳು ಮತ್ತು ಪೀಠೋಪಕರಣಗಳನ್ನು ದಾಳಿ ಮಾಡಿದ ಗುಂಪು ದೋಚಿದೆ. ಬರೇ ವಸ್ತುಗಳಿಂದಲೇ 10 ಲಕ್ಷ ಕ್ಕೂ ಹೆಚ್ಚು ರೂಪಾಯಿ ನಷ್ಟವಾಗಿರಬಹುದು ಎಂದು ಸೈಫುಲ್ ಹೇಳಿದ್ದಾರೆ.
ರಾಹುಲ್ ಆನಂದ ಯಾರು?
ರಾಹುಲ್ ಬಾಂಗ್ಲಾದೇಶದ ಪ್ರಸಿದ್ಧ ಜಾನಪದ ಗಾಯಕ 2006 ರಲ್ಲಿ ಢಾಕಾದಲ್ಲಿ ರೂಪುಗೊಂಡ ಸ್ವತಂತ್ರ ಜಾನಪದ ಬ್ಯಾಂಡ್ ಜೋಲರ್ ಗಾನ್ನ ಗೀತರಚನೆಕಾರ, ಸಂಯೋಜಕ, ಗಾಯಕ, ಕೊಳಲು, ಕ್ಲಾರಿನೆಟ್ ಮತ್ತು ಮಂಡೋಲಾ ಆಗಿದ್ದರು. ಬ್ಯಾಂಡ್ ಮೊಲ್ಲಿಕ್ ಓಶೋರ್ಜೋ, ಗೋಪಿ ದೇವನಾಥ್, ರಾಣಾ ಸರ್ವರ್, ಎಬಿಎಸ್ ಕ್ಸೆಮ್ ಸೇರಿದಂತೆ ಇತರ ಹಲವು ಸದಸ್ಯರನ್ನು ಈ ತಂಡ ಹೊಂದಿದೆ.
ರಾಹುಲ್ ಢಾಕಾದ ಚಾರುಕೋಲಾ ವಿಶ್ವವಿದ್ಯಾಲಯದಿಂದ 1994-2004 ರಲ್ಲಿ ಸಂಗೀತ ಅಧ್ಯಯನವನ್ನು ಮುಗಿಸಿದರು. ಇದಕ್ಕೂ ಮುನ್ನ ಧನ್ಮಂಡಿ 32ನೇ ಪ್ರದೇಶದಲ್ಲಿರುವ ರಾಹುಲ್ ಆನಂದ ಅವರ ಮನೆಗೆ 2023ರಲ್ಲಿ ಪ್ರಾನ್ಸ್ ಅಧ್ಯಕ್ಷ ಫ್ರಾನ್ಸ್ ಎಮ್ಯಾನುಯೆಲ್ ಮ್ಯಾಕ್ರನ್ ಸೌಹಾರ್ಧಯುತವಾಗಿ ಭೇಟಿ ಮಾಡಿ ಖುಷಿ ಪಟ್ಟಿದ್ದರು. ಮಾತ್ರವಲ್ಲ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗಾಯಕನ ಮನೆಯು ಆ ಪ್ರದೇಶದ ಪ್ರಮುಖ ಆಕರ್ಷಣಿಯ ಕೇಂದ್ರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ